AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದ್ದಿ ವಿಶ್ಲೇಷಣೆ | ಕೆಪಿಸಿಸಿಗೆ ಐವರು ಕಾರ್ಯಾಧ್ಯಕ್ಷರು; ಪಕ್ಷ ಬಲವರ್ಧನೆ ಸಾಧ್ಯವೇ?

ಕಾಂಗ್ರೆಸ್​ ಪಕ್ಷ ಒಂದು ಒಳ್ಳೇ ಉದ್ದೇಶದಿಂದ ಕಾರ್ಯಾಧ್ಯಕ್ಷರನ್ನು ನೇಮಿಸುವ ಸಂಸ್ಕ್ರತಿ ಪ್ರಾರಂಭಿಸಿರಬಹುದು. ಆದರೆ ಅದು ನಿಜವಾಗಿ ಪಕ್ಷದ ಬಲವರ್ಧನೆಗೆ ಕಾರಣವಾಗಬಹುದೇ ಎಂಬುದು ಚಿದಂಬರ ರಹಸ್ಯವಾಗೇ ಉಳಿದಿದೆ.

ಸುದ್ದಿ ವಿಶ್ಲೇಷಣೆ | ಕೆಪಿಸಿಸಿಗೆ ಐವರು ಕಾರ್ಯಾಧ್ಯಕ್ಷರು; ಪಕ್ಷ ಬಲವರ್ಧನೆ ಸಾಧ್ಯವೇ?
ರಾಮಲಿಂಗಾರೆಡ್ಡಿ ಮತ್ತು ಧ್ರುವ ನಾರಾಯಣ
ಡಾ. ಭಾಸ್ಕರ ಹೆಗಡೆ
| Edited By: |

Updated on:Jan 20, 2021 | 6:49 PM

Share

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರು ಕರ್ನಾಟಕಕ್ಕೆ ಮತ್ತಿಬ್ಬರು ಕಾರ್ಯಾಧ್ಯಕ್ಷರನ್ನು ನೇಮಿಸಿದ್ದಾರೆ. ಮಾಜಿ ಮಂತ್ರಿ ರಾಮಲಿಂಗಾ ರೆಡ್ಡಿ ಮತ್ತು ಮಾಜಿ ಲೋಕಸಭಾ ಸದಸ್ಯ ಧ್ರುವ ನಾರಾಯಣ ಅವರೇ ಇಂದು ನೇಮಿಸಲ್ಪಟ್ಟ ಕಾರ್ಯಾಧ್ಯಕ್ಷರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷಕ್ಕೆ ಈಗಾಗಲೇ ಮೂವರು ಕಾರ್ಯಾಧ್ಯಕ್ಷರು ಇದ್ದಾರೆ: ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಮತ್ತು ಸಲೀಮ್ ಅಹ್ಮದ್. ಕೆಪಿಸಿಸಿ ಅಧ್ಯಕ್ಷರ ನೇಮಕವಾಗಿ ತಿಂಗಳು ಕಳೆದರೂ, ಪದಾಧಿಕಾರಿಗಳ ನೇಮಕ ಇನ್ನೂ ಆಗಿಲ್ಲ.

ಕುತೂಹಲವೇನೆಂದರೆ, ಪಕ್ಷವನ್ನು ಬಲಪಡಿಸುವ ಉಮೇದಿನಲ್ಲಿರುವ ರಾಷ್ಟ್ರೀಯ ನಾಯಕರು ಇದೇ ಮೊದಲ ಬಾರಿಗೆ ಕೆಪಿಸಿಸಿಗೆ ಐವರು ಕಾಯಾಧ್ಯಕ್ಷರನ್ನು ನೇಮಿಸಿದ್ದಾರೆ.

ಇದರ ಗುಟ್ಟೇನು? ಕರ್ನಾಟಕದಲ್ಲಿ ಜಾತಿ ಆಧಾರದ ಮೇಲೆ ರಾಜಕೀಯ ನಡೆಯುತ್ತಿರುವುದು ಹೊಸದೇನಲ್ಲ. ಇಂದಿನ ನೇಮಕದ ಹಿಂದೆ ಕೂಡ ಜಾತಿ ವಾಸನೆ ಇರುವುದು ಖಂಡಿತ. ಐವರು ಕಾಯಾಧ್ಯಕ್ಷರೂ ಬೇರೆ ಬೇರೆ ಜಾತಿಗೆ ಸೇರಿದವರು ಮತ್ತು ಬೇರೆ ಬೇರೆ ವಿಭಾಗಕ್ಕೆ ಸೇರಿದವರು.

