AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಸ್ಕಿಯಲ್ಲಿ ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ಬೆಂಗಳೂರಿನಿಂದ ಮಸ್ಕಿಗೆ ತೆರಳಿ ಕೊಂದಿದ್ದ ಆರೋಪಿ! ಕಾರಣವೇನು?

ಮಸ್ಕಿ ಪಟ್ಟಣದ ಸಾನಬಾಳ ರಸ್ತೆಯಲ್ಲಿ ಚಾಕುವಿನಿಂದ ಹೊಟ್ಟೆ ಭಾಗಕ್ಕೆ ಇರಿದು 15 ವರ್ಷದ ಭೂಮಿಕಾ ಎಂಬ 9ನೇ ತರಗತಿಯ ವಿದ್ಯಾರ್ಥಿನಿಯನ್ನು ದುಷ್ಕರ್ಮಿ ರಮೇಶ ಕೊಲೆ ಮಾಡಿದ್ದ ಎಂಬ ಆರೋಪ ಕೇಳಿಬಂದಿದೆ.

ಮಸ್ಕಿಯಲ್ಲಿ ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ಬೆಂಗಳೂರಿನಿಂದ ಮಸ್ಕಿಗೆ ತೆರಳಿ ಕೊಂದಿದ್ದ ಆರೋಪಿ! ಕಾರಣವೇನು?
ಶಾಲೆಯಿಂದ ವಾಪಸಾಗುತ್ತಿದ್ದಾಗ ಹುಡುಗಿಯ ಅಡ್ಡಗಟ್ಟಿ, ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು
TV9 Web
| Edited By: |

Updated on:Feb 26, 2022 | 12:59 PM

Share

ರಾಯಚೂರು: ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದಲ್ಲಿ ಶುಕ್ರವಾರ ಸಂಜೆ ನಡೆದಿದ್ದ 9ನೇ ತರಗತಿಯ ವಿದ್ಯಾರ್ಥಿನಿ ಭೂಮಿಕಾ (15) ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮದುವೆಯಾಗುವುದಕ್ಕೆ ನಿರಾಕರಿಸಿದ ಹಿನ್ನೆಲೆ ಸೋದರತ್ತೆಯ ಪುತ್ರಿ ಭೂಮಿಕಾಗೆ ಚಾಕು ಇರಿದು ರಮೇಶ್ (28) ಎಂಬಾತ ಹತ್ಯೆಗೈದಿದ್ದಾನೆ. ನಿರ್ಜನ ಪ್ರದೇಶಕ್ಕೆ ಭೂಮಿಕಾಳನ್ನು ಕರೆದೊಯ್ದು ಕಿರುಕುಳ ನೀಡಿ ಹತ್ಯೆ ಮಾಡಿದ್ದಾನೆ.

