ಗುಂಡಿ ಇಲ್ಲದ ರಸ್ತೆ ನಿರ್ಮಾಣ ರಾಕೆಟ್ ಸೈನ್ಸಾ? ಮೊದಲ ಸಭೆಯಲ್ಲೇ ಜಿಬಿಎ ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ಕ್ಲಾಸ್

ಬೆಂಗಳೂರು ಅಭಿವೃದ್ದಿ ಖಾತೆ ಹೊಂದಿರುವ ಸಚಿವ ಕೃಷ್ಣ ಬೈರೇಗೌಡ ಖಾತೆ ಕ್ಯಾತೆ ಮುಗಿದಿಲ್ಲ. ಬೆಂಗಳೂರು ಅಭಿವೃದ್ದಿ ಖಾತೆಗೆ ಬಿಡಿಎ ಮತ್ತು ಬಿಎಂಆರ್‌ಡಿಎ ಪ್ರಾಧಿಕಾರವನ್ನು ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದರ ನಡುವೆಯೂ ಕೃಷ್ಣಬೈರೇಗೌಡ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಈ ಮೂಲಕ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಜವಾಬ್ದಾರಿಯನ್ನು ಅಧಿಕೃತವಾಗಿ ವಹಿಸಿಕೊಂಡಿದ್ದು, ಮೊದಲ ಸಭೆಯಲ್ಲೇ ಸಭೆಯಲ್ಲೇ ಅಧಿಕಾರಿಗಳ ಚಳಿ ಬಿಡಿಸಿದ್ದಾರೆ.

ಗುಂಡಿ ಇಲ್ಲದ ರಸ್ತೆ ನಿರ್ಮಾಣ ರಾಕೆಟ್ ಸೈನ್ಸಾ? ಮೊದಲ ಸಭೆಯಲ್ಲೇ ಜಿಬಿಎ ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ಕ್ಲಾಸ್
Krishna Byre Gowda

Updated on: Jun 16, 2026 | 3:50 PM

ಬೆಂಗಳೂರು, (ಜೂನ್ 16): ಖಾತೆ ಹಂಚಿಕೆಯಾಗಿ ಹಲವು ದಿನಗಳ ಬಳಿಕ ಕೊನೆಗೂ ಸಚಿವ ಕೃಷ್ಣ ಬೈರೇಗೌಡ (krishna byre gowda) ಅವರು ಬೆಂಗಳೂರು (Bengaluru) ನಗರಾಭಿವೃದ್ಧಿ ಇಲಾಖೆಯ ಜವಾಬ್ದಾರಿಯನ್ನು ಅಧಿಕೃತವಾಗಿ ವಹಿಸಿಕೊಂಡಿದ್ದಾರೆ. ಪೂರ್ಣ ಪ್ರಮಾಣದ ಅಧಿಕಾರ ನೀಡದ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರ ಸ್ವೀಕಾರದಿಂದ ದೂರ ಉಳಿದಿದ್ದ ಅವರು, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರೊಂದಿಗೆ ನಡೆದ ಸಂಧಾನದ ಬಳಿಕ ಇಂದು (ಜೂನ್ 16) ಜಿಬಿಎ ಅಧಿಕಾರಿಗಳ ಸಭೆ ನಡೆಸಿಸುವ ಮೂಲಕ ಅಧಿಕಾರ ವಹಿಸಿಕೊಂಡರು. ಇನ್ನು ಮೊದಲ ಸಭೆಯಲ್ಲೇ ಪ್ರಮುಖವಾಗಿ ಬೆಂಗಳೂರಿನ ರಸ್ತೆ ಗುಂಡಿ ಹಾಗೂ ಕಸದ ವಿಚಾರವನ್ನು ಪ್ರಸ್ತಾಪಿಸಿ ಅಧಿಕಾರಿಗಳ ಚಳಿ ಬಿಡಿಸಿದರು. ಬೆಂಗಳೂರಿನ ರಸ್ತೆ ಮಾಡೋದು ಏನು ರಾಕೆಟ್ ಸೈನ್ಸಾ? ನೆರೆ ರಾಜ್ಯಗಳಲ್ಲಿ ರಸ್ತೆ ಗುಂಡಿಗಳು ಇಲ್ಲದ ರಸ್ತೆಗಳನ್ನು ನೋಡಿ ಎಂದು ತರಾಟೆಗೆ ತೆಗೆದುಕೊಂಡರು.

