ಪೆನ್​ಡ್ರೈವ್ ಪ್ರಕರಣ: ಬೆಂಕಿ ಇಲ್ಲದೇ ಹೊಗೆಯಾಡಲ್ಲ: ವಿಪಕ್ಷ ನಾಯಕ ಅಶೋಕ್ ಸ್ಫೋಟಕ ಹೇಳಿಕೆ​

|

Updated on: May 19, 2024 | 3:13 PM

ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಹೆಚ್​ಡಿ ದೇವೇಗೌಡರ ಹುಟ್ಟುಹಬ್ಬ ಹಿನ್ನೆಲೆ ಭೇಟಿ ಮಾಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್​. ಅಶೋಕ್​, ಪೆನ್​​ಡ್ರೈವ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಕಿ ಇಲ್ಲದೇ ಹೊಗೆಯಾಡಲ್ಲ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಪೆನ್​ಡ್ರೈವ್​ ಕೇಸ್​​ ತನಿಖೆಗೆ ಸಿಬಿಐಗೆ ವಹಿಸಬೇಕು. ತನಿಖೆ ಆದರೆ ಸರ್ಕಾರದವರು ಒಳಗೆ ಹೋಗುತ್ತಾರೆ ಎಂದು ಹೇಳಿದ್ದಾರೆ.

ಪೆನ್​ಡ್ರೈವ್ ಪ್ರಕರಣ: ಬೆಂಕಿ ಇಲ್ಲದೇ ಹೊಗೆಯಾಡಲ್ಲ: ವಿಪಕ್ಷ ನಾಯಕ ಅಶೋಕ್ ಸ್ಫೋಟಕ ಹೇಳಿಕೆ​
ಪೆನ್​ಡ್ರೈವ್ ಪ್ರಕರಣ: ಬೆಂಕಿ ಇಲ್ಲದೇ ಹೊಗೆಯಾಡಲ್ಲ: ವಿಪಕ್ಷ ನಾಯಕ ಅಶೋಕ್ ಸ್ಫೋಟಕ ಹೇಳಿಕೆ​
Follow us on

ಬೆಂಗಳೂರು, ಮೇ 19: ಪೆನ್​​ಡ್ರೈವ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಕಿ ಇಲ್ಲದೇ ಹೊಗೆಯಾಡಲ್ಲ ಎಂದು  ವಿಪಕ್ಷ ನಾಯಕ ಆರ್​. ಅಶೋಕ್​ (R Ashoka) ವಾಗ್ದಾಳಿ ಮಾಡಿದ್ದಾರೆ.​ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಪೆನ್​​ಡ್ರೈವ್​​  ಕೊಟ್ಟರು ಅಂತ ಹೇಳು. ಅದಕ್ಕಾಗಿ ಆಫರ್‌ ಕೊಟ್ಟಿದ್ದಾರೆ ಎಂಬ ದೇವರಾಜೇಗೌಡ ಹೇಳಿಕೆ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರನ್ನ ಭೇಟಿ ಮಾಡಿ ಬಳಿಕ ಮಾತನಾಡಿದ ಅವರು, ದೇವರಾಜೇಗೌಡ ಹೇಳಿರುವುದು ನೂರಕ್ಕೆ ನೂರು ಸತ್ಯ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಗೆ ಕೆಟ್ಟ ಹೆಸರು ತರಲು ಮಾಡಿರುವ ಪ್ಲ್ಯಾನ್. ಒಕ್ಕಲಿಗರನ್ನ ಮುಗಿಸಲು ಕಾಂಗ್ರೆಸ್​ ಪಕ್ಷ ಹೊರಟಿದೆ. ಪೆನ್​ಡ್ರೈವ್​ ಕೇಸ್​​ ತನಿಖೆಗೆ ಸಿಬಿಐಗೆ ವಹಿಸಬೇಕು. ಆದರೆ ಸಿಬಿಐಗೆ ವಹಿಸುವುದಕ್ಕೆ ಅವರಿಗೆ ಭಯ.​ ಸಿಬಿಐ ತನಿಖೆ ಆದರೆ ಸರ್ಕಾರದವರು ಒಳಗೆ ಹೋಗುತ್ತಾರೆ. SIT ತನಿಖೆ ಅಂದರೆ ಸರ್ಕಾರದ ಪ್ರಾಯೋಜಿತ ತನಿಖೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ದೇವರಾಜೇಗೌಡ ಆರೋಪದ ಬೆನ್ನಲ್ಲೇ ಪೆನ್​ಡ್ರೈವ್​ ಗ್ಯಾಂಗ್​ ಎಂದು ಸಚಿವರ ಹೆಸರು ಬಿಚ್ಚಿಟ್ಟ ಜೆಡಿಎಸ್

