ಟಿ ನರಸೀಪುರದಲ್ಲಿ ಬೋನಿಗೆ ಬಿದ್ದ ಚಿರತೆ, ಚಿತ್ರದರ್ಗದಲ್ಲಿ ಹಂದಿ ಹಿಡಿಯಲು ಹಾಕಿದ್ದ ಬಲೆಗೆ ಸಿಲುಕಿದ ಚಿರತೆಯ ರಕ್ಷಣೆ

ನುಗ್ಗಳ್ಳಿಕೊಪ್ಪಲು ಗ್ರಾಮದಲ್ಲಿ ಹಲವು ದಿನಗಳಿಂದ ಗ್ರಾಮದಲ್ಲಿ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ನಡೆಸುವ ಮೂಲಕ ಜನರಲ್ಲಿ ಭೀತಿ ಹುಟ್ಟುಕೊಂಡಿತ್ತು. ಸದ್ಯ ಈ ಚಿರತೆ ಸೆರೆಯಾಗಿದೆ. ಇನ್ನೊಂದೆಡೆ ಚಿತ್ರದುರ್ಗದಲ್ಲಿ ಹಂದಿ ಹಿಡಿಯಲು ಹಾಕಿದ್ದ ಬಲೆಗೆ ಸಿಲುಕಿದ ಚಿರತೆಯೊಂದನ್ನು ರಕ್ಷಿಸಲಾಗಿದೆ.

ಟಿ ನರಸೀಪುರದಲ್ಲಿ ಬೋನಿಗೆ ಬಿದ್ದ ಚಿರತೆ, ಚಿತ್ರದರ್ಗದಲ್ಲಿ ಹಂದಿ ಹಿಡಿಯಲು ಹಾಕಿದ್ದ ಬಲೆಗೆ ಸಿಲುಕಿದ ಚಿರತೆಯ ರಕ್ಷಣೆ
ಟಿ ನರಸೀಪುರದಲ್ಲಿ ಸೆರೆಯಾದ ಚಿರತೆ ಮತ್ತು ಚಿತ್ರದುರ್ಗದಲ್ಲಿ ಬಲೆಗೆ ಬಿದ್ದ ಚಿರತೆ
Rakesh Nayak Manchi

Updated on: Mar 27, 2023 | 8:47 AM

ಮೈಸೂರು: ಜಿಲ್ಲೆಯ ಟಿ ನರಸೀಪುರ (T Narasipur) ತಾಲ್ಲೂಕಿನ ನುಗ್ಗಳ್ಳಿಕೊಪ್ಪಲು ಗ್ರಾಮದಲ್ಲಿ ಹಲವು ದಿನಗಳಿಂದ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿದ್ದ ಚಿರತೆಯೊಂದು ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ (Leopard Capture). ಟಿ ನರಸೀಪುರ ತಾಲೂಕಿನಲ್ಲಿ ಚಿರತೆಗಳ ಹಾವಳಿ (Leopard menace) ಹೆಚ್ಚಿದ್ದು, ಅಲ್ಲೊಂದು ಇಲ್ಲೊಂದು ಚಿರತೆ ದಾಳಿ (Leopard Attack) ಪ್ರಕರಣಗಳು ನಡೆಯುತ್ತಲೇ ಇವೆ. ಪ್ರತಿ ಬಾರಿಯೂ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸುತ್ತಲೇ ಇದ್ದಾರೆ. ಅದರಂತೆ ಅರಣ್ಯ ಅಧಿಕಾರಿಗಳು ಚಿರತೆ ಪ್ರತ್ಯಕ್ಷಗೊಂಡ ಗ್ರಾಮದಲ್ಲಿ ಬೋನ್ ಇರಿಸಿ ಚಿರತೆ ಸೆರೆ ಹಿಡಿಯುವ ಕಾರ್ಯ ಮಾಡುತ್ತಿದ್ದಾರೆ. ಅದರಂತೆ ತಡರಾತ್ರಿ ಬೋನಿನೊಳಗೆ ಚಿರತೆಯೊಂದು ಸೆರೆಯಾಗಿದೆ.

