ನಾಗಮಂಗಲ ಗಲಭೆಯಲ್ಲಿ ನಿಷೇಧಿತ PFI ಸದಸ್ಯರು ಭಾಗಿ?, ಇನ್ಸ್‌ಪೆಕ್ಟರ್ ಅಮಾನತು

ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಕೋಮುಗಲಭೆ ನಡೆದಿತ್ತು. ಮುಸ್ಲಿಮರು ಮೆರವಣಿಗೆ ವೇಳೆ ಕಲ್ಲುತೂರಿದ್ದರು. ಅಲ್ಲದೇ, ಕೆಲ ಅಂಗಡಿಗಳಿಗೂ ಬೆಂಕಿ ಹಾಕಲಾಗಿತ್ತು. ಈ ಗಲಭೆಯಲ್ಲಿ ಕೇರಳ ಮೂಲದ ಪಿಎಫ್​ಐ ಸಂಘಟನೆ ಸದಸ್ಯರು ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ನಾಗಮಂಗಲ ಗಲಭೆಯಲ್ಲಿ ನಿಷೇಧಿತ PFI ಸದಸ್ಯರು ಭಾಗಿ?, ಇನ್ಸ್‌ಪೆಕ್ಟರ್ ಅಮಾನತು
ಶಂಕಿತ ಪಿಎಫ್​ಐ ಸದಸ್ಯರ ಎಫ್​ಐಆರ್​ನಲ್ಲಿ ಉಲ್ಲೇಖ
Follow us
| Updated By: ವಿವೇಕ ಬಿರಾದಾರ

Updated on:Sep 15, 2024 | 11:36 AM

ಮಂಡ್ಯ, ಸೆಪ್ಟೆಂಬರ್​ 15: ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆ (Nagamangala Violence) ಘಟನೆ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಪೂರ್ವನಿಯೋಜಿತ ಕೃತ್ಯ ಎಂದು ಆರೋಪ ಮಾಡುತ್ತಿವೆ. ಈ ಮಧ್ಯೆ ನಾಗಮಂಗಲ ಗಲಾಟೆ‌ ಹಿಂದೆ ಕೇರಳ‌ ಮೂಲದವರ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ. ಎಫ್​​ಐಆರ್​ನಲ್ಲಿ‌ರುವ‌ 74 ಆರೋಪಿಗಳ ಪೈಕಿ‌ ಕೇರಳ ಮೂಲದ ಇಬ್ಬರ ಹೆಸರು ಇದೆ. ಎ44 ಯೂಸುಫ್, ಎ61 ನಾಸೀರ್ ಇಬ್ಬರೂ ಕೇರಳದ ಮಲಪ್ಪುರಂ ನಿವಾಸಿಗಳು. ಇವರು ‌ನಿಷೇಧಿತ ಪಿಎಫ್​ಐ ಸಂಘಟನೆ‌‌ ಸದಸ್ಯರು ಎಂಬ ಅನುಮಾನ ವ್ಯಕ್ತವಾಗಿದೆ.

ಯೂಸುಫ್ ಮತ್ತು ನಾಸೀರ್ ಕೆಲ ದಿನಗಳಿಂದ ನಾಗಮಂಗಲದಲ್ಲಿ ವಾಸವಿದ್ದರು. ಈ ಗಲಭೆ ಹಿಂದೆ ಇವರ ಕೈವಾಡವಿರುವ ಅನುಮಾನ ವ್ಯಕ್ತವಾಗಿದೆ. ಮೊದಲೇ ಸಂಚು ರೂಪಿಸಿ ನಾಗಮಂಗಲದಲ್ಲಿ ಗಲಾಟೆಗೆ ಪ್ಲ್ಯಾನ್ ಮಾಡಲಾಗಿತ್ತು ಎಂಬ ಶಂಕೆ ಮೂಡಿದೆ.

ಈ ಬಗ್ಗೆ ವಿಶ್ವ ಹಿಂದೂ ಪರಿಷತ್​ ನಾಗಮಂಗಲ ತಾಲೂಕು ಅಧ್ಯಕ್ಷ ಅಜೀತ್ ಪ್ರಸಾದ್ ಮಾತನಾಡಿ, ಯೂಸುಫ್ ಮತ್ತು ನಾಸೀರ್ ಇಬ್ಬರೂ ಪಿಎಫ್​​ಐ ಸದಸ್ಯರು. ನಾಗಮಂಗಲದಲ್ಲಿ ಗಲಭೆ‌ ನಡೆಸಲು ಪೂರ್ವ ತಯಾರಿ ನಡೆದಿದೆ. ಗಲಾಟೆ ನಡೆದ ದಿನ ಮೆಡಿಕಲ್​ ಅಂಗಡಿಯಲ್ಲಿ 200 ಮಾಸ್ಕ್‌ ಖರೀದಿಸಲಾಗಿದೆ. ಪೆಟ್ರೋಲ್ ಬಾಂಬ್ ಬಳಕೆಯಲ್ಲೂ ಕೇರಳ ಮುಸ್ಲಿಮರ ಕೈವಾಡ ಇದೆ. ಗಲಭೆ ಪ್ರಕರಣವನ್ನು ಎನ್​ಐಎಗೆ ವಹಿಸುವಂತೆ ಆಗ್ರಹಿಸಿದ್ದಾರೆ.

