ಮೈಸೂರು ಅರಮನೆ ಆವರಣದಲ್ಲಿ ಗಜ ಗಲಾಟೆ: ನಿಜಕ್ಕೂ ನಡೆದಿದ್ದೇನು? ಇಲ್ಲಿದೆ ಸ್ವಾರಸ್ಯಕರ ಮಾಹಿತಿ

| Updated By: ಗಣಪತಿ ಶರ್ಮ

Updated on: Sep 21, 2024 | 3:50 PM

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಎರಡು ದಸರಾ ಆನೆಗಳ ಗಲಾಟೆಯಿಂದ ಆಗಬಹುದಾಗಿದ್ದ ಹಾನಿ ಮಾವುತರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಸಮಯಪ್ರಜ್ಞೆಯಿಂದ ತಪ್ಪಿದೆ. ಅರಮನೆ ಆವರಣದಲ್ಲಿ ನಡೆದ ಗಜ ಗಲಾಟೆಯ ಸ್ವಾರಸ್ಯಕರ ಮಾಹಿತಿ ಇಲ್ಲಿದೆ.

ಮೈಸೂರು ಅರಮನೆ ಆವರಣದಲ್ಲಿ ಗಜ ಗಲಾಟೆ: ನಿಜಕ್ಕೂ ನಡೆದಿದ್ದೇನು? ಇಲ್ಲಿದೆ ಸ್ವಾರಸ್ಯಕರ ಮಾಹಿತಿ
ಮೈಸೂರು ಅರಮನೆ ಆವರಣದಲ್ಲಿ ಗಜ ಗಲಾಟೆ
Follow us on

ಮೈಸೂರು, ಸೆಪ್ಟೆಂಬರ್ 21: ವಿಶ್ವ ವಿಖ್ಯಾತ ಮೈಸೂರು ದಸರಾಗೆಂದು ಬಂದ ಆನೆಗಳ ಮಧ್ಯೆ ಶುಕ್ರವಾರ ರಾತ್ರಿ ಅರಮನೆ ಆವರಣದಲ್ಲಿ ನಡೆದ ಗಲಾಟೆ ಜನರನ್ನು ಭೀತಿಗ್ರಸ್ಥರನ್ನಾಗಿ ಮಾಡಿತ್ತು. ಆಗಬಹುದಾಗಿದ್ದ ದೊಡ್ಡ ಅನಾಹುತವೊಂದು ಮಾವುತರ ಸಮಯಪ್ರಜ್ಞೆಯಿಂದ ಸ್ವಲ್ಪದರಲ್ಲೇ ತಪ್ಪಿತು. ಅಷ್ಟಕ್ಕೂ, ಅಲ್ಲಿ ನಡೆದಿದ್ದೇನು? ಮೈಸೂರು ಅರಮನೆಯ ಜಯಮಾರ್ತಂಡ ದ್ವಾರದ ಪಕ್ಕದಲ್ಲಿರುವ ಕೋಡಿ ಸೋಮೇಶ್ವರ ದೇಗುಲದ ದ್ವಾರದ ಬಳಿ ಶುಕ್ರವಾರ ರಾತ್ರಿ ಎಂದಿನಂತೆ ದಸರಾ ಗಜಪಡೆಗೆ ಊಟ ನೀಡಲಾಗುತಿತ್ತು. ಈ ವೇಳೆ ಕಂಜನ್ ಆನೆ ಹಾಗೂ ಧನಂಜಯ ಆನೆ ನಡುವೆ ಗಲಾಟೆ ಶುರುವಾಗಿದೆ. ಗಲಾಟೆ ತಾರಕಕ್ಕೇರಿದ್ದು, ಧನಂಜಯ ಆನೆ ಕಂಜನ್ ಆನೆಯ ಮೇಲೆ ದಾಳಿ ಮಾಡಲು ಮುಂದಾಗಿದೆ. ಧನಂಜಯ ಆನೆಯಿಂದ ತಪ್ಪಿಸಿಕೊಳ್ಳಲು ಕಂಜನ್ ಓಡಲು ಶುರು ಮಾಡಿದೆ.

ಅರಮನೆ ಆವರಣದಲ್ಲಿ ಏನಾಯ್ತು?

ಧನಂಜಯ ಆನೆಯ ಆಕ್ರೋಶದಿಂದ ಕಂಗಾಲಾದ ಕಂಜನ್ ಆನೆ ಹೆದರಿಕೆಯಲ್ಲಿ ಮಾವುತನನ್ನು ಬಿಟ್ಟು ಓಡಲು ಆರಂಭಿಸಿದೆ. ಆದರೂ ಧನಂಜಯ ಆನೆ ಬಿಟ್ಟಿಲ್ಲ. ಇದರಿಂದ ಮತ್ತಷ್ಟು‌ ಬೆದರಿ‌ದ ಕಂಜನ್ ಆನೆ ಅರಮನೆಯಿಂದ ಹೊರಗೆ ಓಡಿದೆ. ಕೋಡಿ‌ ಸೋಮೇಶ್ವರ ದೇಗುಲದ ದ್ವಾರದಿಂದ ಹೊರಗೆ ಬಂದಿದೆ. ಆದರೂ ಧನಂಜಯ ಆನೆ ಬೆನ್ನು ಬಿಟ್ಡಿಲ್ಲ.

ಬ್ಯಾರಿಕೇಡ್ ತಳ್ಳಿ ಹೊರಗೋಡಿದ ಆನೆಗಳು!

