ಬಿಜೆಪಿ ಲೀಡರ್​​ ಲೆಸ್, ಜೆಡಿಎಸ್​​ ಪೀಪಲ್​ ಲೆಸ್: ಸಚಿವ ಪ್ರಿಯಾಂಕ್ ಖರ್ಗೆಗೆ ಕೆಎಸ್​ ಈಶ್ವರಪ್ಪ ತಿರುಗೇಟು

ಇಡೀ ದೇಶದಲ್ಲಿ ಯಾವುದೇ ವ್ಯಕ್ತಿಗೆ ಕೇಳಿದರೂ ಮೋದಿ ಅಂದ್ರೆ ಗೊತ್ತು. ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ನಮ್ಮ ನಾಯಕ ಮೋದಿ ಅಂತಾ. ಆದರೆ ದೇಶದ ಯಾವ ಹಳ್ಳಿಯಲ್ಲಿ ನಿಮ್ಮ ರಾಹುಲ್ ಗಾಂಧಿ ಹೆಸರೇಳುತ್ತಾರಾ ಎಂದು ಬಿಜೆಪಿ ಲೀಡರ್​​ಲೆಸ್, ಜೆಡಿಎಸ್​​ ಪೀಪಲ್​ ಲೆಸ್​ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಮಾಜಿ ಡಿಸಿಎಂ ಕೆ‌ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Nov 03, 2023 | 8:34 PM

ಮೈಸೂರು, ನವೆಂಬರ್​​​​ 03: ಇಡೀ ದೇಶದಲ್ಲಿ ಯಾವುದೇ ವ್ಯಕ್ತಿಗೆ ಕೇಳಿದರೂ ಮೋದಿ ಅಂದ್ರೆ ಗೊತ್ತು. ಭಾರತದ ಪ್ರಧಾನಿ ಯಾರೆಂದು ವಿಶ್ವದ ಯಾರನ್ನೇ ಕೇಳಿದರೂ ಹೇಳುತ್ತಾರೆ. ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ನಮ್ಮ ನಾಯಕ ಮೋದಿ ಅಂತಾ. ಆದರೆ ದೇಶದ ಯಾವ ಹಳ್ಳಿಯಲ್ಲಿ ನಿಮ್ಮ ರಾಹುಲ್ ಗಾಂಧಿ ಹೆಸರೇಳುತ್ತಾರೆ ಎಂದು ಮಾಜಿ ಡಿಸಿಎಂ ಕೆ‌ಎಸ್ ಈಶ್ವರಪ್ಪ (KS Eshwarappa) ವಾಗ್ದಾಳಿ ಮಾಡಿದ್ದಾರೆ. ಬಿಜೆಪಿ ಲೀಡರ್​​ಲೆಸ್, ಜೆಡಿಎಸ್​​ ಪೀಪಲ್​ ಲೆಸ್​ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ರಾಜ್ಯದಲ್ಲಿ ನಿಮ್ಮ ಇಬ್ಬರು ಲೀಡರ್‌ಗಳು ದಿನಾಲೂ ಕುಸ್ತಿ ಆಡುತ್ತಿದ್ದಾರೆ. ಇದನ್ನ ಲೀಡರ್ ಪಕ್ಷ ಅಂತಾ ಕರೆಯುತ್ತಿರಾ. ಮಾನಮರ್ಯಾದೆ ಅನ್ನೋದು ಇದ್ಯಾ ಎಂದು ಪ್ರಶ್ನಿಸಿದ್ದಾರೆ. ಈಗ ನಾನೇ ಸಿಎಂ ಎನ್ನುವ ಮಟ್ಟಕ್ಕೆ ಪ್ರಿಯಾಂಕ್ ಖರ್ಗೆ ಬೆಳೆದಿದ್ದಾರೆ. ನಿನ್ನೆವರೆಗೂ ಸಿದ್ದರಾಮಯ್ಯ ಸಿಎಂ ಆಗಿರಲಿ ಅಂತಿದ್ದ ಸಚಿವ ರಾಜಣ್ಣ, ಇವತ್ತು ಇದ್ದಕ್ಕಿದ್ದಂತೆ ಪರಮೇಶ್ವರ್ ಮುಖ್ಯಮಂತ್ರಿ ಆಗಲಿ ಅಂದಿದ್ದಾರೆ. ಈಗ ಕಾಂಗ್ರೆಸ್‌ಗೆ ಬಂದಿರುವ ದುಸ್ಥಿತಿ ಹಿಂದೆ ಯಾವ ಸರ್ಕಾರಕ್ಕೂ ಬಂದಿಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ನಾನೇ 5 ವರ್ಷ ಸಿಎಂ ಅಂತ ಸಿದ್ದರಾಮಯ್ಯ ಹೇಳುವ ಸಂದರ್ಭ ಸೃಷ್ಟಿಯಾಗಿ​ದ್ದು ಅನಾರೋಗ್ಯಕರ ಬೆಳವಣಿಗೆ: ಎಸ್ ಎಂ ಕೃಷ್ಣ, ಹಿರಿಯ ಮುತ್ಸದ್ದಿ

