ನೇಪಾಳ ಪ್ರವಾಹ, ದುರಂತ: ಕರ್ನಾಟಕದವರ ರಕ್ಷಣೆಗೆ ವಿಶೇಷ ನೋಡಲ್ ಅಧಿಕಾರಿ ನೇಮಕ, ಸಿಎಂ ವಿಶೇಷ ಕರ್ತವ್ಯಾಧಿಕಾರಿ ಅಭಿಜಿತ್ ಗೌಡಗೆ ಹೊಣೆ

ನೇಪಾಳ ಪ್ರವಾಹ ಮತ್ತು ಅದರಿಂದಾಗಿ ಸಂಭವಿಸಿದ ದುರಂತದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕದವರ ಪತ್ತೆ ಹಾಗೂ ರಕ್ಷಣೆಗೆ ಸರ್ಕಾರ ವಿಶೇಷ ನೋಡಲ್ ಅಧಿಕಾರಿ ಅಭಿಜಿತ್ ಗೌಡ ಅವರನ್ನು ನೇಮಿಸಿದೆ. 33 ಕನ್ನಡಿಗರ ಪೈಕಿ 14 ಮಂದಿ ಇನ್ನೂ ಪತ್ತೆಯಾಗಬೇಕಿದ್ದು, ಸುರಕ್ಷಿತ ವಾಪಸಾತಿಗೆ ಕ್ರಮ ಮುಂದುವರಿದಿದೆ.

ನೇಪಾಳ ಪ್ರವಾಹ, ದುರಂತ: ಕರ್ನಾಟಕದವರ ರಕ್ಷಣೆಗೆ ವಿಶೇಷ ನೋಡಲ್ ಅಧಿಕಾರಿ ನೇಮಕ, ಸಿಎಂ ವಿಶೇಷ ಕರ್ತವ್ಯಾಧಿಕಾರಿ ಅಭಿಜಿತ್ ಗೌಡಗೆ ಹೊಣೆ
ಕರ್ನಾಟಕದವರ ರಕ್ಷಣೆಗೆ ವಿಶೇಷ ನೋಡಲ್ ಅಧಿಕಾರಿ ನೇಮಕ
Image Credit source: PTI
Edited By:

Updated on: Aug 31, 2026 | 10:34 AM

ಮುಖ್ಯಾಂಶಗಳು

  • ನೇಪಾಳ ಪ್ರವಾಹ: ಕರ್ನಾಟಕದವರ ರಕ್ಷಣೆಗೆ ನೋಡಲ್ ಅಧಿಕಾರಿ ನೇಮಕ
  • 14 ಕನ್ನಡಿಗರ ಪತ್ತೆ ಕಾರ್ಯ ಇನ್ನೂ ಬಾಕಿ
  • ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಕರೆತರಲು ಸಿದ್ಧತೆ

ಬೆಂಗಳೂರು, ಆಗಸ್ಟ್ 31: ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹ (Nepal Flood) ಮತ್ತು ದುರಂತದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಹಾಗೂ ನಾಪತ್ತೆಯಾಗಿರುವ ಕರ್ನಾಟಕದವರ (Karnataka) ಪತ್ತೆ ಮತ್ತು ರಕ್ಷಣಾ ಕಾರ್ಯಕ್ಕೆ ರಾಜ್ಯ ಸರ್ಕಾರ ವಿಶೇಷ ನೋಡಲ್ ಅಧಿಕಾರಿಯನ್ನು ನೇಮಿಸಿದೆ. ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ (OSD) ಅಭಿಜಿತ್ ಗೌಡ ಅವರಿಗೆ ಈ ಜವಾಬ್ದಾರಿ ವಹಿಸಲಾಗಿದೆ. ಕರ್ನಾಟಕದಿಂದ ನೇಪಾಳಕ್ಕೆ ತೆರಳಿ ಸದ್ಯ ಸಂಕಷ್ಟದಲ್ಲಿರುವವರನ್ನು ಪತ್ತೆಹಚ್ಚುವುದು, ರಕ್ಷಣಾ ಕಾರ್ಯಾಚರಣೆಯ ಸಮನ್ವಯ ಮಾಡುವುದು ಹಾಗೂ ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ ಕರೆತರುವ ಹೊಣೆಯನ್ನು ಅವರಿಗೆ ವಹಿಸಲಾಗಿದೆ.

