ಸರ್ಕಾರಿ ಹುದ್ದೆಗಾಗಿ ಸಿಂಧನೂರು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಪ್ರಿಯಾಂಕಾ ರಾಜೀನಾಮೆ, ರಾಜಕೀಯಕ್ಕೂ ಗುಡ್​ಬೈ..!

ಅದೃಷ್ಟ ಎಂಬುಂದು ಯಾವಾಗ ಬಾಗಿಲು ತಟ್ಟುತ್ತದೆ ಎಂದು ಹೇಳುವುದು ಕಷ್ಟ. ಹೌದು...ಒಟ್ಟು 32 ಸದಸ್ಯ ಬಲದ ಸಿಂಧನೂರು ನಗರಸಭೆಯಲ್ಲಿ ಅಧ್ಯಕ್ಷ ಸ್ಥಾನ ಎಸ್‌ಟಿ ಮೀಸಲಾತಿ ಬಂದಿತ್ತು. ಅದು ಇವರು ಒಬ್ಬರೇ. ಹಾಗಾಗಿ ಕಾಂಗ್ರೆಸ್ ಪಕ್ಷದ ಸದಸ್ಯ ಬಲ 20 ಇದ್ದರೂ ಎಸ್‌ಟಿ ಸದಸ್ಯರಿರಲಿಲ್ಲ. ಜೆಡಿಎಸ್ ಸದಸ್ಯೆಯಾಗಿದ್ದ ಪ್ರಿಯಾಂಕ ನಾಯಕ್‌ ಕಾಂಗ್ರೆಸ್ ಬೆಂಬಲದೊಂದಿಗೆ ಅವಿರೋಧವಾಗಿ ಅಧ್ಯಕ್ಷರಾದರು. ಅಷ್ಟೇ ಅಲ್ಲದೇ ಇದೀಗ ಪ್ರಿಯಾಂಕಾಗೆ ಸರ್ಕಾರಿ ಕೆಲಸ ಹುಡುಕಿಕೊಂಡು ಬಂದಿದೆ. ಅದೃಷ್ಟ ಅಂದ್ರೆ ಇದಪ್ಪಾ.

ಸರ್ಕಾರಿ ಹುದ್ದೆಗಾಗಿ ಸಿಂಧನೂರು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಪ್ರಿಯಾಂಕಾ ರಾಜೀನಾಮೆ, ರಾಜಕೀಯಕ್ಕೂ ಗುಡ್​ಬೈ..!
Priyanka Nayak

Updated on: Apr 18, 2025 | 4:52 PM

ರಾಯಚೂರು, (ಏಪ್ರಿಲ್ 18):  ಸರ್ಕಾರಿ ಹುದ್ದೆಯಲ್ಲಿರುವವರು (Government Job) ರಾಜೀನಾಮೆ ನೀಡಿ ಬಳಿಕ ರಾಜಕೀಯಕ್ಕೆ (Politics) ಪ್ರವೇಶ ಮಾಡುತ್ತಿರುವವರ ಸಂಖ್ಯೆ ಹೆಚ್ಚಿದೆ. ಆದ್ರೆ, ರಾಯಚೂರು (Raichur) ಜಿಲ್ಲೆಯ ಸಿಂಧನೂರು ನಗರಸಭೆ ಅಧ್ಯಕ್ಷೆ (sindhanur municipality  President) ಮಾತ್ರ ಡಿಫ್ರೆಂಟ್​​. ರಾಜಕೀಯಕ್ಕೆ ಗುಡ್​ಬೈ ಹೇಳಿ ಸರ್ಕಾರಿ ಕೆಲಸಕ್ಕೆ ಜೈ ಎಂದಿದ್ದಾರೆ. ಹೌದು.. ಇಂಜಿನಿಯರಿಂಗ್ ಪದವಿಧರೆಯಾಗಿರುವ ಪ್ರಿಯಾಂಕಾ ನಾಯಕ್ (Priyanka Nayak) ಎನ್ನುವವರು ಸರ್ಕಾರಿ ಹುದ್ದೆಗಾಗಿ ಸಿಂಧನೂರು ನಗರಸಭೆ ಅಧ್ಯಕ್ಷೆ ಹಾಗೂ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಎಲ್ಲರ ಗಮನಸೆಳೆದಿದ್ದಾರೆ.

