ಮಂಡ್ಯ: ಅನಾಥಾಶ್ರಮದಲ್ಲಿ ಊಟ ಸೇವಿಸಿದ 29 ವಿದ್ಯಾರ್ಥಿಗಳು ಅಸ್ವಸ್ಥ, ಓರ್ವ ಸಾವು

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ಅನಾಥಾಶ್ರಮವೊಂದರಲ್ಲಿ ಫುಡ್ ಪಾಯ್ಸನಿಂಗ್ ಪರಿಣಾಮ 29 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ವಿಷಪ್ರಾಶನದಿಂದಾಗಿ ಒಬ್ಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಘಟನೆಯ ಸಂಬಂಧ ಇದೀಗ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಏನಾಯ್ತು ಎಂಬ ಮಾಹಿತಿ ಇಲ್ಲಿದೆ.

ಮಂಡ್ಯ: ಅನಾಥಾಶ್ರಮದಲ್ಲಿ ಊಟ ಸೇವಿಸಿದ 29 ವಿದ್ಯಾರ್ಥಿಗಳು ಅಸ್ವಸ್ಥ, ಓರ್ವ ಸಾವು
ಅಸ್ವಸ್ಥ ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
Edited By:

Updated on: Mar 16, 2025 | 11:02 AM

ಮಂಡ್ಯ, ಮಾರ್ಚ್ 16: ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ ತಾಲೂಕಿನ ಟಿ.ಕಾಗೇಪುರ ಗ್ರಾಮದಲ್ಲಿ ಆಘಾತಕಾರಿ ಘಟನೆ ಸಂಭವಿಸಿದ್ದು, ಅನಾಥಾಶ್ರಮದಲ್ಲಿ ಊಟ ಸೇವಿಸಿದ ವಿದ್ಯಾರ್ಥಿಗಳಿಗೆ ಫುಡ್ ಪಾಯ್ಸನಿಂಗ್ (Food Poisoning) ಆಗಿದೆ. ವಿಷ ಪ್ರಾಶನದ ಪರಿಣಾಮ 6ನೇ ತರಗತಿಯ ವಿದ್ಯಾರ್ಥಿ ಕೆರ್ಲಾಂಗ್ (13) ಸಾವನ್ನಪ್ಪಿದ್ದು, 29 ಮಕ್ಕಳು ಅಸ್ವಸ್ಥರಾಗಿದ್ದಾರೆ. ಉದ್ಯಮಿಯೊಬ್ಬರು ಶುಕ್ರವಾರ ಹೋಳಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಊಟ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭ ಉಳಿದ ಊಟವನ್ನು ಟಿ.ಕಾಗೇಪುರ ಗ್ರಾಮದ ಬಳಿ ಇರುವ ಅನಾಥಾಶ್ರಮಕ್ಕೆ ನೀಡಲಾಗಿತ್ತು. ಅನಾಥಾಶ್ರಮದ ಮಕ್ಕಳು ಈ ಊಟ ಸೇವಿಸಿದ ಬಳಿಕ ಅವರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು. ತಕ್ಷಣವೇ ಅವರನ್ನು ಮಳವಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಈ ಅನಾಹುತದ ಬಳಿಕ ಹೋಳಿ ಹಬ್ಬದ ಸಂದರ್ಭದಲ್ಲಿ ಊಟ ಸೇವಿಸಿದ್ದ ಕೆಲವು ಸಾರ್ವಜನಿಕರೂ ಅಸ್ವಸ್ಥರಾಗಿರುವ ಬಗ್ಗೆ ವರದಿಯಾಗಿದೆ. ಇದರಿಂದಾಗಿ ಊಟದಲ್ಲಿ ವಿಷಾಂಶ ಇತ್ತೇ ಎಂಬುದರ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಫುಡ್ ಪಾಯ್ಸನಿಂಗ್ ಕುರಿತು ಪ್ರಕರಣ ದಾಖಲಿಸಲಾಗಿದೆ. ಘಟನೆಯ ಪೂರ್ಣ ಮಾಹಿತಿ ಸಂಗ್ರಹಿಸಲು ಆರೋಗ್ಯ ಇಲಾಖೆ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ
ರನ್ಯಾ ಮಲತಂದೆ ರಾಮಚಂದ್ರ ರಾವ್​ಗೆ ಸಂಕಷ್ಟ: ಹಳೇ ಪ್ರಕರಣ ಮತ್ತೆ ಮುನ್ನೆಲೆಗೆ
ತೊಗರಿ ಬೇಳೆ ಸೇವಿಸುವ ಮುನ್ನ ಎಚ್ಚರ: ಕ್ಯಾನ್ಸರ್​ ಕಾರಕ ಅಂಶ ಪತ್ತೆ
ವೃದ್ಧೆಗೆ 50 ಲಕ್ಷ ರೂ. ವಂಚಿಸಿದ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್
ಕಲಬುರಗಿ, ಬಾಗಲಕೋಟೆಯಲ್ಲಿ ಉಷ್ಣ ಅಲೆ, ದಕ್ಷಿಣ ಒಳನಾಡಿನ ಕೆಲವೆಡೆ ಮಳೆ