ಸೋದರ ಅತ್ತೆ ಮಗಳಾಗಿದ್ದ ಭೂಮಿಕಾಳನ್ನು ಆರೋಪಿ ರಮೇಶ್ ಕಳೆದೊಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ. ಈ ಮಧ್ಯೆ ರಮೇಶ್ ಜೊತೆ ಭೂಮಿಕಾಳ ಮದುವೆಗೆ ನಿರಾಕರಣೆ ಕೇಳಿಬಂದಿದೆ. ಸಗೋತ್ರದ ನೆಪ ಹೇಳಿ ಭೂಮಿಕಾ ಕುಟುಂಬಸ್ಥರು ಮದುವೆಗೆ ನಿರಾಕರಿಸಿದ್ದರು. ನಿನ್ನೆ ಬೆಂಗಳೂರಿನಿಂದ ಮಸ್ಕಿಗೆ ಬಂದಿದ್ದ ರಮೇಶ ಶಾಲೆಗೆ ಹೋಗಿದ್ದ ಭೂಮಿಕಾಳನ್ನು ಕರೆದು ತರ್ತಿನಿ ಅಂತಾ ಹೋಗಿದ್ದ. ಆಗ ಭೂಮಿಕಾಳನ್ನು ಗಿಡಗಂಟೆಗಳಿರುವ ಪ್ರದೇಶಕ್ಕೆ ಕರೆದೊಯ್ದು ಟಾರ್ಚರ್ ಮಾಡಿ, ಮದುವೆಯಾಗುವಂತೆ ಪೀಡಿಸಿದ್ದಾನೆ. ಬಳಿಕ ಚಾಕುವಿನಿಂದ ಇರಿದಿದ್ದಾನೆ. ನಿರ್ಜನ ಪ್ರದೇಶದಿಂದ ಮುಖ್ಯ ರಸ್ತೆಗೆ ಓಡಿ ಬಂದು ಒದ್ದಾಡಿ ಪ್ರಾಣಬಿಟ್ಟಿದ್ದಳು ಭೂಮಿಕಾ. ಈ ಸಂಬಂಧ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀರಿನ ಟ್ಯಾಂಕ್​ಗೆ ಬಿದ್ದು ಬಾಲಕಿ ಸಾವು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೂವೆ ಗ್ರಾಮದ ಎಸ್ಟೇಟ್​ನಲ್ಲಿ ಟ್ಯಾಂಕ್​ಗೆ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಗೀತಾ-ಶೇಷಪ್ಪ ದಂಪತಿ ಪುತ್ರಿ ಪ್ರಾರ್ಥನಾ ಆಟವಾಡ್ತಾ ನೀರಿನ ಟ್ಯಾಂಕ್ ಬಳಿ ಹೋಗಿದ್ದಾಳೆ. ಆದ್ರೆ ಆಯತಪ್ಪಿ ಟ್ಯಾಂಕ್​ಗೆ ಬಿದ್ದು, 7 ವರ್ಷದ ಬಾಲಕಿ ಪ್ರಾರ್ಥನಾ ನೀರಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾಳೆ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆ್ಯಸಿಡ್ ಕುಡಿಸಿ ರಾಡ್‌ನಿಂದ ಹೊಡೆದು ಅಕ್ಕಸಾಲಿಗನ ಕೊಲೆ ಕಲಬುರಗಿ: ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ರಾವೂರ್ ಕ್ರಾಸ್ ಬಳಿ ಅಕ್ಕಸಾಲಿಗರೊಬ್ಬರಿಗೆ ಆ್ಯಸಿಡ್ ಕುಡಿಸಿ, ರಾಡ್‌ನಿಂದ ಹೊಡೆದು ಕೊಲೆ ಮಾಡಲಾಗಿದೆ. ಕಲಬುರಗಿಯ ಶಹಬಜಾರ್ ಕಬಾಡ್ ಗಲ್ಲಿ ನಿವಾಸಿ ವಿಜಯಕುಮಾರ್ ಶಿಲವಂತ (38) ಹತ್ಯೆಗೀಡಾದವರು. ಶುಕ್ರವಾರ ಮಧ್ಯಾಹ್ನ ವಿಜಯಕುಮಾರ್ ಚಿನ್ನಾಭರಣ ತರಲು ಹಲಕರ್ಟಿ ಗ್ರಾಮಕ್ಕೆ ಹೋಗಿದ್ದರು.

