
ಮೈಸೂರು, ಏಪ್ರಿಲ್ 24: ಸಾಂಸ್ಕೃತಿಕ ನಗರಿ ಮೈಸೂರಿನ (Mysuru) ಕಿರೀಟಪ್ರಾಯವಾದ ರಂಗಾಯಣದ ಅಂಗಳದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ‘ಚಿಣ್ಣರ ಮೇಳ’ ಸಂಭ್ರಮದಿಂದ ಜರುಗುತ್ತಿದೆ. ಆದರೆ, ಈ ಬಾರಿಯ ಮೇಳ ಕೇವಲ ರಂಗಭೂಮಿ, ನಾಟಕ ಮತ್ತು ನೃತ್ಯಕ್ಕೆ ಸೀಮಿತವಾಗದೆ, ಮಕ್ಕಳಿಗೆ ಬದುಕಿನ ಪಾಠವನ್ನು ಕಲಿಸುವ ಮೂಲಕ ಹೊಸ ಆಯಾಮ ಪಡೆದುಕೊಂಡಿದೆ. ವಿಶೇಷವಾಗಿ ‘ಕೈತೋಟ’ ಕಾರ್ಯಕ್ರಮದ ಮೂಲಕ ಮಕ್ಕಳು ಮಣ್ಣಿನ ಒಡನಾಟ ಬೆಳೆಸಿಕೊಂಡಿರುವುದು ವಿಶೇಷವಾಗಿ ಮೂಡಿಬಂದಿದೆ.
ರಂಗಾಯಣದಲ್ಲಿ ಮಕ್ಕಳಿಗೆ ಕೇವಲ ಪುಸ್ತಕದ ಬದನೆಕಾಯಿಯಂತೆ ಪರಿಸರದ ಬಗ್ಗೆ ಪಾಠ ಮಾಡದೆ, ಅವರನ್ನು ನೇರವಾಗಿ ಮಣ್ಣಿನ ಜೊತೆ ಬೆರೆಸುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಗಿದೆ. ಇದು ಮಕ್ಕಳಿಗೆ ಕೇವಲ ಆಟ ಮತ್ತು ಮನರಂಜನೆ ಮಾತ್ರವಲ್ಲದೆ, ಭವಿಷ್ಯದ ಭೂಮಿಯನ್ನು ರಕ್ಷಿಸುವ ಬೀಜಗಳನ್ನು ಬಿತ್ತುವ ಮಹತ್ವದ ಕಾರ್ಯವಾಗಿದೆ ಎಂದು ಜೇನುಮನೆ ತಂಡ-5ರ ವಿದ್ಯಾರ್ಥಿ ನಿಲಯ್ ನಂದನ್ ತನ್ನ ಅನುಭವವನ್ನು ಹಂಚಿಕೊಂಡಿದ್ದಾನೆ.
‘ರಂಗಾಯಣದ ಆವರಣದಲ್ಲಿ ಚಿಣ್ಣರು ಬರಿಗೈಯಲ್ಲಿ ಮಣ್ಣು ಅಗೆದು, ಗಿಡಗಳನ್ನು ನೆಟ್ಟು, ಅದಕ್ಕೆ ನೀರೆರೆಯುವ ಮೂಲಕ ಪ್ರಕೃತಿಯ ಜೊತೆ ಒಂದು ಅವಿನಾಭಾವ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ. ಬೀಜ ಬಿತ್ತನೆಯಿಂದ ಹಿಡಿದು ಗಿಡದ ಆರೈಕೆಯವರೆಗೆ ನಮಗೆ ಸಂಪೂರ್ಣ ಮಾಹಿತಿ ನೀಡಲಾಯಿತು’ ಎಂದು ನಿಲಯ್ ನಂದನ್ ವಿವರಿಸಿದ್ದಾನೆ. ‘ಹಸಿರೇ ಉಸಿರು’ ಎಂಬ ಮಾತನ್ನು ಮಕ್ಕಳು ಕೃತಿಯಲ್ಲಿ ಮಾಡಿ ತೋರಿಸಿದ್ದು ನಮಗೂ ಖುಷಿ ಕೊಟ್ಟಿದೆ ಎಂದು ಅವನು ಅಭಿಪ್ರಾಯಪಟ್ಟಿದ್ದಾನೆ. ಪ್ರತಿ ಗಿಡವೂ ನಮ್ಮ ಉಸಿರಿನ ಸಹಚರ ಎಂಬ ಅರಿವು ಈ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಮೂಡಿದೆ.
ಮಕ್ಕಳಲ್ಲಿ ಕಂಡ ಸಂತೋಷ, ಕೈಗಳಲ್ಲಿ ಕಂಡ ಶ್ರಮ ಮತ್ತು ಮನದಲ್ಲಿ ಮೂಡಿದ ಜಾಗೃತಿ ‘All These Together Painted A Beautiful Picture Of Hope’. ಇಂತಹ ಅನುಭವಗಳು ಮಕ್ಕಳನ್ನು ಕೇವಲ ವಿದ್ಯಾರ್ಥಿಗಳನ್ನಾಗಿಸದೆ, ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇಂತಹ ಒಂದು ದೂರದೃಷ್ಟಿಯ ಕಾರ್ಯಕ್ರಮವನ್ನು ರೂಪಿಸಿದ ರಂಗಾಯಣದ ನಿರ್ದೇಶಕರಾದ ಸತೀಶ್ ಅವರ ನಾಯಕತ್ವ ಸ್ತುತ್ಯಾರ್ಹ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಜೇನುಮನೆ ತಂಡದ ಮೆಂಟರ್ ಕೌಶಿಕ್ ಅವರ ಕಾರ್ಯವೈಖರಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಕೈತೋಟ ಕಾರ್ಯಕ್ರಮವು ಕೇವಲ ಒಂದು ಚಟುವಟಿಕೆಯಾಗದೆ ಪರಿಸರ ಪ್ರೇಮದ ಸುಂದರ ಆರಂಭವಾಗಿತ್ತು. ರಂಗಾಯಣದ ಈ ಪರಿಸರ ಪೂರಕ ಹೆಜ್ಜೆ ಇಡೀ ಸಮಾಜಕ್ಕೆ ಮಾದರಿಯಾಗಲಿ ಎಂಬ ಆಶಯ ವ್ಯಕ್ತವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