ಮಳವಳ್ಳಿ ಫುಡ್ ಪಾಯ್ಸನ್ ಪ್ರಕರಣ: ಹೋಟೆಲ್​ನಲ್ಲೇ ಆಹಾರಕ್ಕೆ ವಿಷ ಬೆರೆಸಿರುವ ಶಂಕೆ, ತನಿಖೆ ಚುರುಕು

Mandya Food poisoning: ಮಳವಳ್ಳಿ ತಾಲೂಕಿನ ಟಿ.ಕಾಗೇಪುರ ಗ್ರಾಮದಲ್ಲಿ ಸಂಭವಿಸಿದ್ದ ಫುಡ್ ಪಾಯ್ಸನಿಂಗ್ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಉದ್ಯಮಿಗೆ ಹಾಗೂ ಅನಾಥಾಶ್ರಮದ ವಿದ್ಯಾರ್ಥಿಗಳಿಗೆ ಪೂರೈಕೆಯಾಗಿದ್ದ ಆಹಾರಕ್ಕೆ ಹೋಟೆಲ್​ನಲ್ಲೇ ಕಿಡಿಗೇಡಿಗಳು ವಿಷಾಂಶ ಬೆರೆಸಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಇದೀಗ ಆ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ.

ಮಳವಳ್ಳಿ ಫುಡ್ ಪಾಯ್ಸನ್ ಪ್ರಕರಣ: ಹೋಟೆಲ್​ನಲ್ಲೇ ಆಹಾರಕ್ಕೆ ವಿಷ ಬೆರೆಸಿರುವ ಶಂಕೆ, ತನಿಖೆ ಚುರುಕು
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳು
Edited By:

Updated on: Mar 19, 2025 | 9:12 AM

ಮಂಡ್ಯ, ಮಾರ್ಚ್ 19: ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ ತಾಲೂಕಿನ ಅನಾಥಾಶ್ರಮದಲ್ಲಿ (Orphanage) ವಿಷಾಹಾರದಿಂದಾಗಿ ಇಬ್ಬರು ಮೃತಪಟ್ಟ ಪ್ರಕರಣದ ತನಿಖೆ ಇದೀಗ ಚುರುಕುಗೊಂಡಿದ್ದು, ಆಹಾರ ತಯಾರಿಸಲಾದ ಹೋಟೆಲ್‌ನಲ್ಲೇ ವಿಷಕಾರಿ ಅಂಶ ಮಿಶ್ರಣ ಮಾಡಿರುವ ಶಂಕೆ ಇದಿಗ ವ್ಯಕ್ತವಾಗಿದೆ. ಕಿಡಿಗೇಡಿಗಳು ವಿಷಕಾರಿ ಪದಾರ್ಥವನ್ನು ಆಹಾರಕ್ಕೆ ಮಿಶ್ರ ಮಾಡಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಅನುಮಾನಗಳು ವ್ಯಕ್ತವಾಗಿವೆ. ಅಡುಗೆಗೆ ಬಳಸುವ ನೀರು ಅಥವಾ ಆಹಾರ ಪದಾರ್ಥದಲ್ಲಿ ಮಿಶ್ರಣ ಮಾಡಿರಬಹುದು. ಹೋಟೆಲ್ ಮಾಲೀಕ ಸಿದ್ದರಾಜು ಮೇಲಿನ ದ್ವೇಷಕ್ಕೆ ಕಿಡಿಗೇಡಿಗಳು ಕೃತ್ಯ ಎಸಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು ಆ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸದ್ಯ ಪೊಲೀಸರು ಹೋಟೆಲ್ ಸಿಸಿಟಿವಿ ಡಿವಿಆರ್ ವಶಪಡಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ಡಿವೈಎಸ್ಪಿ ಕೃಷ್ಣಪ್ಪ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ನಡೆದಿದ್ದೇನು?

