ಆಸ್ತಿಗಾಗಿ ತಮ್ಮ ಸತ್ತ ಎಂದ ಅಣ್ಣ, ನಾನು ಬದುಕಿದ್ದೇನೆ ಅಂತ ತಮ್ಮ ದಿಢೀರ್ ಪ್ರತ್ಯಕ್ಷ

ಸಿರವಾರ ತಾಲ್ಲೂಕಿನ ಕಲಂಗೇರಾ ಗ್ರಾಮದಲ್ಲಿ ಅಣ್ಣ ತಮ್ಮನ ಆಸ್ತಿಯನ್ನು ಕಬಳಿಸಲು ಸುಳ್ಳು ಮರಣಪತ್ರ ಸೃಷ್ಟಿಸಿದ ಘಟನೆ ನಡೆದಿದೆ. ತಮ್ಮ ಬಸಪ್ಪ ಮರಣ ಹೊಂದಿದ್ದಾನೆ ಅಂತ ಸುಳ್ಳು ಮರಣ ಪತ್ರ ಸೃಷ್ಟಿಸಿ ಅಣ್ಣ ಮಾನಪ್ಪ ಆತನ ಆಸ್ತಿಯನ್ನು ಕಬಳಿಸಿದ್ದಾನೆ. ಈ ಅಕ್ರಮದಲ್ಲಿ ಗ್ರಾಮಾಡಳಿತಾಧಿಕಾರಿ ಮತ್ತು ಕಂದಾಯ ನಿರೀಕ್ಷಕರ ಪಾತ್ರವೂ ಇದೆ ಎಂದು ಆರೋಪಿಸಲಾಗಿದೆ.

ಆಸ್ತಿಗಾಗಿ ತಮ್ಮ ಸತ್ತ ಎಂದ ಅಣ್ಣ, ನಾನು ಬದುಕಿದ್ದೇನೆ ಅಂತ ತಮ್ಮ ದಿಢೀರ್ ಪ್ರತ್ಯಕ್ಷ
ಆಸ್ತಿ ಕಳೆದುಕೊಂಡ ಬಸಪ್ಪ
Edited By: ವಿವೇಕ ಬಿರಾದಾರ

Updated on: Nov 22, 2024 | 1:02 PM

ರಾಯಚೂರು, ನವೆಂಬರ್​ 22: ಸುಳ್ಳು ಮರಣ ಪತ್ರ ಸೃಷ್ಟಿಸಿ, ತಮ್ಮನ ಆಸ್ತಿಯನ್ನು (Proparty) ಅಣ್ಣ ಕಬಳಿಸಿರುವ ಘಟನೆ ಸಿರವಾರ (Sirwar) ತಾಲ್ಲೂಕಿನ ಕಲಂಗೇರಾ ಗ್ರಾಮದಲ್ಲಿ ನಡೆದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ತಹಶೀಲ್ದಾರ ಕಚೇರಿಗೆ ಓಡೋಡಿ ಬಂದ ಅಣ್ಣ ಬಸಪ್ಪ “ನಾನು..ಬದುಕಿದ್ದಿನಿ ನೋಡ್ರಿ” ಅಂತ ಅಳಲು ತೋಡಿಕೊಂಡಿದ್ದಾರೆ.

ಕಲಂಗೇರಾ ಗ್ರಾಮದ ಸರ್ವೆ ನಂಬರ್​ 35/1/3ನಲ್ಲಿರುವ 2.27 ಗುಂಟೆ ಜಮೀನು ಹಾಗೂ ಸರ್ವೆ ನಂಬರ್​ 102/5ರಲ್ಲಿರವ 1.15 ಗುಂಟೆ ಜಮೀನಿಗಾಗಿ ಸಹೋದರರಾದ ಮಾನಪ್ಪ, ಬಸಪ್ಪ ಮತ್ತು ಗಂಗಪ್ಪ ಅವರ ಹೆಸರಿನಲ್ಲಿ ಜಂಟಿ ಪಹಣಿಗಳು ಇವೆ. ಈ ಜಮೀನುಗಳನ್ನು ಕಬಳಿಸುವ ನಿಟ್ಟಿನಲ್ಲಿ ಮಾನಪ್ಪ ತಮ್ಮನಾದ ಬಸಪ್ಪ “ಮೃತಪಟ್ಟಿದ್ದಾನೆ ಎಂದು ಸುಳ್ಳು ಮರಣ ಪ್ರತ್ರ” ಸೃಷ್ಟಿಸಿದ್ದಾನೆ. ಬಳಿಕ, ಬಸಪ್ಪನ ಹೆಸರಿನಲ್ಲಿರುವ ಜಮೀನನ್ನು ಮಾನಪ್ಪ ತನ್ನ ಮಗನ ಹೆಸರಿಗೆ ಮಾಡಿಕೊಂಡಿದ್ದಾನೆ. ಈ ಕೃತ್ಯಕ್ಕೆ ಇನ್ನೊಬ್ಬ ಸಹೋದರನಾದ ಗಂಗಪ್ಪ ಕೂಡ ಸಹಾಯ ಮಾಡಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ.

