ಆರ್.ಅಶೋಕ್​ ಮನೆ ಕಿತ್ತಾಟ ಮುನ್ನೆಲೆಗೆ: ಸಿಡಿದೆದ್ದ ವಿಪಕ್ಷ ನಾಯಕ, ಸಿಎಸ್​​​​ಗೆ ಖಡಕ್ ಎಚ್ಚರಿಕೆ

ಕರ್ನಾಟಕದಲ್ಲಿ ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷಗೊಳಿಸಿದೆ. ಆದರೂ ಇದುವರೆಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಅವರಿಗೆ ಸರ್ಕಾರಿ ಸೂರು ಸಿಕ್ಕಿಲ್ಲ. ಇದರಿಂದ ಅಶೋಕ್ ಕೆಂಡಾಮಂಡಲರಾಗಿದ್ದು, ಸಿಎಸ್​​​​​​​​ಗೆ ಪತ್ರ ಬರೆದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನ್ನು ಈ ಬಗ್ಗೆ ಸಿಎಂ ಸಿದ್ದರಾಮಯ್ಯನವರ ಮುಂದೆ ಪ್ರಸ್ತಾಪಿಸಿ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಅಶೋಕ್ ಬೇಡಿಕೆ ಇಟ್ಟ ಮನೆಗಳಾವುವು?

ಆರ್.ಅಶೋಕ್​ ಮನೆ ಕಿತ್ತಾಟ ಮುನ್ನೆಲೆಗೆ: ಸಿಡಿದೆದ್ದ ವಿಪಕ್ಷ ನಾಯಕ, ಸಿಎಸ್​​​​ಗೆ ಖಡಕ್ ಎಚ್ಚರಿಕೆ
R Ashok
Edited By:

Updated on: May 22, 2026 | 7:27 PM

ಬೆಂಗಳೂರು, (ಮೇ 22): ರಾಜ್ಯದಲ್ಲಿ ಕಾಂಗ್ರೆಸ್‌‍ (Congress) ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷ ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ (R Ashok) ಅವರಿಗೆ ಇನ್ನೂ ಸರ್ಕಾರಿ ನಿವಾಸವನ್ನು (Governmnet House) ಮಂಜೂರು ಮಾಡಿಲ್ಲ. ಹುದ್ದೆ ಅಲಂಕರಿಸಿದಾಗಿನಿಂದ ಈವರೆಗೆ ಹಲವು ಬಾರಿ ಪತ್ರ ಬರೆದು ಮನವಿ ಮಾಡಿಕೊಂಡಿ ದ್ದರೂ, ರಾಜ್ಯ ಸರ್ಕಾರವು ಸ್ಪಂದಿಸಿಲ್ಲ ಎಂದು ಅವರು ಆಡಳಿತ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು

  • ವಿಪಕ್ಷ ನಾಯಕ ಅರ್. ಅಶೋಕ್ ಗೆ ಸರ್ಕಾರಿ ಮನೆ ಹಂಚಿಕೆ ಮಾಡದಿರುವ ವಿಚಾರ
  • ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅಶೋಕ್ ಪತ್ರ
  • ಮೂರು ಮನೆಗಳ ಪೈಕಿ ಒಂದು ಮನೆ ಹಂಚಿಕೆ ಮಾಡುವಂತೆ ಪತ್ರದ ಮೂಲಕ ಒತ್ತಾಯ
  • ತಮ್ಮ ಆದ್ಯತೆಯ ವಸತಿಗೃಹ ಹಂಚಿಕೆ ಮಾಡದಿದ್ದರೆ ಮನೆ ಬಾಡಿಗೆ ಭತ್ಯೆ ಪಡೆಯುವುದಿಲ್ಲ ಎಂದು ಮಾಹಿತಿ
  • ಏಪ್ರಿಲ್ ತಿಂಗಳಿನಿಂದ ಮನೆ ಬಾಡಿಗೆ ಭತ್ಯೆ ಪಡೆಯದೇ ಪ್ರತಿಭಟಿಸುವುದಾಗಿ ಎಚ್ಚರಿಕೆ

