Mysuru Dasara 2021: ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ವೀರನಹೊಸಹಳ್ಳಿಯಿಂದ ನಾಳೆ ಗಜಪಯಣ ಆರಂಭ

| Updated By: ಆಯೇಷಾ ಬಾನು

Updated on: Sep 12, 2021 | 11:35 AM

ಈ ಸಾಲಿನ ದಸರಾದಲ್ಲಿ ಮತ್ತಿಗೋಡು ಶಿಬಿರದಿಂದ ಅಂಬಾರಿ ಆನೆ ಅಭಿಮನ್ಯು, ಗೋಪಾಲಸ್ವಾಮಿ ಬರಲಿವೆ. ಆನೆಕಾಡು ಶಿಬಿರದ ವಿಕ್ರಮ, ದುಬಾರೆ ಶಿಬಿರದ ಕಾವೇರಿ, ಧನಂಜಯ, ನಾಗರಹೊಳೆಯ ದೊಡ್ಡ ಹರವೆ ಶಿಬಿರದ ಅಶ್ವತ್ಥಾಮ, ಬಂಡೀಪುರ ರಾಂಪುರ ಶಿಬಿರದ ಚೈತ್ರಾ ಹಾಗೂ ಲಕ್ಷ್ಮಿ ಜತೆಯಾಗಿ ಸಾಥ್ ನೀಡಲಿವೆ.

Mysuru Dasara 2021: ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ವೀರನಹೊಸಹಳ್ಳಿಯಿಂದ ನಾಳೆ ಗಜಪಯಣ ಆರಂಭ
ಮೈಸೂರು ದಸರಾ ಹಳೆ ಚಿತ್ರ
Follow us on

ಮೈಸೂರು: ಮಹಾಮಾರಿ ಕೊರೊನಾ(Coronavirus) ಆತಂಕದ ನಡುವೆಯೇ ಕಳೆದ ಬಾರಿ ನಡೆದಂತೆ ಈ ಬಾರಿಯೂ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2021(Mysuru Dasara 2021) ನಡೆಯಲಿದೆ. ಇದಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಿಂದ ನಾಳೆ ಗಜಪಯಣ ಆರಂಭವಾಗಲಿದೆ. ಕಾಡಿನಿಂದ ನಾಡಿಗೆ 8 ಆನೆಗಳು ಬರಲಿವೆ.

ಸೆ.16ಕ್ಕೆ ಮೈಸೂರು ಅರಮನೆಗೆ ಗಜಪಡೆ ಆಗಮಿಸಲಿದ್ದು ದಸರಾದಲ್ಲಿ ಭಾಗಿಯಾಗುವ ಆನೆಗಳಿಗೆ ಕೊವಿಡ್ ಟೆಸ್ಟ್ ಇಲ್ಲ. ಜಂಬೂಸವಾರಿ ಕ್ಯಾಪ್ಟನ್ 56 ವರ್ಷದ ಅಭಿಮನ್ಯು ನೇತೃತ್ವದ ಗಜಪಡೆ ಗಜಪಯಣ ಬೆಳೆಸಲಿದೆ. 38 ವರ್ಷದ ಗೋಪಾಲಸ್ವಾಮಿ, 34 ವರ್ಷದ ಅಶ್ವತ್ಥಾಮ, 58 ವರ್ಷದ ವಿಕ್ರಮ, 43 ವರ್ಷದ ಧನಂಜಯ, 44 ವರ್ಷದ ಕಾವೇರಿ, 48 ವರ್ಷದ ಚೈತ್ರ 20 ವರ್ಷದ ಲಕ್ಷ್ಮಿ ಆನೆಗಳು ಕಾಡಿಂದ ನಾಡಿಗೆ ಆಗಮಿಸಲಿವೆ. ನಾಳೆ ಲಾರಿ ಮೂಲಕ ಅಶೋಕಪುರಂ ಅರಣ್ಯ ಭವನಕ್ಕೆ ಆನೆಗಳು ಆಗಮಿಸಲಿದ್ದು ಅಲ್ಲಿಂದ ಸೆ.16ರಂದು ಮೈಸೂರು ಅರಮನೆಗೆ ಗಜಪಡೆ ಬರಲಿದೆ. ಪ್ರಾಣಿಗಳಲ್ಲಿ ಕೊರೊನಾ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಆನೆಗಳಿಗೆ ಕೊರೊನಾ ಪರೀಕ್ಷೆ ಇಲ್ಲ.

