
ರಾಮನಗರ, ಸೆಪ್ಟೆಂಬರ್ 06: ಬಿಡದಿ ಟೌನ್ಶಿಪ್ ಯೋಜನೆಯ ಭೂಸ್ವಾಧೀನಕ್ಕೆ ಭೂಮಿ ಕೊಡುವ ರೈತರ ಮೇಲೆ ವಂಚಕರ ಕಣ್ಣು ಬಿದ್ದಿದ್ದು, ರಾಮನಗರದಲ್ಲಿ ನಕಲಿ ದಾಖಲೆಗಳನ್ನ ಸೃಷ್ಟಿಸುವ ಜಾಲ ಸಕ್ರಿಯವಾಗಿದೆ. ಎರಡು ಸರ್ವೆ ನಂಬರ್ಗಳ ಎರಡು ಎಕರೆಗೆ ನಕಲಿ ದಾಖಲೆ ಸೃಷ್ಠಿಸಿ, ಕೋಟ್ಯಾಂತರ ರೂಪಾಯಿ ಹಣ ಹೊಡೆಯಲು ಸಂಚು ರೂಪಿಸಿರೋದು ಬೆಳಕಿಗೆ ಬಂದಿದೆ. ವಂಶವೃಕ್ಷ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಅಧಿಕಾರಿಗಳ ಡಿಜಿಟಕ್ ಸಹಿ, ಬ್ಯಾಂಕ್ ಅಕೌಂಟ್ಗಳನ್ನೂ ವಂಚಕರು ನಕಲಿ ಮಾಡಿರೋದು ಕಂಡುಬಂದಿದೆ.
ಅರಳಾಳುಸಂದ್ರ ಗ್ರಾಮದ ಸರ್ವೆ ನಂಬರ್ 28/5ರಲ್ಲಿ ಶಂಕರ್ ರೆಡ್ಡಿ ಹಾಗೂ ಕೃಷ್ಣರೆಡ್ಡಿ ಎಂಬುವವರ 1 ಎಕರೆ 13 ಗುಂಟೆ, ಸರ್ವೆ ನಂಬರ್ 43/1ರಲ್ಲಿ ಹೊನ್ನಾ ಎಂಬುವವರ 1.2 ಗುಂಟೆ ಜಾಗಕ್ಕೆ ನಕಲಿ ದಾಖಲೆಗಳನ್ನು ವಂಚಕರು ಸೃಷ್ಟಿಸಿದ್ದಾರೆ. ಅವುಗಳನ್ನೇ ಬಳಸಿಕೊಂಡು GBDAಯಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇನ್ನು ಪ್ರತಿ ಎಕರೆಗೆ ಎರಡರಿಂದ ಎರಡೂವರೆ ಕೋಟಿಯಷ್ಟು ಹಣವನ್ನು ಪರಿಹಾರವಾಗಿ ನೀಡಲಾಗುತ್ತಿದ್ದು, ಈ ಫೇಕ್ ದಾಖಲೆ ಬಳಸಿ ಸುಮಾರು ಐದು ಕೋಟಿಯಷ್ಟು ಪರಿಹಾರ ಪಡೆಯಲು ಆರೋಪಿಗಳು ಯತ್ನಿಸಿದ್ದಾರೆ.
ಇದನ್ನೂ ಓದಿ: ರಾಮನಗರದಲ್ಲಿ ಖೋಟಾನೋಟು ಜಾಲ ಪತ್ತೆ: ಕಿಂಗ್ಪಿನ್ ಸೇರಿ ಮತ್ತೆ ಮೂವರ ಬಂಧನ
ಈಗಾಗಲೇ ಯೋಜನೆ ಸಂಬಂಧ ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರ ಎರಡು ಹಂತದಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಈ ಹಿನ್ನೆಲೆ ಯೋಜನೆಗೆ ಒಪ್ಪಿಗೆ ಇರುವ ರೈತರು ಜಮೀನಿನ ಮೂಲ ದಾಖಲಾತಿಗಳನ್ನ ನೀಡಿ ಪರಿಹಾರಕ್ಕೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈಗಾಗಲೇ ಸಾಕಷ್ಟು ರೈತರಿಗೆ ಪರಿಹಾರvನ್ನೂ ನೀಡಿದ್ದು, ನಕಲಿ ದಾಖಲೆ ಸೃಷ್ಟಿ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂದಾಯ ಅಧಿಕಾರಿಗಳ ಪರಿಶೀಲನೆ ವೇಳೆ ಎರಡು ಅರ್ಜಿಗಳಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿರುವುದು ಪತ್ತೆ ಹಿನ್ನೆಲೆ, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇನ್ನು ದಾಖಲೆಗಳ ಪ್ರಾಥಮಿಕ ಭೌತಿಕ ಪರಿಶೀಲನೆ ವೇಳೆ ಅಧಿಕಾರಿಗಳಿಗೆ ಅನುಮಾನ ಮೂಡಿದ್ದು, ಸೆಪ್ಟೆಂಬರ್ 3ರಂದು GBDA ಅಧಿಕಾರಿಗಳು ಪರಿಶೀಲನೆಗಾಗಿ ರಾಮನಗರ ತಹಶೀಲ್ದಾರ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್