ಮತ್ತೊಂದು ಪ್ರಕರಣ ಸಿಐಡಿಗೆ ವಹಿಸಿದ ಸರ್ಕಾರ: ಪ್ರಬುದ್ಧಾಳ ಕೇಸ್ ಸಿಐಡಿ ಹೆಗಲಿಗೆ
ಬೆಂಗಳೂರಿನ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಕೊಲೆಯಾಗಿದ್ದ ಪ್ರಬುದ್ಧಾಳ ಪ್ರಕರಣವನ್ನು ಸರ್ಕಾರ ಸಿಐಡಿಗೆ ನೀಡಿದೆ. ಮೃತಳ ತಾಯಿ ಖುದ್ದು ಸಿಎಂ ಭೇಟಿಯಾಗಿ ಮನವಿ ಮಾಡಿದ ಹಿನ್ನೆಲೆ ಅವರ ದೂರಿನ ಮೇರೆಗೆ ಸಿಐಡಿಗೆ ವಹಿಸಲು ಡಿಜಿ&ಐಜಿಪಿ ಅಲೋಕ್ ಮೋಹನ್ಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಮೇ 15ರಂದು ಪ್ರಕರಣ ನಡೆದಿತ್ತು.
ಬೆಂಗಳೂರು, ಜೂನ್ 24: ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಕೇಸ್ನ್ನು ಸಿಐಡಿಗೆ ವಹಿಸಿದ ಬೆನ್ನಲ್ಲೇ ಇದೀಗ ಮತ್ತೊಂದು ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಬೆಂಗಳೂರಿನಲ್ಲಿ ಕೊಲೆಯಾಗಿದ್ದ ಪ್ರಬುದ್ಧಾಳ ಕೇಸ್ (Prabuddha murder case) ಸದ್ಯ ಸಿಐಡಿ ತನಿಖೆಗೆ ನೀಡಲಾಗಿದೆ. ಮೃತಳ ತಾಯಿ ಸೌಮ್ಯಾ ಅವರು ಖುದ್ದು ಸಿಎಂ ಭೇಟಿಯಾಗಿ ಮನವಿ ಮಾಡಿದ್ದರು. ಅವರ ದೂರಿನ ಮೇರೆಗೆ ಸಿಐಡಿಗೆ ವಹಿಸಲು ಡಿಜಿ&ಐಜಿಪಿ ಅಲೋಕ್ ಮೋಹನ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಸೂಚನೆ ನೀಡಿದ್ದಾರೆ.
ಸಿಎಂ ಭೇಟಿ ಬಳಿಕ ಕೊಲೆಯಾಗಿದ್ದ ಪ್ರಬುದ್ಧಾ ತಾಯಿ ಸೌಮ್ಯಾ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಪದವಿ ಓದುತ್ತಿದ್ದ ನನ್ನ ಮಗಳನ್ನು ಯುವಕನೊಬ್ಬ ಕೊಲೆ ಮಾಡಿದ್ದಾನೆ. ಕೆಲವು ಅನುಮಾನಗಳಿದ್ದವು, ಆ ಯುವಕನಿಗೆ ಬೇಲ್ ಕೂಡ ಸಿಕ್ಕಿತ್ತು. ಆರೋಪಿಗೆ ಬೇಲ್ ಸಿಕ್ಕಿದೆ ಅಂತಾ ನಾವು ಸುಮ್ಮನಿದ್ದರೆ ಸರಿ ಹೋಗಲ್ಲ. ಹಾಗಾಗಿ ಸಿಐಡಿಗೆ ಕೊಡಬೇಕು ಅಂತಾ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿದ್ದೆವು ಎಂದರು.
ಇದನ್ನೂ ಓದಿ: ಬಾತ್ ರೂಮ್ನಲ್ಲಿ ಯುವತಿ ಶವ ಪತ್ತೆ ಕೇಸ್: ಪ್ರಬುದ್ಧಳ ಕೈ ಕೋಯ್ದು ಕೊಲೆಗೈದ ಬಾಲಕ
ನನ್ನ ಮನವಿ ಮೇರೆಗೆ ಸಿಎಂ ಸಿದ್ದರಾಮಯ್ಯನವರು ಸಿಐಡಿಗೆ ವಹಿಸಿದ್ದಾರೆ. ಹೆಣ್ಣುಮಕ್ಕಳು ನಿರಾಕರಿಸಿದರೆ ಅವರನ್ನು ಬರ್ಬರವಾಗಿ ಹತ್ಯೆ ಮಾಡುತ್ತಾರೆ. ಸಮಾಜಕ್ಕೆ ಯಾವ ಸಂದೇಶ ಸಿಗುತ್ತಿದೆ ಅಂತಾ ನನಗೆ ಗೊತ್ತಾಗುತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ತುಮಕೂರು: ಹಲ್ಲೆಗೆ ಯತ್ನ, ಕಳ್ಳತನದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
ಬೆಂಗಳೂರಿನ ಬಿ.ಎಂ.ಎಸ್. ಮಹಿಳಾ ಕಾಲೇಜಿನಲ್ಲಿ ದ್ವಿತೀಯ ಬಿಬಿಎ ಮಾಡುತ್ತಿದ್ದ ಪ್ರಬುದ್ಧಳನ್ನು ಮೇ 15ರ ಸಂಜೆ ಮನೆಯಲ್ಲೇ ಭೀಕರ ಹತ್ಯೆ ಮಾಡಲಾಗಿತ್ತು. ಕತ್ತು ಹಾಗೂ ಕೈ ಕೊಯ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಮೊದಲು ಪೊಲೀಸರು ಪರಿಗಣಿಸಿದ್ದರು. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ ಎಂದು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:39 pm, Mon, 24 June 24