ವೈದ್ಯರು ಹೇಳಿದ್ದೇನು?

ಘಟನೆ ಕುರಿತು ಪ್ರತಿಕ್ರಿಯಿಸಿದ್ದಕ್ಕೆ ಮಳವಳ್ಳಿಯಲ್ಲಿ ಡಿಎಚ್​​ಒ ಡಾ.ಮೋಹನ್ ಪ್ರತಿಕ್ರಿಯಿಸಿದ್ದು, ಮಾರ್ವಾಡಿಗಳು ಹೋಳಿ ಹಬ್ಬ ಪ್ರಯುಕ್ತ ಶುಕ್ರವಾರ ರಾತ್ರಿ ಊಟ ಮಾಡಿಸಿದ್ದರು. ಗೋಕುಲಂ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೂ ಅದೇ ಊಟ ವಿತರಿಸಲಾಗಿದೆ‌. ಶುಕ್ರವಾರ ಮಧ್ಯಾಹ್ನ ವಿದ್ಯಾರ್ಥಿಗಳಿಗೆ ವಾಂತಿ, ಬೇಧಿ ಶುರುವಾಗಿದೆ. ವೈದ್ಯರು ಚಿಕಿತ್ಸೆ ನೀಡಿ ಬಂದಿದ್ದರು. ಚೆನ್ನಾಗಿ ಓಡಾಡಿಕೊಂಡಿದ್ದ ವಿದ್ಯಾರ್ಥಿಯೊಬ್ಬ ದಿಢೀರಾಗಿ ಮೃತಪಟ್ಟಿದ್ದಾನೆ. ಪೋಸ್ಟ್ ಮಾರ್ಟಮ್‌‌ನಲ್ಲಿ ಸಾವಿಗೆ ಕಾರಣ ನಿಖರವಾಗಿ ಗೊತ್ತಾಗಲಿದೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳಲ್ಲಿ 27 ಮಂದಿ ಹೊರರಾಜ್ಯದವರಾಗಿದ್ದಾರೆ. ಇಬ್ಬರು ಸ್ಥಳೀಯ ವಿದ್ಯಾರ್ಥಿಗಳಾಗಿದ್ದಾರೆ. ಅಸ್ವಸ್ಥಗೊಂಡ ಎಲ್ಲಾ ವಿದ್ಯಾರ್ಥಿಗಳು ಸದ್ಯ ಆರೋಗ್ಯವಾಗಿದ್ದಾರೆ. ಹಬ್ಬದ ಊಟ ಮಾಡಿಸಿ, ಸೇವಿಸಿದ್ದ ಮಾರ್ವಾಡಿಗಳಿಗೂ ವಾಂತಿ, ಭೇದಿ ಆಗಿದೆ. ಅವರು ಹಲವೆಡೆ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಖಾಸಗಿ ಗೋಲ್ಡ್ ಕಂಪನಿಗಳಲ್ಲಿ ಚಿನ್ನ ಅಡ ಇಡುವವರೇ ಎಚ್ಚರ: ಹುಟ್ಟಿಕೊಂಡಿದೆ ಹೊಸ ವಂಚನೆ ಜಾಲ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:48 am, Sun, 16 March 25