ಅರಮನೆಯ ಜಯ ಮಾರ್ತಂಡ ದ್ವಾರದ ಹೊರ ಭಾಗದಲ್ಲಿ ಎರಡು ಹಂತದಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿರುತ್ತದೆ. ಕಂಜನ್ ಆನೆ ಗಾಬರಿಯಲ್ಲಿ ಮೊದಲ ಹಂತದ ಬ್ಯಾರಿಕೇಡ್ ತಳ್ಳಿಕೊಂಡು ಹೊರಗೆ ಬಂದಿದೆ. ಆದರೂ ಧನಂಜಯ ಆನೆ ಆಕ್ರೋಶ ಕಡಿಮೆಯಾಗಿಲ್ಲ.

ಆದರೆ ಎರಡನೇ ಹಂತದ ರಸ್ತೆಯ ಬಳಿ ಇರುವ ಬ್ಯಾರಿಕೇಡ್ ಬಳಿ ಹೋಗುವಷ್ಟರಲ್ಲಿ ಧನಂಜಯ ಆನೆಯ ಮೇಲಿದ್ದ ಮಾವುತ ಧನಂಜಯ ಆನೆಯನ್ನು ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಕಂಜನ್ ಆನೆಯನ್ನು ಅಟ್ಟಿಸಿಕೊಂಡು ಹೋಗುವುದನ್ನು ತಪ್ಪಿಸಿ ಪಕ್ಕಕ್ಕೆ ಕರೆದುಕೊಂಡು‌ ಬಂದಿದ್ದಾನೆ.

ಹರಸಾಹಸಪಟ್ಟು ಆನೆಯ ನಿಯಂತ್ರಿಸಿದ ಮಾವುತ

ಯಾವಾಗ ಧನಂಜಯ ಆನೆ ಹಿಂಬಾಲಿಸುವುದನ್ನು ನಿಲ್ಲಿಸಿತೋ ಆಗ ಕಂಜನ್ ಆನೆ ಸಹ ನಿಂತುಕೊಂಡಿದೆ. ಅಲ್ಲಿಗೆ ಹೋದ ಕಂಜನ್ ಆನೆಯ ಮಾವುತ ಕಂಜನ್ ಆನೆಯನ್ನು ವಾಪಸ್ಸು ಅರಮನೆಯ ಒಳಭಾಗಕ್ಕೆ‌ ಕರೆದುಕೊಂಡು ಬಂದಿದ್ದಾನೆ.

ತಪ್ಪಿದ ಭಾರಿ ಅನಾಹುತ

ದಸರಾ ಆನೆಗಳು ಅರಮನೆಯಿಂದ ಹೊರಗೆ ಬಂದಾಗ ಕೆಲ ಜನರು ಅಲ್ಲೇ ಇದ್ದರು. ಆನೆಗಳು ಓಡಿ ಬರುವುದನ್ನು ಕಂಡು ಆತಂಕದಿಂದ ಚೆಲ್ಲಾಪಿಲ್ಲಿಯಾದರು. ಇದು ಅರಮನೆಯ ಮುಖ್ಯ ದ್ವಾರವಾದ್ದರಿಂದ ಈ ದ್ವಾರದ ಮೂಲಕ ಪ್ರವಾಸಿಗರನ್ನು ಒಳಗೆ ಬಿಡುವುದಿಲ್ಲ. ಕೆಲವರು ಮಾತ್ರ ಇಲ್ಲಿ ಪೋಟೋ ಕ್ಲಿಕ್ಕಿಸಿಕೊಳ್ಳಲು ಬರುತ್ತಾರೆ. ಹೀಗಾಗಿ ಇಲ್ಲಿ ಹೆಚ್ಚು ಜನರು ಇಲ್ಲದ ಕಾರಣ ಅನಾಹುತ ತಪ್ಪಿದೆ. ಇದರ ಜೊತೆಗೆ ಧನಂಜಯ ಅನೆಯ ಮಾವುತನ ಧೈರ್ಯ ಸಮಯಪ್ರಜ್ಞೆ ಮುಖ್ಯವಾಗಿ ಅನಾಹುತ ತಪ್ಪಿಸಿದೆ. ಒಂದು ವೇಳೆ‌ ಮಾವುತ ಆನೆಯಿಂದ ಕೆಳಗೆ ಇಳಿದಿದ್ದರೆ ಆನೆ ಸಂಪೂರ್ಣ ನಿಯಂತ್ರಣ ಕಳೆದುಕೊಂಡು ಕಂಜನ್ ಆನೆಯನ್ನು ಬೆನ್ನಟ್ಟುವುದನ್ನು ನಿಲ್ಲಿಸುತ್ತಿರಲಿಲ್ಲ. ಇದರಿಂದ ಎರಡು ಆನೆಗಳು ಜನರು ಇರುವ ಕಡೆ ನುಗ್ಗುವ ಜನರ‌ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚಾಗಿರುತಿತ್ತು. ಆದರೆ ಮಾವುತ ಧೈರ್ಯದಿಂದ ಆನೆಯ‌ ಮೇಲೆ ಕುಳಿತು ಧನಂಜಯ ಆನೆಯನ್ನು ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿ ಭಾರಿ ಅನಾಹುತವನ್ನು ತಪ್ಪಿಸಿದ್ದಾನೆ.

ಇದನ್ನೂ ಓದಿ: ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು, ವಿಡಿಯೋ ವೈರಲ್​

ಇದಾದ ನಂತರ ಕಂಜನ್ ಹಾಗೂ ಧನಂಜಯ ಎರಡು ಆನೆಗಳನ್ನು ಅರಮನೆಯ ಒಳಗೆ ಕರೆದುಕೊಂಡು ಹೋಗಲಾಗಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ. ಒಟ್ಟಾರೆ. ಬೆಟ್ಡದಂತೆ ಎದುರಾದ ಸಮಸ್ಯೆ ಮಂಜಿನಂತೆ ಕರಗಿ ಹೋಗಿದ್ದು ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