ಮಂಡ್ಯದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದೇಕೆ? ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೊಟ್ಟ ಕಾರಣ ಹೀಗಿದೆ

| Updated By: ಗಣಪತಿ ಶರ್ಮ

Updated on: Nov 20, 2023 | 8:12 PM

BY Vijayendra in Mandya: ಈಗಿನಿಂದಲೇ ನಾವು ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ. ನನಗೆ ವೈಯಕ್ತಿಕವಾಗಿ ಹೆಸರು ತಂದು ಕೊಟ್ಟಿದ್ದು ಹಳೇ ಮೈಸೂರು. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಹೆಚ್ಚು ಸ್ಥಾನವನ್ನು ಗೆಲ್ಲಬೇಕು ಎಂದು ವಿಜಯೇಂದ್ರ ಹೇಳಿದರು.

ಮಂಡ್ಯದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದೇಕೆ? ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೊಟ್ಟ ಕಾರಣ ಹೀಗಿದೆ
ಬಿವೈ ವಿಜಯೇಂದ್ರ
Follow us on

ಮಂಡ್ಯ, ನವೆಂಬರ್ 20: ಮಂಡ್ಯದಲ್ಲಿ ಬಿಜೆಪಿಗೆ (BJP) ಹಿನ್ನಡೆಯಾಗಿರುವುದರ ಕಾರಣವನ್ನು ಪಕ್ಷದ ರಾಜ್ಯ ಘಟಕದ ನೂತನ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ವಿಶ್ಲೇಷಿಸಿದ್ದಾರೆ. ಅಧ್ಯಕರಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಮೈಸೂರು ಹಾಗೂ ಮಂಡ್ಯ ಪ್ರವಾಸದಲ್ಲಿರುವ ಅವರು ಮಂಡ್ಯದಲ್ಲಿ ಸೋಮವಾರ ಮಾತನಾಡಿ, ನಾವು ಜನರ ಬಳಿ ಹೋಗದ ಕಾರಣ ಜಿಲ್ಲಡಯಲ್ಲಿ ಹಿನ್ನಡೆಯಾಗಿದೆ. ಕೆ.ಆರ್‌.ಪೇಟೆ ಚುನಾವಣೆ ಗೆದ್ದ ಬಳಿಕ‌ ಜನರ ಬಳಿ‌ ಹೋಗಬೇಕಿತ್ತು. ನಾವು ಹೆಚ್ಚು ಜನರ ಬಳಿ‌ ಹೋಗದ ಕಾರಣ ಮಂಡ್ಯದಲ್ಲಿ ಹಿನ್ನಡೆಯಾಗಿದೆ. ನಾವು ಗೆದ್ದ ಕೆ.ಆರ್.ಪೇಟೆ ಕ್ಷೇತ್ರವನ್ನೂ ಸಹ ಕಳೆದುಕೊಂಡಿದ್ದೇವೆ ಎಂದು ಹೇಳಿದರು.

ಈಗಿನಿಂದಲೇ ನಾವು ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ. ನನಗೆ ವೈಯಕ್ತಿಕವಾಗಿ ಹೆಸರು ತಂದು ಕೊಟ್ಟಿದ್ದು ಹಳೇ ಮೈಸೂರು. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಹೆಚ್ಚು ಸ್ಥಾನವನ್ನು ಗೆಲ್ಲಬೇಕು ಎಂದು ವಿಜಯೇಂದ್ರ ಹೇಳಿದರು.

ಜೆಡಿಎಸ್ ಮೈತ್ರಿಗೆ ಯಾರ ತಕರಾರಿಲ್ಲ: ವಿಜಯೇಂದ್ರ

ಜೆಡಿಎಸ್ ಜೊತೆಗಿನ ಮೈತ್ರಿ ವಿಚಾರದಲ್ಲಿ ಯಾರ ತಕರಾರೂ ಇಲ್ಲ. ಜೆಡಿಎಸ್​ ಪಕ್ಷವು ಎನ್‌ಡಿಎ ಮೈತ್ರಿಕೂಟದ ತೆಕ್ಕೆಗೆ ಬರಬೇಕು ಎಂಬುದು ವರಿಷ್ಠರ ತೀರ್ಮಾನವಾಗಿದೆ. ಈ ತೀರ್ಮಾನದ ಬಗ್ಗೆ ರಾಜ್ಯದಲ್ಲಿ ಉತ್ಸಾಹ ಇದೆ. ಮೈತ್ರಿಯಿಂದ ತಳಮಟ್ಟದ ಕಾರ್ಯಕರ್ತರಿಗೂ ಉತ್ಸಾಹ ಬಂದಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಹೆಚ್ಚು ಸ್ಥಾನ ಗೆಲ್ಲಲಿವೆ ಎಂದು ವಿಜಯೇಂದ್ರ ಹೇಳಿದ್ದಾರೆ.

ನಮ್ಮ ಗುರಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡುವುದು. ಬಿಜೆಪಿ ಮತ್ತು ಜೆಡಿಎಸ್ ಒಟ್ಟಿಗೆ ಕೆಲಸ ಮಾಡಲಿವೆ. ಮಂಡ್ಯ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷ ಕೈಬಿಡುವ ಪ್ರಶ್ನೆ ಇಲ್ಲ. ಮಂಡ್ಯದಲ್ಲಿ ಪಕ್ಷ ಸಂಘಟನೆಗೆ ನಾಯಕರಿಗೆ ಹೆಚ್ಚು ಶಕ್ತಿ‌ ಕೊಡುತ್ತೇವೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಇದನ್ನೂ ಓದಿ: ಹಳೇ ಮೈಸೂರು ಭಾಗವನ್ನೇ ಟಾರ್ಗೆಟ್ ಮಾಡಿದ ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಿಷ್ಟು

ಇನ್ನು ಮೈತ್ರಿ ಸಂಬಂಧ ದೆಹಲಿಗೆ ಬರುವಂತೆ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿಗೆ ಆಹ್ವಾನ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ವಿಜಯೇಂದ್ರ, ಸಭೆ ಇದೆ ಎಂಬುದರ ಬಗ್ಗೆ ನನಗೆ ಮಾಹಿತಿ‌ ಇಲ್ಲ ಎಂದರು. ನಮ್ಮ ನಾಯಕರು ಪಂಚರಾಜ್ಯ ಚುನಾವಣೆಯಲ್ಲಿ ವ್ಯಸ್ತರಾಗಿದ್ದಾರೆ.

ನವೆಂಬರ್​ 29ರ ನಂತರ ನಾನು ನವದೆಹಲಿಗೆ ಹೋಗುತ್ತೇನೆ. ಕುಮಾರಸ್ವಾಮಿಗೆ ಆಹ್ವಾನ ಇರಬಹುದು, ಆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಮಂಡ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:09 pm, Mon, 20 November 23