ಮುಖ್ಯಾಂಶಗಳು

  • ಖಾತೆ ಗೊಂದಲ ನಡುವೆಯೂ ಜಿಬಿಎ ಅಧಿಕಾರಿಗಳ ಸಭೆ ನಡೆಸಿದ ಸಚಿವ ಕೃಷ್ಣಬೈರೇಗೌಡ
  • ಜಿಬಿಎ ಐದು ಪಾಲಿಕೆಯ ಮುಖ್ಯ ಆಯುಕ್ತರ ಸಭೆ ಮಾಡಿದ ಸಚಿವ
  • ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಕಚೇರಿಯಲ್ಲಿ ನಡೆದ ಮೊದಲ ಸಭೆ
  • ಮೊದಲ ಸಭೆಯಲ್ಲೇ ರಸ್ತೆ ಗುಂಡಿಗಳ ಬಗ್ಗೆ ಅಧಿಕಾರಿಗಳಿಗೆ ತರಾಟೆ

ರಸ್ತೆ ಗುಂಡಿಗಳು ಇಲ್ಲದೇ ರಸ್ತೆ ಮಾಡೋದಕ್ಕೆ‌ ಆಗೋದಿಲ್ವಾ?

ರಸ್ತೆ ಗುಂಡಿಗಳು ಇಲ್ಲದೇ ರಸ್ತೆ ಮಾಡೋದಕ್ಕೆ‌ ಆಗೋದಿಲ್ವಾ? ಬೆಂಗಳೂರಿನ ರಸ್ತೆ ಮಾಡೋದು ಏನು ರಾಕೆಟ್ ಸೈನ್ಸಾ. ನೆರೆ ರಾಜ್ಯಗಳಲ್ಲಿ ಪಾತ್ ಹೋಲ್ ಇಲ್ಲದ ರಸ್ತೆಗಳನ್ನು ನೋಡಿ. ಸದಾ ಮಳೆ ಬೀಳುವಂತ ರಾಜ್ಯಗಳಲ್ಲೂ ರಸ್ತೆಗಳು ಚೆನ್ನಾಗಿ ಇವೆ. ನಿಮಗೆ ಯಾಕೆ ಉತ್ತಮ ರಸ್ತೆ ಮಾಡೋದಕ್ಕೆ ಆಗುತ್ತಿಲ್ಲ. ನಿಮಗೆ ಏನಾದರೂ ಕಡಿಮೆ ಬಜೆಟ್ ಕೊಟ್ಟಿದ್ದೇವಾ ಎಂದು ಜಿಬಿಎ ಇಂಜಿನಿಯರ್​​ಗಳನ್ನು ತರಾಟೆಗೆ ತೆಗೆದುಕೊಂಡರು.

ಇದನ್ನೂ ನೋಡಿ: ಸುರ್ಜೇವಾಲ ಸಂಧಾನ ಸಕ್ಸಸ್​​: 13 ದಿನಗಳ ನಂತರ ಖಾತೆ ವಹಿಸಿಕೊಂಡ ಕೃಷ್ಣ ಭೈರೇಗೌಡ

ಸಭೆ ಬಳಿಕ ಕೃಷ್ಣಬೈರೇಗೌಡ ಹೇಳಿದ್ದೇನು?

