ಭುಗಿಲೆದ್ದ ಮಂತ್ರಾಲಯ ರಾಯರ ಜಪದ ಕಟ್ಟೆ ವಿವಾದ: ಸರ್ವೆ ವೇಳೆ ಹೈಡ್ರಾಮಾ, ರೈತರು ಪೊಲೀಸ್ ವಶಕ್ಕೆ

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ತಪಸ್ಸು ಮಾಡಿದ್ದ ಪರಮ ಪವಿತ್ರ ಸ್ಥಳ 'ಜಪದ ಕಟ್ಟೆ'ಯ ಸಮೀಪವಿರುವ ಜಮೀನಿನ ವಿವಾದ ಇದೀಗ ತಾರಕ್ಕೇರಿದೆ. ಸರ್ಕಾರದ ಆದೇಶದ ಮೇರೆಗೆ ಇಂದು ಅಧಿಕಾರಿಗಳು ಸರ್ವೆ ಕಾರ್ಯಕ್ಕೆ ಮುಂದಾದಾಗ, ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸ್ಥಳದಲ್ಲಿ ದೊಡ್ಡ ಮಟ್ಟದ ಹೈಡ್ರಾಮಾವೇ ನಡೆದಿದೆ.

ಭುಗಿಲೆದ್ದ ಮಂತ್ರಾಲಯ ರಾಯರ ಜಪದ ಕಟ್ಟೆ ವಿವಾದ: ಸರ್ವೆ ವೇಳೆ ಹೈಡ್ರಾಮಾ, ರೈತರು ಪೊಲೀಸ್ ವಶಕ್ಕೆ
ಮಂತ್ರಾಲಯ ರಾಯರು ಜಪದ ಕಟ್ಟೆ ಬಳಿ ಭೂ ವಿವಾದ
Image Credit source: tv9 kannada
Edited By:

Updated on: Apr 13, 2026 | 6:41 PM

ರಾಯಚೂರು, ಏಪ್ರಿಲ್​ 13: ಮಂತ್ರಾಲಯ ರಾಯರು (Mantralaya Rayaru) ತಪಸ್ಸು ಮಾಡಿದ್ದ ಜಪದ ಕಟ್ಟೆ ಸಮೀಪವಿರುವ ಜಮೀನಿನ ವಿವಾದ (Land Dispute) ಇದೀಗ ತಾರಕ್ಕೇರಿದೆ. ಸರ್ಕಾರದ ಆದೇಶದನ್ವಯ ಇಂದು ಸರ್ವೆ ಕಾರ್ಯ ನಡೆಯುತ್ತಿದ್ದ ವೇಳೆ ಕೆಲ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ತಳ್ಳಾಟ-ನೂಕಾಟ ಉಂಟಾಗಿದ್ದು, ದೊಡ್ಡ ಹೈಡ್ರಾಮಾವೇ ನಡೆದು ಹೋಗಿದೆ‌‌.

ಏನಿದು ಪ್ರಕರಣ?

ರಾಯಚೂರು ತಾಲ್ಲೂಕಿನ ಬಿಚ್ಚಾಲಿ ಗ್ರಾಮದಲ್ಲಿ ಮಂತ್ರಾಲಯ ರಾಯರ 13 ವರ್ಷಗಳ ಕಾಲ ತಪಸ್ಸು ಮಾಡಿದ್ದಾರೆ. ರಾಯರ ತಪಸ್ಸು ಮಾಡಿದ ಜಪದ ಕಟ್ಟೆ ಈಗಲೂ ಬಿಚ್ಚಾಲಿ ಗ್ರಾಮದಲ್ಲಿದೆ. ಇದೇ ಬಿಚ್ಚಾಲಿ ಗ್ರಾಮದಲ್ಲಿ ರಾಯರ ಜಪದ ಕಟ್ಟೆ ದರ್ಶನಕ್ಕೆ ಅಪಾರ ಭಕ್ತರು ನಿತ್ಯ ಇಲ್ಲಿಗೆ ಬರ್ತಾರೆ. ಈ ಜಪದ ಕಟ್ಟೆ ಬಿಚ್ಚಾಲಿ ಮೂಲದ ಬಿಚ್ಚಾಲೆ ಅಪ್ಪಣ್ಣಾಚಾರ್ಯ ಸೇವಾ ಟ್ರಸ್ಟ್ ಮೂಲಕ ಕಾರ್ಯನಿರ್ವಹಿಸುತ್ತಿದೆ. ಇದೇ ಜಪದ ಕಟ್ಟೆಗೆ ಹೊಂದಿಕೊಂಡಿರುವ ಸ್ಥಳ ಹಾಗೂ ಅದರ ಪಕ್ಕದಲ್ಲಿರುವ ಒಟ್ಟು 2.33 ಎಕರೆ ಜಮೀನಿನ ವಿವಾದ ಈಗ ತಾರಕ್ಕೇರಿದೆ. ಇದೇ ಭೂ ವಿವಾದ ಸಂಬಂಧ ಇಂದು ಸರ್ವೆ ನಡೆಯುವ ವೇಳೆ ದೊಡ್ಡ ಹೈಡ್ರಾಮಾವೇ ನಡೆದಿದೆ.

