
ರಾಯಚೂರು, ಏಪ್ರಿಲ್ 27: ದೇಶದ ಪ್ರಧಾನ ಮಂತ್ರಿಯೆಂದರೆ (Prime Minister) ಬಿಡುವಿಲ್ಲದ ಚಟುವಟಿಕೆಗಳಿಂದ ಕೂಡಿರುವ ವ್ಯಕ್ತಿ. ಆದರೆ, ರಾಯಚೂರಿನ ಸಾಮಾನ್ಯ ಯುವಕನೊಬ್ಬ ಪ್ರೀತಿಯಿಂದ ಕಳುಹಿಸಿದ ಮದುವೆ ಆಹ್ವಾನ ಪತ್ರಿಕೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿಶೇಷವಾಗಿ ಸ್ಪಂದಿಸಿದ್ದಾರೆ. ನವಜೋಡಿಗೆ ಶುಭಾಶಯ ಪತ್ರ ಕಳುಹಿಸುವ ಮೂಲಕ ಮೋದಿ ಅವರು ಸಿಂಧನೂರು ತಾಲೂಕಿನ ಕಾನಿಹಾಳ ಗ್ರಾಮದ ದಂಪತಿಯ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ.
ಸಿಂಧನೂರು ತಾಲೂಕಿನ ಕಾನಿಹಾಳ ಗ್ರಾಮದ ನಿವಾಸಿ ರಾಜೇಶ್ ನಾಯಕ್ ಎಂಬ ಯುವಕನ ಮದುವೆ ಇದೇ ಏಪ್ರಿಲ್ 13 ರಂದು ಸವಿತಾ ಎಂಬುವವರ ಜೊತೆ ನಿಶ್ಚಯವಾಗಿತ್ತು. ಈ ಸಂಭ್ರಮಕ್ಕೆ ಪ್ರಧಾನಿ ಮೋದಿಯವರನ್ನೂ ಆಹ್ವಾನಿಸಬೇಕೆಂದು ಬಯಸಿದ ರಾಜೇಶ್, ದೆಹಲಿಯ ಪ್ರಧಾನಿ ಕಚೇರಿಗೆ ಮದುವೆಯ ಆಹ್ವಾನ ಪತ್ರಿಕೆಯನ್ನು ರವಾನಿಸಿದ್ದರು. ಸಾಮಾನ್ಯ ಪ್ರಜೆಯ ಈ ಆಹ್ವಾನವನ್ನು ಸ್ವೀಕರಿಸಿದ ಪ್ರಧಾನಿ ಮೋದಿ, ಪತ್ರದ ಮೂಲಕ ನವಜೋಡಿಗೆ ಶುಭ ಹಾರೈಸಿದ್ದಾರೆ.
ರಾಜೇಶ್ ನಾಯಕ್ ಅವರಿಗೆ ಪತ್ರ ಬರೆದಿರುವ ಪ್ರಧಾನಿ ಮೋದಿ, ‘ನಿಮ್ಮ ವಿವಾಹ ಮಹೋತ್ಸವಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ಜೀವನದ ಈ ಶುಭ ಸಂದರ್ಭಕ್ಕೆ ಕಾಲಿಡುತ್ತಿರುವ ನಿಮಗೆ ಮತ್ತು ಸವಿತಾ ಅವರಿಗೆ ಸುಂದರ ಭವಿಷ್ಯಕ್ಕಾಗಿ ಶುಭಾಶೀರ್ವಾದಗಳು. ನಿಮ್ಮಿಬ್ಬರ ಹೃದಯ, ಮನಸ್ಸು ಮತ್ತು ಕ್ರಿಯೆಗಳು ಒಂದಾಗಿರಲಿ. ಜೀವನದ ಏರಿಳಿತಗಳಲ್ಲಿ ಪರಸ್ಪರ ಕೈಹಿಡಿದು, ಕನಸುಗಳನ್ನು ಸಾಕಾರಗೊಳಿಸುತ್ತಾ, ಜವಾಬ್ದಾರಿಗಳನ್ನು ಪ್ರೀತಿಯಿಂದ ನಿಭಾಯಿಸಿ. ಪರಸ್ಪರರ ದೋಷಗಳನ್ನು ಒಪ್ಪಿಕೊಂಡು, ಗುಣಗಳನ್ನು ಗೌರವಿಸುತ್ತಾ ಆದರ್ಶ ದಂಪತಿಗಳಾಗಿ ಬಾಳಿ. ನಿಮ್ಮ ದಾಂಪತ್ಯ ಜೀವನ ಸುದೀರ್ಘ, ಸುಖಮಯ ಮತ್ತು ಸುಂದರವಾಗಿರಲಿ’ ಎಂದು ಹಾರೈಸಿದ್ದಾರೆ.
‘ಇದೇ ತಿಂಗಳು (ಏಪ್ರಿಲ್ 13) ನಮ್ಮ ಮದುವೆ ನಡೆದಿತ್ತು. ಅದಕ್ಕೂ ಕೆಲವೇ ವಾರಗಳ ಮೊಡಲು ಪ್ರಧಾನಿ ಮೋದಿಯವರಿಗೆ ಮದುವೆಯ ಆಹ್ವಾನ ಪತ್ರಿಕೆ ಕಳುಹಿಸಿದ್ದೆ. ಅವರ ಕಡೆಯಿಂದ ಕನಿಷ್ಠ ಉತ್ತರವಾದರೂ ಬರಬಹುದು ಎಂದು ನಿರೀಕ್ಷಿಸಿ ಅವನ ಪತ್ರಿಕೆ ಕಳುಹಿಸಿದ್ದೆ. ಆದರೆ ಹೆಚ್ಚೇನೂ ನಿರೀಕ್ಷೆ ಇರಲಿಲ್ಲ. ಇದೀಗ ಪ್ರಧಾನಿಯವರಿಂದ ಶುಭಾಶಯ ಪತ್ರ ಬಂದಿದೆ. ಅಷ್ಟೊಂದು ದೊಡ್ಡ ಹುದ್ದೆಯಲ್ಲಿದ್ದು, ದೇಶದ ಸಾಮಾನ್ಯ ಪ್ರಜೆಯೊಬ್ಬನ ಪತ್ರವನ್ನೂ ಅವರು ಪರಿಗಣಿಸುತ್ತಾರೆ ಎಂಬುದು ನಿಜಕ್ಕೂ ಅದ್ಭುತ. ಅವರಿಗೆ ನಮ್ಮ ಕಡೆಯಿಂದ ಕೃತಜ್ಞತೆಗಳು’ ಎಂದು ರಾಜೇಶ್ ನಾಯಕ್ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:57 am, Mon, 27 April 26