ಈ ಅಕ್ರಮದಲ್ಲಿ ಗ್ರಾಮ ಆಡಳಿತಾಧಿಕಾರಿ, ಕಲಂಗೇರಾ ಮತ್ತು ಕಂದಾಯ ನಿರೀಕ್ಷಕರು, ಮಲ್ಲಟ ಭಾಗಿಯಾಗಿದ್ದಾರೆ. ಹೀಗಾಗಿ, ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಿರವಾರ ತಹಸೀಲ್ದಾರ್, ರಾಯಚೂರು ಎಸಿ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು

ಬಸ್, ಟ್ರಕ್​ಗಳ ಮೇಲೆ ಕಲ್ಲು ತೂರಾಟ, ಓರ್ವ ಬಂಧನ

ರಾಯಚೂರಿನ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬಸ್, ಟ್ರಕ್​ಗಳ ಮೇಲೆ ಕಲ್ಲು ತೂರಾಟ ಮಾಡಿದ್ದ ಆರೋಪಿಯನ್ನು ಹಟ್ಟಿ ಪೊಲೀಸರು ಬಂಧಿಸಿದ್ದಾರೆ. ಮೂವರು ಆರೋಪಿಗಳಿಗಾಗಿ ಪೊಲೀಸರು ಹುಡಕಾಟ ನಡೆಸಿದ್ದಾರೆ. ತಿಮ್ಮಣ್ಣ ಬಂಧಿತ ಆರೋಪಿ. ಅಂಬರೀಶ, ತಿಮಣ್ಣ, ಆಂಜನೇಯ್ಯ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದೇ ನವೆಂಬರ್ 18ರ ರಾತ್ರಿ ಆರೋಪಿ ತಿಮ್ಮಣ್ಣ ತನ್ನ ಅಕ್ಕ ಮತ್ತು ಮಾವನನ್ನ ಬೆಂಗಳೂರಿಗೆ ಕಳುಹಿಸಲು ಹೋಗಿದ್ದನು. ತಿಮ್ಮಣ್ಣನ ಜೊತೆ ಆತನ ಸ್ನೇಹಿತರು ಕೂಡ ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಸ್​ ನಿಲ್ದಾಣದಲ್ಲಿ ಯಾವುದೇ ಸಾರಿಗೆ ಬಸ್ ನಿಲ್ಲಿಸದ ಹಿನ್ನೆಲೆಯಲ್ಲಿ ತಿಮ್ಮಣ್ಣ ಮತ್ತು ಆತನ ಸ್ನೇಹಿತರು ಕೋಪಗೊಂಡಿದ್ದಾರೆ.

ಬಳಿಕ, ತಿಮ್ಮಣ್ಣ ತನ್ನ ಅಕ್ಕ-ಮಾವನನ್ನ ವಾಪಸ್ ಮನೆಗೆ ಬಿಟ್ಟು, ಲಿಂಗಸುಗೂರು ತಾಲೂಕಿನ ಗೊಲ್ಲಪಲ್ಲಿ ಬಳಿ ಪಾರ್ಟಿ ಮಾಡಿದ್ದಾರೆ. ಕುಡಿದ ಮತ್ತಲ್ಲಿ ಲಿಂಗುಸುಗೂರು-ಕಲಬುರ್ಗಿ ರಾಜ್ಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನಗಳ ಮೇಲೆ ಕಲ್ಲು ಎಸೆದಿದ್ದಾರೆ. ಈ ಬಗ್ಗೆ ಹಟ್ಟಿ ಪೊಲೀಸ್ ಠಾಣೆಯಲ್ಲಿ ಸಾರಿಗೆ ಬಸ್ ಸಿಬ್ಬಂದಿ ದೂರು ದಾಖಲಿಸಿದ್ದರು. ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Bhemesh Poojar

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More
Follow Us