ಬೆಂಗಳೂರು, (ಸೆಪ್ಟೆಂಬರ್ 24): ಪತ್ನಿ ಹೆಸರಿಗೆ 14 ಮುಡಾ ನಿವೇಶನ ಹಂಚಿಕೆ ಪ್ರಕರಣ ಸಿಎಂ ಸಿದ್ದರಾಮಯ್ಯ ನಿದ್ದೆಗೆಡಿಸಿದೆ. ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 17 ಎ ಅಡಿ ರಾಜ್ಯಪಾಲರು ನೀಡಿರುವ ಅನುಮತಿಯನ್ನು ಎತ್ತಿಹಿಡಿದಿರುವ ಹೈಕೋರ್ಟ್ ಸಿಎಂ ಅರ್ಜಿಯನ್ನು ವಜಾಗೊಳಿಸಿದೆ. ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ತನ್ನ 197 ಪುಟಗಳ ತೀರ್ಪಿನಲ್ಲಿ ವಿವರವಾದ ಕಾರಣಗಳನ್ನೂ ನೀಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ತನಿಖೆ ಏಕೆ ಅಗತ್ಯವೆಂಬುವುದಕ್ಕೂ ಹೈಕೋರ್ಟ್ ಸ್ಪಷ್ಟ ಕಾರಣಗಳನ್ನು ನೀಡಿದೆ. ರಾಜ್ಯಪಾಲರ ಆದೇಶ ಏಕೆ ಸರಿಯಾಗಿದೆ ಎಂಬುದಕ್ಕೂ ವಿವರಣೆಯನ್ನು ಹೈಕೋರ್ಟ್ ನೀಡಿದೆ.
ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 ಸಿ ಅಡಿ ಸಿದ್ದರಾಮಯ್ಯ ವಿರುದ್ಧ ಆರೋಪವಿದೆ. ಈ ಸೆಕ್ಷನ್ ಅಡಿ ಸಾರ್ವಜನಿಕ ಸೇವಕನಾದವನು ತನಗಾಗಲೀ ಅಥವಾ ಇತರರಿಗಾಗಲೀ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ನ್ಯಾಯವಲ್ಲದ ಲಾಭ ಪಡೆದರೆ ಅದು ಅಪರಾಧವಾಗುತ್ತದೆ. ಮುಡಾ ಪ್ರಕರಣದ ವಾಸ್ತವಾಂಶಗಳನ್ನು ಗಮನಿಸಿದರೆ ಮೇಲ್ನೋಟಕ್ಕೆ ಸಿಎಂ ಕುಟುಂಬ ನ್ಯಾಯವಲ್ಲದ ಲಾಭ ಪಡೆದಿರುವುದು ಸ್ಪಷ್ಟವಾಗಿದೆ. 40 ಕಿಲೋ ಮೀಟರ್ ದೂರದ ಜಮೀನು ಬಿಟ್ಟುಕೊಟ್ಟು ಅದರ ಬದಲಿಗೆ ಮೈಸೂರಿನ ಹೃದಯ ಭಾಗದ ನಿವೇಶನಗಳನ್ನು ಪಡೆದಿದ್ದಾರೆ. ಸಾರ್ವಜನಿಕ ಸೇವಕ ತನ್ನ ಕುಟುಂಬದವರಿಗಾಗಿ ಪ್ರಭಾವ ಬಳಸಿರುವುದಕ್ಕೆ ಇದು ಸಾಕು. ಪ್ರಭಾವ ಬಳಸಲು ಸಾರ್ವಜನಿಕ ಸೇವಕ ಯಾವುದೇ ಶಿಫಾರಸು ಅಥವಾ ಆದೇಶ ಮಾಡಬೇಕಿಲ್ಲ. ಪತ್ನಿಗೆ ಲಾಭವಾಗುವುದರ ಹಿಂದೆ ನಿಸ್ಸಂದೇಹವಾಗಿ ಸಿದ್ದರಾಮಯ್ಯ ಇದ್ದಾರೆ. ಸಿದ್ದರಾಮಯ್ಯ ಅವರಿಗಿರುವ ಅಧಿಕಾರದ ಬಲದಿಂದಲೇ ಅವರ ಕುಟುಂಬ ಅನುಕೂಲ ಪಡೆದಿದೆ.
ಇದನ್ನೂ ಓದಿ: ಮುಡಾ ಹಗರಣ: ಹೈಕೋರ್ಟ್ ತೀರ್ಪು ಬೆನ್ನಲ್ಲೇ ಜನಪ್ರತಿನಿಧಿಗಳ ಕೋರ್ಟ್ನಲ್ಲಿ ಮುಂದಿನ ಪ್ರಕ್ರಿಯೆ ಏನು?