ನೋಡಲ್ ಅಧಿಕಾರಿಯಾಗಿ ಅಭಿಜಿತ್ ಗೌಡ ಅವರು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹಾಗೂ ಪ್ರವಾಸಿ ಕನ್ನಡಿಗರ ನೆರವಿಗಾಗಿ ಕಾರ್ಯನಿರ್ವಹಿಸುತ್ತಿರುವ ಸಂಬಂಧಿತ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರಕ್ಷಣಾ ಕಾರ್ಯಾಚರಣೆಯ ಮಾಹಿತಿ ಸಂಗ್ರಹಿಸಿ ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲಿದ್ದಾರೆ.

ನೇಪಾಳದಲ್ಲಿದ್ದರು 33 ಕನ್ನಡಿಗರು

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾನುವಾರ ಕರ್ನಾಟಕ ಭವನದ ರೆಸಿಡೆಂಟ್ ಕಮಿಷನರ್ ಸಮೀರ್ ಶುಕ್ಲಾ ಅವರಿಂದ ನೇಪಾಳದಲ್ಲಿರುವ ಕನ್ನಡಿಗರ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಒಟ್ಟು 33 ಮಂದಿ ಕರ್ನಾಟಕದವರು ನೇಪಾಳದಲ್ಲಿದ್ದರೆ, ಈ ಪೈಕಿ ಇಬ್ಬರು ಈಗಾಗಲೇ ವಾಪಸ್ ಆಗಿದ್ದಾರೆ. ಉಳಿದವರಲ್ಲಿ ಕೆಲವರನ್ನು ಪತ್ತೆಹಚ್ಚಲಾಗಿದ್ದು, 14 ಮಂದಿ ಇನ್ನೂ ಪತ್ತೆಯಾಗಬೇಕಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಸಂಕಷ್ಟದಲ್ಲಿರುವವರ ಪೈಕಿ ಇಬ್ಬರು ಮೈಸೂರು ಮೂಲದವರಾಗಿದ್ದು, ಉಳಿದವರು ಬೆಂಗಳೂರಿಗೆ ಸೇರಿದವರು ಎಂದು ಮಾಹಿತಿ ನೀಡಲಾಗಿದೆ.

ದೆಹಲಿಯಿಂದ ಬೆಂಗಳೂರಿಗೆ ಕರೆತರಲು ವ್ಯವಸ್ಥೆ

ನೇಪಾಳದಿಂದ ರಕ್ಷಣೆ ಮಾಡಲಾಗುವ ಕರ್ನಾಟಕದ ನಿವಾಸಿಗಳು ದೆಹಲಿ ತಲುಪಿದ ಬಳಿಕ ಅವರನ್ನು ಸ್ವಾಗತಿಸಿ ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಲಿದೆ. ಅಗತ್ಯವಿದ್ದರೆ ದೆಹಲಿಯಲ್ಲೇ ಒಂದು ದಿನ ಉಳಿಯಲು ವ್ಯವಸ್ಥೆ ಮಾಡುವುದರ ಜೊತೆಗೆ ಆರೋಗ್ಯ ಸೇರಿದಂತೆ ಅಗತ್ಯ ನೆರವು ನೀಡಲಾಗುವುದು ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: 10 ನಿಮಿಷದ ಟೀ ಬ್ರೇಕ್ ಉಳಿಸಿತು 28 ಯಾತ್ರಿಕರ ಪ್ರಾಣ: ನೇಪಾಳ ಜಲಪ್ರಳಯದಿಂದ ಪವಾಡಸದೃಶವಾಗಿ ಪಾರಾದ ಕನ್ನಡಿಗರು

ನೇಪಾಳದಲ್ಲಿರುವ ಕರ್ನಾಟಕದವರ ಪತ್ತೆ, ರಕ್ಷಣೆ ಹಾಗೂ ಸುರಕ್ಷಿತ ವಾಪಸಾತಿಗೆ ಕೇಂದ್ರ ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯದೊಂದಿಗೆ ರಾಜ್ಯ ಸರ್ಕಾರ ನಿರಂತರವಾಗಿ ಸಮನ್ವಯ ಸಾಧಿಸುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us