ಈ ವೇಳೆ ದುಷ್ಕರ್ಮಿಗಳು ವಿಜಯಕುಮಾರ್​​ರನ್ನು ಅಡ್ಡಗಟ್ಟಿ ಹಣ ದೋಚಿದ್ದಾರೆ. ಹಣ ದೋಚಿದ್ದೂ ಅಲ್ಲದೆ, ಅವರಿಗೆ ಆ್ಯಸಿಡ್ ಕುಡಿಸಿ, ರಾಡ್‌ನಿಂದ ಹೊಡೆದು ಪರಾರಿಯಾಗಿದ್ದಾರೆ. ಆದರೆ ಸ್ಥಳೀಯರು ವಿಜಯಕುಮಾರ್​​ರನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ರಾತ್ರಿ ವಿಜಯಕುಮಾರ್ ಕೊನೆಯುಸಿರೆಳೆದಿದ್ದಾರೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊನ್ನಾಳಿ ಪ್ರಿಯಕರನಿಗಾಗಿ ರೇಪ್‌ ಕತೆ ಕಟ್ಟಿದ ಅಪ್ರಾಪ್ತ ಹುಡುಗಿ! ಅದು ಯುವತಿ ಮೇಲಿನ ಅತ್ಯಾಚಾರ ಪ್ರಕರಣ.. ಆ ಕೇಸನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ನಾಲ್ಕೈದು ಟೀಂ ಮಾಡಿಕೊಂಡು ಕಾಮುಕರಿಗಾಗಿ ಬಲೆ ಬೀಸಿದ್ರು. ಇಷ್ಟೆಲ್ಲಾ ಸೀನ್‌ ಕ್ರಿಯೆಟ್‌ ಆಗ್ತಿದ್ದಂತೆ ಅಲ್ಲಿ ಎಲ್ಲವೂ ಉಲ್ಟಾ ಆಗಿತ್ತು. ಕಂಪ್ಲೇಂಟ್‌ ಕೊಟ್ಟವರೇ ಪೊಲೀಸರ ಅತಿಥಿಯಾಗಿದ್ರು. ಪೊಲೀಸರು ಅಲರ್ಟ್ ಆಗಿದ್ರು…ಅಧಿಕಾರಿಗಳ ಟೀಂ ಫೀಲ್ಡ್‌ಗೆ ಇಳಿದಿತ್ತು. ಇಡೀ ಜಿಲ್ಲಾಡಳಿತ ರಾತ್ರೋರಾತ್ರಿ ಎದ್ದು ಕೂತಿತ್ತು..ಅಷ್ಟಕ್ಕೂ ಇಡೀ ಖಾಕಿ ಟೀಂ ಕಾರ್ಯಾಚರಣೆ ಆರಂಭಿಸಿದ್ದು ಯುವತಿಗಾಗಿ.. ನೊಂದ ಯುವತಿಗೆ ನ್ಯಾಯ ಕೊಡಿಸೋ ಸಲುವಾಗಿ..ಆದ್ರೆ ವಿಚಾರಣೆ ಆರಂಭಿಸುತ್ತಿದ್ದಂತೆ ಎಲ್ಲವೂ ಉಲ್ಟಾ ಆಗಿತ್ತು.

ಪ್ರಿಯಕರನಿಗಾಗಿ ರೇಪ್‌ ಕತೆ ಕಟ್ಟಿದ ಯುವತಿ..! ಸುಳ್ಳು ಹೇಳಿ ಯಾಮಾರಿಸಿದ್ದಕ್ಕೆ ಪೊಲೀಸರ ಅತಿಥಿ..! ಆಕೆ ಶಿವಮೊಗ್ಗ ಮೂಲದ ಯುವತಿ . ಅದೇ ಯುವತಿ ದಾವಣಗೆರೆಯಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡ್ತಿದ್ಲು.. ಈ ನಡುವೆ ದಾವಣಗೆರೆ ಜಿಲ್ಲೆ ಹೊನ್ನಾಳಿಯ ಅದೊಬ್ಬ ಯುವಕನ ಪ್ರೇಮ ಬಲೆಗೆ ಬಿದ್ದಿದ್ಲು… ಇಬ್ರು ಪ್ರೇಮಲೋಕದಲ್ಲೇ ಸುತ್ತಾಡ್ತಿದ್ರು. ಆದ್ರೆ ಅದೇನಾಯ್ತೋ ಇವರ ಲವ್‌ ಬ್ರೇಕ್‌ ಅಪ್‌ ಆಗಿತ್ತು.. ಯುವತಿ ಎಷ್ಟೇ ಫೋನ್‌ ಮಾಡಿದ್ರೂ ಯುವಕ ಮಾತ್ರ ರಿಸೀವ್‌ ಮಾಡಿರಲಿಲ್ಲ.