ಕೇರಳದವರು ನಾಗಮಂಗಲದ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದಾರೆ: ಸಚಿವ

ಗಲಭೆಯಲ್ಲಿ ಪಿಎಫ್​ಐನವರು ಭಾಗಿಯಾದ್ದಾರೆ ಎಂಬ ಶಂಕೆ ವ್ಯಕ್ತವಾದ ಬಗ್ಗೆ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಗಲಭೆ ವೇಳೆ ಕೇರಳದವರು ಬಂದು ಹೋಗಿಲ್ಲ. ಕೇರಳದವರು ನಾಗಮಂಗಲದ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಗಲಭೆಯಲ್ಲಿ ಭಾಗಿಯಾಗಿದ್ದಾರೆಂದು ಅರೆಸ್ಟ್ ಮಾಡಲಾಗಿದೆ. ಗಲಭೆಯ ಸಂಪೂರ್ಣ ತನಿಖೆ ಆಗದೆ ಪಿಎಫ್‌ಐ ಅವರು ಇದ್ದಾರೆ ಎನ್ನಲು ಆಗಲ್ಲ. ಊಹಾಪೋಹಗಳು ಎಲ್ಲ ಬೇಡ ಎಂದು ಹೇಳಿದರು.

ಇದನ್ನೂ ಓದಿ: ಡಿಜೆ ಹಳ್ಳಿ ಗಲಭೆ ಮಾದರಿಯಲ್ಲಿ ಘಟನೆ, 10 ನಿಮಿಷದಲ್ಲಿ ಕಲ್ಲು, ಪೆಟ್ರೋಲ್ ಬಾಂಬ್ ಎಲ್ಲಿಂದ ಬಂದವು; ಕುಮಾರಸ್ವಾಮಿ ಪ್ರಶ್ನೆ

ಇದನ್ನು ಬೆಳೆಸುವುದಕ್ಕಿಂತ ಶಾಂತಿ ಕಾಪಾಡಬೇಕು. ಯಾರು ಇದ್ದಾರೆ ಅಂತ ಕಂಡು ಹಿಡಿದು ಹೇಳುತ್ತೇವೆ. ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಯಾರಿಂದ ತನಿಖೆ ಮಾಡಿಸಬೇಕೆಂದು ತೀರ್ಮಾನ ಮಾಡಿಸಿದ್ದೇವೆ. ಈ ಗಲಭೆಯ ಬಗ್ಗೆ ಸಂಪೂರ್ಣ ರಿಪೋರ್ಟ್ ಕೊಡಲು ಹೇಳಿದ್ದೇನೆ ಎಂದು ತಿಳಿಸಿದರು.

ರಿಸರ್ವ್ ಸಿಬ್ಬಂದಿಗೆ ಊಟಕ್ಕೆ ಹೋದಾಗ ನಡೆಯಿತು ಗಲಭೆ!

ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕಾವಲಿಗಿದ್ದ ಪೊಲೀಸ್​ ರಿಸರ್ವ್ ಸಿಬ್ಬಂದಿಗೆ ಊಟ ಕೊಡಿಸಲು ನಾಗಮಂಗಲ ಠಾಣೆ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಹಿಂದೇಟು ಹಾಕಿದ್ದಾರೆ. ಊಟ ಕೊಡಿಸಬೇಕಾಗುತ್ತೆಂದು 24 DAR ಸಿಬ್ಬಂದಿಯನ್ನು ಊಟಕ್ಕೆ ಬೇರೆ ಕಡೆ ಕಳುಹಿಸಿದ್ದಾರೆ. ರಿಸರ್ವ್ ಸಿಬ್ಬಂದಿ ‌ವಾಹನ ಹೊರಟ ಅರ್ಧ ಗಂಟೆಗೆ ಕೋಮು ಗಲಭೆ ಆರಂಭವಾಗಿದೆ.

ಗಲಾಟೆ ಆರಂಭವಾದಾಗ‌ ಸ್ಥಳದಲ್ಲಿ ಕೇವಲ ಏಳು ಸಿಬ್ಬಂದಿ‌ ಮಾತ್ರ ಇದ್ದರು. ಉದ್ರಿಕ್ತರನ್ನು ತಡೆಯೋದಿರಲಿ ತಮ್ಮ ಪ್ರಾಣ ಉಳಿಸಿಕೊಳ್ಳಲು‌ ಸಿಬ್ಬಂದಿ ಪರದಾಡಿದರು. ಪಿಎಸ್​ಐ ರವಿ ಸೇರಿದಂತೆ ಹಲವು ಸಿಬ್ಬಂದಿ ಮೇಲೆಯೇ ಕಿಡಿಗೇಡಿಗಳು ದಾಳಿ ಮಾಡಿದ್ದಾರೆ. ರಿಸರ್ವ್ ಸಿಬ್ಬಂದಿ ವಾಪಸ್‌ ಬರುವಷ್ಟರಲ್ಲಿ ಪರಿಸ್ಥಿತಿ ಕೈಮೀರಿತ್ತು. ಕಲ್ಲು, ದೊಣ್ಣೆ, ಮಾರಕಾಸ್ತ್ರ, ಪೆಟ್ರೋಲ್ ಬಾಂಬ್ ಎಸೆಯುವ ಜೊತೆಗೆ ‌ಅಂಗಡಿ ಮುಂಗಟ್ಟಿಗೆ ಬೆಂಕಿ ‌ಹಾಕಿ‌ ಕ್ರೌರ್ಯ ಮೆರೆಯಲಾಗಿತ್ತು. ಹೀಗಾಗಿ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅವರನ್ನು ಗೃಹ ಇಲಾಖೆ ಅಮಾನತು ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:34 am, Sun, 15 September 24