ಈ ಸಾಲಿನ ದಸರಾದಲ್ಲಿ ಮತ್ತಿಗೋಡು ಶಿಬಿರದಿಂದ ಅಂಬಾರಿ ಆನೆ ಅಭಿಮನ್ಯು, ಗೋಪಾಲಸ್ವಾಮಿ ಬರಲಿವೆ. ಆನೆಕಾಡು ಶಿಬಿರದ ವಿಕ್ರಮ, ದುಬಾರೆ ಶಿಬಿರದ ಕಾವೇರಿ, ಧನಂಜಯ, ನಾಗರಹೊಳೆಯ ದೊಡ್ಡ ಹರವೆ ಶಿಬಿರದ ಅಶ್ವತ್ಥಾಮ, ಬಂಡೀಪುರ ರಾಂಪುರ ಶಿಬಿರದ ಚೈತ್ರಾ ಹಾಗೂ ಲಕ್ಷ್ಮಿ ಜತೆಯಾಗಿ ಸಾಥ್ ನೀಡಲಿವೆ. ಇದೇ ಪ್ರಥಮವಾಗಿ 34 ವರ್ಷದ ಅಶ್ವತ್ಥಾಮ ದಸರಾಗೆ ಪ್ರವೇಶ ಪಡೆದಿದ್ದಾನೆ. ಕಿರಿಯ ಆನೆಯಾಗಿ ಲಕ್ಷ್ಮೀ ಎರಡನೇ ಬಾರಿಗೆ ದಸರಾದಲ್ಲಿ ಭಾಗಿಯಾಗಲಿದ್ದಾಳೆ.

ಸೆ.8ಕ್ಕೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆನೆ ಪಟ್ಟಿ ಬಿಡುಗಡೆಯಾಗಿದ್ದು, ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳ ಕುರಿತಾದ ಬಣ್ಣದ ಚಿತ್ರವುಳ್ಳ ಕೈಪಿಡಿ ತಯಾರಿಸಲಾಗಿದೆ. ಗಜಪಯಣಕ್ಕೆ ಸೆ.13, 15 ಹಾಗೂ 16 ಒಳ್ಳೆ ದಿನವಾಗಿದೆ. ಅದರಲ್ಲೂ ಸೆ.13 ಭಾದ್ರಪದ ಸಪ್ತಮಿ ದಿನ ಆಗಿರುವುದರಿಂದ ಗಜಪಯಣಕ್ಕೆ ಒಳ್ಳೆದಿನ. ಅಂದು ಆನೆಗಳು ಅರಮನೆ ಪ್ರವೇಶಿಸುವುದು ಸೂಕ್ತ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸೆ.13 ರಂದು ಬೆಳಿಗ್ಗೆ 11 ಗಂಟೆ ನಂತರ ಹುಣಸೂರು ತಾಲೂಕಿನ ವೀರನಹೊಸಳ್ಳಿ ಗೇಟ್ ಬಳಿ ಅಭಿಮನ್ಯು ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಮೈಸೂರಿನ ಅರಣ್ಯ ಭವನಕ್ಕೆ ಕರೆತರಲಾಗುತ್ತದೆ. ಸೆ.16 ರಂದು ಅರಣ್ಯ ಭವನದಲ್ಲಿ ಅರಣ್ಯ ಇಲಾಖೆ ವತಿಯಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ನಂತರ ಅರಮನೆಗೆ ಕರೆದುಕೊಂಡು ಬರಲು ನಿರ್ಧಾರ ಮಾಡಲಾಗಿದೆ.

ಇದನ್ನೂ ಓದಿ: ಮೈಸೂರು ದಸರಾ ಮಹೋತ್ಸವ 2021: ಈ ಬಾರಿಯ ದಸರಾ ಬಗ್ಗೆ ವಿವರಣೆ ನೀಡಿದ ಸಚಿವ ಎಸ್​ಟಿ ಸೋಮಶೇಖರ್

Mysuru Dasara 2021: ಅಂದು ಪುಂಡಾನೆ, ಇಂದು ದಸರಾ ಜಂಬೂಸವಾರಿಯ ಆಕರ್ಷಣೆ; ಇದು ಅಶ್ವತ್ಥಾಮನ ಜೀವನಗಾಥೆ