ಕುಡಿಯಲು ಕಲುಷಿತ ಕಾಳಿ ನದಿ ನೀರು; ಬೃಹತ್ ವೆಚ್ಚದ ಯೋಜನೆಗೆ ಸಾರ್ವಜನಿಕರ ವಿರೋಧ

ನದಿ ರಕ್ಷಣೆಯ ಬದಲು ಕುಡಿಯುವ ನೀರಿನ ಯೋಜನೆಯ ಹೆಸರಿನಲ್ಲಿ ಕಾಳಿ ನದಿಯ ಮೇಲ್ಭಾಗದಿಂದ ಕಿಲೋಮೀಟರ್‌ಗಟ್ಟಲೆ ದೂರದಿಂದ ಪೈಪ್ ಲೈನ್ ಹಾಕಿ ಕೋಟಿಗಟ್ಟಲೆ ವ್ಯಯ ಮಾಡೋದು ಅಗತ್ಯವಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಕುಡಿಯಲು ಕಲುಷಿತ ಕಾಳಿ ನದಿ ನೀರು; ಬೃಹತ್ ವೆಚ್ಚದ ಯೋಜನೆಗೆ ಸಾರ್ವಜನಿಕರ ವಿರೋಧ
ಕಾಳಿ ನದಿ ನೀರಿನ ಚಿತ್ರಣ
Follow us
| Updated By: Skanda

Updated on: Apr 07, 2021 | 2:36 PM

ಕಾರವಾರ: ಕರಾವಳಿ ಹಾಗೂ ಮಲೆನಾಡಿನ ಜೀವ ನದಿ ಕಾಳಿ. ಆದರೆ, ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯ ಬಿಡುಗಡೆ ಮಾಡಿದ ವರದಿಯ ಅನ್ವಯ ಕಲುಷಿತಗೊಂಡ ರಾಜ್ಯದ 17 ನದಿಗಳ ಪೈಕಿ ಕಾಳಿಯೂ ಒಂದು. ನದಿ ಕಲುಷಿತಗೊಳ್ಳುವುದನ್ನು ತಡೆಯುವ ಬದಲು ಕಾಳಿ ನದಿಯ ಮೇಲ್ಭಾಗದ ನೀರನ್ನು ಪೈಪ್ ಲೈನ್ ಹಾಕುವ ಮೂಲಕ‌ ಬೃಹತ್ ವೆಚ್ಚದೊಂದಿಗೆ ಕುಡಿಯುವ ನೀರಿನ ಯೋಜನೆಯಾಗಿ ಬಳಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಸದ್ಯ ಕಲುಷಿತಗೊಂಡಿರುವ ನದಿಯನ್ನು ರಕ್ಷಿಸುವ ಬದಲು ಈ ಯೋಜನೆಯ ಅನುಷ್ಠಾನದ ಅಗತ್ಯವಿದೆಯೇ ಎನ್ನುವ ಪ್ರಶ್ನೆ ಇದೀಗ ಸಾರ್ವಜನಿಕರಲ್ಲಿ ಮೂಡಿದೆ.

ಬೇಸಿಗೆಗಾಲದ ತಾಪ‌ ಈಗಲೇ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಕಾಣಿಸಿಕೊಂಡಿದೆ. ಮುಂಬರುವ 2 ತಿಂಗಳಲ್ಲಂತೂ ನದಿ, ಬಾವಿ, ಕೆರೆಗಳು ಬತ್ತಿ ಹೋಗಿ ಕುಡಿಯುವ ನೀರಿಗೂ ಕಷ್ಟಪಡುವ ಸ್ಥಿತಿ ನಿರ್ಮಾಣವಾಗುತ್ತದೆ. ಇದಕ್ಕೆ ಪರಿಹಾರಾರ್ಥವಾಗಿ ಜನಪ್ರತಿನಿಧಿಗಳು ಬೃಹತ್ ಯೋಜನೆಯನ್ನು ಮಾಡಲು ಮುಂದಾಗಿದ್ದಾರೆ.