ನುಗ್ಗಳ್ಳಿಕೊಪ್ಪಲು ಗ್ರಾಮದಲ್ಲಿ ಹಲವು ದಿನಗಳಿಂದ ಗ್ರಾಮದಲ್ಲಿ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ನಡೆಸುವ ಮೂಲಕ ಜನರಲ್ಲಿ ಭೀತಿ ಹುಟ್ಟುಕೊಂಡಿತ್ತು. ಎಲ್ಲಿ ತಮ್ಮ ಮೇಲೆಯೂ ದಾಳಿ ನಡೆಸುತ್ತದೆಯೋ ಎಂಬ ಭಯ ಜನರನ್ನು ಕಾಡುತ್ತಿತ್ತು. ಹೀಗಾಗಿ ಚಿರತೆ ಉಪಟಳದಿಂದ ಮುಕ್ತಿ ನೀಡುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರ ನೀಡಿದ್ದರು. ಅದರಂತೆ ಅರಣ್ಯಾಧಿಕಾರಿಗಳು ಗ್ರಾಮದಲ್ಲಿ ಬೋನ್ ಇರಿಸಿದ್ದರು. ಸದ್ಯ ಈ ಬೋನಿನೊಳಗೆ ಚಿರತೆ ಸೆರೆಯಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಚಿರತೆ ಸ್ಥಳಾಂತರಿಸುವ ಕಾರ್ಯ ನಡೆಸಿದ್ದಾರೆ.

ಇದನ್ನೂ ಓದಿ: ಫಾರಂಗೆ ನುಗ್ಗಿ 200ಕ್ಕೂ ಹೆಚ್ಚು ಕೋಳಿಗಳನ್ನು ಬಲಿ ಪಡೆದ ಚಿರತೆ: ಕಣ್ಣೀರು ಹಾಕಿದ ರೈತ

ಟಿ.ನರಸೀಪುರ ತಾಲೂಕಿನಲ್ಲಿ ಇಟ್ಟ ಬೋನುಗಳಿಗೂ ಬೀಳದೆ, ಯಾರ ಕಣ್ಣಿಗೂ ಬೀಳದೆ ಅರಣ್ಯ ಇಲಾಖೆ ಸಿಬ್ಬಂದಿಗೆ ಸವಾಲಾಗಿ ನಿಂತಿದ್ದ ಚಿರತೆ ಕೊನೆಗೂ ಸೆರೆಯಾಗುವ ಮೂಲಕ ಜನರು ನಿಟ್ಟುಸಿರುವ ಬಿಟ್ಟಿದ್ದಾರೆ. ಸಾಕುಪ್ರಾಣಿಗಳ ಮೇಲೆ ಹಲವು ಬಾರಿ ದಾಳಿ ನಡೆಸಿದ್ದ ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದ ನಡುವೆಯೇ ದಾಳಿ ಪ್ರಕರಣಗಳು ನಡೆದಿದ್ದವು. ಯಾಚೇನಹಳ್ಳಿ ಗ್ರಾಮದಲ್ಲಿ ಮೇಯುತ್ತಿದ್ದ ಮೇಕೆಯ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿತ್ತು. ರೈತ ಮಹಿಳೆ ಸೌಭಾಗ್ಯ ಅವರು ಮೇಕೆಗಳನ್ನ ಮೇಯಿಸುವಾಗ ಈ ಘಟನೆ ನಡೆದಿತ್ತು.