ಹೀಗಾಗಿ ಒಂದು ಪ್ಲ್ಯಾನ್‌ ಮಾಡಿದ ಯುವತಿ ಹೊನ್ನಾಳಿಯ ತುಂಗಭದ್ರಾ ನದಿ ತೀರಕ್ಕೆ ಬಂದಿದ್ಲು.. ಅಲ್ಲಿ ಮೀನುಗಾರನ ಫೋನ್‌ ಪಡೆದು ಅದ್ರಿಂದ ಪ್ರಿಯಕರನಿಗೆ ಮೇಸೇಜ್‌ ರವಾನಿಸಿದ್ಲು… ನಿನ್ನ ಹುಡುಗಿಯನ್ನ ಕಿಡ್ನ್ಯಾಪ್‌ ಮಾಡಿದ್ದೇವೆ. ಬಿಡಿಸಿಕೊಂಡು ಹೋಗು ಅಂತಾ ಸಂದೇಶ ರವಾನಿಸಿದ್ಲು. ಆದ್ರೆ ಇದಕ್ಕೆ ಕ್ಯಾರೇ ಎನ್ನದ ಪ್ರಿಯಕರ ಅದೇ ಸಂದೇಶವನ್ನ ಅವರ ಮನೆಯವರಿಗೆ ರವಾನಿಸಿದ್ದ. ಈ ಸುದ್ದಿ ಗೊತ್ತಾಗ್ತಿದ್ದಂತೆ ಮನೆಯವರೆಲ್ಲಾ ಹೊನ್ನಾಳಿಗೆ ಓಡಿ ಬಂದಿದ್ರು.

ಇನ್ನು ತನ್ನ ಫೋಷಕರು ಬಂದು ಪ್ರಶ್ನೆ ಮಾಡ್ತಿದ್ದಂತೆ ಮತ್ತೊಂದು ನಾಟಕ ಶುರು ಮಾಡಿದ ಯುವತಿ ನನ್ನನ್ನ ಆಟೋದಲ್ಲಿ ಅಪಹರಿಸಿ ಅತ್ಯಾಚಾರ ಮಾಡಿದ್ದಾರೆ ಅಂತಾ ಹೇಳಿದ್ಲು. ಇದ್ರಿಂದ ಆತಂಕಗೊಂಡ ಫೋಷಕರು ದಾವಣಗೆರೆಗೆ ಹೋಗಿ ಕಂಪ್ಲೇಂಟ್‌ ನೀಡಿದ್ರು. ಇದು ಕಿಡ್ನ್ಯಾಪ್‌ ಅಂಡ್‌ ಅತ್ಯಾಚಾರ ಪ್ರಕರಣ ಆಗಿರೋದ್ರಿಂದ ಫುಲ್‌ ಅಲರ್ಟ್ ಆದ ಪೊಲೀಸರು ಹಗಲು ರಾತ್ರಿ ಎನ್ನದೇ ನಾಲ್ಕೈದು ಟೀಂ ಕಟ್ಟಿಕೊಂಡು ಆರೋಪಿಗಳಿಗಾಗಿ ಹುಡುಕಾಟ ಶುರು ಮಾಡಿದ್ರು.

ಇತ್ತ ಯುವತಿಯ ವೈದ್ಯಕೀಯ ಪರೀಕ್ಷೆ ನಡೆದಿತ್ತು.. ವಿಷ್ಯ ಅಂದ್ರೆ ಯುವತಿ ಮೇಲೆ ಅತ್ಯಾಚಾರ ಆಗಿಲ್ಲ ಅಂತಾ ಮೆಡಿಕಲ್‌ ವರದಿ ಬಂದಿತ್ತು. ಈ ವೇಳೆ ಯುವತಿಯನ್ನೇ ತೀವ್ರವಾಗಿ ವಿಚಾರಿಸುತ್ತಿದ್ದಂತೆ ಇದೆಲ್ಲಾ ಸುಳ್ಳು ಅನ್ನೋದನ್ನ ಒಪ್ಪಿಕೊಂಡಿದ್ಲು.

ಒಟ್ನಲ್ಲಿ ಪ್ರಿಯಕರನಿಗಾಗಿ ರೇಪ್‌ ಕತೆ ಕಟ್ಟಿದ ಯುವತಿ, ಇಡೀ ದಾವಣಗೆರೆ ಜಿಲ್ಲೆಯ ಪೊಲೀಸರೇ ಸುತ್ತಾಡುವಂತೆ ಮಾಡಿದ್ಲು. ಆದ್ರೆ ಮಾಡಿದ ತಪ್ಪಿಗೆ ಈಗ ತಾನೇ ಪೊಲೀಸರ ಅತಿಥಿಯಾಗಿದ್ದಾಳೆ.

Published On - 7:46 am, Sat, 26 February 22