ಒಂದು ಭೇಟಿ..ಹಲವು ಚರ್ಚೆ: ಕಾಂಗ್ರೆಸ್​ನಲ್ಲಿ ಗರಿಗೆದರಿದ ಸಚಿವರ ತೆರೆಮರೆಯ ಚಟುವಟಿಕೆಗಳು

|

Updated on: Oct 05, 2024 | 12:45 PM

ಮುಡಾ ಹಗರಣ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿದೆ. ಇಡಿ ಪ್ರಕರಣ ದಾಖಲಿಸಿಕೊಂಡಿರುವುದು ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಕಾಂಗ್ರೆಸ್​ ಹೈಕಮಾಂಡ್​ ನಾನಾ ಲೆಕ್ಕಾಚಾರಗಳು ಹಾಕುತ್ತಿದೆ. ಸಿಎಂ ಬದಲಾವಣೆ ಮಾಡಿದರೆ ಅದರಿಂದಾಗುವ ಸಾಧಕ ಬಾಧಕಗಳ ಬಗ್ಗೆ ಚಿಂತನೆ ನಡೆಸಿದೆ. ಇನ್ನೊಂದೆಡೆ ಸಿಎಂ ಸ್ಥಾನದ ಆಕಾಂಕ್ಷಿಗಳಿಂದ ತೆರೆಮರೆಯ ಚಟುವಟಿಕೆಗಳು ನಡೆಯುತ್ತಿವೆ.

ಒಂದು ಭೇಟಿ..ಹಲವು ಚರ್ಚೆ: ಕಾಂಗ್ರೆಸ್​ನಲ್ಲಿ ಗರಿಗೆದರಿದ ಸಚಿವರ ತೆರೆಮರೆಯ ಚಟುವಟಿಕೆಗಳು
ಸತೀಶ್ ಜಾರಕಿಹೊಳಿ- ಮಲ್ಲಿಕಾರ್ಜುನ ಖರ್ಗೆ
Follow us on

ಬೆಂಗಳೂರು, (ಅಕ್ಟೋಬರ್ 05): ಮೈಸೂರು ಮೂಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇಡಿ ಇಕ್ಕಳ ಬಿಗಿಯಾಗುತ್ತಿದೆ. ಆದರೂ ಸಿಎಂ ಸಿದ್ದರಾಮಯ್ಯ ಜಗ್ಗಲ್ಲ, ಬಗ್ಗಲ್ಲ ಅಂತಿದ್ದಾರೆ. ಆದ್ರೆ ಸದ್ದಿಲ್ಲದೇ ಸಿಂಹಾಸನವಂತೂ ಅಲುಗಾಡುತ್ತಿದೆ. ಮುಡಾ ಕಳಂಕ ಮೆತ್ತಿಕೊಂಡಿರುವ ಸಿದ್ದರಾಮಯ್ಯನವರ ಕುರ್ಚಿಗೇ ಕಂಟಕ ಎದುರಾಗಿ ಬಿಟ್ರೆ ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್​ನಲ್ಲಿ ದೊಡ್ಡ ಪಟ್ಟ ಕಾಳಗವೇ ನಡೆಯಲಿದೆ. ಆ ಪಟ್ಟ ತಮ್ಮಲ್ಲಿ ಯಾರಿಗಾದ್ರೂ ಸಿಗಬೇಕು ಎಂದು ತ್ರಿವಳಿ ಮಂತ್ರಿಗಳು ಆಟ ಶುರು ಮಾಡಿದ್ದಾರೆ. ಹೌದು…ಡಾ. ಜಿ ಪರಮೇಶ್ವರ್, ಸತೀಶ್ ಜಾರಕಿಹೊಳಿ ಮತ್ತು ಹೆಚ್​ಸಿ ಮಹಾದೇವಪ್ಪ ಗೌಪ್ಯ ಸಭೆ ನಡೆಸಿ ತೆರೆಮರೆಯ ಆಟ ಶುರುಮಾಡಿಕೊಂಡಿದ್ದಾರೆ. ಅದರಲ್ಲೂ ಮೇಲಿಂದ ಮೇಲೆ ದಿಲ್ಲಿ ಯಾತ್ರೆ ಕೈಗೊಂಡಿರುವ ಸತೀಶ್ ಜಾರಕಿಹೊಳಿ ಹೆಜ್ಜೆ ನಿಗೂಢವಾಗಿದೆ.

