ಆನ್​ಲೈನ್ ಟ್ರೇಡಿಂಗ್​​ ಹೆಸರಲ್ಲಿ ವಂಚನೆ: ಹೆಚ್ಚು ಹಣದ ಆಸೆಗೆ ಇದ್ದ ದುಡ್ಡನ್ನೂ ಕಳೆದುಕೊಂಡ ವ್ಯಕ್ತಿ

ರಾಯಚೂರಿನ ವ್ಯಕ್ತಿಯೊಬ್ಬರು ಆನ್‌ಲೈನ್ ಟ್ರೇಡಿಂಗ್ ಮೂಲಕ ಹೆಚ್ಚು ಲಾಭದ ಆಸೆಗೆ 59 ಲಕ್ಷ ರೂ. ಕಳೆದುಕೊಂಡಿದ್ದಾರೆ. ಸೈಬರ್ ವಂಚಕರು ಅಧಿಕ ಆದಾಯದ ಆಮಿಷವೊಡ್ಡಿ ಹಣ ಹೂಡಿಕೆ ಮಾಡಿಸಿದ್ದರು. ಮೋಸ ಹೋದ ಬಗ್ಗೆ ಅರಿವಾದಾಗ ಪೊಲೀಸರಿಗೆ ದೂರು ನೀಡಿದ್ದು, ಇಂತಹ ಆನ್‌ಲೈನ್ ವಂಚನೆಗಳಿಂದ ಎಚ್ಚರದಿಂದಿರುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಆನ್​ಲೈನ್ ಟ್ರೇಡಿಂಗ್​​ ಹೆಸರಲ್ಲಿ ವಂಚನೆ: ಹೆಚ್ಚು ಹಣದ ಆಸೆಗೆ ಇದ್ದ ದುಡ್ಡನ್ನೂ ಕಳೆದುಕೊಂಡ ವ್ಯಕ್ತಿ
ಸಾಂದರ್ಭಿಕ ಚಿತ್ರ
Edited By:

Updated on: Nov 16, 2025 | 7:34 AM

ರಾಯಚೂರು, ನವೆಂಬರ್​ 16: ಆನ್​ಲೈನ್ ಟ್ರೇಡಿಂಗ್​​ ಹೆಸರಲ್ಲಿ ಸೈಬರ್​ ವಂಚಕರು ರಾಯಚೂರಿನ ವ್ಯಕ್ತಿಯೋರ್ವರಿಗೆ ಬರೋಬ್ಬರಿ 59 ಲಕ್ಷ ರೂ. ಹಣವನ್ನ ಪಂಗನಾಮಮ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಹೆಚ್ಚು ಹಣ ಮಾಡುವ ದಾರಿ ಹುಡುಕೋಕೆ ಹೋದ ವ್ಯಕ್ತಿಯೀಗ ಕೈಯಲ್ಲಿದ್ದ ದುಡ್ಡನ್ನೂ ಕಳೆದುಕೊಂಡಿದ್ದು, ನ್ಯಾಯ ಕೊಡಿಸಿ ಎಂದು ಪೊಲೀಸ್​ ಠಾಣೆಯ ಮೆಟ್ಟಿಲು ಏರಿದ್ದಾರೆ.

ರಾಯಚೂರಿನ ಶರಣಬಸವ ಎನ್ನುವವರು ಆನ್​​ಲೈನ್​ ಟ್ರೇಡಿಂಗ್​​ನಲ್ಲಿ ಆಸಕ್ತಿ ಹೊಂದಿದ್ದು, ಹೇಗೆಲ್ಲ ಹಣ ಹೂಡಿಕೆ ಮಾಡಿದರೆ ಹೆಚ್ಚು ಹಣ ಸಿಗುತ್ತೆ ಎಂಬ ವಿಡಿಯೋವನ್ನು ಫೇಸ್​​ಬುಕ್​ನಲ್ಲಿ ನೋಡುತ್ತಿದ್ದರು. ಇದೇ ವೇಳೆ ಸೈಬರ್ ವಂಚಕರಿಂದ ಶರಣಬಸವ ಅವರ ವಾಟ್ಸ್ಯಾಪ್​​ಗೆ ಒಂದು ಮೆಸೆಜ್ ಬಂದಿದೆ. ಆ ಲಿಂಕ್​​ನ ಇವರು ಓಪನ್​​ ಮಾಡಿದ್ದು, ಬಳಿಕ ಶರಣಬಸವ ಅವರಿಗೆ ಅಪರಿಚಿತರಿಂದ ವಾಟ್ಸ್ಯಾಪ್​ ಕರೆ ಬಂದಿದೆ. ಆರೋಪಿಗಳು Paytm Money ಕಂಪೆನಿಯ ಟ್ರೇಡಿಂಗ್​​ನಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಸಿಗುವ ಆಮಿಷ ಒಡ್ಡಿದ್ದಾರೆ. ಅವರ ಮಾತು ನಂಬಿದ್ದ ಶರಣಬಸವ, ಮೊದಲು 500 ರೂ. ಹಣ ವರ್ಗಾಯಿಸಿದ್ದರು. ಬಳಿಕ ಹೆಚ್ಚಿನ ಹಣ ಹಾಕುತ್ತಾ ಹೋಗಿದ್ದು, ಅಧಿಕ ಲಾಭಾಂಶವೂ ಸಿಕ್ಕಿದೆ. ಹೀಗಾಗಿ ದೊಡ್ಡ ಮೊತ್ತದ ಹಣವನ್ನು ಶರಣಬಸವ ಹೂಡಿಕೆ ಮಾಡಲು ಶುರುಮಾಡಿದ್ದಾರೆ. ಅಲ್ಲಿಂದ ಆರೋಪಿಗಳ ನವರಂಗಿ ಆಟ ಆರಂಭವಾಗಿದೆ.

