ಧೈರ್ಯವಿದ್ದರೆ ಸಿದ್ದರಾಮಯ್ಯ 5 ವರ್ಷ ಸಿಎಂ ನಾನೆ ಅಂತ ಹೇಳಲಿ: ಪ್ರತಾಪ್​ ಸಿಂಹ

ಸಿದ್ದರಾಮಯ್ಯ ತಮ್ಮ ಚೇಲಾ ಪಡೆ ಮೂಲಕ ತಾವು ಪೂರ್ಣ ಅವಧಿಗೆ ಸಿಎಂ ಅಂತಾ ಹೇಳಿಸುತ್ತಿದ್ದಾರೆ. ಸಚಿವರಾದ ಮಹದೇವಪ್ಪ, ಎಂ.ಬಿ.ಪಾಟೀಲ್ ​ಮೂಲಕ ಹೇಳಿಸಿದ್ದಾರೆ. ಸಿದ್ದರಾಮಯ್ಯಗೆ ಪೂರ್ಣವಧಿ ನಾನೆ ಸಿಎಂ ಅಂತ ಹೇಳುವ ಧೈರ್ಯವಿಲ್ಲ ಎಂದು ಸಂಸದ ಪ್ರತಾಪ್​ ಸಿಂಹ ಹೇಳಿದ್ದಾರೆ.

ಧೈರ್ಯವಿದ್ದರೆ ಸಿದ್ದರಾಮಯ್ಯ 5 ವರ್ಷ ಸಿಎಂ ನಾನೆ ಅಂತ ಹೇಳಲಿ: ಪ್ರತಾಪ್​ ಸಿಂಹ
ಪ್ರತಾಪ್​ ಸಿಂಹ (ಎಡಚಿತ್ರ) ಸಿದ್ದರಾಮಯ್ಯ (ಬಲಚಿತ್ರ)
ವಿವೇಕ ಬಿರಾದಾರ

Updated on: Jun 19, 2023 | 1:47 PM

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಅಧಿಕಾರ ಬಿಟ್ಟು ಕೊಡುವ ಇರಾದೆ ಇಲ್ಲ. ಹೀಗಾಗಿ ಸಿದ್ದರಾಮಯ್ಯ ತಮ್ಮ ಚೇಲಾ ಪಡೆ ಮೂಲಕ ತಾವು ಪೂರ್ಣ ಅವಧಿಗೆ ಸಿಎಂ ಅಂತಾ ಹೇಳಿಸುತ್ತಿದ್ದಾರೆ. ಸಚಿವರಾದ ಮಹದೇವಪ್ಪ (Madevappa), ಎಂ.ಬಿ.ಪಾಟೀಲ್ (MB Patil) ​ಮೂಲಕ ಹೇಳಿಸಿದ್ದಾರೆ. ಸಿದ್ದರಾಮಯ್ಯಗೆ ಪೂರ್ಣವಧಿ ಸಿಎಂ ಅಂತಾ ಹೇಳುವ ಧೈರ್ಯವಿಲ್ಲ. ಕಾಂಗ್ರೆಸ್ (Congress) ಧಾರಾಳ ಮನಸ್ಸಿನಿಂದ ಸಿದ್ದರಾಮಯ್ಯರನ್ನು ಸಿಎಂ ಮಾಡಿದೆ. ಆದರೆ ಸಿದ್ದರಾಮಯ್ಯಗೆ ಉದಾರತನದ ಮನಸ್ಸು ಇಲ್ಲ ಧೈರ್ಯವಿದ್ದರೆ ಸಿದ್ದರಾಮಯ್ಯ  5 ವರ್ಷ ಸಿಎಂ ನಾನೆ ಅಂತ ಹೇಳಲಿ ಎಂದು ಸಂಸದ ಪ್ರತಾಪ್​​ ಸಿಂಹ (Pratap Simha) ಪ್ರಶ್ನಿಸಿದರು.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್​​ ಸಂಸದ ಡಿ.ಕೆ.ಸುರೇಶ್ ವಿಧಾನಸೌಧದಲ್ಲಿ ಶರ್ಟ್ ಎಳೆದಿದ್ದಾರೆ. ಮತ್ತೊಮ್ಮೆ 5 ವರ್ಷ ಸಿಎಂ ಅಂದರೇ ನಿಮ್ಮ ಕೊರಳ ಪಟ್ಟಿ ಹಿಡಿಯುತ್ತಾರೆ. ಸಿದ್ದರಾಮಯ್ಯ ಅವರಿಗೆ ತಾವೇ ಪೂರ್ಣವಧಿ ಸಿಎಂ ಅಂತ ನೇರವಾಗಿ ಹೇಳುವ ಧೈರ್ಯವಿಲ್ಲ ಅವರಿಗೆ ಪುಕ್ಕಲತನ. ಚುನಾವಣೆ ಗೆಲ್ಲಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರ ಪಾತ್ರ ದೊಡ್ಡದಿದೆ.

