ಪಾಕಿಸ್ತಾನದ ಕೋರ್ಟ್, ಕಚೇರಿಗಳಿಗೇ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಮೈಸೂರಿನ ‘ಹುಸಿ ಬಾಂಬ್’ ಕಿಂಗ್‌ಪಿನ್!

ಮೈಸೂರಿನಲ್ಲಿ ಬಂಧಿತನಾದ ಹುಸಿ ಬಾಂಬ್ ಬೆದರಿಕೆ ಆರೋಪಿ ಶ್ರೀನಿವಾಸ್ ಲೂಯಿಸ್, ಪಾಕಿಸ್ತಾನದ ಸರ್ಕಾರಿ ಕಚೇರಿ ಮತ್ತು ಕೋರ್ಟ್‌ಗಳಿಗೂ ಬೆದರಿಕೆ ಇಮೇಲ್ ಕಳುಹಿಸಿರುವುದು ದೆಹಲಿ ಪೊಲೀಸರ ವಿಚಾರಣೆಯಲ್ಲಿ ಪತ್ತೆಯಾಗಿದೆ. ಡಾರ್ಕ್ ವೆಬ್ ಮತ್ತು 50ಕ್ಕೂ ಹೆಚ್ಚು ಇಮೇಲ್ ಐಡಿಗಳನ್ನು ಬಳಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಈತ ಆತಂಕ ಸೃಷ್ಟಿಸಿದ್ದ.

ಪಾಕಿಸ್ತಾನದ ಕೋರ್ಟ್, ಕಚೇರಿಗಳಿಗೇ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಮೈಸೂರಿನ ‘ಹುಸಿ ಬಾಂಬ್’ ಕಿಂಗ್‌ಪಿನ್!
ಶ್ರೀನಿವಾಸ್ ಲೂಯಿಸ್
Image Credit source: tv9
Edited By:

Updated on: Apr 07, 2026 | 8:57 AM

ಮೈಸೂರು, ಏಪ್ರಿಲ್ 7: ದೇಶಾದ್ಯಂತ ಶಾಲೆಗಳು, ನ್ಯಾಯಾಲಯಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಹುಸಿ ಬಾಂಬ್ ಬೆದರಿಕೆ (Hoax Bomb Threat) ಇಮೇಲ್ ಕಳುಹಿಸಿ ಆತಂಕ ಸೃಷ್ಟಿಸಿದ್ದ ಮೈಸೂರಿನ (Mysuru) ಶ್ರೀನಿವಾಸ್ ಲೂಯಿಸ್ (SrinivasLouis) (47), ಅಂತರಾಷ್ಟ್ರೀಯ ಮಟ್ಟದಲ್ಲೂ ಇಂತಹ ಕಿಡಿಗೇಡಿತನ ಮಾಡಿರುವುದು ದೆಹಲಿ ಪೊಲೀಸರ ವಿಚಾರಣೆ ವೇಳೆ ಬಹಿರಂಗವಾಗಿದೆ. ಈತ ಪಾಕಿಸ್ತಾನದ ನ್ಯಾಯಾಲಯಗಳು, ಶಾಲಾ-ಕಾಲೇಜುಗಳು ಮತ್ತು ಅಲ್ಲಿನ ಸರ್ಕಾರಿ ಕಚೇರಿಗಳಿಗೂ ಹುಸಿ ಬಾಂಬ್ ಬೆದರಿಕೆ ಸಂದೇಶ ರವಾನಿಸಿದ್ದ ಎಂಬುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಡಾರ್ಕ್ ವೆಬ್ ಮೂಲಕ ಸಂಚು

