ಕಾಂತರಾಜ್ ವರದಿಯೇ ನನ್ನ ಕೈಸೇರಿಲ್ಲ, ಆಗಲೇ ವಿರೋಧ ಅಂದ್ರೆ ಹೇಗೆ: ಸಿಎಂ ಸಿದ್ದರಾಮಯ್ಯ ಪ್ರಶ್ನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 05, 2023 | 3:31 PM

ಮೈಸೂರಲ್ಲಿ ಪೊಲೀಸ್ ಗೌರವ ವಂದನೆ ಸ್ವೀಕರಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾಂತರಾಜ್ ವರದಿಯೇ ನನ್ನ ಕೈಸೇರಿಲ್ಲ. ಆಗಲೇ ವರದಿಗೆ ವಿರೋಧ ಎಂದರೆ ನಾನು ಏನು ಮಾಡಲಿ. ಕಾಂತರಾಜ್​ ವರದಿಯಲ್ಲಿ ಏನಿದೆ ಎಂಬುದೇ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಕಾಂತರಾಜ್ ವರದಿಯೇ ನನ್ನ ಕೈಸೇರಿಲ್ಲ, ಆಗಲೇ ವಿರೋಧ ಅಂದ್ರೆ ಹೇಗೆ: ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಸಿಎಂ ಸಿದ್ದರಾಮಯ್ಯ
Follow us on

ಮೈಸೂರು, ನವೆಂಬರ್​​​​​​ 05: ಕಾಂತರಾಜ್ ವರದಿಯೇ ನನ್ನ ಕೈಸೇರಿಲ್ಲ. ಆಗಲೇ ವರದಿಗೆ ವಿರೋಧ ಎಂದರೆ ನಾನು ಏನು ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಪ್ರಶ್ನೆ ಮಾಡಿದ್ದಾರೆ. ನಗರದ ಮಂಡಕಳ್ಳಿ ಏರ್​ಪೋರ್ಟ್​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂತರಾಜ್​ ವರದಿಯಲ್ಲಿ ಏನಿದೆ ಎಂಬುದೇ ನನಗೆ ಗೊತ್ತಿಲ್ಲ. ಅಂಕಿ ಅಂಶವೇ ಗೊತ್ತಿಲ್ಲದೆ ಅದರ ಬಗ್ಗೆ ಮಾತನಾಡೋದು ಹೇಗೆ‌? ನವೆಂಬರ ಒಳಗೆ ಜಾತಿಗಣತಿ ವರದಿ ಕೊಡಬಹುದೆನೋ ಎಂದು ಹೇಳಿದ್ದಾರೆ.

ಈಶ್ವರಪ್ಪ ಒಂದು ಸವಕಲು ನಾಣ್ಯ: ಸಿದ್ದರಾಮಯ್ಯ ಕಿಡಿ

ಕಾಂತರಾಜ್​ ವರದಿಗೆ ಮಾಜಿ ಸಚಿವ ಕೆಎಸ್​ ಈಶ್ವರಪ್ಪ ವಿರೋಧ ವಿಚಾರವಾಗಿ ಮಾತನಾಡಿದ ಅವರು, ಈಶ್ವರಪ್ಪ ಒಂದು ಸವಕಲು ನಾಣ್ಯ. ಸವಕಲು ಅನ್ನೋ ಕಾರಣಕ್ಕೆ ಕೆ.ಎಸ್​.ಈಶ್ವರಪ್ಪಗೆ ಟಿಕೆಟ್ ಕೊಟ್ಟಿಲ್ಲ. ಈಶ್ವರಪ್ಪ ಮಾತುಗಳಿಗೆ ಬೆಲೆಯೇ ಇಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಜೆಡಿಎಸ್​ನ ಬರ ಅಧ್ಯಯನಕ್ಕೆ ಸಿದ್ದರಾಮಯ್ಯ ಸ್ವಾಗತ, ಬಿಜೆಪಿಗೆ ಟಾಂಗ್​​

ಕಾಂತರಾಜು ವರದಿ ಪರ ವಿಧಾನಸಭೆಯಲ್ಲಿ ಈಶ್ವರಪ್ಪ ಮಾತಾಡಿಲ್ವಾ? ಈಗ ವರದಿಯನ್ನು ಸುಟ್ಟು ಹಾಕುತ್ತೇವೆ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದ್ದಾರೆ. ಕೆ.ಎಸ್​.ಈಶ್ವರಪ್ಪ ಮಾತಿಗೆ ಜಾಸ್ತಿ ಬೆಲೆ ಕೊಡಬೇಡಿ ಎಂದಿದ್ದಾರೆ.