ಈ ರೀತಿಯ ಯೋಜನೆಯನ್ನು ಉತ್ತರಕನ್ನಡ ಜಿಲ್ಲೆಯಲ್ಲೂ ರೂಪಿಸಲಾಗುತ್ತಿದ್ದು, ಕಾಳಿ ನದಿಯ ಮೇಲ್ಭಾಗದಿಂದ ಪೈಪ್ ಲೈನ್ ಮೂಲಕ ಕಾರವಾರ ಹಾಗೂ ಇತರೆಡೆ ಕುಡಿಯುವ ನೀರಿನ ಪೂರೈಕೆಗೆ ಯೋಜನೆ ತಯಾರು ಮಾಡಲಾಗುತ್ತಿದೆ. ಆದರೆ, ಕಲುಷಿತಗೊಂಡಿರುವ ಕಾಳಿನದಿಯನ್ನು ಉಳಿಸುವ ಬದಲು ಮೇಲ್ಭಾಗದಿಂದ ಬೃಹತ್ ವೆಚ್ಚದಲ್ಲಿ ನೀರು ಪೂರೈಕೆ ಎಷ್ಟು ಸರಿ ಎನ್ನವುದು ಜನರ ಮುಂದಿರುವ ಪ್ರಶ್ನೆ.

ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯ ಬಿಡುಗಡೆ ಮಾಡಿದ ವರದಿಯನ್ವಯ ರಾಜ್ಯದಲ್ಲಿ ಕಲುಷಿತಗೊಂಡಿರುವ 17 ನದಿಗಳ ಪೈಕಿ ಕಾಳಿ ನದಿ ಕೂಡ ಒಂದಾಗಿದೆ. ಕಾಳಿ ನದಿಯ ಮೇಲ್ಭಾಗದ ನೀರನ್ನು ಬಳಸುವುದರಿಂದ ಉತ್ತಮ ನೀರು ಲಭ್ಯವಾಗುತ್ತದೆ. ಕುಡಿಯಲು ಕೂಡ ನೀರಿಲ್ಲ ಇಂತಹ ಸಂದಭರ್ದಲ್ಲಿ ಜಲಜೀವನ ಮೀಷನ್ ಯೋಜನೆಯ ಅಡಿಯಲ್ಲಿ ನೀರನ್ನು ಶುಚಿಗೊಳಿಸಿ ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಕಾರವಾರ- ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್ ಹೇಳಿದ್ದಾರೆ.