ತಪ್ಪು ಮಾಡಿದವರ ಮೇಲೆ ಕ್ರಮಕೈಗೊಳ್ಳಿ ಅಭ್ಯಂತರವಿಲ್ಲ. ಆದ್ರೆ, ಪೆನ್​ಡ್ರೈವ್​ ಹಂಚಿದವರ ಬಗ್ಗೆಯೂ ತನಿಖೆ ಆಗಲಿ. ನ್ಯಾಯಾಂಗ ತನಿಖೆ ಆದ್ರೆ ಮಾತ್ರ ಸತ್ಯ ಹೊರಬರುತ್ತದೆ ಇಲ್ಲದಿದ್ರೆ ಸತ್ಯ ಮುಚ್ಚಿಹಾಕುವ ಕೆಲಸ ಆಗುತ್ತೆ ಎಂದು ಹೇಳಿದ್ದಾರೆ.

ಕಾಂಗ್ರೆಸ್​ ಬಂದರೆ ಕೊಲೆಗಡುಕರಿಗೆ ಹಬ್ಬ: ಈ ರಾಜ್ಯ ಸರ್ಕಾರವನ್ನೇ ಗಲ್ಲಿಗೇರಿಸಬೇಕು 

ಕರ್ನಾಟಕ ಕ್ರೈಂ ರಾಜ್ಯವಾಗಿದೆ. ಗೃಹಸಚಿವ ಅಣತಿಯಂತೆ ಏನೂ ನಡೆಯುತ್ತಿಲ್ಲ. ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಮಾಸುವ ಮುನ್ನ ಮತ್ತೊಂದು ಹತ್ಯೆ ಮಾಡಲಾಗಿದೆ. ಕಾಂಗ್ರೆಸ್​ ಬಂದರೆ ಕೊಲೆಗಡುಕರಿಗೆ ಹಬ್ಬ. ಈ ರಾಜ್ಯ ಸರ್ಕಾರವನ್ನೇ ಗಲ್ಲಿಗೇರಿಸಬೇಕು. ಭಯೋತ್ಪಾದಕರು, ಕೊಲೆಗಡುಕರಿಗೆ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.

ಸಿದ್ದರಾಮಯ್ಯ ಸರ್ಕಾರ ಬಂದ್ರೆ ಕೊಲೆಗಡುಕರ ಸುರಿಮಳೆ ಆಗುತ್ತದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ದೇವೇಗೌಡರು ಚೆನ್ನಾಗಿ, ಆರೋಗ್ಯವಾಗಿದ್ದಾರೆ

ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ದೇವೇಗೌಡರ ಹುಟ್ಟುಹಬ್ಬ ಹಿನ್ನೆಲೆ ಭೇಟಿ ಮಾಡಿದ್ದು, ಶುಭ ಕೋರಿದ್ದಾರೆ. ಹೆಚ್​.ಡಿ.ದೇವೇಗೌಡರ ಆಶೀರ್ವಾದ ಪಡೆದಿದ್ದಾರೆ. ಇದೇ ವೇಳೆ ಹೆಚ್​​ಡಿ ಕುಮಾರಸ್ವಾಮಿ, ರೇವಣ್ಣರನ್ನು ಭೇಟಿ ಮಾಡಿದ್ದಾರೆ. ಬಳಿಕ ಪ್ರತಿಕ್ರಿಯಿಸಿದ್ದು, ಇವತ್ತು ದೇವೇಗೌಡರನ್ನ ಭೇಟಿ ಮಾಡಿದ್ದೇನೆ. ಚೆನ್ನಾಗಿ, ಆರೋಗ್ಯವಾಗಿದ್ದಾರೆ. ಕೆಲ ರಾಜಕೀಯ ವಿಚಾರಗಳ ಬಗ್ಗೆ ‌ಮಾತಾಡಿದ್ದೇನೆ. ಒಂದು ವರ್ಷ ಆಯ್ತು ಸರ್ಕಾರ ಬಂದು ಯಾವುದೇ ಅಭಿವೃದ್ಧಿಯಾಗಿಲ್ಲ. ಯಾವ ಹಳ್ಳಿಯಲ್ಲೂ ಕೆಲಸ ಕಾರ್ಯ ಆಗಿಲ್ಲ. ಒಂದೇ ಒಂದು ಕೆಲಸ ಆಗಿಲ್ಲ ಅಂತ ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ನಮ್ಮ ಕುಟುಂಬದ ಪರವಾಗಿ ಕುಮಾರಸ್ವಾಮಿ ವಿವರವಾಗಿ ಹೇಳಿದ್ದಾರೆ: ಹೆಚ್ ಡಿ ದೇವೇಗೌಡ

ಶಿವರಾಮೇಗೌಡ ಆರೋಪ ವಿಚಾರವಾಗಿ ಮಾತನಾಡಿದ್ದು, ಅವರು ಏನ್ ಮಾತಾಡಿದ್ದಾರೋ ಗೊತ್ತಿಲ್ಲ. ಅವರು ನಮ್ಮ ಪಕ್ಷದಿಂದ ಹೊರ ಹೋಗಿದ್ದಾರೆ. ದೇವರಾಜೇಗೌಡ ಹೇಳಿದ್ದಾರೆ, ನನಗೆ ದುಡ್ಡು ಆಫರ್ ಮಾಡಿದ್ದಾರೆ ಎಂದಿದ್ದಾರೆ. ಅದಕ್ಕೆ ಸಂಬಂಧಿಸಿದ ದಾಖಲೆ ಬಿಡುಗಡೆ ಮಾಡಿದ್ದಾರೆ. ಆದರೆ ಮೇಲೆ ಅವರು ಅಷ್ಟೇಲ್ಲಾ ಹೇಳ್ತಿದ್ದಾರೆ.

ಇನ್ನಿದ್ರೆ ಸೀರಿಸ್ ಆಗಿ ದಾಖಲೆ ಬಿಡುಗಡೆ ಆಗುತ್ತದೆ. ಸರ್ಕಾರಕ್ಕೆ ಮುಜುಗರ ಆಗುತ್ತೆ, ಲೋಕಸಭೆ ಎಲೆಕ್ಷನ್​ಗೆ ಇದೆ. ಸರ್ಕಾರ ಯಾರು ಯಾರಿಗೆ ಹಣ ಕೊಟ್ಟಿದ್ದಾರೆ ಅನ್ನೋದನ್ನ ಹೇಳುತ್ತಾರೆ. ಹೀಗಾಗಿ ಮಾಧ್ಯಮ ಈ ಎಲ್ಲಾ ವಿಚಾರ ಬರಬಾರದು ಅಂತ ದೇವರಾಜೇಗೌಡರನ್ನ ಒಳಗಡೆ ಹಾಕಿದ್ದಾರೆ ಎಂದಿದ್ದಾರೆ.

ವರದಿ: ಈರಣ್ಣ ಬಸವ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:12 pm, Sun, 19 May 24