ತಾಂತ್ರಿಕವಾಗಿ ಅತ್ಯಂತ ಚಾಣಾಕ್ಷನಾಗಿರುವ ಶ್ರೀನಿವಾಸ್, ಪೊಲೀಸರಿಗೆ ಸಿಕ್ಕಿಬೀಳದಂತೆ ತನ್ನ ಐಪಿ (IP) ವಿಳಾಸವನ್ನು ಮರೆಮಾಚಲು ‘ಡಾರ್ಕ್ ವೆಬ್’ ಮತ್ತು ವಿಪಿಎನ್ ತಂತ್ರಜ್ಞಾನ ಬಳಸುತ್ತಿದ್ದ. ಪಾಕಿಸ್ತಾನದ ಪ್ರಮುಖ ಸ್ಥಳಗಳನ್ನು ಪತ್ತೆ ಹಚ್ಚಲು ಗೂಗಲ್ ಮ್ಯಾಪ್ ಬಳಸುತ್ತಿದ್ದ ಈತ, ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್ (VoIP) ಮೂಲಕವೂ ಕರೆಗಳನ್ನು ಮಾಡುತ್ತಿದ್ದ. ಸುಮಾರು 50ಕ್ಕೂ ಹೆಚ್ಚು ನಕಲಿ ಇಮೇಲ್ ಐಡಿಗಳನ್ನು ಸೃಷ್ಟಿಸಿ ಈ ಕೃತ್ಯ ಎಸಗಿದ್ದ.

FSLಗೆ ಲ್ಯಾಪ್‌ಟಾಪ್ ರವಾನೆ

ಮಾರ್ಚ್ 27ರಂದು ಮೈಸೂರಿನಲ್ಲಿ ದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಈತನಿಂದ ಮೊಬೈಲ್, ಲ್ಯಾಪ್‌ಟಾಪ್ ಮತ್ತು ಹಲವು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇವುಗಳಲ್ಲಿರುವ ಮಾಹಿತಿಯನ್ನು ಸಂಪೂರ್ಣವಾಗಿ ಪರಿಶೋಧಿಸಲು ಪೊಲೀಸರು ಈ ಡಿಜಿಟಲ್ ಪುರಾವೆಗಳನ್ನು ಎಫ್‌ಎಸ್‌ಎಲ್ (FSL) ಪರೀಕ್ಷೆಗೆ ರವಾನಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಇಮೇಲ್ ಕಳುಹಿಸುತ್ತಿದ್ದ ಈತ, ದೇಶದ ಹಲವು ರಾಜ್ಯಗಳ ವಿಧಾನಸಭೆಗಳಿಗೂ ಬೆದರಿಕೆ ಹಾಕಿದ್ದ.

ಇದನ್ನೂ ಓದಿ: ದೆಹಲಿ ಪೊಲೀಸರ ಕಾರ್ಯಾಚರಣೆ: ಶಾಲೆಗಳು, ಕೋರ್ಟ್​ಗಳಿಗೆ ಬಾಂಬ್ ಬೆದರಿಕೆ ಹಾಕುತ್ತಿದ್ದ ಆರೋಪಿ ಮೈಸೂರಿನಲ್ಲಿ ಅರೆಸ್ಟ್

ಸದ್ಯ ದೆಹಲಿ ಪೊಲೀಸರ ಕಸ್ಟಡಿಯಲ್ಲಿರುವ ಶ್ರೀನಿವಾಸ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಈತನ ಹಿಂದೆ ಯಾವುದಾದರೂ ಸಂಘಟನೆಗಳಿವೆಯೇ ಅಥವಾ ಕೇವಲ ಕುಚೇಷ್ಟೆಗಾಗಿ ಇಷ್ಟೆಲ್ಲಾ ಮಾಡಿದ್ದಾನೆಯೇ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.

ಯಾರು ಈ ಶ್ರೀನಿವಾಸ್?

ಹುಸಿ ಬಾಂಬ್ ಬೆದರಿಕೆ ಪ್ರಕರಣದಲ್ಲಿ ದೆಹಲಿ ಪೊಲೀಸ್ ಕಸ್ಟಡಿಯಲ್ಲಿರುವ ಶ್ರೀನಿವಾಸ್ ಲೂಯಿಸ್, ಮೈಸೂರಿನ ಪ್ರತಿಷ್ಠಿತ ಬೃಂದಾವನ ಬಡಾವಣೆ ಎರಡನೇ ಹಂತದ 6ನೇ ಕ್ರಾಸ್‌ ನಿವಾಸಿ. ಇಲ್ಲಿದ್ದುಕೊಂಡೇ ಬಾಂಬ್ ಬೆದರಿಕೆ ಸಂದೇಶ ಕಳುಹಿಸುವ ಕೃತ್ಯಗಳನ್ನು ಎಸಗುತ್ತಿದ್ದ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Follow Us