ಹುಲಿ ದಾಳಿ ತಡೆಗೆ ಸುಂದರ್‌ಬನ್ಸ್ ವಿಧಾನ: ಏನಿದು ಅರಣ್ಯ ಇಲಾಖೆಯ ಹೊಸ ಪ್ಲ್ಯಾನ್​?

ಮೈಸೂರಿನಲ್ಲಿ ಹೆಚ್ಚಿದ ಹುಲಿ ದಾಳಿ ಪ್ರಕರಣಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಹೊಸ ಯೋಜನೆ ರೂಪಿಸಿದೆ. ಸುಂದರ್‌ಬನ್ಸ್ ಮಾದರಿಯಂತೆ ರೈತರು ಮತ್ತು ದನಗಾಹಿಗಳಿಗೆ ಮುಖವಾಡಗಳನ್ನು ವಿತರಿಸುತ್ತಿದೆ. ಹುಲಿಗಳು ಹಿಂಬದಿಯಿಂದ ದಾಳಿ ಮಾಡುವುದನ್ನು ತಡೆಯಲು ಈ ಮುಖವಾಡಗಳು ಸಹಾಯಕವಾಗಲಿವೆ. ಅರಣ್ಯ ಇಲಾಖೆ 10,000 ಮುಖವಾಡಗಳನ್ನು ವಿತರಿಸಿದ್ದು, ಕಾಡು ಪ್ರಾಣಿಗಳೊಂದಿಗೆ ಹೇಗೆ ವರ್ತಿಸ ಬೇಕು ಎಂಬ ಬಗ್ಗೆಯೂ ಜಾಗೃತಿ ಕೆಲಸ ನಡೆಸುತ್ತಿದೆ.

ಹುಲಿ ದಾಳಿ ತಡೆಗೆ ಸುಂದರ್‌ಬನ್ಸ್ ವಿಧಾನ: ಏನಿದು ಅರಣ್ಯ ಇಲಾಖೆಯ ಹೊಸ ಪ್ಲ್ಯಾನ್​?
ಹುಲಿ ದಾಳಿ ತಡೆಗೆ ಮಾಸ್ಕ್​ ವಿತರಣೆ
Edited By:

Updated on: Nov 17, 2025 | 5:13 PM

ಮೈಸೂರು, ನವೆಂಬರ್​ 17: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವ್ಯಾಘ್ರನ ಆರ್ಭಟ ಮುಂದುವರಿದಿದ್ದು, ಮೇಲಿಂದ ಮೇಲೆ ಹುಲಿ ದಾಳಿ ಪ್ರಕರಣಗಳು ವರದಿಯಾಗುತ್ತಲೇ ಇವೆ. ಈ ನಡುವೆ ಕಾಡಿನಿಂದ ನಾಡಿಗೆ ಬಂದಿರೋದು ಒಂದೆರಡಲ್ಲ, ಬರೋಬ್ಬರಿ 20 ಹುಲಿಗಳು ಎನ್ನುವ ವಿಚಾರ ಜನರ ನಿದ್ದೆಗೆಡಿಸಿದೆ. ಹೀಗಾಗಿ ಕಾಡಂಚಿನ ಗ್ರಾಮಗಳ ರೈತರು ಮತ್ತು ದನಗಾಹಿಗಳ ಮೇಲೆ ಹುಲಿ ದಾಳಿ ತಪ್ಪಿಸಲು ಅರಣ್ಯ ಇಲಾಖೆ ಮಾಸ್ಟರ್​ ಪ್ಲ್ಯಾನ್​ ಮಾಡಿದ್ದು, ಮುಖವಾಡಗಳ ವಿತರಣೆ ಮಾಡಿದೆ.

ಮುಖವಾಡ ವಿತರಣೆ ಯಾಕೆ?