ಇದನ್ನೂ ಓದಿ: ಮಂತ್ರಾಲಯದ ಕರ್ನಾಟಕ ಅತಿಥಿ ಗೃಹದಲ್ಲಿ ಭ್ರಷ್ಟಾಚಾರದ ಹೊಗೆ: ಅಸ್ವಚ್ಛತೆ, ದುರಾಡಳಿತ ವಿರುದ್ಧ ಉಪಲೋಕಾಯುಕ್ತರ ಗರಂ!

ಬಿಚ್ಚಾಲಿ ಗ್ರಾಮದ ರಾಯರ ಜಪದ ಕಟ್ಟೆಗೆ ಹೊಂದಿಕೊಂಡಿರುವ ಸರ್ವೆ ನಂಬರ್ 35 ರಲ್ಲಿ 1.2 ಎಕರೆ ಹಾಗೂ ಸರ್ವೆ ನಂಬರ್ 37 ರಲ್ಲಿ 1.31 ಎಕರೆ ಸೇರಿ ಒಟ್ಟು 2 ಎಕರೆ 33 ಗುಂಟೆ ಜಮೀನನ್ನ ರಾಜ್ಯ ಸರ್ಕಾರ, ರಾಘವೇಂದ್ರ ಮಠ ನಂಜನಗೂಡು ಹಾಗೂ ಮಂತ್ರಾಲಯ ಕ್ಯಾಂಪ್ ಮಠಕ್ಕೆ ಮಂಜೂರು ಮಾಡಿ‌ ಆದೇಶಿಸಿದೆ. ರಾಘವೇಂದ್ರ ಸ್ವಾಮಿ ಚಾರಿತ್ರಿಕ ಸ್ಥಳಗಳನ್ನ ಅಭಿವೃದ್ಧಿ ಪಡಿಸಿ, ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನಾಗಿ ಅಭಿವೃದ್ಧಿ ಪಡೆಸುವ ಉದ್ದೇಶಕ್ಕೆ 2021-22ರ ಸಾಲಿನಲ್ಲಿ ರಾಜ್ಯ ಸರ್ಕಾರ ಮಂಜೂರು ಮಾಡಿತ್ತು. ಆದರೆ ಇದೇ ಸರ್ವೆ ನಂಬರ್​ನ ಕೆಲವೆಡೆ ಬಿಚ್ಚಾಲಿ ಗ್ರಾಮದ ಕೆಲವರು ಸಾಗುವಳಿ ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್​ನಲ್ಲಿ ಪಾಡದ ರಾಘವೇಂದ್ರ ಆಚಾರ್ಯ ಹಾಗೂ ಇತರರು ರಿಟ್ ಅರ್ಜಿ ಸಲ್ಲಿಸಿದ್ದು, ಕೇಸ್ ನಡೆದಿತ್ತು.