ಕದ್ರಾ ಅಣೆಕಟ್ಟು ಮೇಲ್ಭಾಗದಿಂದ ನೀರನ್ನು ಕಾರವಾರದ ಜನರಿಗೆ ಕುಡಿಯುವ ನಿಟ್ಟಿನಲ್ಲಿ ಹರಿಸಲು ಮುಂದಾಗಿದ್ದು, ಜಲಜೀವನ ಮೀಷನ್ ಯೋಜನೆ ಮೂಲಕ ಇದನ್ನು ತರಲು ಮುಂದಾಗಿದ್ದಾರೆ. ಆದರೆ ಈ ಯೋಜನೆ ವೆಚ್ಚದಾಯಕ ಮತ್ತು ಕುಡಿಯಲು ಯೋಗ್ಯವಲ್ಲದ ನೀರು ಎಂದು ತಿಳಿದು ಬಂದಿದೆ. ಹೀಗಾಗಿ ಸೂಕ್ತ ಮಾರ್ಗದರ್ಶನದಲ್ಲಿ ಮುಂದುವರಿಯಬೇಕು ಎನ್ನುವುದು ನಮ್ಮ ಅಭಿಪ್ರಾಯ ಎಂದು ಸ್ಥಳೀಯರಾದ ಟಿ.ಬಿ. ಹರಿಕಾಂತ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯ ಬಿಡುಗಡೆ ಮಾಡಿದ ವರದಿಯನ್ವಯ ದೇಶದ 351 ನದಿಗಳ ಪೈಕಿ 323 ನದಿಗಳು ಕಲುಷಿತವಾಗಿದೆ.‌ ರಾಜ್ಯದಲ್ಲಿ 17 ನದಿಗಳು ಕಲುಷಿತಗೊಂಡಿದ್ದು, ಇವುಗಳ ಲಿಸ್ಟ್‌ನಲ್ಲಿ ಉತ್ತರಕನ್ನಡ ಜಿಲ್ಲೆಯ ಕಾಳಿ ನದಿ ಕೂಡ ಸೇರ್ಪಡೆಗೊಂಡಿದೆ. ದಾಂಡೇಲಿಯ ಪೇಪರ್‌ ಮಿಲ್‌ಗಳ ತ್ಯಾಜ್ಯ, ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಬಳಕೆಯಾದ ನೀರು, ಚರಂಡಿ ನೀರು ಹಾಗೂ ಮನೆಗಳ ತ್ಯಾಜ್ಯಗಳು ಕಾಳಿ ನದಿ ಸೇರುವ ಮೂಲಕ ನದಿ ಕಲುಷಿತಗೊಳ್ಳುತ್ತಿದೆ. ಈ ಹಿಂದೆಯೇ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಇದು ತಿಳಿದಿತ್ತು. ಆದರೆ, ಇಲ್ಲಿಯವರೆಗೆ ಈ ನದಿಯ ರಕ್ಷಣೆ ಮಾತ್ರ ಯಾರಿಂದಲೂ ನಡೆದಿಲ್ಲ.‌ ನದಿ ರಕ್ಷಣೆಯ ಬದಲು ಕುಡಿಯುವ ನೀರಿನ ಯೋಜನೆಯ ಹೆಸರಿನಲ್ಲಿ ಕಾಳಿ ನದಿಯ ಮೇಲ್ಭಾಗದಿಂದ ಕಿಲೋಮೀಟರ್‌ಗಟ್ಟಲೆ ದೂರದಿಂದ ಪೈಪ್ ಲೈನ್ ಹಾಕಿ ಕೋಟಿಗಟ್ಟಲೆ ವ್ಯಯ ಮಾಡೋದು ಅಗತ್ಯವಿಲ್ಲ. ಅಲ್ಲದೇ, ಈ ಯೋಜನೆ ಸಫಲವೂ ಆಗೋದಿಲ್ಲ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಜಲಮೂಲಗಳನ್ನು ರಕ್ಷಣೆ ಮಾಡುವ ಈ ಸಮಯದಲ್ಲಿ ಅವುಗಳ ಸಂರಕ್ಷಣೆಗೆ ಯಾವುದೇ ಕ್ರಮ‌ಕೈಗೊಳ್ಳದೇ ಸುಮ್ಮನೆ ದುಂದು ವೆಚ್ಚದ ಯೋಜನೆಗಳನ್ನು ಜಾರಿಗೆ ತಂದರೆ ಹಣ ವ್ಯಯವಾಗುತ್ತದೆ ಹೊರತು ಜನರು ಹಾಗೂ ಪರಿಸರಕ್ಕೆ ಯಾವುದೇ ಸಹಾಯವಾಗಲ್ಲ ಎನ್ನುವುದಂತು ಸ್ಪಷ್ಟ.

(ವರದಿ: ಮಂಜುನಾಥ ಪಟಗಾರ )

ಇದನ್ನೂ ಓದಿ: ಬಹುಗ್ರಾಮ ಕುಡಿಯುವ ನೀರು ಯೋಜನೆ ಅಡಿ ಸಿಗ್ತಿದೆ ಕಲುಷಿತ ನೀರು, ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

(public opposed the massive cost project of utilizing Kali River water as drinking water in karawara)