ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್​​​, ಮತ್ತೊಂದು ಸಾಕ್ಷಿ ಬಯಲು ಮಾಡಿದ ಸ್ನೇಹಮಯಿ ಕೃಷ್ಣ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ದೂರುದಾರ ಸ್ನೇಹಮಯಿ ಕೃಷ್ಣ ಮತ್ತೊಂದು ಸಾಕ್ಷಿ ತೆರೆದಿಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ವಿಚಾರದಲ್ಲಿ ತಹಶೀಲ್ದಾರ್ ಹಣ ಪಾವತಿಸಿದ್ದಾರೆ. ಮುದ್ರಾಂಕ ಶುಲ್ಕವನ್ನು ತಹಶೀಲ್ದಾರ್ ಅವರೇ ಪಾವತಿ ಮಾಡಿದ್ದಾರೆ ಎಂದು ಮತ್ತೊಂದು ಕ್ರಯಪತ್ರದ ಮೂಲಕ ಮಾಹಿತಿ ನೀಡಿದ್ದಾರೆ.

ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್​​​, ಮತ್ತೊಂದು ಸಾಕ್ಷಿ ಬಯಲು ಮಾಡಿದ ಸ್ನೇಹಮಯಿ ಕೃಷ್ಣ
ಸಿದ್ದರಾಮಯ್ಯ
Image Credit source: OpIndia
Updated By: ನಯನಾ ರಾಜೀವ್

Updated on: Nov 10, 2024 | 11:18 AM

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ದೂರುದಾರ ಸ್ನೇಹಮಯಿ ಕೃಷ್ಣ ಮತ್ತೊಂದು ಸಾಕ್ಷಿ ತೆರೆದಿಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ವಿಚಾರದಲ್ಲಿ ತಹಶೀಲ್ದಾರ್ ಹಣ ಪಾವತಿಸಿದ್ದಾರೆ. ಮುದ್ರಾಂಕ ಶುಲ್ಕವನ್ನು ತಹಶೀಲ್ದಾರ್ ಅವರೇ ಪಾವತಿ ಮಾಡಿದ್ದಾರೆ ಎಂದು ಮತ್ತೊಂದು ಕ್ರಯಪತ್ರದ ಮೂಲಕ ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ ದೂರುದಾರ ಸ್ನೇಹಮಯಿ ಕೃಷ್ಣ ಸಿಎಂ ಪತ್ನಿ ಪಾರ್ವತಿ ಅವರ ಕ್ರಯಪತ್ರದಲ್ಲಿ ಮುದ್ರಾಂಕ ಶುಲ್ಕ ಪಾವತಿಯನ್ನು ತಹಶೀಲ್ದಾರ್ ಮಾಡಿದ್ದಾರೆ. ನನ್ನ ಆರೋಪಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ ಎಂದು ಕೇಳಿದ್ದಾರೆ.

ಕ್ರಯಪತ್ರ ನೋಂದಣಿ ಮಾಡಿಸಿಕೊಳ್ಳುವವರು ನೋಂದಣಿಗೆ ಸಂಬಂಧಿಸಿದ ಶುಲ್ಕಗಳನ್ನು ಪಾವತಿ ಮಾಡಬೇಕು, ಅದೇ ರೀತಿ ಎನ್.ಮಂಜುನಾಥ್ ಮುದ್ರಾಂಕ ಶುಲ್ಕ ಪಾವತಿ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯನವರ ಪತ್ನಿ  ಪಾರ್ವತಿ ಕ್ರಯಪತ್ರ ಗಮನಿಸಿ, ಮುಡಾದ ವಿಶೇಷ ತಹಶೀಲ್ದಾರ್ ಮುದ್ರಾಂಕ ಶುಲ್ಕ ಪಾವತಿ ಮಾಡಿದ್ದಾರೆ ಎಂಬುದು ಖಚಿತವಾಗಿ ತಿಳಿದುಬರುತ್ತದೆ.

ಯತೀಂದ್ರ ಸಿದ್ದರಾಮಯ್ಯ ಹೇಳಿದ್ದೇನು?
ಮುಡಾ ಹಗರಣದ ಬಗ್ಗೆ ಸ್ನೇಹಮಯಿ ಕೃಷ್ಣ ಮಾಡಿರುವ ಆರೋಪದ ಬಗ್ಗೆ ಮಾತನಾಡಿದ ಅವರು, ಆ ಸಮಯದಲ್ಲಿ ನನ್ನ ತಾಯಿಗೆ ಹುಷಾರಿರಲಿಲ್ಲ, ರಿಜಿಸ್ಟ್ರೇಷನ್ ಫೀ ತುಂಬಿದ್ರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಿದ್ದರಾಮಯ್ಯ ಅವರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಿದೆ. ನನಗೆ ನ್ಯಾಯ ಸಿಗದಿದ್ದರೆ ನಾನು ಕೋರ್ಟ್‌ಗೆ ಹೋಗುತ್ತೇನೆ ಎಂದು ಸ್ನೇಹಮಯಿ ಎಚ್ಚರಿಕೆ ನೀಡಿದ್ದರು.

ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ನೋಟಿಸ್‌ ನೀಡಿರುವುದರ ಕುರಿತು ಪ್ರತಿಕ್ರಿಯೆ ನೀಡಿರುವ ಸ್ನೇಹಮಯಿ ಕೃಷ್ಣ, ಮುಡಾ ಹಗರಣ ಸಂಬಂಧ ನನ್ನ ಬಳಿ ಇರುವ ಸಾಕ್ಷ್ಯಗಳನ್ನ ನಾನು ನೀಡಿದ್ದೇನೆ. ಆ ಸಾಕ್ಷ್ಯಗಳ ಆಧಾರದ ಮೇಲೆ ಸಿದ್ದರಾಮಯ್ಯ ಅವರಿಗೆ ಶಿಕ್ಷೆ ಆಗಬಹುದು ಎಂದು ನಂಬಿದ್ದೇನೆ. ಆದರೆ ನನಗೆ ಮೊದಲಿನಿಂದಲೂ ಕೂಡ ಲೋಕಾಯುಕ್ತದ ಮೇಲೆ ನಂಬಿಕೆ ಇಲ್ಲ. ಈಗ ಪ್ರಕರಣವನ್ನ ಸಿಬಿಐಗೆ ವಹಿಸುವಂತೆ ನಾನು ಅರ್ಜಿ ಸಲ್ಲಿಸಿರುವೆ ಎಂದು ಹೇಳಿದ್ದರು.

ಮುಡಾ ಹಗರಣ ಸಂಬಂಧ ನಾನು ಆರಂಭದಿಂದಲೂ ತನಿಖೆಗೆ ಒತ್ತಾಯ ಮಾಡುತ್ತಲೇ ಬಂದಿದ್ದೇನೆ. ಕೊನೆಗೂ ಸಿದ್ದರಾಮಯ್ಯ ಅವರ ವಿಚಾರಣೆ ನಡೆಸುತ್ತಿರುವುದು ನನಗೆ ಖುಷಿ ತಂದಿದೆ. ನಾನು ಲೋಕಾಯುಕ್ತ ಅಧಿಕಾರಿಗಳಿಗೆ 50 ಪ್ರಶ್ನೆಗಳ ಮನವಿ ಪತ್ರ ನೀಡಿರುವೆ ಎಂದಿದ್ದರು.

ಮುಡಾ ಬೆಳಕಿಗೆ ಬಂದಿದ್ಹೇಗೆ?
ಈ ಮೊದಲು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಕೆ.ವಿ. ರಾಜೇಂದ್ರ ಅವರು ಇಡೀ ಮುಡಾ ಹಗರಣವನ್ನು ಬಯಲಿಗೆಳೆದಿದ್ದರು. ಮುಡಾ ಲೇಔಟ್ ಯೋಜನೆಗಳಲ್ಲಿ ಆಗಿರಬಹುದಾದ ಅಕ್ರಮಗಳ ಬಗ್ಗೆ ಮೊದಲು ರಾಜೇಂದ್ರ ಅವರು, ಕಳೆದ ಒಂದು ವರ್ಷದಿಂದ ಮುಡಾ ಆಯುಕ್ತರಿಗೆ ಪತ್ರ ಬರೆದು ವಿವರಣೆ ಕೇಳಿದ್ದರು.

ಸುಮಾರು 15 ಪತ್ರಗಳನ್ನು ಬರೆದಿದ್ದರೂ ಮುಡಾ ಆಯುಕ್ತರಿಂದ ಯಾವುದೇ ಉತ್ತರ ಬಂದಿರಲಿಲ್ಲ. ಮುಡಾ ಹಗರಣ ಬಹಿರಂಗವಾಗುತ್ತಿದ್ದಂತೆ ಜಿಲ್ಲಾಧಿಕಾರಿಯನ್ನೇ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿತು. ಇದೇ ಈ ಹಗರಣ ತನಿಖೆಯಲ್ಲಿ ಬಹು ಮುಖ್ಯವಾದ ಅಂಶ ಇದಾಗಿದೆ.

 

ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:14 am, Sun, 10 November 24