ಸರ್ವೆ ವೇಳೆ ರಂಪಾಟ: ಕೆಲವರು ಪೊಲೀಸ್​ ವಶಕ್ಕೆ 

ಕಳೆದ ವಾರ ರಿಟ್ ಅರ್ಜಿಯನ್ನ ವಜಾಗೊಳಿಸಲಾಗಿದೆ. ಹೀಗಾಗಿ ಸರ್ಕಾರದ ಮಂಜೂರಾತಿ ಆದೇಶದನ್ವಯ ಗಡಿ ಗುರುತಿಸಿ ಹಸ್ತಾಂತರ ಮಾಡುವ ಪ್ರಕ್ರಿಯೆ ನಡೆದಿದೆ. ಹೀಗಾಗಿ ಹೈಕೋರ್ಟ್ ಆದೇಶದನ್ವಯ ಇಂದು ಅಧಿಕಾರಿಗಳ ತಂಡ ಸರ್ವೆಗೆ ಮುಂದಾದ್ದರು. ಸೂಕ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ನಿಯೋಜಿಸಲಾಗಿತ್ತು. ಆದರೆ ಸರ್ವೆ ವೇಳೆ ನಡೆದಿದ್ದೇ ಬೇರೆ. ಸರ್ವೆ ವೇಳೆ ಕೆಲ ಸ್ಥಳೀಯರು, ಸಾಗುವಳಿದಾರರು ಆಕ್ರೋಶ ಹೊರಹಾಕಿದರು. ಸರ್ವೆ ಮಾಡುವುದಕ್ಕೆ ಬಿಡಲ್ಲ ಅಂತ ಅಡ್ಡಿಪಡಿಸಿದರು. ಈ ವೇಳೆ ಪೊಲೀಸರು ಎಷ್ಟೇ ಹೇಳಿದರು ಸುಮ್ಮನಾಗದ ಕೆಲವರು ದೊಡ್ಡ ರಂಪಾಟವೇ ಮಾಡಿದ್ದಾರೆ. ಈ ವೇಳೆ ಕೆಲವರು ಪೊಲೀಸರ ಜೊತೆ ವಾಗ್ವಾದ ಉಂಟಾಗಿದೆ. ಆಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕೆಲವರನ್ನ ವಶಕ್ಕೆ ಪಡೆದರು. ಬಳಿಕ ಪೊಲೀಸರ ಸಮ್ಮುಖದಲ್ಲಿ ಸರ್ವೆ ಕಾರ್ಯ ನಡೆಯಿತು.

ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ರಾಯಚೂರು ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಪ್ರತಿಕ್ರಿಯಿಸಿದ್ದು, 2022ರಲ್ಲಿ ಕರ್ನಾಟಕ ಸರ್ಕಾರ ರಾಘವೇಂದ್ರ ಸ್ವಾಮಿ ಮಠ ನಂಜನಗೂಡು ಹಾಗೂ ಮಂತ್ರಾಲಯ ಕ್ಯಾಂಪ್‌ ಆಫೀಸ್​ಗೆ ಭೂ ಮಂಜೂರು ಮಾಡಿದೆ. ಸರ್ಕಾರದ ಮಂಜೂರಾತಿ ಆದೇಶದನ್ವಯ ಗಡಿ ಗುರುತಿಸಿ ಹಸ್ತಾಂತರ ಮಾಡುವ ಪ್ರಕ್ರಿಯೆ ನಡೆದಿದೆ. ಅತಿಕ್ರಮಣ ಸ್ಥಳದಲ್ಲಿ ಕಟ್ಟಡ ಕಟ್ಟಿದ್ದರೆ ಅದನ್ನ ಕಾನೂನು, ನಿಯಮದಡಿ ತೆರವು ಮಾಡಲಾಗತ್ತೆ. ಈ ಸರ್ವೆ ಜಪದ ಕಟ್ಟೆಗೆ ಬರಲ್ಲ ಎಂದಿದ್ದಾರೆ.

ಇದನ್ನೂ ಓದಿ: ಮಂತ್ರಾಲಯ ರಾಯರ ಹುಂಡಿಯಲ್ಲಿ ಕೇವಲ 21 ದಿನಗಳಲ್ಲಿ 2.48 ಕೋಟಿ ರೂ. ಸಂಗ್ರಹ

ಸದ್ಯ ಸರ್ವೆ ಕಾರ್ಯ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆದರೆ ಈ ವಿವಾದ ಸದ್ಯ ಬೂದಿ ಮುಚ್ಚಿದ ಕೆಂಡವಾಗಿದ್ದು, ಮುಂದೆ ಯಾವ ತಿರುವು ಪಡೆಯುತ್ತೆ ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us