
ರಾಯಚೂರು, ಜುಲೈ 31: ದೇಶಕ್ಕೆ ಪ್ರಸಿದ್ಧ ಚಿನ್ನವನ್ನು ನೀಡುವ ಹಟ್ಟಿ ಚಿನ್ನದ ಗಣಿ ಕಂಪನಿಯ (HGML) ವಿರುದ್ಧವೇ ರಾಯಚೂರು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ಭೂ ಹಕ್ಕಿಗಾಗಿ ಬೀದಿಗಿಳಿದು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ. ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಗಣಿ ಕಂಪನಿಯ ಮುಖ್ಯ ದ್ವಾರದ ಎದುರು ‘ಹಟ್ಟಿ ಭೂ ಹಕ್ಕು ವಂಚಿತ ರೈತ ಹೋರಾಟ ಸಮಿತಿ’ ನೇತೃತ್ವದಲ್ಲಿ ಬೃಹತ್ ಹೋರಾಟ ನಡೆಯುತ್ತಿದೆ.
ಗಣಿ ಅಭಿವೃದ್ಧಿ ಹೆಸರಿನಲ್ಲಿ ಹಟ್ಟಿ-ಕೋಠಾ ಸೀಮಾಂತರದ ಒಟ್ಟು 1,305 ಎಕರೆ ಜಮೀನನ್ನು ಗುತ್ತಿಗೆ ಪಡೆಯಲಾಗಿತ್ತು. ಈ ಪೈಕಿ 915 ಎಕರೆ ಭೂಮಿಯನ್ನು ಮಾತ್ರ ಭೂಸ್ವಾಧೀನಪಡಿಸಿಕೊಂಡು ರೈತರಿಗೆ ಸೂಕ್ತ ಪರಿಹಾರ ಹಾಗೂ ಉದ್ಯೋಗ ನೀಡಲಾಗಿದೆ. ಇನ್ನುಳಿದ 390 ಎಕರೆ ಜಮೀನನ್ನು ಕಂಪನಿಯು ಸ್ವಾಧೀನಪಡಿಸಿಕೊಳ್ಳದೇ, ರೈತರ ಗಮನಕ್ಕೂ ತರದೆ ಅವರ ಜಮೀನಿನ ಋಣಭಾರ ಪ್ರಮಾಣಪತ್ರದ (EC) ದಾಖಲೆಗಳಲ್ಲಿ ‘ಹಟ್ಟಿ ಚಿನ್ನದ ಗಣಿ’ ಹೆಸರು ನಮೂದಿಸಿಕೊಂಡಿದೆ.
ದಶಕಗಳಿಂದ ಜಮೀನಿನ ಹಕ್ಕು ದಾಖಲೆಗಳಲ್ಲಿ ಗಣಿ ಕಂಪನಿಯ ಹೆಸರು ಇರುವುದರಿಂದ, ರೈತರಿಗೆ ಬ್ಯಾಂಕುಗಳಲ್ಲಿ ಬೆಳೆ ಸಾಲವಾಗಲಿ ಅಥವಾ ಇತರ ಯಾವುದೇ ಸಾಲ ಸೌಲಭ್ಯಗಳಾಗಲಿ ಸಿಗುತ್ತಿಲ್ಲ. ಜಮೀನನ್ನು ಮಾರಾಟ ಮಾಡಲು ಸಾಧ್ಯವಾಗದೆ, ಇತ್ತ ಸರ್ಕಾರದಿಂದ ಸಿಗುವ ಬೆಳೆ ಪರಿಹಾರವೂ ಲಭಿಸದೆ ರೈತರು ಸಂಪೂರ್ಣ ಅತಂತ್ರರಾಗಿದ್ದಾರೆ.
18 ವರ್ಷಗಳಿಂದ ಈ ಸಮಸ್ಯೆಗೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ, ರೈತರು ತೀವ್ರ ಆಕ್ರೋಶಗೊಂಡಿದ್ದು, ತಕ್ಷಣವೇ ನಮ್ಮ ಜಮೀನಿನ ದಾಖಲೆಗಳಿಂದ ಹಟ್ಟಿ ಕಂಪನಿಯ ಹೆಸರನ್ನು ತೆಗೆದುಹಾಕಬೇಕು ಅಥವಾ ಸಂಪೂರ್ಣ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಬೇಡಿಕೆ ಈಡೇರುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ರೈತರು ಎಚ್ಚರಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