ಲಂಚ ತೆಗೆದುಕೊಳ್ಳುವ ಇಲಾಖೆಯಿಂದಲೇ ತನಿಖೆ ಮಾಡಿಸೋದಾ? ನಿವೃತ್ತ ನ್ಯಾಯಾಧೀಶರಿಂದ ತನಿಖೆಯಾಗಲಿ- ಸಿದ್ದರಾಮಯ್ಯ ಆಗ್ರಹ

ನಮ್ಮ ಕಾಲದಲ್ಲೂ ಭ್ರಷ್ಟಾಚಾರ ಇತ್ತು, ಅದನ್ನೂ ತನಿಖೆ ಮಾಡಿಸಿ. ಯಾರು ಲಂಚ‌ ತಗೊಂಡಿದ್ದಾರೆ ಅವರಿಗೆ ಶಿಕ್ಷೆ ಆಗಲಿ. ಅದು ಬಿಟ್ಟು ಇಲಾಖೆಗಳ ಕಾರ್ಯದರ್ಶಿ ಕೈಯಲ್ಲಿ ಮಾಡಿಸ್ತೀವಿ ಅಂದ್ರೆ ಏನು ? ಇದು ಕಣ್ಣೋರೆಸುವ ತಂತ್ರ ಅಲ್ವಾ? ಪ್ರಕರಣ ಮುಚ್ಚಿಹಾಕೋ ಯತ್ನ - ಸಿದ್ದರಾಮಯ್ಯ

ಲಂಚ ತೆಗೆದುಕೊಳ್ಳುವ ಇಲಾಖೆಯಿಂದಲೇ ತನಿಖೆ ಮಾಡಿಸೋದಾ? ನಿವೃತ್ತ ನ್ಯಾಯಾಧೀಶರಿಂದ ತನಿಖೆಯಾಗಲಿ- ಸಿದ್ದರಾಮಯ್ಯ ಆಗ್ರಹ
ವಿಪಕ್ಷ ನಾಯಕ ಸಿದ್ದರಾಮಯ್ಯ
Edited By: ಸಾಧು ಶ್ರೀನಾಥ್​

Updated on: Nov 27, 2021 | 2:01 PM

ಮೈಸೂರು: ಗುತ್ತಿಗೆದಾರರಿಂದ ಮಂತ್ರಿಗಳೂ ಸೇರಿದಂತೆ ಎಲ್ಲಾ ಇಲಾಖಾ ಉನ್ನತಾಧಿಕಾರಿಗಳಿಗೆ ಇಷ್ಟಿಷ್ಟು ಪರ್ಸೆಟೆಂಜ್ ಸಂದಾಯವಾಗುತ್ತಿದೆ ಎಂದು ಖುದ್ದು ಪ್ರಧಾನ ಮಂತ್ರಿ ಮೋದಿಗೇ ಟ್ಯಾಗ್​ ಮಾಡಿ ದೂರು ಸಲ್ಲಿಕೆಯಾಗಿರುವ ಹಿನ್ನೆಲೆ ದೂರಿನ ಆಧಾರದ ಮೇಲೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯದರ್ಶಿ ಮಟ್ಟದಲ್ಲಿ ಆದೇಶ ನೀಡಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯಾವ ಇಲಾಖೆಯಲ್ಲಿ ಲಂಚ ತೆಗೆದುಕೊಳ್ಳುತ್ತಾರೋ ಅಲ್ಲಿಂದಲೇ ತನಿಖೆ ಮಾಡಿಸೋದಾ? ಈ ಪರ್ಸೆಟೆಂಜ್ ತನಿಖೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ಆಗಬೇಕು ಎಂದು ಆಗ್ರಹಿಸಿದ್ದಾರೆ.

