- TV9 Kannada Photo gallery Raichur Drought: Farmers Walk 50 km and Perform Rain Rituals Amid Monsoon Failure
ಮಳೆಗಾಗಿ 50 ಕಿ.ಮೀ ಪಾದಯಾತ್ರೆ: ಕೃಷ್ಣ-ತುಂಗಭದ್ರಾ ನೀರಲ್ಲಿ ಜಲಾಭಿಷೇಕ, ಸಪ್ತ ಭಜನೆ
ರಾಯಚೂರಿನಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಬೆಳೆಗಳು ಒಣಗುತ್ತಿದ್ದು, ಮಳೆಗಾಗಿ ಗ್ರಾಮಸ್ಥರು ದೈವದ ಮೊರೆ ಹೋಗಿದ್ದಾರೆ. ಜಾಲಿಬೆಂಚಿ ಗ್ರಾಮದ ರೈತರು 50 ಕಿ.ಮೀ ದೂರದ ತುಂಗಭದ್ರಾ, ಕೃಷ್ಣಾ ನದಿಗಳಿಂದ ನೀರು ತಂದು ಜಲಾಭಿಷೇಕ ಮಾಡಿದ್ದಾರೆ. ಏಳು ದಿನಗಳ ಸಪ್ತ ಭಜನೆ, ವಿಶೇಷ ಪೂಜೆಗಳ ಮೂಲಕ ಉತ್ತಮ ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ.
Updated on: Jul 03, 2026 | 7:51 PM

ಮುಂಗಾರು ಹಂಗಾಮಿನ ಮಧ್ಯೆ ಮಳೆರಾಯ ಕೈಕೊಟ್ಟಿದ್ದು ರೈತರು ಅಕ್ಷರಶಃ ಪರದಾಡುತ್ತಿದ್ದಾರೆ. ಬಿಸಿಲುನಾಡು ರಾಯಚೂರಿನಲ್ಲಿ ರೈತರು ಮಳೆ ಇಲ್ಲದೇ ಕಂಗಾಲಾಗಿದ್ದು, ರೈತರು ದೈವರ ಮೊರೆ ಹೋಗಿದ್ದಾರೆ. 50 ಕಿಮಿ ಪಾದಯಾತ್ರೆ ಮೂಲಕ ತುಂಗಭದ್ರಾ, ಕೃಷ್ಣಾ ನದಿ ನೀರನ್ನ ತಂದು ಗ್ರಾಮದ ಶಕ್ತಿ ದೇವರಿಗೆ ಜಲಾಭಿಷೇಕ ಮಾಡಿದರು.

ಹೌದು. ಗಡಿ ಜಿಲ್ಲೆ ರಾಯಚೂರಿನಲ್ಲಿ ಮುಂಗಾರು ಕೈಕೊಟ್ಟಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ. ಅಲ್ಪಸ್ವಲ್ಪ ಮಳೆ ಬಂದಾಗಲೇ ಬಿತ್ತನೆ ಮಾಡಿದ್ದ ರೈತರು ಇದೀಗ ಆಕಾಶದತ್ತ ಮುಖ ಮಾಡುವಂತಾಗಿದೆ. ಜಮೀನಿನಲ್ಲಿ ಬೆಳೆ ಒಣಗುತ್ತಿವೆ. ಹೀಗಾಗಿ ಗ್ರಾಮಸ್ಥರು ದೇವರಿಗೆ ವಿಶೇಷ ಪೂಜೆ, ಸಪ್ತ ಭಜನೆ ಹಾಗೂ ಜಲಾಭಿಷೇಕ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ.

ರಾಯಚೂರು ತಾಲೂಕಿನ ಜಾಲಿಬೆಂಚಿ ಗ್ರಾಮದ ರೈತರು ಮಳೆಗಾಗಿ ಕಾದು ಕುಳಿತಿದ್ದಾರೆ. ಹೀಗಾಗಿ ಗ್ರಾಮಸ್ಥರು ಏಳು ದಿನಗಳ ಸಪ್ತ ಭಜನೆ ಕಾರ್ಯಕ್ರಮ ಆರಂಭಿಸಿದ್ದಾರೆ. ಅದರಲ್ಲೂ ವಿಶೇಷ ಸಂಕಲ್ಪ ಮಾಡಿರುವ ಯುವಕರು ಸುಮಾರು 50 ಕಿ.ಮೀ ಪಾದಯಾತ್ರೆ ಮಾಡಿ ತುಂಗಭದ್ರಾ ಹಾಗೂ ಕೃಷ್ಣಾ ನದಿಗಳಿಂದ ನೀರು ತಂದು ಗ್ರಾಮದ ಶಕ್ತಿ ದೇವರಿಗೆ ಜಲಾಭಿಷೇಕ ನೆರವೇರಿಸಿದ್ದಾರೆ.

ಆರು ವರ್ಷಗಳ ಹಿಂದೆ ಕೂಡ ಇದೇ ರೀತಿಯ ಬರಗಾಲ ಎದುರಾಗಿತ್ತು. ಅಂದು ಸಪ್ತ ಭಜನೆ ಹಾಗೂ ಜಲಾಭಿಷೇಕ ಬಳಿಕ ಉತ್ತಮ ಮಳೆಯಾಗಿತ್ತು. ಅದೇ ನಂಬಿಕೆಯಿಂದ ಈ ಬಾರಿಯೂ ಏಳು ದಿನಗಳ ಕಾಲ ಸಪ್ತ ಭಜನೆ ಮೂಲಕ ಮಳೆಗಾಗಿ ದೇವರು ಮೊರೆ ಹೋಗಿದ್ದಾರೆ.

ಮುತ್ತೈದೆಯರು ಗ್ರಾಮದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಉತ್ತಮ ಮಳೆಯಾಗುವಂತೆ ಪ್ರಾರ್ಥಿಸಿದ್ದಾರೆ. ಒಟ್ಟಿನಲ್ಲಿ ರೈತರು ಮಳೆಗಾಗಿ ಕಾದು ಕುಳಿತಿದ್ದು, ಮಳೆರಾಯ ಅನ್ನದಾತರ ಮೇಲೆ ಕೃಪೆ ತೋರಬೇಕಿದೆ.




