ಮಲ್ಟಿ ಟ್ರ್ಯಾಕಿಂಗ್ ರೈಲ್ವೆ ಯೋಜನೆಗೆ ಕೇಂದ್ರ ಒಪ್ಪಿಗೆ: ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಬಂಪರ್ ಕೊಡುಗೆ

ಕೇಂದ್ರ ಸಚಿವ ಸಂಪುಟವು ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ಮೂರು ಮಲ್ಟಿ-ಟ್ರ್ಯಾಕಿಂಗ್ ರೈಲ್ವೆ ಯೋಜನೆಗಳಿಗೆ ಅನುಮೋದನೆ ನೀಡಿದೆ. ಪ್ರಮುಖವಾಗಿ ಗುಂತಕಲ್-ವಾಡಿ ಮಾರ್ಗವು ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ಯೋಜನೆಯು 4,161 ಗ್ರಾಮಗಳಿಗೆ ರೈಲ್ವೆ ಸಂಪರ್ಕ ಒದಗಿಸುವ ಮೂಲಕ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ.

ಮಲ್ಟಿ ಟ್ರ್ಯಾಕಿಂಗ್ ರೈಲ್ವೆ ಯೋಜನೆಗೆ ಕೇಂದ್ರ ಒಪ್ಪಿಗೆ: ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಬಂಪರ್ ಕೊಡುಗೆ
ಭಾರತೀಯ ರೈಲ್ವೆ
Image Credit source: www.irctc.co.in

Updated on: May 09, 2026 | 4:05 PM

ಬೆಂಗಳೂರು, ಮೇ 09: ಕರ್ನಾಟಕ ಸೇರಿದಂತೆ ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ 19 ಜಿಲ್ಲೆಗಳನ್ನು ಒಳಗೊಂಡ ಮೂರು ಮಲ್ಟಿ ಟ್ರ್ಯಾಕಿಂಗ್ ರೈಲ್ವೆ ಯೋಜನೆಗೆ ಕೇಂದ್ರ ಸಚಿವ ಸಂಪುಟ (Cabinet) ಅನುಮೋದನೆ ನೀಡಿದೆ. ಆ ಮೂಲಕ ಪ್ರಸ್ತುತವಿರುವ ಭಾರತೀಯ ರೈಲ್ವೆ (Indian Railways) ಜಾಲಕ್ಕೆ ಸುಮಾರು 901 ಕಿ.ಮೀ ಸೇರ್ಪಡೆಗೊಳ್ಳಲಿದೆ. ಯೋಜನೆಯ ಒಟ್ಟು ಅಂದಾಜು ವೆಚ್ಚ 23,437 ಕೋಟಿ ರೂ.ಗಳಾಗಿದ್ದು, 2030-31ನೇ ಸಾಲಿನ ವೇಳೆಗೆ ಪೂರ್ಣಗೊಳ್ಳುವ ಗುರಿ ಹೊಂದಲಾಗಿದೆ.

ಮುಖ್ಯಾಂಶಗಳು

  • ಮಲ್ಟಿ ಟ್ರ್ಯಾಕಿಂಗ್ ರೈಲ್ವೆ ಯೋಜನೆಗಳಿಗೆ ಕೇಂದ್ರ ಅನುಮೋದನೆ
  • ಗುಂತಕಲ್ ಟು ವಾಡಿ ಮಾರ್ಗ ಕರ್ನಾಟಕಕ್ಕೆ ಸಂಪರ್ಕ ಸೇತುವೆ
  • ಗ್ರಾಮೀಣ ಅಭಿವೃದ್ಧಿ ಮತ್ತು ಆರ್ಥಿಕತೆಗೆ ಉತ್ತೇಜನ

ಮೇ 5ರಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ, ರೈಲ್ವೆ ಸಚಿವಾಲಯದ ಮೂರು ಪ್ರಮುಖ ರೈಲ್ವೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಅವುಗಳೆಂದರೆ ನಾಗ್ಡಾ – ಮಥುರಾ 3ನೇ ಮತ್ತು 4ನೇ ಮಾರ್ಗ, ಗುಂತಕಲ್ – ವಾಡಿ 3ನೇ ಮತ್ತು 4ನೇ ಮಾರ್ಗ ಮತ್ತು ಬುರ್ಹ್ವಾಲ್ – ಸೀತಾಪುರ 3ನೇ ಮತ್ತು 4ನೇ ಮಾರ್ಗ. ಈ ಮೂರು ಮಾರ್ಗಗಳ ಯೋಜನೆಯಿಂದ ರೈಲು ಸಂಚಾರ ದಟ್ಟಣೆ ಕಡಿಮೆಯಾಗಿ ಸರಕು ಮತ್ತು ಪ್ರಯಾಣಿಕ ರೈಲುಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.

