ಪಪ್ಪಾಯ ಬೆಳೆದು ಕೈ ಸುಟ್ಟುಕೊಂಡ ಯುವ ರೈತ; ಬ್ಯುಸಿನೆಸ್ ಬಿಟ್ಟು ಕೃಷಿಗೆ ಇಳಿದ ಯುವಕ ಕಂಗಾಲು!

| Updated By: ಕಿರಣ್ ಹನುಮಂತ್​ ಮಾದಾರ್

Updated on: May 24, 2024 | 8:23 PM

ಆ ವ್ಯಕ್ತಿ ಕೃಷಿಕನಾಗಬೇಕು ಎಂದು ಗೋವಾದಲ್ಲಿ ಬ್ಯುಸಿನೆಸ್ ಮಾಡೋದನ್ನ ಬಿಟ್ಟು ತನ್ನೂರಿಗೆ ಮರಳಿದ್ದ. ಬಳಿಕ ಪಪ್ಪಾಯ ತೋಟ ಮಾಡಿದ್ದ. ಆದರೆ, ಆತನ ಕೈಗೆ ಫಸಲು ಸೇರುವ ಮೊದಲೇ ಅಕಾಲಿಕ ಮಳೆ ಹಾಗೂ ದಾಖಲೆ ಮಟ್ಟದ ತಾಪಮಾನ, ಎಲ್ಲವನ್ನೂ ಕಸಿದುಕೊಂಡಿದ್ದು, ನಷ್ಟಕ್ಕೆ ದೂಡಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಪಪ್ಪಾಯ ಬೆಳೆದು ಕೈ ಸುಟ್ಟುಕೊಂಡ ಯುವ ರೈತ; ಬ್ಯುಸಿನೆಸ್ ಬಿಟ್ಟು ಕೃಷಿಗೆ ಇಳಿದ ಯುವಕ ಕಂಗಾಲು!
ಪಪ್ಪಾಯ ಬೆಳೆದು ಕೈ ಸುಟ್ಟುಕೊಂಡ ಯುವ ರೈತ
Follow us on

ರಾಯಚೂರು, ಮೇ.24: ಜಿಲ್ಲೆಯ ಸಿಂಧನೂರು(Sindhanur) ಪಟ್ಟಣದ ನಿವಾಸಿ ಸೈಯದ್ ಅಕ್ರಮ್​ ಎಂಬಾತ, ಈ ಹಿಂದೆ ಗೋವಾದಲ್ಲಿ ಬ್ಯುಸಿನೆಸ್ ಮಾಡುತ್ತಿದ್ದ. ರೂಂಗಳನ್ನ ಲೀಸ್​ಗೆ ಪಡೆದು ವಸತಿ ಗೃಹಗಳ ಬ್ಯುಸಿನೆಸ್, ಐ ಲ್ಯಾಂಡ್ ಟ್ರಿಪ್ ಪ್ಯಾಕೇಜ್​ಗಳನ್ನ ಮಾಡುತ್ತಾ ಜಾಲಿಯಾಗಿದ್ದ. ಆದ್ರೆ, ಕೊರೊನಾ ಬಂದ ಬಳಿಕ ಲಾಕ್​ಡೌನ್​ನಿಂದ ಎಲ್ಲವೂ ಬಂದ್ ಆಗಿದ್ದವು. ಆಗ ಹುಟ್ಟೂರು ಮೇಲು ಎಂದು ಊರಿಗೆ ಬಂದಿದ್ದ. ಆ ಬಳಿಕ ಮಾನ್ವಿ ತಾಲ್ಲೂಕಿನ ಕುರ್ಡಿ ಗ್ರಾಮದಲ್ಲಿರುವ ಜಮೀನಿನಲ್ಲಿ ತೋಟಗಾರಿಕೆ ಮಾಡಿ ಮಾದರಿ ಕೃಷಿಕನಾಗಬೇಕು ಎನ್ನುವ ಕನಸು ಕಂಡಿದ್ದ. ಅದರಂತೆ ಎರಡು ಎಕರೆ ಪ್ರದೇಶದಲ್ಲಿ ಸುಮಾರು 2 ರಿಂದ 3 ಲಕ್ಷ ರೂ. ಖರ್ಚು ಮಾಡಿ ಪಪ್ಪಾಯ(papaya)ಬೆಳೆ ಬೆಳೆದಿದ್ದ. ಎಂಟು ತಿಂಗಳ ಹಿಂದೆ ಶುರುವಾಗಿದ್ದ ಪಪ್ಪಾಯ ಫಸಲು, ಇನ್ನೇನು ಯುವ ರೈತ ಸೈಯದ್ ಕೈ ಸೇರಿತು, ಎನ್ನುವಷ್ಟರಲ್ಲೇ ದೊಡ್ಡ ದುರಂತವೇ ನಡೆದಿದೆ.