ನಮ್ಮ ಕಾಲದಲ್ಲೂ ಭ್ರಷ್ಟಾಚಾರ ಇತ್ತು, ಅದನ್ನೂ ತನಿಖೆ ಮಾಡಿಸಿ- ಸಿದ್ದರಾಮಯ್ಯ
ಯಾರು ಲಂಚ‌ ತಗೊಂಡಿದ್ದಾರೆ ಅವರಿಗೆ ಶಿಕ್ಷೆ ಆಗಲಿ. ಅದು ಬಿಟ್ಟು ಇಲಾಖೆಗಳ ಕಾರ್ಯದರ್ಶಿ ಕೈಯಲ್ಲಿ ಮಾಡಿಸ್ತೀವಿ ಅಂದ್ರೆ ಏನು ? ಇದು ಕಣ್ಣೋರೆಸುವ ತಂತ್ರ ಅಲ್ವಾ? ಪ್ರಕರಣ ಮುಚ್ಚಿಹಾಕೋ ಯತ್ನ. ನಾವು ರಾಜ್ಯಪಾಲರಿಗೆ ಭೇಟಿ ಮಾಡಿ ಮನವಿ ಮಾಡಿದ್ದೇವೆ. ಬಿಡಿಎನಲ್ಲಿ 300 ಕೋಟಿ ರೂ ಲಂಚ ನಡೆದಿದೆ ಅಂತಾರೆ. ಬಿಜೆಪಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಭ್ರಷ್ಟಾಚಾರ ಹೆಚ್ಚಾಗಿದೆ ಅಂತ ದೂರು ಬಂದ ಮೇಲೆ‌ ತನಿಖೆ ಮಾಡಬೇಕಲ್ವಾ? ಆದರೆ ಸಿಎಂ ಈ ಹಿಂದೆಯೂ ಇತ್ತು ಅಂತಾರೆ, ಹೌದು ಆ ಕಾಲದಲ್ಲೂ ಭ್ರಷ್ಟಾಚಾರ ಇತ್ತು. ಕಾಂಗ್ರೆಸ್ ನಲ್ಲಿ ಕಮಿಷನ್ ಪಡೆದಿದ್ದಾರೆ ಅಂದರೆ ತನಿಖೆ ಮಾಡಿಸಿ.

