
ಬೆಂಗಳೂರು, ಜೂನ್ 19: ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗಾಗಿ ಮರಗಳ ಹನನಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಬೆಂಗಳೂರಿನಲ್ಲಿ (Bengaluru) ಬರೋಬ್ಬರಿ 3,627 ಮರಗಳ ಮಾರಣಹೋಮಕ್ಕೆ ಸಿದ್ಧತೆ ನಡೆದಿದೆ. ಈ ಸಂಬಂಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅರಣ್ಯ ವಿಭಾಗಕ್ಕೆ BMRCL ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದು, ಆ ಬೆನ್ನಲ್ಲೇ ಮರಗಳನ್ನು ಕಡಿಯುವ ಸಂಬಂಧ ಸಾರ್ವಜನಿಕ ಪ್ರಕಟಣೆ ಕೂಡ ಹೊರಡಿಸಿ ಆಕ್ಷೇಪಣೆ ಸಲ್ಲಿಕೆಗೆ ಜಿಬಿಎ ಅವಕಾಶ ನೀಡಿದೆ.
ಮೆಟ್ರೋ ನಿಲ್ದಾಣ, ಮೆಟ್ರೋ ವಯಾಡಕ್ಟ್ ಜೊತೆಗೆ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ ಯೋಜನೆ ನಡೆದಿದ್ದು, 2,426 ವಿವಿಧ ಜಾತಿಯ ಮರಗಳು ಹಾಗೂ 1,201 ಅಡಕೆ ಮರಗಳಿಗೆ ಈಗ ಕಂಟಕ ಎದುರಾಗಿದೆ. ಸಾರ್ವಜನಿಕರ ಆಕ್ಷೇಪಣೆ ಗಮನಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಬಿಎ ಅರಣ್ಯ ವಿಭಾಗ ಮಾಹಿತಿ ನೀಡಿದೆ. ಹೊಸಹಳ್ಳಿ, ಕೆಹೆಚ್ಬಿ ಕಾಲೋನಿ, ಕಾಮಾಕ್ಷಿಪಾಳ್ಯ, ಸುಮನಹಳ್ಳಿ ಕ್ರಾಸ್, ಸುಂಕದಕಟ್ಟೆ, ಹೇರೋಹಳ್ಳಿ, ಬ್ಯಾಡರಹಳ್ಳಿ, ಕಾಮತ್ ಲೇಔಟ್ ಕಡಬಗೆರೆ ಪ್ರದೇಶಗಳು ಯೋಜನೆಯಿಂದ ಭಾದಿತವಾಗಲಿವೆ.
ಇದನ್ನೂ ಓದಿ: ನಮ್ಮ ಮೆಟ್ರೋ ರೆಡ್ ಲೈನ್ ವೆಚ್ಚ ಕಡಿತಕ್ಕೆ ಒಂದು ಸ್ಟೇಷನನ್ನೇ ಕೈಬಿಡಲು ನಿರ್ಧರಿಸಿದ ಬಿಎಂಆರ್ಸಿಎಲ್!
ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ ಹೊರವರ್ತುಲ ರಸ್ತೆಯ (ORR) ಮೂಲಕ 32.15 ಕಿ.ಮೀ ಮತ್ತು ಹೊಸಹಳ್ಳಿಯಿಂದ ಕಡಬಗೆರೆವರೆಗೆ ಮಾಗಡಿ ರಸ್ತೆಯ ಮೂಲಕ 12.50 ಕಿ.ಮೀ ಸೇರಿ ಒಟ್ಟು 44.65 ಕಿ.ಮೀ ಮೆಟ್ರೋ ಮಾರ್ಗವನ್ನು ಈ ಯೋಜನೆ ಒಳಗೊಂಡಿದೆ. ಡಬಲ್ ಡೆಕ್ಕರ್ ಯೋಜನೆ ಸೇರ್ಪಡೆಯಿಂದ ಅನುಮೋದನೆಗಾಗಿ ಬಾಕಿ ಉಳಿದಿದ್ದ ನಮ್ಮ ಮೆಟ್ರೋ 3ನೇ ಹಂತಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ಶೀಘ್ರವೇ ದೊರೆಯುವ ಸಾಧ್ಯತೆ ಇದೆ ಎಂಬ ಬಗ್ಗೆ ಇತ್ತೀಚೆಗಷ್ಟೇ ವರದಿಯಾಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.