40%​ ಕಮಿಷನ್ ತನಿಖೆಯಾಗದೆ ಹಣ ಬಿಡುಗಡೆ ಮಾಡವುದು ಹೇಗೆ? : ಸಿಎಂ ಸಿದ್ದರಾಮಯ್ಯ

| Updated By: ವಿವೇಕ ಬಿರಾದಾರ

Updated on: Aug 12, 2023 | 2:00 PM

Mysuru: ನಡೆದಿರುವ ಕಾಮಗಾರಿಗಳೆಲ್ಲ ಮೂರು ವರ್ಷಗಳ ಹಿಂದೆ ಆಗಿರುವುದು. ಈಗ ಬಿಲ್​ಗಾಗಿ ಆತುರ ಪಟ್ಟರೆ ಹೇಗೆ ? 40 ಪರ್ಸೆಂಟೇಜ್​ ಕಮಿಷನ್ ಬಗ್ಗೆ ತನಿಖೆಯಾಗದೆ ಹಣ ಬಿಡುಗಡೆ ಮಾಡಲು ಹೇಗೆ ಸಾಧ್ಯ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

40%​ ಕಮಿಷನ್ ತನಿಖೆಯಾಗದೆ ಹಣ ಬಿಡುಗಡೆ ಮಾಡವುದು ಹೇಗೆ? : ಸಿಎಂ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
Follow us on

ಮೈಸೂರು: ನಡೆದಿರುವ ಕಾಮಗಾರಿಗಳೆಲ್ಲ ಮೂರು ವರ್ಷಗಳ ಹಿಂದೆ ಆಗಿರುವುದು. ಈಗ ಬಿಲ್​ಗಾಗಿ ಆತುರ ಪಟ್ಟರೆ ಹೇಗೆ ? 40 ಪರ್ಸೆಂಟೇಜ್​ ಕಮಿಷನ್ (40% Commission) ಬಗ್ಗೆ ತನಿಖೆಯಾಗದೆ ಬಿಡುಗಡೆ ಮಾಡಲು ಹೇಗೆ ಸಾಧ್ಯ? ತಪ್ಪು ಮಾಡದೆ ಇರುವವರಿಗೆ ಬಿಲ್‌ನಲ್ಲಿ (Bill) ಯಾವುದೆ ಸಮಸ್ಯೆಯಾಗಲ್ಲ. ತಪ್ಪು ಮಾಡಿರುವವರಿಗೆ ಆ ಭಯ ಇರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಹೇಳಿದರು. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು 40 ಪರ್ಸೆಂಟೇಜ್​ ಕಮಿಷನ್ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ಬಿಜೆಪಿ ನಾಯಕರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.

40 ಪರ್ಸೆಂಟೇಜ್ ಕಮಿಷನ್​ಗಾಗಿಯೇ ರಾಜ್ಯದ ಜನರು ಬಿಜೆಪಿ ತಿರಸ್ಕರಿಸಿದ್ದಾರೆ. ನಾವು ಅಂದು ಮಾಡಿರುವ ಆರೋಪವನ್ನು ಸಾಬೀತು ಮಾಡಬೇಕಿದೆ. ಹೀಗಾಗಿ ನಾಲ್ಕು ತಂಡಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಈ ಕಾರಣ ನಾಲ್ಕು ತಂಡಗಳಿಂದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಲ್ಯಾಬ್​​ನಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದೇನೆ. 40 ಪರ್ಸೆಂಟೇಜ್​​​ಗಿಂತ ಕಡಿಮೆ ಗಾಯವಾಗಿದ್ದರಿಂದ ತೊಂದರೆ ಇಲ್ಲ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಗುತ್ತಿಗೆದಾರರು ಯಾರಿಗಾದರೂ ದೂರು ನೀಡಲಿ, ನಿಯಮಾವಳಿಯನ್ನು ಬಿಟ್ಟು ಬಿಲ್ ರಿಲೀಸ್ ಮಾಡೋದಿಲ್ಲ: ಡಿಕೆ ಶಿವಕುಮಾರ್, ಡಿಸಿಎಂ

ಕೇಂದ್ರದ ಏಕರೂಪ ನಾಗರಿಕ ಕಾಯ್ದೆಗೆ ನಮ್ಮ ವಿರೋಧವಿದೆ. ಕೇರಳದಲ್ಲೂ ಈಗಾಗಲೇ ಕಾಯ್ದೆಗೆ ವಿರೋಧ ವ್ಯಕ್ತಪಡಿಸಲಾಗಿದೆ. ನಾವು ಕೂಡ ಏಕರೂಪ ನಾಗರಿಕ ಕಾಯ್ದೆಗೆ ವಿರೋಧಿಸಿದ್ದೇವೆ. ಇನ್ನು ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಟ್ಟು ಚುನಾವಣಾ ಆಯುಕ್ತರ ನೇಮಕವೊಂದು ಷಡ್ಯಂತ್ರ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಹೊರಗಿಟ್ಟಿದ್ದಾರೆ. ಬೇಕಾದವರನ್ನು ಆಯುಕ್ತರನ್ನಾಗಿ ಮಾಡಿಕೊಳ್ಳಲು ಹೊರಟಿದ್ದಾರೆ. ಐಪಿಸಿ ಸೇರಿದಂತೆ ಕಾನೂನು ತಿದ್ದುಪಡಿ ಮಾಡಲು ಹೊರಟಿದ್ದಾರೆ. ಐಪಿಸಿ 1861ರಲ್ಲಿ ರಚನೆಯಾದ ಕಾನೂನು. ಬದಲಾಯಿಸಿ ಏನು ಮಾಡ್ತಾರೆ ? ಎಂದು ಪ್ರಶ್ನಿಸಿದರು.

ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಕ್ಕೆ ಸಮಿತಿ ರಚನೆ

ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಕ್ಕೆ ಸಮಿತಿ ರಚಿಸಿದ್ದೇವೆ. ಶಾಸಕರಿಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡಬೇಕಿದೆ. ಯಾವ ಅನುಪಾತದಲ್ಲಿ ಹಂಚಿಕೆ ಮಾಡಬೇಕೆಂದು ತೀರ್ಮಾನ ಮಾಡುತ್ತೇವೆ. ಬಿಬಿಎಂಪಿ, ಜಿಲ್ಲಾ ಪಂಚಾಯತ್​, ತಾಲೂಕು ಪಂಚಾಯತ್​ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು ವಾರ್ಡ್​ ಪುನರ್​​ವಿಂಗಡಣೆ ಮಾಡಲು ಕೋರ್ಟ್​ ಗಡುವು ನೀಡಿದೆ. ನ್ಯಾಯಾಲಯದ ಗಡುವಿನ ಆಧಾರದಲ್ಲಿ ವರದಿ ಸಿದ್ಧವಾಗುತ್ತಿವೆ. ಚುನಾವಣೆ ವಿಚಾರದಲ್ಲಿ ನಾವು ಯಾವುತ್ತೂ ಹಿಂದೆ ಬಿದ್ದಿಲ್ಲ. ಭಾರತೀಯ ಜನತಾ ಪಕ್ಷದವರು ಚುನಾವಣೆ ಮುಂದೂಡುತ್ತಿದ್ದರು. ನಾವು ಆ ರೀತಿ ವಿಳಂಬ ಮಾಡುವುದಿಲ್ಲ. ನ್ಯಾಯಾಲಯದ ನಿರ್ದೇಶನದಂತೆ ನಾವು ನಡೆಯುತ್ತೇವೆ ಎಂದು ಹೇಳಿದ್ದಾರೆ.

ಸಂವಿಧಾನಕ್ಕೆ ಬದ್ಧರಾಗಿ ಕೆಲಸ ಮಾಡಬೇಕಾದದ್ದು ಎಲ್ಲರ ಜವಾಬ್ದಾರಿ

ಕರ್ನಾಟಕ ರಾಜ್ಯ ವಕೀಲರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂವಿಧಾನಕ್ಕೆ ಬದ್ಧರಾಗಿ ಕೆಲಸ ಮಾಡಬೇಕಾದದ್ದು ಎಲ್ಲರ ಜವಾಬ್ದಾರಿ. ಸಂವಿಧಾನ ಬರುವ ಮುನ್ನ ನ್ಯಾಯದಾನ ಬೇರೆಯದ್ದೇ ಸ್ವರೂಪದಲ್ಲಿತ್ತು. ಸಂವಿಧಾನ ಬಂದ ಬಳಿಕ ನ್ಯಾಯದಾನ ಬದಲಾಗಿದೆ. ರಾಜ-ಮಹಾರಾಜರ ಕಾಲದಲ್ಲಿ ಮನುವಾದಿ ಮಾದರಿ‌ ನ್ಯಾಯ ಹಂಚಿಕೆಯಾಗಿತ್ತು. ಜಾತಿ ವ್ಯವಸ್ಥೆ ಇದ್ದ ಕಾರಣ ಬೇರೆ ಬೇರೆ ರೀತಿಯಲ್ಲಿ ಶಿಕ್ಷೆ ಇತ್ತು. ಮೇಲ್ವರ್ಗ, ಶ್ರೀಮಂತ, ಬಡವ, ಕೆಳವರ್ಗದವರಿಗೆ ಬೇರೆ ಶಿಕ್ಷೆಗಳಿದ್ದವು. ಸಂವಿಧಾನ ರಚನೆಯಾಗಿ ಜಾರಿಯಾದ ನಂತರ ಏಕರೂಪ ಶಿಕ್ಷೆ ಜಾರಿಯಾಗಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಸಂವಿಧಾನದಲ್ಲಿ ಸ್ಪಷ್ಟ ಉಲ್ಲೇಖವಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:43 pm, Sat, 12 August 23