ಅಕಾಲಿಕ ಮಳೆ, ತಾಪಮಾನಕ್ಕೆ ಬೆಳೆದಿದ್ದ ಪಪ್ಪಾಯ ಫಸಲು ಹಾಳು!

ಹೌದು, ಯುವ ರೈತ ಸೈಯದ್ ಎಂಟು ತಿಂಗಳ ಹಿಂದೆ ಪಪ್ಪಾಯ ತೋಟ ಮಾಡಿ ಗಿಡ ಬೆಳೆದಿದ್ದ. ಪಪ್ಪಾಯ ಕಾಯಿಗಳೇ ಅದ್ಭುತವಾಗಿ ಬಂದಿತ್ತು. ಅಂದಾಜು 5 ರಿಂದ 6 ಲಕ್ಷ ರೂ. ಲಾಭದ ನಿರೀಕ್ಷೆಯಲ್ಲಿದ್ದ ಸೈಯದ್​ಗೆ ಅಕಾಲಿಕ ಮಳೆ ವಿಲನ್ ಆಗಿತ್ತು. ಇನ್ನೊಂದು 10 ರಿಂದ 15 ದಿನ ಕಳೆದಿದ್ರೆ ಪಪ್ಪಾಯ ಫಸಲು ಸಿಗುತ್ತಿತ್ತು. ಆದ್ರೆ, ಕಳೆದ ಒಂದು ವಾರದಿಂದ ಸುರಿಯುತ್ತಿರುವ ಬಿರುಗಾಳಿ ಸಹಿತ ಅಕಾಲಿಕ ಮಳೆ ಎಲ್ಲವನ್ನೂ ಹಾಳು ಮಾಡಿದೆ. ಅಕಾಲಿಕ ಮಳೆಗೂ ಮುನ್ನ ಬೇಸಿಗೆ ತಾಪ ತಿಂಗಳುಗಟ್ಟಲೇ 45, 46, 47 ಡಿಗ್ರಿ ಇತ್ತು. ಇದರಿಂದ ಪಪ್ಪಾಯ ಗಿಡಗಳು ಒಣಗಿ ಹೋಗಿ, ಇಳುವರಿ ಕುಂಠಿತವಾಗಿತ್ತು.

ಇದನ್ನೂ ಓದಿ:ಬೀದರ್​: ಸಂಕಷ್ಟಕ್ಕೆ ಸಿಲುಕಿದ ಕಲ್ಲಂಗಡಿ ಬೆಳೆಗಾರ; ದರ ಕುಸಿತ, ಕಾಡುಹಂದಿ ಕಾಟದಿಂದ ರೈತ ಕಂಗಾಲು

ಈ ಮಧ್ಯೆಯೂ ಬೆಳೆ ಕಾಪಾಡಿಕೊಂಡಿದ್ದ ಸೈಯದ್​ಗೆ ಅಕಾಲಿಕ ಮಳೆ ಹೊಡೆತ ಕೊಟ್ಟಿದೆ. ಅಕಾಲಿಕ ಮಳೆಗೆ ಪಪ್ಪಾಯ ಕಾಯಿ, ಹಣ್ಣುಗಳ ಕೊಳೆತು ಹೋಗುತ್ತಿದ್ದು, ರೈತ ಸೈಯದ್ ಈಗ ಲಕ್ಷಾಂತರ ರೂಪಾಯಿ ನಷ್ಟಕ್ಕೆ ಸಿಲುಕಿದ್ದಾರೆ. ಇತ್ತ ಪಪ್ಪಾಯ ಬೆಳೆಗೆ ವೈರಸ್ ಅಟ್ಯಾಕ್ ಆಗಿರೋದ್ರಿಂದ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಇದು ವ್ಯಾಪಿಸುತ್ತಿದೆ. ಇದರಿಂದ ಇಡೀ ಎಕರೆ ತೋಟ ಹಾಳಾಗುತ್ತಿದ್ದು, ವೈರಸ್ ಅಟ್ಯಾಕ್ ಆಗಿರುವ ಗಿಡಗಳನ್ನ ನೋಡಿ ಸೈಯದ್ ಕಣ್ಣೀರು ಹಾಕುತ್ತಾ ಕಡಿದು ಹಾಕುತ್ತಿದ್ದಾರೆ. ಹೀಗೆ ಅಕಾಲಿಕ ಮಳೆ, ಗರಿಷ್ಟ ತಾಪಮಾನ, ರೈತ ಸೈಯದ್​​ಗೆ ನಷ್ಟವನ್ನು ಮಾಡಿದ್ದು, ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ, ಈ ಯುವ ರೈತನಿಗೆ ಪರಿಹಾರ ನೀಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:21 pm, Fri, 24 May 24