ಕಳೆದ ಶುಕ್ರವಾರ ಹೋಳಿ ಹಬ್ಬಕ್ಕೆಂದು ಉದ್ಯಮಿಯೊಬ್ಬರು ಬಾತ್ ಆರ್ಡರ್ ಕೊಟ್ಟಿದ್ದರು. ಅತಿಥಿಗಳಿಗೆ ನೀಡಿದ ಬಳಿಕ ಉಳಿದ ಆಹಾರವನ್ನು ಅನಾಥಾಶ್ರಮದ ವಿದ್ಯಾರ್ಥಿಗಳಿಗೆ ನೀಡುವಂತೆ ಕಳುಹಿಸಿಕೊಡಲಾಗಿತ್ತು. ಈ ಆಹಾರ ಸೇವಿಸಿದ ಅನಾಥಾಶ್ರಮದ ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಅವರನ್ನು ಮಳವಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಒಬ್ಬ ಬಾಲಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದ. ಆನಂತರ ಮತ್ತೊಬ್ಬ ಕೂಡ ಸಾವಿಗೀಡಾಗಿದ್ದ.

ಇದನ್ನೂ ಓದಿ
ಮಾರ್ಚ್​ 23ರಿಂದ ಬೆಂಗಳೂರು ಸೇರಿ ಕರ್ನಾಟಕದ 12 ಜಿಲ್ಲೆಗಳಲ್ಲಿ ಮಳೆ
ಅಕ್ರಮ ಚಿನ್ನ ಸಾಗಾಟ ಕೇಸ್:ರನ್ಯಾ ತಂಟೆಗೆ ಹೋದ ಯತ್ನಾಳ್​ ವಿರುದ್ಧ ಎಫ್‌ಐಆರ್
ಪ್ರತ್ಯೇಕ ಘಟನೆ: ಸಂಪ್‌ಗೆ ಬಿದ್ದು ಮಕ್ಕಳು ಸಾವು, ಮರಳು ದಂಧೆಗೆ ಯುವಕರು ಬಲಿ
ಅಶೋಕ್ ವಿರುದ್ಧದ ಜಮೀನು ಮಂಜೂರು ಕೇಸ್: ಲೋಕಾಯುಕ್ತಕ್ಕೆ ಸುಪ್ರೀಂ ಸೂಚನೆ

ಹೋಳಿ ಪ್ರಯುಕ್ತ ಉದ್ಯಮಿಯ ಅತಿಥಿಗಳಾಗಿ ಬಂದು ಆಹಾರ ಸೇವಿಸಿದ್ದವರು ಕೂಡ ಅಸ್ವಸ್ಥರಾಗಿದ್ದರು. ವಿಷಾಹಾರದ ಶಂಕೆ ವ್ಯಕ್ತವಾಗಿತ್ತು. ಆದರೆ, ಸುಮಾರು 30 ಮಂದಿ ಅಸ್ವಸ್ಥಗೊಂಡು ಇಬ್ಬರು ಮೃತಪಟ್ಟ ನಂತರ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತ್ತು.

ಇದನ್ನೂ ಓದಿ: ಮಂಡ್ಯ: ಅನಾಥಾಶ್ರಮದಲ್ಲಿ ಊಟ ಸೇವಿಸಿದ 29 ವಿದ್ಯಾರ್ಥಿಗಳು ಅಸ್ವಸ್ಥ, ಓರ್ವ ಸಾವು

ಫುಡ್ ಪಾಯ್ಸನಿಂಗ್ ವಿಚಾರವಾಗಿ ತನಿಖೆ ನಡೆಸಲು ತಂಡ ರಚನೆ ಮಾಡಲಾಗಿತ್ತು. ಅಡುಗೆಗೆ ಅವಧಿ ಮೀರಿದ ಆಹಾರ ಪದಾರ್ಥ ಬಳಸಿರುವ ಶಂಕೆ ಕೂಡ ವ್ಯಕ್ತವಾಗಿತ್ತು. ಹೀಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಆಹಾರದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸುತ್ತಿದೆ. ವರದಿ ಬಂದ ಬಳಿಕ ಪೊಲೀಸರ ತನಿಖೆ ಚುರುಕುಗೊಳ್ಳಲಿದೆ. ಒಂದು ವೇಳೆ ವಿಷಕಾರಿ ಅಂಶ ಪತ್ತೆಯಾಗಿದ್ದೇ ಆದಲ್ಲಿ ಕ್ರಿಮಿನಲ್ ಮೊಕದ್ದಮೆದ ದಾಖಲಿಸಿಕೊಂಡು ತನಿಖೆ ಮುಂದುವರಿಸುವ ಸಾಧ್ಯತೆ ಇದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