ಈಶ್ವರ ಖಂಡ್ರೆ ಕಲಬುರ್ಗಿ ವಿಭಾಗಕ್ಕೆ ಸೇರಿದವರೂ ಮತ್ತು ಪ್ರಬಲ ಲಿಂಗಾಯತ ಕೋಮನ್ನು ಪ್ರತಿನಿಧಿಸುತ್ತಾರೆ. ಸತೀಶ್ ಜಾರಕಿಹೊಳಿ ಪರಿಶಿಷ್ಟ ವರ್ಗಕ್ಕೆ ಸೇರಿದವರು ಮತ್ತು ಅವರು ಬೆಳಗಾವಿ ವಿಭಾಗವನ್ನು ಪ್ರತಿನಿಧಿಸುತ್ತಾರೆ. ಇಂದು ನೇಮಿಸಲ್ಪಟ್ಟ ಧ್ರುವ ನಾರಾಯಣ ಪರಿಶಿಷ್ಟ ಜಾತಿ-ಬಲಗೈನ ಪ್ರಬಲ ನಾಯಕರು. ಅವರ ಹೆಗಲಿಗೆ ಮೈಸೂರು ವಿಭಾಗದ ಜವಾಬ್ದಾರಿ ಬೀಳಲಿದೆ. ಅಲ್ಪಸಂಖ್ಯಾತ ಕೋಮಿಗೆ ಸೇರಿದ ನಾಯಕರಾದ ಸಲೀಮ್​ ಅಹ್ಮದ್​ ಅವರು ಬೆಂಗಳೂರು ವಿಭಾಗವನ್ನು ನೋಡಿಕೊಳ್ಳುವ ಸಾಧ್ಯತೆ ಇದೆ. ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರ ಹೆಗಲಿಗೆ ಇಡೀ ಬೆಂಗಳೂರು ನಗರದ ಜವಾಬ್ದಾರಿ ಬೀಳಲಿದೆ. ಕೆಲ ತಿಂಗಳುಗಳಲ್ಲಿ ಮತ್ತೆ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಬರುವ ಸಾಧ್ಯತೆ ಇರುವುದರಿಂದ ರೆಡ್ಡಿ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದು ಪಕ್ಷಕ್ಕೆ ಎಷ್ಟು ಸಹಾಯವಾಗಬಹುದು? ರಾಮಲಿಂಗಾ ರೆಡ್ಡಿ ಅವರ ರೆಡ್ಡಿ ಜನಾಂಗದ ಜನಸಂಖ್ಯೆ ಅಷ್ಟೇನೂ ಇರಲಿಕ್ಕಿಲ್ಲ. ಆದರೂ ಪಕ್ಷ ಅವರಿಗೆ ಈ ಜವಾಬ್ದಾರಿ ನೀಡಿದೆ. ರೆಡ್ಡಿಯವರು ಚುನಾವಣಾ ತಂತ್ರಗಾರಿಕೆಯಲ್ಲಿ ಪಳಗಿರುವ ನಾಯಕ. ಅದೂ ಅಲ್ಲದೇ ಬೆಂಗಳೂರಿನ ಜನರ ನಾಡಿಮಿಡಿತ ಅವರಿಗೆ ಗೊತ್ತು. ಹಾಗಾಗಿ ಪಕ್ಷ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿರಬಹುದು ಎಂಬುದು ಪಕ್ಷದ ಮೂಲಗಳ ವಾದ.

ರಾಜ್ಯ ಕಾಂಗ್ರೆಸ್​ ಎರಡು ಹೆಬ್ಬಾಗಿಲಿರುವ ಮನೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಂದೆಡೆ ಮುಖ ಮಾಡಿದ್ದರೆ, ಮತ್ತೊಂದು ಗುಂಪು ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನೆರಳನ್ನು ಹಿಂಬಾಲಿಸುತ್ತಿದೆ. ಇದು ಕಾಂಗ್ರೆಸ್ಸಿಗೆ ಇರುವ ನಿಜವಾದ ಸಮಸ್ಯೆ. ಇದನ್ನು ಪರಿಹರಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಈ ಇಬ್ಬರೂ ಜನಾನುರಾಗಿ ನಾಯಕರು ಮತ್ತು ಪ್ರಬಲ ಕೋಮಿನ ಬೆಂಬಲ ಇರುವವರು. ಈ ಇಬ್ಬರಿಗೂ ಮುಖ್ಯಮಂತ್ರಿ ಆಗಬೇಕೆಂಬ ಪ್ರಬಲ ಹಟವಿದೆ. ಹಾಗಾಗಿ ಈ ಇಬ್ಬರ ಜಂಗೀ ಕುಸ್ತಿ ಸದ್ಯಕ್ಕೆ ಕೊನೆ ಕಾಣುವ ಲಕ್ಷಣವಿಲ್ಲ. ಇದು ಪಕ್ಷವನ್ನು ಹೈರಾಣವಾಗಿಸಿದೆ ಹಾಗೂ ಇದರಿಂದ ಪಕ್ಷದ ಬಲವರ್ಧನೆ ನಿಜವಾಗಿ ಕುಂಠಿತಗೊಂಡಿದೆ.

ಆದ್ದರಿಂದ ಬೇರೆಬೇರೆ ಜಾತಿಯ ನಾಯಕರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದ ಮಾತ್ರಕ್ಕೆ ಆಯಾ ಜಾತಿಯ ಮತದಾರರು ಪಕ್ಷಕ್ಕೆ ಮತ ಹಾಕುತ್ತಾರೆ ಎಂದು ಲೆಕ್ಕ ಹಾಕುವುದು ಕಷ್ಟ.

Published On - 6:47 pm, Wed, 20 January 21