ಉಪ್ಪು ತಿಂದವರು ನೀರು ಕುಡಿಯಲಿ. ನಮ್ಮ ಕಾಲದಲ್ಲೂ ಇದ್ದರು, ಅದನ್ನೂ ತನಿಖೆ ಮಾಡಿಸಿ. ಆದರೆ ಕಂಟ್ರಾಕ್ಟರ್ ಯಾವಾತ್ತಾದರೂ ಪತ್ರ ಬರೆದಿದ್ದಾರಾ? ಒಂದು ಲಕ್ಷ ಕಂಟ್ರಾಕ್ಟರ್ ಇರುವ ಸಂಘದವರು ಪತ್ರ ಬರೆದಿದ್ದಾರೆ. ಕೆಂಪಣ್ಣ ಸುದ್ದಿಗೋಷ್ಠಿ ನಡೆಸಿ ಈ ಹೇಳಿಕೆ ಕೊಟ್ಟಿದ್ದಾರೆ. ಕೆಂಪಣ್ಣನ ಆರೋಪ ಸತ್ಯವಾಗಿದೆ. 35 ರಿಂದ 40 ಪರ್ಸೆಂಟ್ ಸರ್ಕಾರ ಇದು. ಸಚಿವರು, ಶಾಸಕರು, ಸಂಸದರು ಪರ್ಸೆಂಟೆಜ್ ತೆಗೆದುಕೊಂಡಿದ್ದಾರೆ. ಇದನ್ನ ಸ್ವತಃ ಕೆಂಪಣ್ಣ ಕೊಟ್ಟಿರುವ ಹೇಳಿಕೆಯನ್ನು ನಾನು ರಾಜ್ಯಪಾಲರಿಗೆ ಕೊಟ್ಟಿದ್ದೇನೆ. ಮೊದಲು ಈ ಸರ್ಕಾರ ಡಿಸ್ಮಿಸ್ ಮಾಡಿ ಅಂತ ಪ್ರಧಾನಿಗೆ ಆಗ್ರಹ ಮಾಡುತ್ತೇನೆ. ಪರ್ಸೆಂಟೆಜ್ ಏನು ತೆಗೆದುಕೊಂಡಿಲ್ಲ ಅಂತ ಸರ್ಕಾರ ಹೇಳುವುದಾದರೆ ಕಾರ್ಯದರ್ಶಿ ಬಳಿ ತನಿಖೆ ಮಾಡಿಸ್ತೀನಿ ಅಂತ ಯಾಕಪ್ಪ ಹೇಳ್ದಪ್ಪ ಸಿಎಂ? ಎಂದು ಬಿಜೆಪಿ ಆಡಳಿತಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಸಾರ್ವಜನಿಕರ ಹಣ ವ್ಯರ್ಥವಾಗಬಾರದು; ಎಲ್ಲರ ಅವಧಿಯಲ್ಲಾದ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಿಸಲಿ: ಡಿ.ಕೆ. ಶಿವಕುಮಾರ್
ಈ ಮಧ್ಯೆ ಬೆಂಗಳೂರಿನಲ್ಲಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹ ಶೇ. 40ರಷ್ಟು ಕಮಿಷನ್ ಆರೋಪದ ಬಗ್ಗೆ ತನಿಖೆಗೆ ಆಗ್ರಹಿಸಿದ್ದು, ಕಳೆದ 10 ವರ್ಷಗಳ ಅವಧಿಯಲ್ಲಾದ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಿಸಲಿ ಎಂದಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾರೇ ತಪ್ಪು ಮಾಡಿರಲಿ, ಮೊದಲು ಎಲ್ಲರ ಅವಧಿಯಲ್ಲಾದ ಬಗ್ಗೆ ತನಿಖೆ ಮಾಡಿಸಲಿ. ಸಾರ್ವಜನಿಕರ ಹಣ ವ್ಯರ್ಥವಾಗಬಾರದು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಮಾಡಿಸಲಿ. ಸರ್ಕಾರ ವಜಾ ಮಾಡಲು ರಾಜ್ಯಪಾಲರಿಗೆ ಒತ್ತಾಯಿಸಿದ್ದೇವೆ. ನಾವೇನು ಸುಮ್ಮನೆ ವಜಾ ಮಾಡುವಂತೆ ಹೇಳಿದ್ದೇವಾ? ಕೊವಿಡ್ ಸಮಯದಲ್ಲಿ ಪಡೆದಿರುವ ಕಮಿಷನ್ ಬಗ್ಗೆ ಗೊತ್ತಿದೆ. ವೈದ್ಯಕೀಯ ಪರಿಕರಗಳ ಖರೀದಿಯಲ್ಲಿಯೂ ವ್ಯತ್ಯಾಸವಾಗಿದೆ. ಮೋದಿ ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. ಟೆನ್ ಪರ್ಸೆಂಟ್ ಸರ್ಕಾರವೆಂದು ಮೋದಿ ಆರೋಪಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರಿಗೇನು ವಸ್ತುಸ್ಥಿತಿ ಗೊತ್ತಿರುತ್ತಾ? ರಾಜ್ಯ ನಾಯಕರು ಹೇಳಿದ್ದನ್ನು ಕೇಳಿಕೊಂಡು ಆರೋಪಿಸಿರುತ್ತಾರೆ. ಆದರೆ ಈಗಿನ ಆರೋಪದ ಬಗ್ಗೆ ಏನು ಮಾತನಾಡುತ್ತಾರೆ? ಅವರು ನ್ಯಾಯಾಂಗ ತನಿಖೆ ನಡೆಸೋದಿಲ್ಲ ಎಂಬುದು ಗೊತ್ತಿದೆ. ಸದನ ಸಮಿತಿಯನ್ನ ರಚಿಸಲಿ. ಹೇಗಿದ್ದರೂ ಅವರೇ ಅದರ ಅಧ್ಯಕ್ಷರಾಗಿರುತ್ತಾರೆ ಮಾಡಿಸಲಿ. ಅಧಿವೇಶನದಲ್ಲಿ ಇದರ ವಿರುದ್ಧ ಹೋರಾಟ ನಡೆಸುತ್ತೇವೆ. ಇದನ್ನು ಇಲ್ಲಿಗೆ ನಾವು ಸುಮ್ಮನೆ ಬಿಡಲು ಆಗುತ್ತಾ? ಎಂದು ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ:
ಪರ್ಸೆಂಟೇಜ್​ ಯಾವ ಕಾಲದಲ್ಲಿ ಆಗಿದೆ ಮಾಹಿತಿ ಇಲ್ಲ, ಕಾಂಗ್ರೆಸ್ ಅವಧಿಯ ಟೆಂಡರೂ ತನಿಖೆ ಮಾಡಿಸ್ತೇವೆ: ಬೊಮ್ಮಾಯಿ ಘೋಷಣೆ

Vidhanaparishat Election: ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾಡಿದ ಸಿದ್ದರಾಮಯ್ಯ|Tv9Kannada

Published On - 1:09 pm, Sat, 27 November 21

Web contact

TV9 Kannada

Read More
Follow Us