ಟಿ.ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿಗೆ 4 ತಿಂಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. 2022ರ ಅ.31ರಂದು ಚಿರತೆ ದಾಳಿಗೆ ಎಂ.ಎಲ್. ಹುಂಡಿ ಗ್ರಾಮದ ಮಂಜುನಾಥ್ ಚೆನ್ನಮಲ್ಲಿಕಾರ್ಜುನ ಬೆಟ್ಟದಲ್ಲಿ ​ಮೃತಪಟ್ಟಿದ್ದಾರೆ. 2022ರ ಡಿ.1ರಂದು ಚಿರತೆ ದಾಳಿಯಿಂದ ಕೆಬ್ಬೆ ಹುಂಡಿ ಗ್ರಾಮದ ಮೇಘನಾ (23), 3 ದಿನದ ಹಿಂದೆ ಜ.20ರಂದು ಕನ್ನಾನಾಯಕನಹಳ್ಳಿಯಲ್ಲಿ ಚಿರತೆ ದಾಳಿಯಿಂದ ವೃದ್ಧೆ ಸಿದ್ದಮ್ಮ (60) ಸಾವನ್ನಪ್ಪಿದ್ದಾರೆ. 2023ರ ಜನವರಿ 22ರಂದು ಚಿರತೆ ದಾಳಿಗೆ 11 ವರ್ಷದ ಬಾಲಕ ಜಯಂತ್​ ಸಾವನ್ನಪ್ಪಿದ್ದಾರೆ.

ಹಂದಿ‌ ಹಿಡಿಯಲು ಹಾಕಿದ್ದ ಬಲೆಗೆ ಸಿಲುಕಿದ ಚಿರತೆ

ಚಿತ್ರದುರ್ಗ: ಹಂದಿ‌ ಹಿಡಿಯಲು ಹಾಕಿದ್ದ ಬಲೆಗೆ ಚಿರತೆಯೊಂದು ಸೆರೆಯಾದ ಘಟನೆ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಬಳಿ ನಡೆದಿದೆ. ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ವಲಯ ಅರಣ್ಯಾಧಿಕಾರಿ ವಸಂತ ಕುಮಾರ್ ನೇತೃತ್ವದಲ್ಲಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಿದ್ದಾರೆ. ಬಲೆಗೆ ಸಿಲುಕಿದ್ದ 6ವರ್ಷದ ಹೆಣ್ಣು‌ ಚಿರತೆಗೆ ಅರವಳಿಕೆ ನೀಡಿ
ರಕ್ಷಿಸಿ ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಪ್ರಾಣಿ ಸಂಗ್ರಹಾಲಯಕ್ಕೆ ರವಾನಿಸಲಾಗಿದೆ. ಅಲ್ಲದೆ, ಅಕ್ರಮ ಬಲೆ ಹಾಕಿದ್ದ ಜಮೀನು ಮಾಲೀಕ ಫಯಾಸ್ ಮತ್ತು ಶಿವಣ್ಣ ವಿರುದ್ಧ ದೂರು ದಾಖಲಾಗಿದೆ.

ತೆಂಗಿನ ಮರದಿಂದ ಬಿದ್ದು ಯುವ ರೈತ ಸಾವು

ಮೈಸೂರು: ತೆಂಗಿನ ಮರದಿಂದ ಬಿದ್ದು ಯುವ ರೈತರೊಬ್ಬರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಹುಣಸೂರು ತಾಲ್ಲೂಕಿನ ಹೊನ್ನಿಕುಪ್ಪೆ ಗ್ರಾಮದಲ್ಲಿ ನಡೆದಿದೆ. ನವೀನ್‌ಕುಮಾರ್ (28) ಮೃತಪಟ್ಟ ರೈತ. ತೆಂಗಿನ ಮರದಿಂದ ಕಾಯಿ ಕೀಳುವ ವೇಳೆ ತೆಂಗಿನ ಗರಿ ಸಹಿತ ನವೀನ್ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಅಲ್ಲೇ ಇದ್ದ ಕೆಲವರು ತಕ್ಷಣ ನವೀನ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ನವೀನ್ ಕುಮಾರ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:47 am, Mon, 27 March 23

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us