
ಬೆಂಗಳೂರು, (ಜುಲೈ 24): ಸದನದಲ್ಲಿ ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡದ ಕಾರಣ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧಾನಸಭೆಯೊಳಗೆ ಅಹೋರಾತ್ರಿ ಧರಣೆ ನಡೆಸಿದ್ದಾರೆ. ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ವಿಪಕ್ಷ ನಾಯಕರು ಜಂಟಿಯಾಗಿ ಅಹೋರಾತ್ರಿ ಧರಣಿ ಕುಳಿತ್ತಿದ್ದು, ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗುತ್ತಾ ರಾಮನ ಭಜನೆ ಮಾಡಿದರು. ಇನ್ನು ಕಡತ ಪರಿಶೀಲನೆ ಮಾಡುತ್ತ ಸದನದೊಳಗೆ ಕುಳಿತ್ತಿದ್ದ ಡಿಸಿಎಂ ಡಿಕೆ ಶಿವಕುಮಾರ್ ಬಳಿ ಹೋಗಿ ನಿಮಗೆ ಬಹಳ ಖುಷಿ ಆಗುತ್ತಿದೆ ಅಲ್ವಾ? ಮುಖ ಶೈನಿಂಗ್ ನೋಡಿ, ಪಾರ್ಟಿ ಕೊಡಿಸಿ, ಹುಷಾರು ನಿಮಗೆ ಫೈಟ್ ಕೊಡಲು ಮತ್ತೊಬ್ಬರು ಬಂದು ಬಿಟ್ಟಾರು ಎಂದ ಬಿಜೆಪಿ ಶಾಸಕರು ಕಾಲೆಳೆದರು.
ಅಲ್ಲದೇ ಡಿಕೆ ಶಿವಕುಮಾರ್ ಅವರನ್ನು ನೋಡಿ ವಿಪಕ್ಷ ನಾಯಕ ಆರ್ ಅಶೋಕ್ ಅವರು, ನಿಮಗೆ ಬಹಳ ಖುಷಿ ಆಗುತ್ತಿದೆ ಅಲ್ವಾ? ಮುಖ ಶೈನಿಂಗ್ ನೋಡಿ, ಪಾರ್ಟಿ ಕೊಡಿಸಿ. ಹುಷಾರು ನಿಮಗೆ ಫೈಟ್ ಕೊಡಲು ಮತ್ತೊಬ್ಬರು ಬಂದಾರು ಎಂದು ಲೇವಡಿ ಮಾಡಿದರು. ಬಿಜೆಪಿ ಶಾಸಕರ ಈ ಮಾತು ಕೇಳಿಸಿಕೊಂಡು ಡಿಸಿಎಂ ಡಿಕೆ ಶಿವಕುಮಾರ್ ಮುಸಿ ಮುಸಿ ನಕ್ಕರು. ಬಳಿಕ ಡಿಕೆ ಶಿವಕುಮಾರ್ ಅವರು ಸದನದಿಂದ ಹೊರ ಹೋಗಿದ್ದು, ಇತ್ತ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗುತ್ತಾ ಶ್ರೀರಾಮನ ಭಜನೆ ಮಾಡಲಾರಂಭಿಸಿದರು.
ಇನ್ನು ಬಿಜೆಪಿ-ಜೆಡಿಎಸ್ ಸದಸ್ಯರಿಂದ ಅಹೋರಾತ್ರಿ ಧರಣಿ ಕುಳಿತಿರುವ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ವಿಧಾನಸಭೆಯಲ್ಲಿ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಭೇಟಿ ನೀಡಿ ಶಾಸಕರಿಗೆ ರಾತ್ರಿ ಊಟದ ವ್ಯವಸ್ಥೆ ಬಗ್ಗೆ ವಿಚಾರಿಸಿದರು. ಆದ್ರೆ, ಸರ್ಕಾರದ ಊಟವನ್ನು ನಿರಾಕರಿಸಿದ್ದು, ಹಗರಣದ ಹಣದಿಂದ ನಮಗೆ ಊಟದ ವ್ಯವಸ್ಥೆ ಬೇಡ. ರಾತ್ರಿಯ ಊಟ, ಹಾಸಿಗೆ ವ್ಯವಸ್ಥೆ ತಾವೇ ಮಾಡಿಕೊಂಡಿಕೊಳ್ಳುವುದಾಗಿ ಹೇಳಿದರು. ಬಳಿಕ ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಅವರಿಗೆ ಸದಸ್ಯರಿಗೆ ಊಟ ಹಾಗೂ ಹಾಸಿಗೆ ವ್ಯವಸ್ಥೆ ಮಾಡುವ ಹೊಣೆ ನೀಡಿದರು.
ಈ ಬಗ್ಗೆ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು, ಮೂಡಾ ಹಗರಣದ ಬಗ್ಗೆ ಸದನದಲ್ಲಿ ಚರ್ಚೆಗೆ ಕೇಳಿದಿದ್ವಿ. ಆದ್ರೆ, ಸ್ಪೀಕರ್ ಚರ್ಚೆಗೆ ಅವಕಾಶ ಕೊಟ್ಟಿಲ್ಲ. ಅದ್ದರಿಂದಾಗಿ ಸರ್ಕಾರದ ವಿರುದ್ದವಾಗಿ ಅಹೊರಾತ್ರಿ ಪ್ರತಿಭಟನೆ ಮಾಡುತ್ತಿದ್ದೇವೆ. ಸ್ಪೀಕರ್ ಬಂದು ಊಟ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ರು. ದಲಿತರ ನಿಗಮದಲ್ಲಿ ಲೂಟಿ ಹೊಡೆದ ಹಣದಿಂದ ನಮಗೆ ಯಾವುದು ಬೇಡ ಎಂದು ತಿರಸ್ಕರಿಸಿದ್ದೇವೆ. ಲೂಟಿ ಹೊಡೆದಿರುವ ಹಣದಿಂದ ನಮಗೆ ಯಾವುದೆ ಸೌಲಭ್ಯ ಬೇಡ. ಅವರ ಹಣಕ್ಕಾಗಿ ನಾವು ಹೋರಾಟ ಮಾಡ್ತಿದ್ದೇವೆ ಎಂದು ಹೇಳಿದರು.
ಇನ್ನು ವಿಧಾನಸೌಧದ ಪೂರ್ವ ದ್ವಾರದ ಬಳಿ ಗೃಹ ಸಚಿವ ಪರಮೇಶ್ವರ್ ಜೊತೆ ಕೆಲ ಬಿಜೆಪಿ ಶಾಸಕರು ಅನೌಪಚಾರಿಕ ಚರ್ಚೆ ನಡೆಸಿರುವುದು ಕಂಡುಬಂತು. ಬಿಜೆಪಿ ಶಾಸಕರಾದ ಅಶ್ವತ್ಥ ನಾರಾಯಣ, ಮುನಿರತ್ನ ಹಾಗೂ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಚರ್ಚೆಯಲ್ಲಿದ್ದರು. ಈ ವೇಳೆ ಬಿಜೆಪಿ ಶಾಸಕ ಮುನಿರತ್ನ ಅವರು ಚಾಪೆಯೋ ಅಥವಾ ಬೆಡ್ಡೋ ವ್ಯವಸ್ಥೆ ಮಾಡಿ ಸಾಹೇಬ್ರೆ ಎಂದು ಗೃಹ ಸಚಿವ ಪರಮೇಶ್ವರ್ಗೆ ಕಿಚಾಯಿಸಿದರು.