ಸೈಬರ್​ ವಂಚನೆ ಜಾಗೃತಿ ಮೂಡಿಸುವವರೇ ವಂಚನೆಗೊಳಗಾದ ಕಥೆ: ಲಕ್ಷಾಂತರ ರೂ ಕಳೆದುಕೊಂಡ ಬ್ಯಾಂಕ್ ಮ್ಯಾನೇಜರ್‌

ಮಂಡ್ಯದ ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್​ ಸೈಬರ್ ಕಳ್ಳರ ಬಲೆಗೆ ಬಿದ್ದು 50 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಡೆದಿದೆ. ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಂಚಿಸಲಾಗಿದೆ. ಸದ್ಯ ಮೂವರನ್ನು ಬಂಧಿಸುವ ಮೂಲಕ 9 ತಿಂಗಳ ಬಳಿಕ ಮಂಡ್ಯ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ.

ಸೈಬರ್​ ವಂಚನೆ ಜಾಗೃತಿ ಮೂಡಿಸುವವರೇ ವಂಚನೆಗೊಳಗಾದ ಕಥೆ: ಲಕ್ಷಾಂತರ ರೂ ಕಳೆದುಕೊಂಡ ಬ್ಯಾಂಕ್ ಮ್ಯಾನೇಜರ್‌
ಪ್ರಾತಿನಿಧಿಕ ಚಿತ್ರ
Edited By:

Updated on: Jul 25, 2025 | 8:13 AM

ಮಂಡ್ಯ, ಜುಲೈ 25: ಇತ್ತೀಚಿನ ದಿನಗಳಲ್ಲಿ ಸೈಬರ್​​ ವಂಚಕರ (cyber scam) ಕಾಟ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಇಬ್ಬರು ಯುವತಿಯರು ಡಿಜಿಟಲ್ ಅರೆಸ್ಟ್ ಜಾಲಕ್ಕೆ ಸಿಲುಕಿ, ಅವರನ್ನು ಬೆತ್ತಲೆಗೊಳಿಸಿ ವಿಡಿಯೋ ಮಾಡಿ ಬಳಿಕ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಡಿಜಿಟಲ್ ಅರೆಸ್ಟ್ ಜಾಲಕ್ಕೆ ಸ್ವತಃ ಬ್ಯಾಂಕ್ ಮ್ಯಾನೇಜರ್​ ಸಿಲುಕಿ 50 ಲಕ್ಷ ರೂ ಕಳೆದುಕೊಂಡಿರುವಂತಹ ಘಟನೆ ಮಂಡ್ಯದಲ್ಲಿ (Mandya) ನಡೆದಿದೆ. ಆ ಮೂಲಕ ಸೈಬರ್ ವಂಚನೆ ಬಗ್ಗೆ ಜಾಗೃತಿ ಮೂಡಿಸಬೇಕಾದ ಬ್ಯಾಂಕ್ ಮ್ಯಾನೇಜರ್​​ಗೆ ವಂಚಿಸಲಾಗಿದೆ.

ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಂಚನೆ

ಮಂಡ್ಯದ ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್​ ಭವ್ಯ ವಂಚನೆಗೊಳಗಾದವರು. ಮನಿ ಲಾಂಡರಿಂಗ್, ಬೆದರಿಕೆ ಕರೆ ಆರೋಪ ನೆಪದಲ್ಲಿ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಿಡಿಯೋ ಕಾಲ್​ ಮಾಡಿದ್ದಾರೆ.
ಹವಾಲ ದಂಧೆಯಲ್ಲಿ ಭಾಗಿಯಾಗಿದ್ದೀರಿ. ನಿಮ್ಮಿಂದ ಹಲವರಿಗೆ ಬೆದರಿಕೆ ಕರೆ ಹೋಗಿದೆ ಎಂದು ಬ್ಲಾಕ್‌ಮೇಲ್ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇಬ್ಬರು ಸ್ನೇಹಿತೆಯರಿಗೆ ಡಿಜಿಟಲ್ ಅರೆಸ್ಟ್: ಬೆತ್ತಲೆಗೊಳಿಸಿ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ

ನಿಮ್ಮ ಖಾತೆಯಲ್ಲಿರುವ ಹಣ ನಮ್ಮ ಖಾತೆಗೆ ಕಳುಹಿಸಿ. ಸಮಸ್ಯೆ ಬಗೆಹರಿಸಿ ಸಂಜೆಯೊಳಗಾಗಿ ವಾಪಸ್​ ಹಾಕುತ್ತೇವೆ ಎಂದು ನಂಬಿಸಿದ್ದಾರೆ. ಹಣ ಕಳುಹಿಸುವವರೆಗೂ ಎಲ್ಲೂ ಕದಲದಂತೆ ವಿಡಿಯೋ ಕಾಲ್‌ ಮೂಲಕ ಸೂಚನೆ ನೀಡಿದ್ದಾರೆ. ಬಳಿಕ ತಮ್ಮ ಖಾತೆಗೆ ಹಣ ಬರುತ್ತಿದ್ದಂತೆ ಬೇರೆ ಬೇರೆ 29 ಖಾತೆಗೆ ಖದೀಮರು ಹಣ ವರ್ಗಾವಣೆ ಮಾಡಿದ್ದಾರೆ. ಸೈಬರ್ ಕಳ್ಳರ ಗಾಳಕ್ಕೆ‌‌ ಸಿಲುಕಿದ ಮ್ಯಾನೇಜರ್​ 50 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ.

9 ತಿಂಗಳ ಬಳಿಕ ಪ್ರಕರಣ ಬೇಧಿಸಿದ ಪೊಲೀಸರು: ಮೂವರ ಬಂಧನ

ಇತ್ತ ವಂಚಿತ ಮ್ಯಾನೇಜರ್​ ಭವ್ಯ ದೂರಿನ ಮೇರೆಗೆ ಮಂಡ್ಯ ಸೆನ್ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ಹಣ ವರ್ಗಾವಣೆ ಆದ ಬ್ಯಾಂಕ್ ಖಾತೆಗಳ ಜಾಡು ಹಿಡಿದು ಹೋದ ಖಾಕಿ, ರಾಜಸ್ಥಾನದಲ್ಲಿ ಮೂವರು ಸೈಬರ್ ಕಳ್ಳರನ್ನು ಬಂಧಿಸಿದ್ದಾರೆ. ಗೋಪಾಲ್ ಬಿಷ್ಣೋಯಿ, ಮಹಿಪಾಲ್ ಬಿಷ್ಣೋಯಿ, ಜಿತೇಂದ್ರ ಸಿಂಗ್ ಬಂಧಿತರು. ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ಆರೋಪಿಗಳು ವಂಚಿಸುತ್ತಿದ್ದರು. ಸದ್ಯ 9 ತಿಂಗಳ ಬಳಿಕ ಮಂಡ್ಯ ಪೊಲೀಸರು ಪ್ರಕರಣ ಬೇಧಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:12 am, Fri, 25 July 25

ದಿಲೀಪ್​, ಚೌಡಹಳ್ಳಿ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಅದನ್ನು ಹೊರತು ಪಡಿಸಿದರೆ ಒಂದಷ್ಟು ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More
Follow Us