ರಾಜ್ಯದಲ್ಲಿ ಒಬ್ಬನೇ ಒಬ್ಬ ಸಚಿವ ರೈತರ ಸಮಸ್ಯೆಗಳನ್ನು ಕೇಳಿಲ್ಲ. ರಾಜ್ಯದಲ್ಲಿ ಭೀಕರ ಬರ ಇದೆ, ರೈತರ ಆತ್ಮಹತ್ಯೆಗೆ ಲೆಕ್ಕನೇ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಂದು ನಮ್ಮ ಕರ್ನಾಟಕ ಇದೆ. ಸಿದ್ದರಾಮಯ್ಯ, ಡಿಕೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಡಿದಾಡುತ್ತಿದ್ದಾರೆ. ಬೆಳೆ ಪರಿಹಾರಕ್ಕಾಗಲಿ, ಬರ ಪರಿಹಾರಕ್ಕಾಗಲಿ 1 ರೂ. ಕೊಟ್ಟಿಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಜನರಿಗೆ ಮೋಸ ಮಾಡಿ ನೀವು ಆಡಳಿತ ಮಾಡ್ತಿದ್ದೀರಾ?

ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಬಸ್ ಮಾತ್ರ ಓಡಾಡುತ್ತಿದೆ. ಇನ್ಯಾವ ಗ್ಯಾರಂಟಿ ಕೂಡ ಯಶಸ್ವಿ ಆಗಿಲ್ಲ. ರಾಜ್ಯದ ಜನರಿಗೆ ಮೋಸ ಮಾಡಿ ನೀವು ಆಡಳಿತ ಮಾಡ್ತಿದ್ದೀರಾ? ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆಗೆ ಹೋಗಿ. ಸಿದ್ದರಾಮಯ್ಯ ಕಾಂತರಾಜ್ ವರದಿ ಜಾರಿಗೆ ತರುತ್ತೇವೆ ಅಂತಾರೆ. ಡಿಕೆ ಶಿವಕುಮಾರ್​ ಯಾವುದೇ ಕಾರಣಕ್ಕೂ ಜಾರಿಗೆ ತರಲು ಬಿಡಲ್ಲ ಅಂತಿದ್ದಾರೆ. ಒಂದೇ ಪಕ್ಷದ ಸರ್ಕಾರದಲ್ಲಿ ಸಿಎಂ, ಡಿಸಿಎಂ ಬೇರೆ ಬೇರೆ ಹೇಳಿಕೆ ನೀಡುತ್ತಿದ್ದು, ಇದರಿಂದ ಜನ ಯಾಕಾದ್ರೂ ಇವರಿಗೆ ವೋಟ್​ ಹಾಕಿದ್ವಿ ಅಂತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ಇದನ್ನೂ ಓದಿ: ಮುಂದಿನ 5 ವರ್ಷ ನಾನೇ ಸಿಎಂ ಹೇಳಿಕೆ: ಯೂ ಟರ್ನ್ ಹೊಡೆದ ಸಿದ್ದರಾಮಯ್ಯ

ಕಾಂಗ್ರೆಸ್​ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಜಟಾಪಟಿ ವಿಚಾರವಾಗಿ ಮಾತನಾಡಿದ ಅವರು, ಯಾವುದೇ ಸಿಎಂ 5 ವರ್ಷ ನಾನೇ ಅಂತಾ ಹೇಳುವ ದುಸ್ಥಿತಿ ಬಂದಿರಲಿಲ್ಲ. 135 ಶಾಸಕರನ್ನು ಇಟ್ಟುಕೊಂಡು ಹೀಗೆ ಹೇಳುವ ದುಸ್ಥಿತಿ ಬರಬಾರದಿತ್ತು. ಬಹಿರಂಗ ಹೇಳಿಕೆ ನೀಡದಂತೆ ಶಾಸಕರಿಗೆ ‘ಕೈ’ ಹೈಕಮಾಂಡ್​ ಹೇಳಿದೆ. 3 ದಿನಗಳ ಹಿಂದೆ ಸುರ್ಜೇವಾಲ, ವೇಣುಗೋಪಾಲ್‌ ಸೂಚಿಸಿದ್ದಾರೆ. ಆದರೆ ಸ್ವತಃ ಮುಖ್ಯಮಂತ್ರಿಗಳೇ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಕುರುಬರಿಗೆ, ಒಕ್ಕಲಿಗರಿಗೆ ಡಿಕೆ ಮುಖ್ಯಮಂತ್ರಿ ಆಗಲಿ

ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಅನ್ನೋದು ಕೆಲ ಶಾಸಕರ ಆಸೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಇನ್ನೂ ಕೆಲವರು ಪ್ರಿಯಾಂಕ್, ಪರಮೇಶ್ವರ್ ಆಗಬೇಕು ಅಂತಿದ್ದಾರೆ. ಒಂದೊಂದು ಜಾತಿಗೆ ಒಂದೋ ಎರಡೋ ಸಿಎಂ ಸ್ಥಾನ ಕೊಟ್ಟುಬಿಡಿ. ಸಿದ್ದರಾಮಯ್ಯ ಕುರುಬರಿಗೆ, ಒಕ್ಕಲಿಗರಿಗೆ ಡಿಕೆ ಮುಖ್ಯಮಂತ್ರಿ ಆಗಲಿ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.