ಸಂಸದ ಪ್ರತಾಪ್​ ಸಿಂಹ ಚಿಲ್ಲರೆ ರಾಜಕಾರಣ ಬಿಡಲಿ ಎಂಬ ಎಂ.ಬಿ.ಪಾಟೀಲ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಎಂ.ಬಿ.ಪಾಟೀಲ್​ಗೆ ಸಿಕ್ಕಿದ ಖಾತೆಯಲ್ಲಿ ಬರೀ ಚಿಲ್ಲರೆ ಸಿಗುತ್ತದೆ. ಕಂತೆ ಕಂತೆ ಕಾಸು ಬರುವ ಖಾತೆ ಸಿಗಲಿಲ್ಲ ಅಂತಾ ಒದ್ದಾಡುತ್ತಿದ್ದಾರೆ. ಎಂ.ಬಿ.ಪಾಟೀಲ್ ಅವರಿಗೆ ಬರೀ ಚಿಲ್ಲರೆ, ನೋಟಿನ ಬಗ್ಗೆ ಮಾತ್ರ ಚಿಂತೆ. ಸಿದ್ದರಾಮಯ್ಯ ಬಂದೂಕಿಗೆ ಹೆಗಲು ಕೊಡೋದೆ ನಿಮ್ಮ ಕೆಲಸನಾ? ಎಂದು ಎಂ.ಬಿ.ಪಾಟೀಲ್ ವಿರುದ್ಧ ಪ್ರತಾಪ್​ ಸಿಂಹ ವಾಗ್ದಾಳಿ ಮಾಡಿದರು.

ಇದನ್ನೂ ಓದಿ: Anna Bhagya: ರಾಜ್ಯದಲ್ಲಿ ಅಕ್ಕಿ ಇದ್ದರೇ ಟೆಂಡರ್​ ಮೂಲಕ ಖರೀದಿ: ಸಿಎಂ ಸಿದ್ದರಾಮಯ್ಯ

ಶೀಘ್ರದಲ್ಲೇ ವಿರೋಧ ಪಕ್ಷದ ನಾಯಕರ ಆಯ್ಕೆ ಆಗುತ್ತದೆ. ಎದೆಗಾರಿಕೆ ಇರುವ ನಾಯಕ ಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ಎಲ್ಲ ಕಡೆಯೂ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಹೆಸರು ಕೇಳಿ ಬರುತ್ತಿದೆ. ರಾಷ್ಟ್ರೀಯತೆ, ಹಿಂದುತ್ವ ಎಲ್ಲವನ್ನೂ ಹೊಂದಿರುವ ನಾಯಕಬೇಕು. ಬಸನಗೌಡ ಪಾಟೀಲ್​​ ಯತ್ನಾಳ್ ಅಂದರೇ ಒಂದು ಹವಾ ಇದೆ ಎಂದರು.

ರಾಜ್ಯದಲ್ಲಿ ಬರದ ಮುನ್ಸೂಚನೆ ವಿಚಾರವಾಗಿ ಮಾತನಾಡಿದ ಅವರು ಬಿ ಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ರಾಜ್ಯ ಸಮೃದ್ದವಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಬರಗಾಲದ ಛಾಯೆ ಮೂಡಿದೆ. ಈಗಾಗಲೇ ಮುಂಗಾರು ಕೈ ಕೊಟ್ಟಿದೆ. ಮುಂಗಾರು ಉತ್ತಮವಾಗಲಿ ಅಂತಾ ಪ್ರಾರ್ಥಿಸುತ್ತೇನೆ. ಉತ್ತಮವಾಗಿ ಮಳೆ ಬೆಳೆಯಾಗಲಿ ಎಂದು ಹಾರೈಸಿದರು.

