Mysuru Dasara 2021: ಅಂದು ಪುಂಡಾನೆ, ಇಂದು ದಸರಾ ಜಂಬೂಸವಾರಿಯ ಆಕರ್ಷಣೆ; ಇದು ಅಶ್ವತ್ಥಾಮನ ಜೀವನಗಾಥೆ

ಅಶ್ವತ್ಥಾಮ ಎಲ್ಲರ ಮೆಚ್ಚಿನ ಆನೆಯಾಗಿ ಬದಲಾಗಿದ್ದಾನೆ. ಅಂದು ಪುಂಡಾನೆ ಎಂಬ ಪಟ್ಟ ಹೊತ್ತಿದ್ದವನು ಇಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುವ ವಿಶ್ವವಿಖ್ಯಾತ ದಸರಾಕ್ಕೆ ಗಜಗಾಂಭೀರ್ಯದಿಂದಲೇ ಹೆಜ್ಜೆ ಹಾಕಲು ಸಿದ್ಧನಾಗಿದ್ದಾನೆ.

Mysuru Dasara 2021: ಅಂದು ಪುಂಡಾನೆ, ಇಂದು ದಸರಾ ಜಂಬೂಸವಾರಿಯ ಆಕರ್ಷಣೆ; ಇದು ಅಶ್ವತ್ಥಾಮನ ಜೀವನಗಾಥೆ
ಮೈಸೂರು ದಸರಾ (ಸಾಂದರ್ಭಿಕ ಚಿತ್ರ) ಹಾಗೂ ಅಶ್ವತ್ಥಾಮ ಆನೆ
Follow us
| Updated By: Skanda

Updated on:Sep 08, 2021 | 10:03 AM

ಅಶ್ವತ್ಥಾಮ.. ಮಹಾಭಾರತದ ದ್ರೋಣಾಚಾರ್ಯರ ಮಗನ ಹೆಸರಿನಿಂದ ಕರೆಯಲ್ಪಡುವ ಅಶ್ವತ್ಥಾಮ ಆನೆ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಈ ಬಾರಿ ಪ್ರಮುಖ ಆಕರ್ಷಣೆಯಾಗಲಿದ್ದಾನೆ. ಪ್ರತಿವರ್ಷವೂ ಅದ್ಧೂರಿಯಾಗಿ ನಡೆಯುವ ಮೈಸೂರು ದಸರಾ ಕಳೆದ ವರ್ಷದಂತೆ ಈ ಸಲವೂ ಕೊರೊನಾ ಕಾರಣಕ್ಕಾಗಿ ಸರಳ ರೂಪದಲ್ಲಿ ನಡೆಯಲಿದೆ. ಆದರೂ, ದಸರಾದ ಪ್ರಮುಖ ಆಕರ್ಷಣೆಯೆಂದೇ ಖ್ಯಾತಿಯಾದ ಜಂಬೂ ಸವಾರಿಗೆ ಎಂದಿನಂತೆಯೇ ಆನೆಗಳು ಆಗಮಿಸಲಿದ್ದು, ಅಂಬಾರಿ ಹೊತ್ತು ಸಾಗಲಿವೆ. ಈ ಬಾರಿ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಅಂತಿಮ ಪಟ್ಟಿ ಸಿದ್ಧವಾಗಿದ್ದು, ಆ ಪೈಕಿ ಮೊಟ್ಟ ಮೊದಲ ಬಾರಿಗೆ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಅಶ್ವತ್ಥಾಮ ಆನೆ ಎಲ್ಲರ ಗಮನ ಸೆಳೆದಿದೆ. ಈ ಹಿನ್ನೆಲೆಯಲ್ಲಿ ಅಶ್ವತ್ಥಾಮನ ಚಿತ್ರಣವನ್ನು ಬರಹದ ಮೂಲಕ ಟಿವಿ9 ಮೈಸೂರು ಪ್ರತಿನಿಧಿ ರಾಮ್ ಕಟ್ಟಿಕೊಟ್ಟಿದ್ದಾರೆ​.