ಇಂಜಿನಿಯರಿಂಗ್ ಪದವಿಧರೆಯಾಗಿರುವ ಪ್ರಿಯಾಂಕಾ, ಅವರು ಇತ್ತೀಚೆಗೆ ಸ್ಪರ್ಧಾತ್ಮಕ ಪರೀಕ್ಷೆ (Competitive Exam) ಬರೆದಿದ್ದರು. ಇದೀಗ ಹುದ್ದೆಯ ಅಂತಿಮ ಪಟ್ಟಿಯಲ್ಲಿ ಪ್ರಿಯಾಂಕಾ ಅವರ ಹೆಸರು ಬಂದಿದೆ. ಹೀಗಾಗಿ ಅವರು ಸರ್ಕಾರಿ ಹುದ್ದೆಯನ್ನು ಆಯ್ಕೆ ಮಾಡಿದ್ದು, ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಿಯಾಂಕಾ ಅವರು ಈಗಾಗಲೇ ರಾಯಚೂರು ಜಿಲ್ಲಾಧಿಕಾರಿಗೆ ನಗರಸಭೆ ಅಧ್ಯಕ್ಷೆ ಹಾಗೂ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ: ವೃದ್ಧಾಶ್ರಮಕ್ಕೆ ಕಟ್ಟಡ ನಿರ್ಮಿಸಿಕೊಟ್ಟ ಖಾಕಿ: ನಿರ್ಗತಿಕರ ಆಶ್ರಮಕ್ಕೆ ಹೆಗಲಾದ ರಾಯಚೂರು ಪೊಲೀಸ್ ಪಡೆ

ಸಿಂಧನೂರು ನಗರಸಭೆ ಅಧ್ಯಕ್ಷೆ ಪ್ರಿಯಾಂಕಾ ನಾಯಕ್​ಗೆ ಲಕ್​ ಮೇಲೆ ಲಕ್​ ಖುಲಾಯಿಸಿದೆ. ಮೀಸಲಾತಿ ಮೇಲೆ ಪ್ರಿಯಾಂಕಾ ಅವರು ಅವಿರೋಧವಾಗಿ ಸಿಂಧನೂರು ನಗರಸಭೆ ಅಧ್ಯಕ್ಷರಾಗುವ ಲಕ್​ ಖುಲಾಯಿಸಿತು. ಇದೀಗ ಪ್ರಿಯಾಂಕಾ ಅವರನ್ನು ಹುಡುಕೊಂಡು ಸರ್ಕಾರಿ ಕೆಲಸ ಬಂದಿದೆ. ಹೀಗಾಗಿ ಪ್ರಿಯಾಂಕಾ ಅವರು ಸರ್ಕಾರಿ ಹುದ್ದೆಗಾಗಿ ತಮ್ಮ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ
ರಾಯಚೂರು: ನಾ ಡ್ರೈವರ, ನೀ ಲವ್ವರ ಅಂತಿದ್ದವನೀಗ ಒಂಟಿ, ವಿಭಿನ್ನ ಲವ್ ಸ್ಟೋರಿ
ಒಬ್ಬರ ಮಾಂಗಲ್ಯ ಸರ ದಾರಿಹೋಕನಿಗೆ ಸಿಕ್ಕಾಗ... ಇದು ಒಂದು ಚಿನ್ನದ ಕಥೆ
ಪ್ರೇಮ ವಿವಾಹಕ್ಕೆ ಐವರ ಕೊಲೆ, ಮೂವರಿಗೆ ಗಲ್ಲು, 9 ಮಂದಿಗೆ ಜೀವಾವಧಿ ಶಿಕ್ಷೆ
ಮಕ್ಕಳಾಗದ ಕೊರಗು: ಬಡ ಮಕ್ಕಳ ಬಾಳಿಗೆ ಬೆಳಕಾದ ರಾಯಚೂರಿನ ಶಿಕ್ಷಕ ದಂಪತಿ