ಗುಂತಕಲ್–ವಾಡಿ ಮಾರ್ಗ: ಕರ್ನಾಟಕಕ್ಕೆ ಸಂಪರ್ಕ

ಗುಂತಕಲ್–ವಾಡಿ ಮಾರ್ಗವು ದಕ್ಷಿಣ ಭಾರತವನ್ನು ಮಧ್ಯ ಹಾಗೂ ಪಶ್ಚಿಮ ಭಾರತಕ್ಕೆ ಸಂಪರ್ಕಿಸುವ ಸುಮಾರು 230 ಕಿ.ಮೀ. ಉದ್ದದ ಪ್ರಮುಖ ವಿದ್ಯುದ್ದೀಕೃತ ದ್ವಿಪಥ ಮಾರ್ಗವಾಗಿದೆ. ಗುಂತಕಲ್, ಗೂಟಿ, ಡೋನ್ ಮತ್ತು ವಾಡಿ ಈ ಮಾರ್ಗಕ್ಕೆ ನೇರವಾಗಿ ಸಂಪರ್ಕಿಸುವ ಪ್ರಮುಖ ಜಂಕ್ಷನ್​ಗಳಾಗಿವೆ. ಈ ಮಾರ್ಗವು ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳ ವ್ಯಾಪ್ತಿಯಲ್ಲಿ ಹಾದುಹೋಗುತ್ತದೆ.

ಪ್ರಮುಖ ನಿಲ್ದಾಣ

ಗುಂತಕಲ್ ಟು ವಾಡಿ ಮಾರ್ಗವು ಬೆಂಗಳೂರು ಕಡೆಗಿನ ಸಂಚಾರಕ್ಕೆ ಪ್ರಮುಖ ಜಂಕ್ಷನ್ ಆಗಿದೆ. ಈ ಮಾರ್ಗ ಡೋನ್, ಗುಂತಕಲ್​​ ಮತ್ತು ನಂದ್ಯಾಲ ಜಂಕ್ಷನ್​​​ನನ್ನು ಸಂಪರ್ಕಿಸುತ್ತದೆ. ವಾಡಿ ಜಂಕ್ಷನ್ ಈ ಮಾರ್ಗದ ಅಂತಿಮ ನಿಲ್ದಾಣವಾಗಿದ್ದು, ಹೈದರಾಬಾದ್, ಬೆಂಗಳೂರು ಮತ್ತು ಪುಣೆಗೆ ಸಂಪರ್ಕ ಕಲ್ಪಿಸುತ್ತದೆ. ಆದೋನಿ, ರಾಯಚೂರು, ಮಂತ್ರಾಲಯಂ ರಸ್ತೆ ಮತ್ತು ಯಾದಗಿರಿ ಈ ಮಾರ್ಗದ ಪ್ರಮುಖ ನಿಲ್ದಾಣಗಳಾಗಿವೆ.

ಇದನ್ನೂ ಓದಿ: ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡ ಕಡೆಗಣನೆ: ರಾಜ್ಯಾದ್ಯಂತ ರೈಲು ಸಂಚಾರ ಬಂದ್ ಮಾಡುವ ಎಚ್ಚರಿಕೆ ನೀಡಿದ ಕರವೇ

ಗಣಿಗಾರಿಕೆ ವಲಯದಿಂದ ಬರುವ ಭಾರಿ ಸರಕು ಸಾಗಣೆ ಮತ್ತು ಹೆಚ್ಚುತ್ತಿರುವ ಪ್ರಯಾಣಿಕರ ಒತ್ತಡವನ್ನು ನಿಭಾಯಿಸಲು, ಈ ಮಾರ್ಗದಲ್ಲಿ 3ನೇ ಮತ್ತು 4ನೇ ರೈಲ್ವೆ ಹಳಿ ನಿರ್ಮಿಸುವ ಪ್ರಸ್ತಾವಿತ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯು ಪೂರ್ಣಗೊಂಡಲ್ಲಿ ರೈಲು ಸಂಚಾರದ ವೇಗ ಮತ್ತು ಸಾಮರ್ಥ್ಯ ಮತ್ತಷ್ಟು ಹೆಚ್ಚಾಗಲಿದೆ.

ಮಲ್ಟಿ-ಟ್ರ್ಯಾಕಿಂಗ್ ಯೋಜನೆಯಿಂದ 4,161 ಹಳ್ಳಿಗಳಿಗೆ ಸಂಪರ್ಕ ಭಾಗ್ಯ

ಪ್ರಸ್ತಾವಿತ ಮಲ್ಟಿ-ಟ್ರ್ಯಾಕಿಂಗ್ ಯೋಜನೆಯು ಸುಮಾರು 83 ಲಕ್ಷ ಜನಸಂಖ್ಯೆ ಹೊಂದಿರುವ 4,161 ಹಳ್ಳಿಗಳಿಗೆ ರೈಲ್ವೆ ಸಂಪರ್ಕವನ್ನು ಕಲ್ಪಿಸಲಿದೆ. ಈ ಯೋಜನೆಯಿಂದ ಗ್ರಾಮೀಣ ಭಾಗದ ಜನರಿಗೆ ಉತ್ತಮ ಸಾರಿಗೆ ಸೌಲಭ್ಯ ದೊರೆಯಲಿದ್ದು, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಉತ್ತೇಜನ ಸಿಗುವ ನಿರೀಕ್ಷೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us