ಮುಖ್ಯ ಕಾರ್ಯದರ್ಶಿಗೆ ಅಶೋಕ್ ಪತ್ರ

ಇನ್ನು ಈ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಮತ್ತೊಮ್ಮೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದು, ನಂ. 1 ಕುಮಾರಕೃಪಾ ಪೂರ್ವ ಬೆಂಗಳೂರು, ನಂ 1 ರೇಸ್ ವ್ಯೂ ಕಾಟೇಜ್ ಮತ್ತು ನಂ 2 ರೇಸ್ ವ್ಯೂ ಕಾಟೇಜ್, ರೇಸ್ ಕೋರ್ಸ್ ರಸ್ತೆ. ಈ ಮೂರು ಮನೆಗಳ ಪೈಕಿ ಒಂದು ಮನೆ ಹಂಚಿಕೆ ಮಾಡಬೇಕೆಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಒಂದು ವೇಳೆ ತಮ್ಮ ಆದ್ಯತೆಯ ವಸತಿಗೃಹ ಹಂಚಿಕೆ ಮಾಡದಿದ್ದರೆ ಮನೆ ಬಾಡಿಗೆ ಭತ್ಯೆ ಪಡೆಯುವುದಿಲ್ಲ. ಏಪ್ರಿಲ್ ತಿಂಗಳಿನಿಂದ ಮನೆ ಬಾಡಿಗೆ ಭತ್ಯೆ ಪಡೆಯದೇ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸಿಎಂ ಮುಂದೆಯೇ ಅಸಮಾಧಾನ

ಗುರುವಾರ ವಿಧಾನಸೌಧದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಆಯ್ಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೇ ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರ್ಣಗೊಳಿಸುತ್ತಿದೆ .ವಿರೋಧ ಪಕ್ಷದ ನಾಯಕನಿಗೆ ನಿಮ್ಮ ಸರ್ಕಾರ ಒಂದು ಸರ್ಕಾರಿ ಬಂಗಲೇ ನೀಡದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಒಬ್ಬ ವಿರೋಧ ಪಕ್ಷದ ನಾಯಕನನ್ನು ಈ ರೀತಿ ನಡೆಸಿಕೊಳ್ಳುವುದೇ? ಎಂದು ಖಾರವಾಗಿ ಪ್ರಶ್ನೆ ಪ್ರಶ್ನಿಸಿದ್ದಾರೆ.

ಶಿಷ್ಟಾಚಾರದ ಪ್ರಕಾರ ವಿಧಾನಸಭೆ ಹಾಗೂ ವಿಧಾನಪರಿಷತ್‌ ವಿಪಕ್ಷದ ನಾಯಕರಿಗೆ ಸರ್ಕಾರಿ ಬಂಗಲೆ ನೀಡಬೇಕು. ಈ ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಕುಮಾರ ಕೃಪ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆ ನೀಡಲಾಗಿತ್ತು. ಇದು ಅದೃಷ್ಟದ ಬಂಗಲೆ ಎಂದೇ ನಂಬಲಾಗಿತ್ತು. ಇದೀಗ ಆ ಬಂಗಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಉಳಿದುಕೊಂಡಿದ್ದಾರೆ.

ಆರ್‌.ಅಶೋಕ್‌ ಅವರು ಬೆಂಗಳೂರಿನ ರೇಸ್‌‍ ಕೋರ್ಸ್‌ ರಸ್ತೆಯಲ್ಲಿರುವ ರೇಸ್‌‍ ವ್ಯೂ ಕಾಟೇಜ್‌ ಅಥವಾ ಕುಮಾರ ಪಾರ್ಕ್‌ನಲ್ಲಿರುವ ನಿವಾಸಗಳನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗೆ ಇದುವರೆಗೆ 5 ರಿಂದ 6 ಬಾರಿ ಅಧಿಕೃತ ಪತ್ರಗಳನ್ನು ಬರೆದಿದ್ದಾರೆ. ಹಲವು ಬಾರಿ ಪತ್ರ ಬರೆದು ಹಾಗೂ ಅಧಿಕಾರಿಗಳನ್ನು ಖುದ್ದಾಗಿ ಭೇಟಿಯಾದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಅಧಿಕೃತ ನಿವಾಸ ಇಲ್ಲದಿರುವುದರಿಂದ, ಅವರು ತಮ ಸ್ವಂತ  ಜಯನಗರದ ನಿವಾಸವಾದಲ್ಲೇ ಉಳಿದುಕೊಂಡಿದ್ದಾರೆ.

ಒಟ್ಟಿನಲ್ಲಿ ಮೂರು ವರ್ಷವಾದರೂ ಅಶೋಕ್ ಅವರ ಮನೆ ಕಿತ್ತಾಟಕ್ಕೆ ಬ್ರೇಕ್ ಬಿದ್ದಿಲ್ಲ.  ಇನ್ನು ಉಳಿದಿರುವುವುದು ಎರಡು ವರ್ಷ ಅವಧಿ.  ಇನ್ನಾದರೂ ಮುಖ್ಯಕಾರ್ಯದರ್ಶಿಗಳು ಅಶೋಕ್ ಅವರಿಗೆ ಸರ್ಕಾರಿ ನಿವಾಸವನ್ನು ಹಂಚಿಕೆ ಮಾಡುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

Kiran Haniyadka
Follow Us