ಮುಡಾ ಹಗರಣದ ಅಸಲಿ ತನಿಖೆ ಶುರು: ಸದ್ಯಕ್ಕೆ ಸಿಎಂಗಿಲ್ಲ ಲೋಕಾಯುಕ್ತ ಟೆನ್ಷನ್!

ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಲಿ ಆಟ ಇಂದಿನಿಂದ ಶುರುವಾಗಿದೆ. ಮುಡಾ ಹಗರಣ ಬೆನ್ನತ್ತಿರುವ ಮೈಸೂರು ಲೋಕಾಯುಕ್ತ ಪೊಲೀಸರ ನಾಲ್ಕು ತನಿಖಾ ತಂಡ, ಅಕ್ರಮದ ಜಾಲ ಭೇದಿಸಲು ಇಂದಿನಿಂದ ಫೀಲ್ಡ್‌ಗಿಳಿದಿದೆ. ಆದ್ರೆ, ಪ್ರಕರಣದ ಎ1 ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯಗೆ ಸದ್ಯಕ್ಕೆ ಯಾವುದೇ ಲೋಕಾಯುಕ್ತ ತನಿಖೆಯ ಟೆನ್ಷನ್ ಇಲ್ಲ.

ಮುಡಾ ಹಗರಣದ ಅಸಲಿ ತನಿಖೆ ಶುರು: ಸದ್ಯಕ್ಕೆ ಸಿಎಂಗಿಲ್ಲ ಲೋಕಾಯುಕ್ತ ಟೆನ್ಷನ್!
ಸಿದ್ದರಾಮಯ್ಯ
Follow us
|

Updated on: Sep 30, 2024 | 3:33 PM

ಮೈಸೂರು/ಬೆಂಗಳೂರು, (ಸೆಪ್ಟೆಂಬರ್ 30): ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟದ ಬಳಿಕ ಕಳೆದ ಶುಕ್ರವಾರ ಸಿಎಂ ಸಿದ್ದರಾಮಯ್ಯ ವಿರುದ್ಧ FIR ದಾಖಲಾಗಿತ್ತು. ಶನಿವಾರ, ಭಾನುವಾರ ಇದ್ದ ಕಾರಣ ಮೈಸೂರು ಲೋಕಾಯುಕ್ತ ಪೊಲೀಸರು ಇಂದಿನಿಂದ (ಸೆ.30) ತನಿಖೆ ಆರಂಭಿಸಿದ್ದಾರೆ. ಮೈಸೂರು ಲೋಕಾಯುಕ್ತ ಎಸ್‌ಪಿ ಟಿ.ಜೆ ಉದೇಶ್ ನೇತೃತ್ವದ ನಾಲ್ಕು ತನಿಖಾ ತಂಡಾ ಶನಿವಾರವೇ ಚೆಕ್‌ಲಿಸ್ಟ್ ರೆಡಿ ಮಾಡಿಕೊಂಡು ತನಿಖೆಗಿಳಿದಿದೆ. ಆರಂಭಿಕ ಹಂತದಲ್ಲಿ ದಾಖಲೆ ಸಂಗ್ರಹಕ್ಕೆ ಮುಂದಾಗಿದೆ. 59 ಭಾಗಗಳಾಗಿ ದಾಖಲೆಗಳನ್ನ ವಿಂಗಡಿಸಲಾಗಿದೆ. ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿರೋ 3ಎಕರೆ 16 ಗುಂಟೆ ಜಮೀನಿನ ಮೂಲ ದಾಖಲೆ ಸಂಗ್ರಹದಲ್ಲಿ ಅಧಿಕಾರಿಗಳು ತೊಡಗಿದ್ದಾರೆ. 1935ರಿಂದ ಹಿಡಿದು, 2021ರವರೆಗೆ ಸಿಎಂ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನ ಹಂಚಿಕೆಯಾಗೋವರೆಗೂ ಇರೋ ಡಾಕ್ಯೂಮೆಂಟ್ಸ್‌ಗಳನ್ನ ಕಲೆಹಾಕಲಾಗುತ್ತಿದೆ.

ಲೋಕಾಯುಕ್ತ ತನಿಖೆ ಹೇಗಿರಲಿದೆ?

