ಜಾತಿಗಣತಿ ವರದಿ ಜಾರಿ ಮಾಡೇ ಮಾಡುತ್ತೇನೆ: ಸಿದ್ದರಾಮಯ್ಯ ಘೋಷಣೆ

| Updated By: ರಮೇಶ್ ಬಿ. ಜವಳಗೇರಾ

Updated on: Sep 29, 2024 | 3:05 PM

ಕರ್ನಾಟಕ ಜಾತಿ ಗಣತಿ ವರದಿ ಎಂದೇ ಜನಪ್ರಿಯವಾಗಿರುವ ಸಾಮಾಜಿಕ ಆರ್ಥಿಕ ಮತ್ತು ಶಿಕ್ಷಣ ಸಮೀಕ್ಷೆಯ ಬಹು ನಿರೀಕ್ಷಿತ ವರದಿಯನ್ನು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿದ್ದು, ಇದೀಗ ಅದನ್ನು ಜಾರಿಗೆ ತರುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಜಾತಿಗಣತಿ ವರದಿ ಜಾರಿ ಮಾಡೇ ಮಾಡುತ್ತೇನೆ: ಸಿದ್ದರಾಮಯ್ಯ ಘೋಷಣೆ
Follow us on

ಮೈಸೂರು, (ಸೆಪ್ಟೆಂಬರ್ 29): ಮುಡಾ ಹಗರಣದ ತನಿಖೆ ಸಂಕಷ್ಟ ಮಧ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾತಿ ಗಣತಿ ವರದಿ ಜಾರಿ ಮಾಡೇ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಮೈಸೂರಿನಲ್ಲಿಂದು ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಜಾತಿಗಣತಿ ವರದಿ ನನ್ನ ಕೈ ಸೇರಿದೆ. ನಾನು ಇನ್ನೂ ಅದನ್ನು ಪರಿಪೂರ್ಣವಾಗಿ ನೋಡಿಲ್ಲ. ಮುಂದಿನ ದಿನಗಳಲ್ಲಿ ಅದನ್ನು ಕ್ಯಾಬಿನೆಟ್ ಗೆ ಇಟ್ಟು ಜಾರಿಗೆ ತರುತ್ತೇನೆ. ಜಾತಿ ಗಣತಿ ಜಾರಿ ನಮ್ಮ ಪಕ್ಷದ ಅಜೆಂಡಾ. ಹೀಗಾಗಿ ಜಾರಿ ಮಾಡೇ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ಜಾತಿ ಗಣತಿ ವರದಿ ಎಂದೇ ಜನಪ್ರಿಯವಾಗಿರುವ ಸಾಮಾಜಿಕ ಆರ್ಥಿಕ ಮತ್ತು ಶಿಕ್ಷಣ ಸಮೀಕ್ಷೆಯ ಬಹು ನಿರೀಕ್ಷಿತ ವರದಿಯನ್ನು ಈಗಾಗಲೇ ಕೆಎಸ್‌ಸಿಬಿಸಿ ಅಧ್ಯಕ್ಷರಾಗಿದ್ದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ.  ವರದಿಯು ಈ ಎರಡೂ ದೊಡ್ಡ ಸಮುದಾಯಗಳ ನಡುವೆ ಕೋಲಾಹಲವನ್ನು ಸೃಷ್ಟಿಸಿದೆ. ಸಮೀಕ್ಷೆಯು ಲಿಂಗಾಯತ ಜನಸಂಖ್ಯೆಯನ್ನು ಕೇವಲ 65 ಲಕ್ಷ (10.9%) ಮತ್ತು ಒಕ್ಕಲಿಗರನ್ನು 60 ಲಕ್ಷ (10%) ಇದ್ದಾರೆಂದು ವರದಿಯಲ್ಲಿ ಹೇಳಿದೆ ಎನ್ನಲಾಗಿದೆ.

ಈ ಬಗ್ಗೆ ಪರ-ವಿರೋಧಗಳು ವ್ಯಕ್ತವಾಗಿವೆ. ಕೆಲವರು ಜಾರಿ ಮಾಡಲೇಬೇಕೆಂದು ಪಟ್ಟು ಹಿಡಿದಿದ್ದರೆ, ಇನ್ನೂ ಕೆಲವರು ಇದನ್ನು ತಿರಸ್ಕೃತ ಮಾಡಬೇಕೆಂದು ಆಗ್ರಹಿಸಿದ್ದಾರೆ. ಇವೆಲ್ಲದರ ನಡುವೆ ಸಿಎಂ ಸಿದ್ದರಾಮಯ್ಯನವರು ವರದಿಯನ್ನು ಜಾರಿ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.

ಮೂಲಗಳ ಪ್ರಕಾರ, ಈ ಜಾತಿ ಗಣತಿ ವರದಿಯು 48 ಸಂಪುಟಗಳನ್ನು ಹೊಂದಿದ್ದು, ಮುಖ್ಯ ಶಿಫಾರಸು ಕಿರುಪುಸ್ತಕವು 200 ಪುಟಗಳನ್ನು ಹೊಂದಿದೆ. ಪ್ರತಿಯೊಂದು ಸಂಪಟವು ವಿವಿಧ ಜಾತಿಗಳ ಗುಂಪಿನ ಡೇಟಾವನ್ನು ಹೊಂದಿದೆ. ವರದಿಯು ವಿಧಾನಸಭಾ ಕ್ಷೇತ್ರಗಳ ಆಧಾರದ ಮೇಲೆ ಜಾತಿ ಅಂಕಿ ಅಂಶಗಳನ್ನು ಒಳಗೊಂಡಿದೆ. ಜೊತೆಗೆ ಹಿಂದಿನ ವರದಿಗಳಲ್ಲಿ ಸೇರಿಸದ ಸಣ್ಣ ಜನಸಂಖ್ಯೆಯನ್ನು ಹೊಂದಿರುವ ಜಾತಿಗಳ ವಿವರಗಳನ್ನು ಒಳಗೊಂಡಿದೆ. ಒಟ್ಟು 1,351 ವಿವಿಧ ಜಾತಿಗಳ ಮೇಲೆ ಸಮೀಕ್ಷೆ ನಡೆಸಲಾಗಿದೆ.