ಸಿದ್ದರಾಮಯ್ಯಗೆ ಮುಡಾ ಸಂಕಷ್ಟ ಎದುರಾಗಿರುವ ಬೆನ್ನ್ಲಲೇ ಕಾಂಗ್ರೆಸ್’ನಲ್ಲಿ ರಣರೋಚಕ ಆಟ ಶುರುವಾಗಿದೆ. ತೆರೆಯ ಮುಂದೆ ಸ್ನೇಹದ ಬಲೆ, ತೆರೆಯ ಹಿಂದೆ ಕಣ್ಣಾ ಮುಚ್ಚಾಲೆ. ಆಟಗಳು ನಡೆಯುತ್ತಿವೆ. ಒಂದು ವೇಳೆ ಸಿದ್ದರಾಮಯ್ಯನವರ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಡಿಕೆ ಶಿವಕುಮಾರ್​​ ಆತ್ಮವಿಶ್ವಾಸದಲ್ಲಿದ್ದಾರೆ. ಆದ್ರೆ, ಮತ್ತೊಂದೆಡೆ ಸತೀಶ್ ಜಾರಕಿಹೊಳಿ ಮಾತ್ರ ಮೇಲಿಂದ ಮೇಲೆ ದಿಲ್ಲಿ ಯಾತ್ರೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸತೀಶ್​ ಜಾರಕಿಹೊಳಿ ನಿಗೂಢ ಹೆಜ್ಜೆ ಕಾಂಗ್ರೆಸ್​ನಲ್ಲಿ ಸಂಚಲನ ಮೂಡಿಸಿದೆ.

ಇದನ್ನೂ ಓದಿ: ಉಟ್ಟ ಬಟ್ಟೆಗೆ ಬೆಂಕಿ ತಗುಲಿದರೆ ಆ ಶಕುನದ ಅರ್ಥ ಹೀಗಿದೆ; ಸಿಎಂ ಸಿದ್ದರಾಮಯ್ಯ ಅಗ್ನಿಪರೀಕ್ಷೆ ಗೆದ್ದುಬಿಟ್ಟರಾ?

ಸಿಎಂ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವ ಸತೀಶ್ ಜಾರಕಿಹೊಳಿ, ಎಐಸಿಸಿ ಅಧ್ಯಕ್ಷ ಮಲ್ಲಕಾರ್ಜುನ ಖರ್ಗೆ ಭೇಟಿಯಾಗಿರುವುದು ಮಹತ್ವ ಪಡೆದುಕೊಂಡಿದೆ. ಮೊನ್ನೆ ದೆಹಲಿಗೆ ತೆರಳಿದ್ದ ಸಚಿವ ಸತೀಶ್ ಜಾರಕಿಹೊಳಿ ಸಂಜೆ‌ ಎಐಸಿಸಿ‌ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರನ್ನು ಭೇಟಿಯಾಗಿ ಸುಧೀರ್ಘ ಮಾತುಕತೆ ನಡೆಸಿದ್ದಾರೆ‌‌.