ಯಾರು ಹೇಳಿಕೆ ನೀಡದಂತೆ ಸಿಎಂ ಎಚ್ಚರಿಕೆ 

ಸಿಎಂ ವಿಚಾರದಲ್ಲಿ ಇನ್ನು ಮುಂದೆ ಯಾರು ಹೇಳಿಕೆ ನೀಡಬೇಡಿ‌ ಎಂದು ನಮ್ಮ ಶಾಸಕರು ಮತ್ತು ಸಚಿವರಿಗೆ ಹೇಳಿದ್ದೇನೆ. ನಿನ್ನೆ ಉಪಹಾರ ಸಭೆಯಲ್ಲಿ ಈ ಬಗ್ಗೆ ನಾನೇ ಪ್ರಸ್ತಾಪ ಮಾಡಿದ್ದೇನೆ. ಇನ್ನು ಮುಂದೆ ಯಾರು ಮಾತನಾಡಬೇಡಿ ಎಂದು ಎಲ್ಲರಿಗೂ ಹೇಳಿದ್ದೇನೆ. ಮುಂದಿನ ಚುನಾವಣೆ ಬಗ್ಗೆಯೂ ಕೆಲವು ನಿರ್ದೇಶನ ನೀಡಿದ್ದೇನೆ‌ ಎಂದರು.

ಇದನ್ನೂ ಓದಿ: ಯಾರಾದ್ರೂ ನನ್ನ ಪರ ಮಾತಾಡಿದ್ರೆ ನೋಟಿಸ್ ಕೊಡ್ತೀನಿ, ನನಗೆ ಯಾರ ಬೆಂಬಲವೂ ಬೇಡ -ಇಕ್ಬಾಲ್ ಹುಸೇನ್ ವಿರುದ್ಧ ಡಿಕೆ ಶಿವಕುಮಾರ್ ಗರಂ

ಬೆಂಗಳೂರಲ್ಲಿ ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಕೊಲೆ ಕೇಸ್​ ವಿಚಾರವಾಗಿ ಮಾತನಾಡಿದ ಅವರು, ಡಿಡಿ ಪ್ರತಿಮಾ ಹತ್ಯೆ ಬಗ್ಗೆ ಈಗಷ್ಟೇ ಮಾಹಿತಿ ಸಿಕ್ಕಿದೆ. ಉಪ ನಿರ್ದೇಶಕಿ ಪ್ರತಿಮಾ ಒಂಟಿಯಾಗಿ ವಾಸವಿದ್ದರೆಂಬ ಮಾಹಿತಿ ಬಂದಿದೆ. ಅಧಿಕಾರಿ ಪ್ರತಿಮಾ ಹತ್ಯೆಗೆ ಕಾರಣ ಏನು ಅಂತಾ ಗೊತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರಿಸುತ್ತಿದೆ

ಬರ ಪೀಡಿತ ಜಿಲ್ಲೆಗಳಿಗೆ ಸಚಿವರು ಭೇಟಿ ನೀಡಿಲ್ಲ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಎಲ್ಲಾ ತಾಲೂಕುಗಳಿಗೆ ಭೇಟಿ ನೀಡುವಂತೆ ಸಚಿವರಿಗೆ ಸೂಚನೆ ನೀಡಿದ್ದೇವೆ. ಬರ ಬಗ್ಗೆ ಚರ್ಚಿಸಲು ಕೇಂದ್ರದ ನಾಯಕರು ಭೇಟಿಗೆ ಅವಕಾಶವೇ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರಿಸುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದ್ದಕ್ಕೆ ಸಹಿಸಿಕೊಳ್ಳಲು ಆಗ್ತಿಲ್ಲ. ಬರ ಪರಿಹಾರದ ಹಣ ನೀಡುವಂತೆ ಮತ್ತೊಮ್ಮೆ ಪತ್ರ ಬರೆಯುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.