ಮೊದಲ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೃಷ್ಣಬೈರೇಗೌಡ, ಇವತ್ತು ನಾನು ಬೆಂಗಳೂರಿನ ಅಧಿಕಾರಿಗಳೊಂದಿಗೆ ಐದು ನಗರ ಪಾಲಿಕೆ ಆಯುಕ್ತರೊಂದಿಗೆ ಸಭೆ ನಡೆಸಿದ್ದೇನೆ.ಇಲ್ಲೇ ಶಾಸಕನಾಗಿರುವುದರಿಂದ ನನಗೆ ಗೊತ್ತಿರೋದು ಇರುತ್ತೆ. ಕೆಲವೊಂದು ಆಡಳಿತಾತ್ಮಕ ವಿಚಾರಗಳು ನಾನು‌ ತಿಳಿಯೋದು ಇರುತ್ತೆ . ಹಾಗಾಗಿ ಇವತ್ತಿನಿಂದ ಸಭೆ ಮೂಲಕ‌ ಕೆಲಸ ಆರಂಭ ಮಾಡಿದ್ದೇನೆ. ಬೆಂಗಳೂರಿನ ಸಮಸ್ಯೆ ನಮಗೆಲ್ಲ ಗೊತ್ತಿರೋ ವಿಚಾರ. ಬೆಂಗಳೂರು ನಮ್ಮ ಇಡೀ‌ ದೇಶ ಹಾಗೂ ಪ್ರಪಂಚಕ್ಕೆ ಬೇಕಾಗಿರೋ ಆಸ್ತಿ‌. ಬೆಂಗಳೂರಿನಲ್ಲಿ ವಾಸ ಮಾಡುವ ಒಂದೂವರೆ ಕೋಟಿ ಜನರಿಗೆ ಇದು ಆಶ್ರಯ ಆಗಿದೆ. ಇಲ್ಲಿ ವಾಸ ಮಾಡುವ ಒಂದೂವರೆ ಕೋಟಿ‌ ಜನ ನಮಗೆ ಮುಖ್ಯ . ಇಲ್ಲಿ ವಾಸ ಮಾಡುವ ಜನರ ದೈನಂದಿನ ಜೀವನ ಸುಧಾರಣೆ ಆಗಬೇಕು. ರಸ್ತೆ,ಟ್ರಾಫಿಕ್, ಗಾರ್ಬೆಜ್, ಬೆಂಗಳೂರಿನ ಸೌಂದರ್ಯ, ಸ್ವಚ್ಚತ್ತೆ ಹೀಗೆ ಹಲವು ಸಮಸ್ಯೆಗಳಿವೆ . ಒಂದೇ ಬಿಬಿಎಂಪಿ ಇದ್ರೆ ಇವನೆಲ್ಲ ಸುಧಾರಣೆ ತರೋದು ಕಷ್ಟ ಅಂತ ಇದ್ದೀಗಾ ಐದು ನಗರ ಪಾಲಿಕೆ ಮಾಡಿ ಆಡಳಿತ ವಿಕೇಂದ್ರೀಕರಣ ಮಾಡಲಾಗಿದೆ. ಕಳೆದ ಮೂರು ವರ್ಷಗಳ ಸತತ ಪ್ರಯತ್ನದಿಂದ ಡಿಕೆ ಶಿವಕುಮಾರ್ ಲಾಂಗ್ ಟರ್ಮ್ ಯೋಜನೆಗಳಿಗೆ ರೂಪುರೇಷೆ ತಂದಿದ್ದಾರೆ. ಇಲ್ಲಿ ಬಹಳ ನುರಿತ ಅಧಿಕಾರಿಗಳು ಇದ್ದಾರೆ, ಎಕ್ಸ್ ಪರ್ಟ್ ಇಂಜಿನಿಯರ್ಸ್ ಇದ್ದಾರೆ ಎಂದರು.

ಕಸದ ಬಗ್ಗೆ ಕೃಷ್ಣ ಬೈರೇಗೌಡ್ರು ಹೇಳಿದ್ದಿಷ್ಟು

ಕಸದ ವಿಚಾರದಲ್ಲಿ ಜನರು ಸಹಕಾರ ಕೊಡಬೇಕು. ವ್ಯವಸ್ಥೆಯಲ್ಲಿಯೂ ಲೋಪದೋಷ ಇದೆ. ಆದರೆ ಜನರ ಸಹಕಾರವೂ ಅಗತ್ಯ. ಎಲ್ಲವನ್ನ ಒಂದೇ ದಿನ ಮಾಡ್ತೇನೆಂದು ನಾನು ಹೇಳಿಲ್ಲ. ಕಸದ ಟೆಂಡರ್ ವಿಚಾರವಾಗಿ ಈಗಾಗಲೇ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ಆ ಸಮಿತಿ ಎಲ್ಲವನ್ನೂ ಗಮನಿಸುತ್ತೆ‌. ಸಮಿತಿ‌ ಏನಾದರೂ ಸಲಹೆ ಸೂಚನೆ ಕೊಟ್ಟರೆ ಪಾಲಿಸುತ್ತೇವೆ. ಸಮಿತಿ ಎಲ್ಲವನ್ನು ಪರಿಶೀಲನೆ ಮಾಡುತ್ತೆ ಎಂದು ಸ್ಪಷ್ಟಪಡಿಸಿದರು.

