
ರಾಯಚೂರು, ಜೂನ್ 02: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ನಿಯೋಜನೆಗೊಂಡಿರುವ ಬೆನ್ನಲ್ಲೇ, ರಾಯಚೂರು ತಾಲೂಕಿನ ಪ್ರಸಿದ್ಧ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಸಡಗರ ಮನೆಮಾಡಿದೆ. ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಲಿದ್ದಾರೆ ಎಂದು ಈ ಹಿಂದೆ ಭವಿಷ್ಯ ನುಡಿದಿದ್ದ ದೇವಸ್ಥಾನದ ಮೂಲ ಅರ್ಚಕ ಶಾಮಾಚಾರ್ಯರು ಟಿವಿ9 ಎದುರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಈ ದೇವಸ್ಥಾನಕ್ಕೆ ಒಂದು ವಿಶಿಷ್ಟ ಇತಿಹಾಸವಿದೆ. ಹಿಂದೆ ಇಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದ ಗುಂಡೂರಾವ್, ಬಂಗಾರಪ್ಪ, ವೀರಪ್ಪ ಮೊಯ್ಲಿ ಮತ್ತು ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಇದೀಗ ಪಂಚಮುಖಿ ಪ್ರಾಣದೇವರ ಮಹಿಮೆಯಿಂದ ಸಿಎಂ ಆಗಿ ಆಯ್ಕೆಯಾಗಿರುವ ಐದನೇ ನಾಯಕ ಡಿ.ಕೆ. ಶಿವಕುಮಾರ್ ಆಗಿದ್ದಾರೆ.
2025ರ ಅಕ್ಟೋಬರ್ನಲ್ಲಿ ಡಿಸಿಎಂ ಆಗಿದ್ದ ವೇಳೆ ಡಿ.ಕೆ. ಶಿವಕುಮಾರ್ ಅವರು ಪತ್ನಿ ಸಮೇತ ಈ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪಂಚಮುಖಿ ದೇವರಿಗೆ ವಿಶೇಷವಾದ ‘ಮಧು ಅಭಿಷೇಕ’ ಹಾಗೂ 42 ಶ್ಲೋಕಗಳ ಪೂಜೆ ಮಾಡಿಸಿದ್ದರು.
ಈ ಬಗ್ಗೆ ಮಾತನಾಡಿರುವ ಅರ್ಚಕ ಶಾಮಾಚಾರ್ಯರು, ಪಂಚಮುಖಿ ಪ್ರಾಣದೇವರಲ್ಲಿ ಕಷ್ಟ ನಿವಾರಣೆಗಾಗಿ ಹಾಗೂ ಇಷ್ಟಾರ್ಥಗಳ ಈಡೇರಿಕೆಗಾಗಿ ಮಧು ಅಭಿಷೇಕ ಮಾಡಿಸಿದರೆ ಆ ಕೆಲಸ ಖಂಡಿತ ಆಗುತ್ತದೆ. ಅಂದು ಪೂಜೆ ಮುಗಿದ ಬಳಿಕ ಡಿಕೆಶಿ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದೆವು. ಇಂದು ರಾಯರ ಹಾಗೂ ಪಂಚಮುಖಿ ಆಂಜನೇಯನ ಆಶೀರ್ವಾದದಿಂದ ಅದು ನಿಜವಾಗಿದೆ ಎಂದು ಭಕ್ತಿಪೂರ್ವಕವಾಗಿ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:02 am, Tue, 2 June 26