ಯಾರಿದು ಅಶ್ವತ್ಥಾಮ? ಅಶ್ವತ್ಥಾಮ ಈ ಬಾರಿ ದಸರಾ ಜಂಬೂ ಸವಾರಿಗೆ ಆಯ್ಕೆಯಾಗಿರುವ ಆನೆ. ಈ ಅಶ್ವತ್ಥಾಮನಿಗೆ ಕಾಡಿಗಿಂತ ನಾಡೇ ಹೆಚ್ಚು ಇಷ್ಟ. ಇದೇ ಕಾರಣಕ್ಕೆ ಈತ ಆಗಾಗ ಕಾಡು ಬಿಟ್ಟು ನಾಡಿಗೆ ಬಂದು ದಾಂಧಲೆ ಮಾಡುತ್ತಿದ್ದ. ಅದು 2017 ಅಂದರೆ ನಾಲ್ಕು ವರ್ಷದ ಹಿಂದಿನ ಮಾತು. ಹಾಸನ ಜಿಲ್ಲೆ ಸಕಲೇಶಪುರದ ಸುತ್ತಮುತ್ತಲಿನ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿತ್ತು. ದಿಢೀರ್ ಕಾಡಿನಿಂದ ನಾಡಿಗೆ ಬರುತ್ತಿದ್ದ ಆನೆಯೊಂದು ಬೆಳೆದ ಬೆಳೆಯನ್ನು ತಿಂದು ಮತ್ತೆ ಕಾಡು ಸೇರುತ್ತಿತ್ತು. ಇದು ಆಗಾಗ ನಡೆಯುತ್ತಲೇ ಇತ್ತು. ಸಹಜವಾಗಿ ಆತಂಕಗೊಂಡ ಜನರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಆಗ ಆರಂಭವಾಯ್ತು ಆಪರೇಷನ್ ಗಜರಾಜ.

ಆದರೆ, ಆ ದೈತ್ಯ ಆನೆಯನ್ನು ಹಿಡಿಯುವುದು ಸುಲಭದ ಮಾತಾಗಿರಲಿಲ್ಲ. ಆನೆ ಭಾರೀ ಗಾತ್ರದ್ದೆಂದು ಗ್ರಾಮಸ್ಥರು ಮೊದಲೇ ಹೇಳಿದ್ದರು. ಉದ್ದನೆಯ ದಂತ, ಆಕರ್ಷಕ ಮೈ ಕಟ್ಟಿನ ಒಂಟಿ ಸಲಗ ಅಂತಲೂ ಗೊತ್ತಾಗಿತ್ತು. ಆದ್ದರಿಂದ ಅರಣ್ಯ ಇಲಾಖೆಯವರು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ದರಿರಲಿಲ್ಲ. ಯಾಕಂದ್ರೆ ಕೊಂಚ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿತ್ತು. ಹೀಗಾಗಿ ಆಪರೇಷನ್ ಗಜರಾಜನಿಗೆ ಸಾಕಾನೆಗಳನ್ನು ಬಳಸಲು ನಿರ್ಧರಿಸಿದ ಅಧಿಕಾರಿಗಳು ಅದಕ್ಕಾಗಿ ಒಂದು ಪರಿಣಿತರ ತಂಡವನ್ನು ರಚಿಸಿದರು. ಆನೆಗಳನ್ನು ಪಳಗಿಸುವ ಎಕ್ಸ್​ಪರ್ಟ್​ ಎಂದೇ ಖ್ಯಾತನಾದ ಅಭಿಮನ್ಯು ಆನೆ ನೇತೃತ್ವದಲ್ಲಿ ಅರ್ಜುನ ಸೇರಿದಂತೆ ಹಲವು ಆನೆಗಳನ್ನು ಕರೆ ತರಲಾಯ್ತು. ಸುಮಾರು ಒಂದು ವಾರದ ಕಾರ್ಯಾಚರಣೆ ನಂತರ ಪುಂಡ ಆನೆಯನ್ನು ಸೆರೆ ಹಿಡಿಯಲಾಯ್ತು.

ಸೆರೆಗೆ ಸಿಕ್ಕ ಆ ದೈತ್ಯ ಗಂಡಾನೆಯನ್ನು ನೋಡಿದ ತಕ್ಷಣ ಇದಕ್ಕೆ ತರಬೇತಿ ನೀಡಿ ಪಳಗಿಸಿದರೆ ಅತ್ಯುತ್ತಮ ಆನೆಯಾಗಲಿದೆ ಎಂದು ಅಧಿಕಾರಿಗಳಿಗೆ ಅನ್ನಿಸಿತ್ತು. ತಕ್ಷಣ ಮೇಲಧಿಕಾರಿಗಳಿಂದ ಅನುಮತಿ ಪಡೆದು ಆನೆಯನ್ನು ದೊಡ್ಡ ಹರವೆ ಆನೆ ಕ್ಯಾಂಪ್‌ಗೆ ಕರೆದುಕೊಂಡು ಹೋಗಿ ತರಬೇತಿ ಶುರುಮಾಡಿಯೇ ಬಿಟ್ಟರು.