ಕೈಲಾದ ಮಟ್ಟಿಗೆ ಬೆಂಗಳೂರಿಗೆ ಅಳಿಲು ಸೇವೆ ಮಾಡುತ್ತೇವೆ

ನಮ್ಮ ಕೈಲಾದ ಮಟ್ಟಿಗೆ ಬೆಂಗಳೂರಿಗೆ ಅಳಿಲು ಸೇವೆ ಮಾಡುತ್ತೇವೆ. ರಸ್ತೆ ಗುಂಡಿಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಜನರ ಭಾವನೆ ನನಗೂ ಗೊತ್ತಿದೆ. ಸರಿಯಾಗಿ ರಸ್ತೆ ಗುಂಡಿಯನ್ನ ಮುಚ್ಚಬೇಕು. ರಸ್ತೆ ಗುಂಡಿ ಇಲ್ಲದ ಹಾಗೆ ರಸ್ತೆ ನಿರ್ಮಾಣ ಮಾಡಲು‌ ಆಗಲ್ವಾ ಎಂದು ನಾನು ಅಧಿಕಾರಿಗಳಿಗೆ ಪ್ರಶ್ನೆ ಕೇಳಿದ್ದೇನೆ. ರಸ್ತೆಯನ್ನ ಸರಿಯಾಗಿ‌ ನಿರ್ಮಿಸಬೇಕು. ಈ ಬಗ್ಗೆ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ಹೇಳಿದರು.

ಖಾತೆ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು

ಇನ್ನು ಖಾತೆ ಬಗ್ಗೆ ಸ್ಪಷ್ಟನೆ ನೀಡಿರುವ ಕೃಷ್ಣಬೈರೇಗೌಡ, ನನ್ನ ಅಭಿಪ್ರಾಯವನ್ನ ನಾನು ಸಿಎಂ‌ ಹಾಗೂ ವರಿಷ್ಠರಿಗೆ ತಿಳಿಸಿದ್ದೇನೆ. ಇಲ್ಲಿ ಸಮರ್ಪಕವಾಗಿ ಕೆಲಸ ಆಡಳಿತ ನಡೆಸಲು ಪೂರ್ಣ ಖಾತೆ ಅವಶ್ಯವಿದೆ ಎಂದು ಸಿಎಂ ಹಾಗೂ ವರಿಷ್ಠರಿಗೆ ಹೇಳಿದ್ದೇನೆ. ಕ್ಲಾರಿಟಿ ಸಿಕ್ಕ ಬಳಿಕವೇ ಅಧಿಕಾರ ಸ್ವೀಕಾರ ಮಾಡಬೇಕು ಅಂದುಕೊಂಡಿದ್ದೆ. ಆದ್ರೆ, ಸಿಎಂ ವಿವೇಚನೆ ಬಳಸಿ ತೀರ್ಮಾನ ಮಾಡಿದ್ದಾರೆ. ನಮ್ಮ ಅರ್ಹತೆಗೆ ತಕ್ಕ ಖಾತೆ ಸಿಗಲಿದೆ ಅಂದುಕೊಳ್ಳುತ್ತೇನೆ. ಎಲ್ಲವೂ ಎಲ್ಲಾ ಸಮಯದಲ್ಲೂ ಸಿಗುವುದಿಲ್ಲ. ಈಗ ವರಿಷ್ಠರ ಸೂಚನೆ ಮೇರೆಗೆ ಇಲಾಖೆಯ ಜವಾಬ್ದಾರಿ ಸ್ವೀಕರಿಸಿದ್ದೇನೆ ಎಂದು ತಿಳಿಸಿದರು.

Follow Us