2 ಬಾರಿ ನಗರಸಭೆ ಅಧ್ಯಕ್ಷ ಲಕ್​​

ಒಟ್ಟು 32 ಸದಸ್ಯ ಬಲದ ಸಿಂಧನೂರು ನಗರಸಭೆಯಲ್ಲಿ ಅಧ್ಯಕ್ಷ ಸ್ಥಾನ ಎಸ್‌ಟಿ ಮೀಸಲಾತಿ ಬಂದಿತ್ತು. ಕಾಂಗ್ರೆಸ್ ಪಕ್ಷದ ಸದಸ್ಯ ಬಲ 20 ಇದ್ದರೂ ಎಸ್‌ಟಿ ಸದಸ್ಯರಿರಲಿಲ್ಲ. ಇದರಿಂದ ಜೆಡಿಎಸ್ ಸದಸ್ಯೆಯಾಗಿದ್ದ ಪ್ರಿಯಾಂಕಾ ನಾಯಕ್‌ ಕಳೆದ ಅವಧಿಯಲ್ಲೂ ಸಹ ಒಂದು ಸಲ ಅವಿರೋಧವಾಗಿ ಅಧ್ಯಕ್ಷರಾಗಿದ್ದರು. ಈ ಬಾರಿಯೂ ಅದೇ ಮೀಸಲಾತಿ ಬಂದಿತ್ತು. ಈ ಸಂಬಂಧ ಕಾಂಗ್ರೆಸ್​​ ನಾಯಕರು ಕೋರ್ಟ್​ ಹೋಗಿದ್ದರೂ ಸಹ ಫಲಕೊಟ್ಟಿರಲಿಲ್ಲ. ಕೊನೆಗೆ ಕಾಂಗ್ರೆಸ್ ನಾಯಕರು,​ ಪ್ರಿಯಾಂಕಾ ಅವರನ್ನು ಸೆಳೆದು ತಮ್ಮ ಪಕ್ಷದಿಂದ ಬೆಂಬಲ ನೀಡಿ ಅಧ್ಯಕ್ಷರನ್ನಾಗಿ ಮಾಡಿದ್ದರು.  ಹೀಗೆ ಅದೃಷ್ಟದ ಮೇಲೆ ಎರಡನೇ ಬಾರಿ ಸಿಂಧನೂರು ನಗರಸಭೆ ಅಧ್ಯಕ್ಷರಾಗುವ ಲಕ್​ ಖುಲಾಯಿಸಿತು. ಆದ್ರೆ, ಇದೀಗ ಅಧ್ಯಕ್ಷೆಯಾಗಿ ಎರಡು ತಿಂಗಳ ಅಧಿಕಾರವಧಿ ಪೂರೈಸಿರುವ ಪ್ರಿಯಾಂಕಾ ನಾಯಕ್ ಈಗ ತಮ್ಮ ಸ್ಥಾನ ರಾಜೀನಾಮೆ ಸಲ್ಲಿಸಿದ್ದಾರೆ.

ನಗರಸಭೆ ಆಡಳಿತ ಅಧಿಕಾರವಧಿ ಅಕ್ಟೋಬರ್​ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಆದ್ರೆ, ಪ್ರಿಯಾಂಕಾ ಮಾತ್ರ ಸರ್ಕಾರಿ ಹುದ್ದೆಗೇರಲು ಅಧಿಕಾರವಧಿ ಮುಗಿಯುವ ಮುನ್ನವೇ ಅಧ್ಯಕ್ಷ ಸ್ಥಾನಕ್ಕೆ ಗುಡ್​ಬೈ ಹೇಳಿದ್ದಾರೆ. ಈಗ ಇರುವ ರಾಜಕೀಯ ಸ್ಥಿತಿಗತಿ ಮುಂದೆ ಇರುವುದಿಲ್ಲ. ಮತದಾರ ಉತ್ತುಂಗ ಏರಿಸಬಹುದು ಇಲ್ಲ ಮಕಾಡೆ ಮಲಗಿಸಬಹುದು. ಇದನೆಲ್ಲಾ ಅಳೆದು ತೂಗಿ ಕೊನೆಗೆ ರಾಜಕೀಯಕ್ಕೆ ಗುಡ್​ಬೈ ಹೇಳಿ ಸರ್ಕಾರಿ ಕೆಲಸದತ್ತ ಮುಖ ಮಾಡಲು ತೀರ್ಮಾನಿಸಿದ್ದಾರೆ. ಭವಿಷ್ಯ ದೃಷ್ಟಿಯಿಂದ ರಾಜಕೀಯಕ್ಕಿಂತ ಸರ್ಕಾರಿ ಹುದ್ದೆಯೇ ಬೆಸ್ಟ್​ ಎಂದು ಈ ತೀರ್ಮಾನ ಕೈಗೊಂಡಿರುವುದಾಗಿ ಪ್ರಿಯಾಂಕಾ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರಂತೆ.

ಮುಂದಿನ ಅಧ್ಯಕ್ಷರು ಯಾರು?

ಸಿಂಧನೂರು ಕಾಂಗ್ರೆಸ್​ ಹಾಗೂ ಬಿಜೆಪಿಯಲ್ಲಿ ಯಾರು ಎಸ್​ಟಿ ಮಹಿಳಾ ಸದಸ್ಯೆ ಇಲ್ಲ. ಜೆಡಿಎಸ್​ನಿಂದ ಗೆದ್ದಿರುವುದು ಪ್ರಿಯಾಂಕಾ ಮಾತ್ರ. ಆದ್ರೆ, ಇದೀಗ ಅವರು ರಾಜೀನಾಮೆ ನೀಡಿದ್ದರಿಂದ ಮುಂದಿನ ಅಧ್ಯಕ್ಷರು ಯಾರು ಆಗುತ್ತಾರೆ ಎನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ. ಮೀಸಲಾತಿ ಹೊರತುಪಡಿಸಿ ಅಧಿಕಾರಕ್ಕೇರಲು ಬರುವುದಿಲ್ಲ. ಹೀಗಾಗಿ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ಮೀಸಲಾತಿ ಬದಲಿಸಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:51 pm, Fri, 18 April 25