ನಾಮಕರಣ ಮಾಡಿ, ಕಠಿಣ ತರಬೇತಿ ಶುರು ಶಿಬಿರಕ್ಕೆ ಕರೆದುಕೊಂಡು ಹೋದ ಆನೆಗೆ ಅಶ್ವತ್ಥಾಮ ಎಂದು ನಾಮಕರಣ ಮಾಡಲಾಯ್ತು. ಮೊದ ಮೊದಲು ಅಶ್ವತ್ಥಾಮನ ಬಳಿ ಹೋಗಲು ಎಲ್ಲರೂ ಹೆದರುತ್ತಿದ್ದರು. ಇದಕ್ಕೆ ಪ್ರಮುಖ ಕಾರಣ ಅಶ್ವತ್ಥಾಮನ ಪುಂಡಾಟ. ಬರೋಬ್ಬರಿ 3500 ಕೆಜಿ‌ ತೂಕವಿದ್ದ ಅಶ್ವತ್ಥಾಮ 2.85 ಮೀಟರ್ ಎತ್ತರ 3.46 ಮೀಟರ್ ಉದ್ದವಿದ್ದ. ದಂತಗಳು ಆಕರ್ಷಕವಾಗಿ ಉದ್ದವಾಗಿದ್ದವು. ಉಗ್ರ ಸ್ವರೂಪಿಯಾಗಿದ್ದ ಅಶ್ವತ್ಥಾಮ ಎಲ್ಲರಲ್ಲೂ ಆತಂಕ ಸೃಷ್ಟಿಸಿದ್ದ. ಆದರೂ ಅಧಿಕಾರಿಗಳಲ್ಲಿ ಒಂದು ವಿಶ್ವಾಸವಿತ್ತು. ಅದು ಅಶ್ವತ್ಥಾಮನನ್ನು ಪಳಗಿಸುವ ವಿಶ್ವಾಸ. ಅಧಿಕಾರಿಗಳ ಊಹೆ, ವಿಶ್ವಾಸ ಸುಳ್ಳಾಗಲಿಲ್ಲ ಅಶ್ವತ್ಥಾಮ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಬದಲಾದ. ಉಗ್ರನಾಗಿದ್ದವನು ಸೌಮ್ಯನಾದ. ಸದ್ಯ ದೊಡ್ಡ ಹರವೆ ಆನೆ ಶಿಬಿರದ ಪ್ರಮುಖ ಆಕರ್ಷಣೆ ಮತ್ತು ಹೀರೋ ಅಂದ್ರೆ ಅದು ಅಶ್ವತ್ಥಾಮ ಎನ್ನುವ ಮಟ್ಟಿಗೆ ಬದಲಾದ.

ಸಮತಟ್ಟಾದ ಬೆನ್ನು – ದಸರೆಗೆ ಆಯ್ಕೆ ಅಶ್ವತ್ಥಾಮನಿಗೆ ಇನ್ನೂ ಕೇವಲ 34 ವರ್ಷ ಜತೆಗೆ ಈತನಿಗೆ ಸಮತಟ್ಟಾದ ಬೆನ್ನು ಇದೆ. ಚಿನ್ನದ ಅಂಬಾರಿ ಕಟ್ಟಲು ಹೇಳಿಮಾಡಿಸಿದ ಮೈಕಟ್ಟು. ಹೀಗಾಗಿಯೇ ಈತನನ್ನು ಭವಿಷ್ಯದ ಅಂಬಾರಿ ಆನೆ ಎಂದೇ ಬಿಂಬಿಸಲಾಗಿದೆ. ಆದ್ದರಿಂದ ಇದೇ ಮೊದಲ ಬಾರಿಗೆ ಅಶ್ವತ್ಥಾಮ ಮೈಸೂರು ದಸರೆಗೆ ಪ್ರವೇಶ ಮಾಡಲಿದ್ದಾನೆ. ಆಗಲೇ ಈ ಬಗ್ಗೆ ಮೊದಲ ಹಂತದ ಆಯ್ಕೆಯಾಗಿದೆ. ಈತನ ಸ್ವಭಾವ ಗುಣಲಕ್ಷಣಗಳನ್ನು ಪರಿಶೀಲನೆ ಮಾಡಿ ದಸರಾ ಜಂಬೂಸವಾರಿಗೆ ಕರೆತರಲಾಗುತ್ತಿದೆ. 5 ರಿಂದ 6 ವರ್ಷ ಸತತವಾಗಿ ಅಶ್ವತ್ಥಾಮನನ್ನು ದಸರಾ ಜಂಬೂಸವಾರಿಗೆ ಕರೆದುಕೊಂಡು ಬಂದರೆ ಆತ ಮುಂದೆ ನಾಡದೇವತೆ ತಾಯಿ ಚಾಮುಂಡೇಶ್ವರಿ ಉತ್ಸವಮೂರ್ತಿಯನ್ನೊಳಗೊಂಡ ಚಿನ್ನದ ಅಂಬಾರಿ ಹೊರಲು ಸಜ್ಜಾಗುತ್ತಾನೆ ಅನ್ನೋದು ಇಲಾಖೆ ಅಧಿಕಾರಿಗಳ ವಿಶ್ವಾಸ.