ಮೊದಲ ಹಂತದಲ್ಲಿ ಅಂದ್ರೆ, ಇಂದಿನಿಂದ ಕೇವಲ ದಾಖಲೆಗಳನ್ನ ಮಾತ್ರ ಸಂಗ್ರಹಿಸಲಾಗುತ್ತೆ. ನೂರಾರು ದಾಖಲೆ ಪ್ರತಿಯನ್ನ ಮುಡಾ ಕಚೇರಿ, ತಹಶೀಲ್ದಾರ್ ಕಚೇರಿ, ಸಬ್‌ ರಿಜಿಸ್ಟ್ರಾರ್ ಕಚೇರಿ ಸೇರಿ ದೂರುದಾರಿಂದಲೂ ದಾಖಲೆಗಳ ಕಲೆಹಾಕಲಾಗುತ್ತೆ. ನಂತ್ರ ದೂರುದಾರರಿಂದ ಲೋಕಾಯುಕ್ತ ಪೊಲೀಸರು ಮಾಹಿತಿ ಕೇಳಲಿದ್ದಾರೆ. ಪ್ರಮುಖವಾಗಿ ಎರಡು ಆಯಾಮದಲ್ಲಿ ದಾಖಲೆ ಪಡೆಯಲಿರುವ ಪೊಲೀಸರು, ಮೊದಲ ಆಯಾಮದಲ್ಲಿ ಜಮೀನು ವಾರಸುದಾರನಿಗೆ ಸಂಬಂಧಪಟ್ಟ ಡಾಕ್ಯೂಮೆಂಟ್ಸ್‌ಗಳು, ಎರಡನೇ ಆಯಾಮದಲ್ಲಿ ಸಿಎಂ ಮತ್ತು ಸಿಎಂ ಪತ್ನಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿಗೆ ಸಂಬಂಧಿಸಿದ ಪತ್ರಗಳನ್ನ ಸಂಗ್ರಹಿಸಲು ಲೋಕಾಯುಕ್ತ ಪೊಲೀಸರು ನಿರ್ಧರಿಸಿದ್ದಾರೆ. ನಂತರ ಆರೋಪಿಗಳ ವಿಚಾರಣೆ ನಡೆಯಲಿದೆ.

ಇದನ್ನೂ ಓದಿ: ಎತ್ತಿನಹೊಳೆ ನೆಪದಲ್ಲಿ ಪರಮೇಶ್ವರ್, ಡಿಕೆ ಶಿವಕುಮಾರ್ ಭೇಟಿ: ಕುತೂಹಲಕ್ಕೆ ಕಾರಣವಾದ ಸಿಎಂ ಸ್ಥಾನ ಆಕಾಂಕ್ಷಿಗಳ ಮಾತುಕತೆ

ಸದ್ಯಕ್ಕೆ ಸಿಎಂಗಿಲ್ಲ ಲೋಕಾ ಟೆನ್ಷನ್!

ಸದ್ಯಕ್ಕೆ ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ತನಿಖೆಯ ಟೆನ್ಷನ್ ಇಲ್ಲ. ಯಾಕಂದ್ರೆ ಮೊದಲ ಹಂತದಲ್ಲಿ ಲೋಕಾಯುಕ್ತ ಅಧಿಕಾರಿಗಳು ಕೇವಲ ದಾಖಲೆಗಳನ್ನ ಸಂಗ್ರಹಿಸುತ್ತಿದ್ದಾರೆ. ಮುಡಾ ಕಚೇರಿ, ತಹಶೀಲ್ದಾರ್ ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ ಸೇರಿದಂತೆ ಹಲವೆಡೆಯಿಂದ ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ. ದಾಖಲೆಗಳ ಸಂಗ್ರಹಣೆ ಬಳಿಕ ದೂರುದಾರ ಸ್ನೇಹಮಯಿ ಕೃಷ್ಣರಿಂದ ಮಾಹಿತಿ ಕಲೆ ಹಾಕಲಿದ್ದಾರೆ. ನಂತರ ಆರೋಪಿಗಳನ್ನು ವಿಚಾರಣೆ ಮಾಡಲಿದ್ದಾರೆ.

