ಪತ್ನಿಯೇ ನದಿಗೆ ತಳ್ಳಿದ್ದಾಳೆಂದು ಆರೋಪಿಸಿದ್ದ ಪತಿ ತಾತಪ್ಪನಿಗೆ ಸಂಕಷ್ಟ..!

ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್​ ಸೇತುವೆ ಮೇಲಿಂದ ಪತಿಯನ್ನು ಪತ್ನಿ ನದಿಗೆ ತಳ್ಳಿದ ಆರೋಪ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇನ್ನು ಪತಿ ನದಿಗೆ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಕೆಲವರು ಯುವತಿ ಪರ ಬ್ಯಾಟಿಂಗ್ ಮಾಡುತ್ತಿದ್ದರೆ ಇನ್ನೂ ಕೆಲವರು ಯುವಕನ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಮಧ್ಯೆ ಇದೀಗ ಪತ್ನಿ ಮೇಲೆ ಗಂಭೀರ ಆರೋಪ ಮಾಡಿರುವ ಪತಿ ತಾತಪ್ಪಗೆ ಸಂಕಷ್ಟ ಎದುರಾಗಿದೆ.

ಪತ್ನಿಯೇ ನದಿಗೆ ತಳ್ಳಿದ್ದಾಳೆಂದು ಆರೋಪಿಸಿದ್ದ ಪತಿ ತಾತಪ್ಪನಿಗೆ ಸಂಕಷ್ಟ..!
Updated By: ರಮೇಶ್ ಬಿ. ಜವಳಗೇರಾ

Updated on: Jul 20, 2025 | 11:27 AM

ರಾಯಚೂರು, (ಜುಲೈ 20)): ಕೃಷ್ಣಾ ನದಿ ಬ್ರಿಡ್ಜ್ ಮೇಲಿಂದ ಯುವಕ ನೀರಿಗೆ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲಾಗಿದ್ದು, ಪತ್ನಿಯೇ ತಳ್ಳಿ ಕೊಲೆಗೆ ಯತ್ನಿಸಿದ್ದಾಳೆ ಎಂದು ಪತಿ ತಾತಪ್ಪ ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣ ಬೆನ್ನಲ್ಲೇ ತಾತಪ್ಪ, ಪತ್ನಿ ಗದ್ದೆಮ್ಮಳಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾನೆ. ಇದರ ಮಧ್ಯೆ ಇದೀಗ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್‌ ಸಿಕ್ಕಿದ್ದು, ಪತ್ನಿಯೇ ನದಿಗೆ ತಳ್ಳಿ ಹತ್ಯೆಗೆ ಯತ್ನಿಸಿದ್ದಾಳೆಂದು ಆರೋಪಿಸಿರುವ ತಾತಪ್ಪ ವಿರುದ್ಧ ಬಾಲ್ಯವಿವಾಹ ಆರೋಪ ಕೇಳಿಬಂದಿದೆ. ಹೌದು..ತಾತಪ್ಪ, ಅಪ್ರಾಪ್ತ ಬಾಲಕಿಯನ್ನ ಮದುವೆಯಾಗಿಯಾಗಿರುವ ಮಾಹಿತಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಪತ್ನಿ ಗದ್ದೆಮ್ಮಳ ವಯಸ್ಸಿನ ದಾಖಲಾತಿ ನೀಡುವಂತೆ ಪತಿ ತಾತಪ್ಪನಿಗೆ ಡೆಡ್​ಲೈನ್ ನೀಡಲಾಗಿದೆ.

15 ವರ್ಷ 8 ತಿಂಗಳ ವಯಸ್ಸಿನ ಅಪ್ರಾಪ್ತ ಬಾಲಕಿ ಗದ್ದೆಮ್ಮಳನನ್ನು ತಾತಪ್ಪ ಮದುವೆ ಮಾಡಿಕೊಂಡಿರುವ ಬಗ್ಗೆ ಯಾದಗಿರಿ ಜಿಲ್ಲಾ ಮಹಿಳಾ ರಕ್ಷಣಾಧಿಕಾರಿಗಳ ತಂಡ ಪತ್ತೆ ಮಾಡಿದ್ದು, ಶಾಲಾ ದಾಖಲಾತಿ ಪ್ರಕಾರ ತಾತಪ್ಪನ ಪತ್ನಿ ಗದ್ದೆಮ್ಮ ಅಪ್ರಾಪ್ತೆ ಎನ್ನುವುದು ದೃಢವಾಗಿದೆ. ಈ ಸಂಬಂಧ ರಾಯಚೂರು ತಾಲೂಕಿನ ದೇವಸುಗೂರು ನಿವಾಸಿಯಾಗಿರುವ ಪತಿ ತಾತಪ್ಪನ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ರಾಯಚೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಪತ್ರ ಬರೆದಿದೆ.

ಇದನ್ನೂ ಓದಿ: ಹೆಂಡ್ತಿಯೇ ಗಂಡನನ್ನು ನದಿಗೆ ತಳ್ಳಿದ ಆರೋಪ: ಮೂರೇ ತಿಂಗಳಲ್ಲಿ ಮುರಿದು ಬಿತ್ತು ದಾಂಪತ್ಯ

ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಪತ್ರ ತಲುಪುತ್ತಿದ್ದಂತೆಯೇ ಎಚ್ಚೆತ್ತ ರಾಯಚೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ತಾತಪ್ಪನ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಸಿಡಿಪಿಒ ಮತ್ತು ಗ್ರಾಮ ಪಂಚಾಯಿ್ತಿ ಸಿಬ್ಬಂದಿ ಭೇಟಿ ನೀಡಿ ವಿವಾಹದ ಕುರಿತು ತಾತಪ್ಪನ ಕುಟುಂಬದ ಪ್ರಮುಖರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಆದ್ರೆ, ತಾತಪ್ಪ, ಪತ್ನಿ ಗದ್ದೆಮ್ಮಗಳ ಬಗ್ಗೆ ಯಾವುದೇ ದಾಖಲೆಗಳನ್ನು ನೀಡದೇ ಕೇವಲ ಮೌಖಿಕವಾಗಿ ಮಾಹಿತಿ ನೀಡಿದ್ದಾನೆ.

ಇನ್ನು ಪತ್ನಿ ಗದ್ದೆಮ್ಮಗಳ ಅಧಿಕೃತ ದಾಖಲಾತಿಗಳನ್ನು ನೀಡುವಂತೆ ತಾತಪ್ಪನಿಗೆ ಕೇಳಿದ್ದಾರೆ. ಇದಕ್ಕೆ ತಾತಪ್ಪ ಕುಟುಂಬಸ್ಥರು, ದಾಖಲೆ ನೀಡಲು 2 ದಿನ ಕಾಲಾವಕಾಶ ಕೇಳಿದ್ದಾರೆ. ನಾಳೆ (ಜುಲೈ 21) ದಾಖಲಾತಿಗಳನ್ನು ಒದಗಿಸಬೇಕಿದೆ. ಒಂದು ವೇಳೆ ದಾಖಲೆಗಳನ್ನು ನೀಡದಿದ್ದರೆ ಪತಿ ತಾತಪ್ಪ ಹಾಗೂ ಕುಟುಂಬಸ್ಥರ ವಿರುದ್ಧ ಬಾಲ್ಯವಿವಾಹ ಅಡಿಯಲ್ಲಿ ಎಫ್​ಐಆರ್ ದಾಖಲು ಸಾಧ್ಯತೆ ಇದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