ಮಾವುತ ಕಾವಾಡಿಯ ಪ್ರೀತಿಯ ಆನೆ ಸಾಮಾನ್ಯವಾಗಿ ಆನೆಯನ್ನು ಪಳಗಿಸಲು ಹತ್ತಾರು ವರ್ಷಗಳು ಹಿಡಿಯುತ್ತದೆ. ಆದರೂ ಕೆಲವೊಮ್ಮೆ ಅಷ್ಟಾಗಿ ಅತ್ಮೀಯತೆ ಬೆಳೆಯುವುದಿಲ್ಲ. ಆದರೆ ಅಶ್ವತ್ಥಾಮನ ವಿಚಾರದಲ್ಲಿ ಇದು ಭಿನ್ನವಾಗಿತ್ತು. ಸೆರೆ ಹಿಡಿದ ಆನೆಯನ್ನು ಮಾವುತ ಶಿವು ಹಾಗೂ ಕಾವಾಡಿ ಗಣೇಶನ ಸುಪರ್ದಿಗೆ ನೀಡಲಾಯ್ತು. ಕೇವಲ ನಾಲ್ಕು ವರ್ಷದಲ್ಲಿ ಇವರ ನಡುವೆ ಅವಿನಾಭಾವ ಸಂಬಂಧ ಬೆಳೆದಿದೆ. ಮೊದಲು ಉಗ್ರ ಸ್ವರೂಪಿಯಾಗಿದ್ದ ಅಶ್ವತ್ಥಾಮ ಈಗ ಶಾಂತಮೂರ್ತಿಯಾಗಿದ್ದಾನೆ. ಹೇಳಿದ ಎಲ್ಲಾ ಮಾತುಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾನೆ. ವಿಧೇಯತೆಯಿಂದ ನಡೆದುಕೊಳ್ಳುತ್ತಾ‌ನೆ. ಹೆಚ್ಚು ಹಟ ಮಾಡುವುದಿಲ್ಲ. ಬೇರೆಯವರ ತಂಟೆಗೆ ಹೋಗುವುದಿಲ್ಲ. ಒಟ್ಟಾರೆ ಅಶ್ವತ್ಥಾಮ ಎಲ್ಲರ ಮೆಚ್ಚಿನ ಆನೆಯಾಗಿ ಬದಲಾಗಿದ್ದಾನೆ. ಅಂದು ಪುಂಡಾನೆ ಎಂಬ ಪಟ್ಟ ಹೊತ್ತಿದ್ದವನು ಇಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುವ ವಿಶ್ವವಿಖ್ಯಾತ ದಸರಾಕ್ಕೆ ಗಜಗಾಂಭೀರ್ಯದಿಂದಲೇ ಹೆಜ್ಜೆ ಹಾಕಲು ಸಿದ್ಧನಾಗಿದ್ದಾನೆ.

ವಿಶೇಷ ವರದಿ: ರಾಮ್, ಟಿವಿ9 ಮೈಸೂರು

(Mysuru Dasara 2021 Here is the life story of Ashwatthama Elephant)

ಇದನ್ನೂ ಓದಿ: Mysuru Dasara 2021: ಈಬಾರಿಯೂ ಸರಳ ಮೈಸೂರು ದಸರಾ ಆಚರಣೆ: ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ 

ದಸರಾ ಜಂಬೂ ಸವಾರಿಗೆ ಆನೆಗಳ ಆಯ್ಕೆ; ವಿವಿಧ ಕ್ಯಾಂಪ್​ಗಳಿಂದ 14 ಆನೆಗಳ ಪಟ್ಟಿ ಮಾಡಿದ ಅರಣ್ಯಾಧಿಕಾರಿಗಳು

Published On - 9:39 am, Wed, 8 September 21