ಇದನ್ನೂ ಓದಿ: ಫೋನ್ ಪೇ ಮೂಲಕ ಪರಿಚಯವಾಗಿ ಲವ್ವಿ ಡವ್ವಿ, ಗರ್ಭಿಣಿಯಾದ 9ನೇ ತರಗತಿ ವಿದ್ಯಾರ್ಥಿನಿ

ಒಟ್ಟು 59 ಲಕ್ಷ ರೂ. ಹಣವನ್ನು ಶರಣಬಸವ ಅವರು ವಂಚಕರ ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಲಾಭಾಂಶವೂ ಬರುತ್ತಿಲ್ಲ, ಅಸಲೂ ಸಿಗುತ್ತಿಲ್ಲ ಎಂಬ ಸ್ಥಿತಿ ಎದುರಾದಾಗ ತಮಗೆ ಕರೆ ಮಾಡಿದ್ದ ನಂಬರ್​​ನ ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಈ ವೇಳೆ ವಂಚಕರು ಸಂಪರ್ಕಕ್ಕೆ ಸಿಗದ ಹಿನ್ನಲೆ ತಾವು ಮೋಸ ಹೋಗಿರೋದು ಶರಣಬಸವ ಅವರಿಗೆ ಅರಿವಾಗಿದೆ. ಹೀಗಾಗಿ ಘಟನೆ ಸಂಬಂಧ ರಾಯಚೂರಿನ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇಂತಹ ವಂಚನೆ ಪ್ರಕರಣಗಳು ರಾಯಚೂರಿನಲ್ಲಿ ಮೇಲಿಂದ ಮೇಲೆ ಕೇಳಿಬರುತ್ತಿವೆ. 2021ರಲ್ಲಿ ಅರ್ಚಕ ಲಕ್ಷ್ಮೀಕಾಂತ್ ಎಂಬವರು ಕೂಡ ಶರಣಬಸವ ಅವರ ಮಾದರಿಯಲ್ಲೇ ಆನ್​ಲೈನ್​ ಟ್ರೇಡಿಂಗ್​ ಎಂದು ಹಣ ಹೂಡಿಕೆ ಮಾಡಲು ಹೋಗಿ 58 ಲಕ್ಷ ರೂ. ಕಳೆದುಕೊಂಡಿದ್ದರು. ಪ್ರಕರಣ ಬೆನ್ನತ್ತಿದ್ದ ಪೊಲೀಸರು ಆರೋಪಿಯನ್ನ ತಮಿಳುನಾಡಿದ ಬಥರುಸ್ಮಾನ್ ಎಂದು ಪತ್ತೆ ಮಾಡಿದ್ದರು. ಆದರೆ, ಆತ ಈಗಾಗಲೇ ಸತ್ತಿದ್ದಾನೆ ಎನ್ನುವ ವಿಚಾರ ತನಿಖೆ ವೇಳೆ ಗೊತ್ತಾಗಿತ್ತು. ಪ್ರಕರಣ ಸಂಬಂಧ ಆರೋಪಿ ಖಾತೆಗಳಿಗೆ ಹಣ ಹೋಗಿರೊ ದಾಖಲೆಗಳ ಆಧಾರದಲ್ಲಿ ಈಗಾಗಲೇ 18 ಲಕ್ಷ ರೂ.ಗಳನ್ನ ಪೊಲೀಸರು ರಿಕವರಿ ಮಾಡಿದ್ದಾರೆ. ದುರಂತ ಅಂದರೆ ವಿದ್ಯಾವಂತರೆ ಹೆಚ್ಚಾಗಿ ಆನ್​ಲೈನ್​ ವಂಚನೆಗೆ ಒಳಗಾಗುತ್ತಿದ್ದು, ಈ ಬಗ್ಗೆ ಎಚ್ಚರದಿಂದ ಇರುವಂತೆ ಪೊಲೀಸರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:31 am, Sun, 16 November 25