ಅಕ್ಕಿ ವಿಚಾರದಲ್ಲಿ ಕೇಂದ್ರದ ಮೇಲೆ ಬಿಜೆಪಿ ಒತ್ತಡ ತರಲಿ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿ 5 ಕೆಜಿ ಅಕ್ಕಿ ಕೊಡುವುದು ಕೇಂದ್ರ ಸರ್ಕಾರ ಅಂತಾ ಪ್ರಥಮ ಬಾರಿಗೆ ಸತ್ಯ ಹೇಳಿದ್ದಕ್ಕೆ ಧನ್ಯವಾದ. ಮೋದಿ ಅವರ 5 ಕೇಜಿಗೆ 10 ಕೆಜಿ ಸೇರಿಸಿ ಕೊಡಬೇಕು. ಯಾರದೋ ದುಡ್ಡ ಕಾಂಗ್ರೆಸ್ ಜಾತ್ರೆನಾ ಇದು ? ಮೋದಿ ಸರ್ಕಾರದ ಅಕ್ಕಿ ಸಿದ್ರಾಮಣ್ಣನ ಜಾತ್ರೆ ನಾ? ಮೋದಿ ಅವರು ಅಕ್ಕಿ ಕೊಡಬೇಕು ನೀವು ಚುನಾವಣೆ ಗೆದ್ದು ಬರಬೇಕಾ ? ಓಪನ್ ಮಾರ್ಕೆಟ್​ನಲ್ಲಿ ಅಕ್ಕಿ ಖರೀದಿ ಮಾಡಿ. ಅಕ್ಕಿ ಖರೀದಿ ಆಗದಿದ್ದರೇ ಗಂಡನ ಖಾತೆಗೆ ಅಕ್ಕಿಯ ಹಣ ಹಾಕಿ. 34 ರೂ. ನಂತೆ ಖಾತೆಗೆ ಹಣ ಹಾಕಿ ಎಂದು ಕಾಲೆಳೆದರು.

ವಿದ್ಯುತ್ ದರ ಏರಿಕೆ ಖಂಡಿಸಿ ಕರ್ನಾಟಕ ಬಂದ್ ವಿಚಾರವಾಗಿ ಮಾತನಾಡಿ ವಿದ್ಯುತ್ ದರ ಯದ್ವತದ್ವಾ ಏರಿಕೆಯಾಗಿದೆ. ಜನರಿಗೆ ಕರೆಂಟ್ ಶಾಕ್ ಹೊಡೆದಿದೆ. ಕೈಗಾರಿಕಾ ಉದ್ಯಮಿಗಳು ಕರ್ನಾಟಕ ಬಂದ್​ಗೆ ಕರೆ ನೀಡಿದ್ದಾರೆ. ಕೈಗಾರಿಕೆಗಳಿಗೆ ಬರೆ ಹಾಕುವ ಕೆಲಸ ನಡೆಯುತ್ತಿದೆ. 200 ಯೂನಿಟ್ ಫ್ರೀ ಅಂತಾ ಹೇಳಿದ್ದೀರಿ. ಸಿದ್ದರಾಮಯ್ಯ ಅವರಿಗೆ ಅವರ ಮನೆಯಲ್ಲಿ ಎಷ್ಟು ವಿದ್ಯುತ್ ಖರ್ಚಾಗುತ್ತದೆ ಎಂಬ ಅರಿವು ಇಲ್ವಾ? ನಿಮ್ಮದು ದೋಖಾ ಸರಕಾರ ಅಲ್ವಾ? ನಿಮ್ಮ ಮನೆಯಲ್ಲೇ ಎಷ್ಟು ವಿದ್ಯುತ್ ಖರ್ಚಾಗುತ್ತದೆ ಎಂಬುದು ನಿಮಗೆ ಗೊತ್ತಿರಲಿಲ್ವಾ? ನಿಮ್ಮದು ದೋಖಾ ಸರಕಾರ ಎಂದು ಸಾಬೀತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:43 pm, Mon, 19 June 23

Loading...
Unable to load recommendations.
Follow Us