ಕೆಸರೆ ಗ್ರಾಮದಲ್ಲಿ ಜಮೀನು ಕಳೆದುಕೊಂಡವರಿಗೆ ವಿಜಯನಗರ 3ನೇ ಹಂತದ ಬಡಾವಣೆಯಲ್ಲಿ ಬದಲಿ ನಿವೇಶನ ಮಂಜೂರು ಮಾಡಿದ ಬೇರೆ ಉದಾಹರಣೆಗಳಿಲ್ಲ. ಅಚ್ಚರಿಯ ವಿಚಾರವೆಂದರೆ ಸಿಎಂ ಪತ್ನಿಗೆ 50 – 50 ಅನುಪಾತದಲ್ಲಿ ನಿವೇಶನ ಹಂಚಿಕೆಯಾದ ಬಳಿಕ ಈ ನಿಯಮವನ್ನೇ ರದ್ದುಪಡಿಸಲಾಗಿದೆ. ಸಿಎಂ ಪುತ್ರ ಭಾಗಿಯಾಗಿದ್ದ ಸಭೆಯಲ್ಲಿ 50 50 ನಿವೇಶನ ಹಂಚಿಕೆ ತೀರ್ಮಾನವಾಗಿದೆ. 50-50 ಹಂಚಿಕೆ ಕಾನೂನುಬಾಹಿರವೆಂದು ರದ್ದಾಗಿದ್ದರೆ ಸಿಎಂ ಪತ್ನಿಗೆ ದೊರಕಿದ 14 ನಿವೇಶನಗಳಿಗೆ ಏನಾಗಲಿದೆ ಎಂಬ ಬಗ್ಗೆ ತನಿಖೆಯಾಗಬೇಕಿದೆ. ಸಾಮಾನ್ಯ ನಾಗರಿಕನಾಗಿದ್ದರೆ ತನಿಖೆಗೆ ನಾಚುತ್ತಿರಲಿಲ್ಲ. ಮುಖ್ಯಮಂತ್ರಿ ದಿನಗೂಲಿಯವರು, ಜನಸಾಮಾನ್ಯರ ನಾಯಕನಾಗಿ ತನಿಖೆಗೆ ಹಿಂಜರಿಯಬಾರದು. ಸಿದ್ದರಾಮಯ್ಯ ಕುಟುಂಬದ ವಿರುದ್ಧ 56 ಕೋಟಿಯ ಅಕ್ರಮ ಲಾಭ ಪಡೆದ ಆರೋಪ, ಅನುಮಾನಗಳಿರುವಾಗ ತನಿಖೆ ಅತ್ಯಗತ್ಯವೆಂದು ಭಾವಿಸುತ್ತೇನೆ. ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.
ಇನ್ನು ಶಶಿಕಲಾ ಜೊಲ್ಲೆ ಪ್ರಕರಣದಲ್ಲಿ ತನಿಖೆಗೆ ಅನುಮತಿ ನಿರಾಕರಿಸಿ, ಸಿಎಂ ಕೇಸ್ ನಲ್ಲಿ ಅನುಮತಿ ಕೊಟ್ಟಿದ್ದೇಕೆಂದು ಉತ್ತರಿಸಲು ಜೊಲ್ಲೆ ಪ್ರಕರಣ ತಮ್ಮ ಮುಂದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೇ ಸಿಎಂ ಪರ ವಕೀಲರು ಎತ್ತಿರುವ ಪ್ರಶ್ನೆಗಳಿಗೆ 11 ಅಂಶಗಳ ಕಾರಣಗಳನ್ನೂ ಸಹ ಕೊಟ್ಟಿದ್ದು ಅವು ಈ ಕೆಳಗಿನಂತಿವೆ.
ಎಲ್ಲ ಅಧಿಕಾರಗಳೂ ನಂಬಿಕೆಯ ಆಧಾರದಲ್ಲಿ ನೀಡಲ್ಪಟ್ಟಿವೆ. ಅಧಿಕಾರ ಬಳಸುವವರು ಉತ್ತರದಾಯಿಗಳಾಗಿರಬೇಕು. ಜನರಿಂದ ಜನರಿಗಾಗಿ ಈ ಅಧಿಕಾರ ಬಂದಿದೆ. ಅವರಿಗಾಗಿಯೇ ಅದನ್ನು ಮೀಸಲಿಡಬೇಕು ಎಂದು ಉಲ್ಲೇಖಿಸಿ ಸಿಎಂ ಸಿದ್ದರಾಮಯ್ಯ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:15 pm, Tue, 24 September 24