ಸಾಮಾನ್ಯವಾಗಿ ಹುಲಿಗಳು ಜಾನುವಾರುಗಳ ಮೇಲೆ ದಾಳಿ ಮಾಡುತ್ತವೆ. ಮನುಷ್ಯನ ಮೇಲೆ ದಾಳಿ ನಡೆಸುವುದಿಲ್ಲ. ಒಂದು ವೇಳೆ ಆತ ಕುಳಿತುಕೊಂಡಿದ್ದರೆ ಅಥವಾ ಬಗ್ಗಿರುವ ಸ್ಥಿತಿಯಲ್ಲಿ ಕಂಡು ಬಂದರೆ ಹಿಂಬಂದಿಯಿಂದ ಅವು ದಾಳಿ ಮಾಡುವ ಸಾಧ್ಯತೆ ಇರುತ್ತವೆ. ಹೀಗಾಗಿ ಹುಲಿ ದಾಳಿ ತಪ್ಪಿಸುವ ನಿಟ್ಟಿನಲ್ಲಿ ಮುಖವಾಡಗಳನ್ನ ನೀಡಲಾಗಿದೆ. ಬರೋಬ್ಬರಿ 10 ಸಾವಿರ ಮಾಸ್ಕ್‌ನ್ನು ರೈತರಿಗೆ ಅರಣ್ಯ ಇಲಾಖೆ ವಿತರಿಸಿದೆ. ಪಶ್ಚಿಮ ಬಂಗಾಳದ ಸುಂದರ್‌ಬನ್ಸ್ ಪ್ರದೇಶದ ಸಮುದಾಯದಲ್ಲಿ ಹುಲಿದಾಳಿಯಿಂದ ತಪ್ಪಿಸಿಕೊಳ್ಳಲು ಮುಖವಾಡ ಧರಿಸುವ ಈ ಕ್ರಮ ಚಾಲ್ತಿಯಲ್ಲಿದ್ದು, ಇದರಿಂದಲೇ ರಾಜ್ಯದ ಅರಣ್ಯ ಇಲಾಖೆಯೂ ಪ್ರೇರಿತವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಕಾರ್ಯಾಚರಣೆ ವೇಳೆ ಮೈ ಮೇಲೆ ಎಗರಿದ ಹುಲಿ, ಹೊರಬಂದವು ರೈತನ ಕಣ್ಣು ಗುಡ್ಡೆಗಳು

ನಿರಂತರ ಕೋಂಬಿಂಗ್ ಹಾಗೂ ಸುಮಾರು 10 ಹುಲಿಗಳನ್ನು (ಮರಿಗಳು ಸೇರಿ) ಹಿಡಿದಿದ್ದರೂ, ಕಾಡಂಚಿನ ಗ್ರಾಮಸ್ಥರು ಹುಲಿಗಳ ಸಂಚಾರವನ್ನು ಕಂಡಿರುವ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇವೆ. ಹೀಗಾಗಿ ತಮ್ಮ ಹೊಲಗಳಿಗೆ ಕೃಷಿ ಕಾರ್ಯ ಅಥವಾ ಪಶುಗಳನ್ನು ಮೇಯಿಸಲು ಹೋಗಲೂ ಜನ ಭಯಪಡುತ್ತಿದ್ದಾರೆ. ಹುಲಿಗಳು ಸಾಮಾನ್ಯವಾಗಿ ಹಿಂಬದಿಯಿಂದ ದಾಳಿ ಮಾಡುವ ಸ್ವಭಾವ ಹೊಂದಿರುವ ಕಾರಣ, ಸುಂದರ್‌ಬನ್ಸ್ ವಿಧಾನವನ್ನು ಇಲ್ಲಿಯೂ ಅಳವಡಿಸುವ ಯತ್ನ ನಡೆದಿದೆ.

ಅರಣ್ಯ ಸಿಬ್ಬಂದಿ ಕಾಡಂಚಿನ ಗ್ರಾಮಗಳಿಗೆ ಭೇಟಿ ನೀಡಿ, ಮುಖವಾಡಗಳನ್ನು ಹಂಚುತ್ತಿದ್ದಾರೆ. ಕೃಷಿ ಮತ್ತು ಪಶುಸಂಗೋಪನೆ ಮಾಡಲು ತೆರಳುವ ರೈತರಿಗೆ ಮುಖವಾಡ ಯಾಕೆ ಧರಿಸಬೇಕು ಎಂಬ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕ ಪ್ರಕಟಣೆಗಳನ್ನೂ ಮಾಡಲಾಗುತ್ತಿದೆ. ಮುಖವಾಡಗಳ ಜೊತೆಗೆ, ಕಾಡು ಪ್ರಾಣಿಗಳ ಎದುರಿನಲ್ಲಿ ಹೇಗೆ ವರ್ತಿಸಬೇಕು? ಯಾವುದನ್ನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎಂಬ ಮಾಹಿತಿಯನ್ನೂ ನೀಡಲಾಗುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Follow Us