2 ಆಯಾಮಗಳಲ್ಲಿ ದಾಖಲೆ ಸಂಗ್ರಹಿಸುತ್ತಿರುವ ಲೋಕಾಯುಕ್ತಾ

ಲೋಕಾಯುಕ್ತ ಪೊಲೀಸರು ಮುಡಾ ಕೇಸ್ ತನಿಖೆಗಿಳಿದಿದ್ದಾರೆ. ಪ್ರಮುಖವಾಗಿ ಎರಡು ಆಯಾಮಗಳಲ್ಲಿ ದಾಖಲೆ ಸಂಗ್ರಹಿಸುತ್ತಿದ್ದಾರೆ. ಮೊದಲನೇ ಆಯಾಮದಲ್ಲಿ ಜಮೀನು ವಾರಸುದಾರರ ದಾಖಲೆ ಸಂಗ್ರಹಿಸ್ತಿದ್ದು, ಎರಡನೇ ಆಯಾಮವಾಗಿ ಸಿಎಂ, ಪತ್ನಿ ಪಾರ್ವತಿ, ಮಲ್ಲಿಕಾರ್ಜುನ್ ಸ್ವಾಮಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಲು ನಿರ್ಧರಿಸಿದ್ದಾರೆ. 1992ರಿಂದ ಸೈಟ್ ಹಂಚಿಕೆಯಾಗೋವರೆಗಿನ ಜಮೀನಿನ ದಾಖಲೆಗಳನ್ನು ಸಂಗ್ರಹಿಸಿ ಆರೋಪಿಗಳ ವಿಚಾರಣೆ ಆರಂಭಿಸಲಿದ್ದಾರೆ.

ಸಿದ್ದರಾಮಯ್ಯಗೆ ಡಬಲ್ ಸಂಕಷ್ಟ ಸಾಧ್ಯತೆ

ಸಿಎಂ ಸಿದ್ದರಾಮಯ್ಯಗೆ ಡಬಲ್ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಒಂದೆಡೆ ED ಆದ್ರೆ, ಮತ್ತೊಂದೆಡೆ ಸಿಬಿಐ ತನಿಖೆಗೆ ಕೋರಿ ಸ್ನೇಹಮಯಿ ಕೃಷ್ಣ ಹೈಕೋರ್ಟ್ ಮೊರೆ ಹೋಗಿದ್ದಾರೆ. ಲೋಕಾಯುಕ್ತ ರಾಜ್ಯ ಸರ್ಕಾರದ ಅಧೀನ ಸಂಸ್ಥೆಯಾಗಿದ್ದು, ಪಾರದರ್ಶಕ ತನಿಖೆ ಬಗ್ಗೆ ಅನುಮಾನ ಇದೆ ಸಿಬಿಐಗೆ ವಹಿಸಿ ಎಂದು ಮನವಿ ಮಾಡಿದ್ದಾರೆ.

ಹಿರಿಯ ಅಧಿಕಾರಿಗಳೊಂದಿಗೆ ‘ಲೋಕಾ’ SP ಚರ್ಚೆ

ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧ FIR ದಾಖಲು ಹಿನ್ನೆಲೆ, ಮೈಸೂರು ಲೋಕಾಯುಕ್ತ ಎಸ್​ಪಿ ಉದೇಶ್ ಅಲರ್ಟ್ ಆಗಿದ್ದಾರೆ. ಕೆಲ ದಾಖಲೆಗಳನ್ನು ಹಿಡಿದು ಮೈಸೂರಿನಿಂದ ಬೆಂಗಳೂರಿನ ಮುಖ್ಯ ಕಚೇರಿಗೆ ಆಗಮಿಸಿದ ಉದೇಶ್, ಮುಡಾ ಪ್ರಕರಣದ ತನಿಖೆಯನ್ನು ಹೇಗೆ ಮಾಡಬೇಕು? ಯಾವೆಲ್ಲಾ ಅಧಿಕಾರಿಗಳು, ಸಿಬ್ಬಂದಿ ಇರಬೇಕು ಎಂಬುದರ ಬಗ್ಗೆ ಲೋಕಾಯುಕ್ತ ಎಡಿಜಿಪಿ ಮನೀಶ್ ಖರ್ಬೀಕರ್ ಜತೆ ಚರ್ಚಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