ಸತೀಶ್ ಜಾರಕಿಹೊಳಿ ದೆಹಲಿ ಯಾತ್ರೆಗೂ ಮುನ್ನ ಬೆಂಗಳೂರಿನಲ್ಲಿ ನಡೆದ ದಲಿತ ಸಮುದಾಯದ ಸಚಿವರ ಸಭೆಯಲ್ಲಿ ಭಾಗಿಯಾಗಿದ್ದರು. ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬಾರದು, ಒಂದು ವೇಳೆ ಸಿಎಂ ಬದಲಾವಣೆ ಆದ್ರೆ ದಲಿತರೇ ಸಿಎಂ ಆಗಬೇಕು ಎಂಬ ಚರ್ಚೆ ಸಭೆಯಲ್ಲಿ ನಡೆದಿತ್ತು. ಸಭೆಯ ಬಳಿಕ ದೆಹಲಿಗೆ ಫ್ಲೈಟ್ ಹತ್ತಿದ್ದ ಸತೀಶ್ ಜಾರಕಿಹೊಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಜೊತೆ ಸುಮಾರು 30 ನಿಮಿಷ ಚರ್ಚೆ ನಡೆಸಿದ್ದಾರೆ‌.

ಸಿಎಂ‌ ರಾಜೀನಾಮೆ‌ ಕುರಿತಂತೆ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ದಲಿತ ಸಚಿವರ ಸಭೆಯಲ್ಲಿ ಆಗಿದ್ದ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದಾರೆ. ದಲಿತರಿಗೆ ಈ ಬಾರಿಗೆ ಸಿಎಂ ಆಗುವ ಅವಕಾಶ ಸಿಕ್ಕದ್ದು, ಒಂದು ವೇಳೆ ಅಂತಹ ಅವಕಾಶ ಒದಗಿ ಬಂದಲ್ಲಿ ಮುಖ್ಯಮಂತ್ರಿ ಸ್ಥಾನ ದಲಿತರಿಗೆ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಮಲ್ಲಿಕಾರ್ಜುನ ಖರ್ಗೆ ಜೊತೆಗೆ ಸಭೆ ಬಳಿಕ‌ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ‌.ಸಿ ವೇಣುಗೋಪಾಲ್ ಅವರೊಂದಿಗೂ ಸತೀಶ್ ಜಾರಕಿಹೊಳಿ ಮಾತುಕತೆ ನಡೆಸಿದ್ದಾರೆ. ಮುಡಾ ಪ್ರಕರಣ ಸಿಎಂ ಬದಲಾವಣೆ ಬಗ್ಗೆ ನಡೆಯುತ್ತಿರುವ ಚರ್ಚೆ, ದಲಿತ ಸಿಎಂ ಕೂಗು ಹೀಗೆ ಎಲ್ಲಾ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಶೀಘ್ರದಲ್ಲೇ ರಾಜ್ಯಕ್ಕೆ ಭೇಟಿ ನೀಡಿ ಸಿಎಂ, ಡಿಸಿಎಂ ಹಾಗೂ ಸಚಿವರೊಂದಿಗೆ ಸಭೆ ನಡೆಸುವುದಾಗಿ ವೇಣುಗೋಪಾಲ್ ಹೇಳಿದ್ದಾರೆ. ನವರಾತ್ರಿ ಬಳಿಕ ದೆಹಲಿಯಿಂದ ವೇಣುಗೋಪಾಲ್ ಬೆಂಗಳೂರಿಗೆ ಬರಲಿದ್ದು, ಪಕ್ಷದಲ್ಲಿನ ಆಂತರಿಕ‌ ಗೊಂದಲಗಳಿಗೆ ತೆರೆಎಳೆಯುವ ಕೆಲಸ ಮಾಡಲಿದ್ದಾರೆ‌.

ಒಟ್ಟಿನಲ್ಲಿ ದಲಿತ ತ್ರಿವಳಿ ಮಂತ್ರಿಗಳ ನಿಗೂಢ ಹೆಜ್ಜೆ ಕಾಂಗ್ರೆಸ್​ನಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದ್ದು, ದಸರಾ ಹಬ್ಬದ ಬಳಿಕ ಏನೆಲ್ಲಾ ಬೆಳವಣಿಗಳು ನಡೆಯಲಿವೆ ಎನ್ನುವುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