ಬಿಡದಿ ಟೌನ್​ಶಿಪ್​​ ಕಿಚ್ಚು: ಮೊದಲ ದಿನದ ಜೆಡಿಎಸ್ ಪಾದಯಾತ್ರೆ ಅಂತ್ಯ; ಎಲ್ಲರಿಗೂ ಧನ್ಯವಾದ ಹೇಳಿದ ನಿಖಿಲ್​

JDS Padayatra: ಬಿಡದಿ ಟೌನ್‌ಶಿಪ್ ವಿರೋಧಿಸಿ ಇಂದಿನಿಂದ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ಆರಂಭಿಸಿವೆ. ಬೆಳಿಗ್ಗೆ ಬೈರಮಂಗಲ ಗ್ರಾಮದಿಂದ ಆರಂಭವಾಗಿದ್ದ ಪಾದಯಾತ್ರೆ, ಇದೀಗ ಬಿಡದಿಯಲ್ಲಿ ಮುಕ್ತಾಯಗೊಂಡಿದೆ. ಆ ಮೂಲಕ ಮೊದಲ ದಿನದ ಪಾದಯಾತ್ರೆ ಯಶಸ್ವಿಯಾಗಿ ನೆರವೇರಿದೆ. ನಾಳೆ ನೈಸ್ ರಸ್ತೆವರೆಗೂ ಪಾದಯಾತ್ರೆ ಮುಂದುವರೆಯಲಿದೆ.

ಬಿಡದಿ ಟೌನ್​ಶಿಪ್​​ ಕಿಚ್ಚು: ಮೊದಲ ದಿನದ ಜೆಡಿಎಸ್ ಪಾದಯಾತ್ರೆ ಅಂತ್ಯ; ಎಲ್ಲರಿಗೂ ಧನ್ಯವಾದ ಹೇಳಿದ ನಿಖಿಲ್​
ಜೆಡಿಎಸ್ ಪಾದಯಾತ್ರೆ
Image Credit source: x.com/hd_kumaraswamy
Edited By:

Updated on: Aug 09, 2026 | 8:21 PM

ಮುಖ್ಯಾಂಶಗಳು

  • ಬಿಡದಿ ಟೌನ್​ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಪಾದಯಾತ್ರೆ
  • ಬಿಡದಿಯಲ್ಲಿ ಜೆಡಿಎಸ್‌ನ ಮೊದಲ ದಿನದ ಪಾದಯಾತ್ರೆ ಮುಕ್ತಾಯ
  • ನಾಳೆ ನೈಸ್ ರಸ್ತೆವರೆಗೂ ನಡೆಯಲಿರುವ ಪಾದಯಾತ್ರೆ

ರಾಮನಗರ, ಆಗಸ್ಟ್​​ 09: ಸದ್ಯ ರಾಜ್ಯ ರಾಜಕಾರಣದಲ್ಲಿ ಬಿಡದಿ ಟೌನ್​ಶಿಪ್ (Bidadi Township Project) ಸಮರ ಮತ್ತೊಂದು ಹಂತಕ್ಕೆ ಹೋಗಿದೆ. ಯೋಜನೆ ವಿರೋಧಿಸಿ ‘ನಮ್ಮ ಭೂಮಿ ನಮ್ಮ ಹಕ್ಕು’ ಎಂಬ ಘೋಷಣೆಯಡಿ ಜೆಡಿಎಸ್ ಕೈಗೊಂಡಿರುವ ಪಾದಯಾತ್ರೆ (Padayatra) ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬಿಡದಿಯಲ್ಲಿ ಮುಕ್ತಾಯಗೊಂಡಿದೆ. ಮೊದಲ ದಿನದ ಪಾದಯಾತ್ರೆ ಯಶಸ್ವಿಯಾಗಿದ್ದು, ನಾಳೆ ಬಿಡದಿಯಿಂದ ನೈಸ್ ರಸ್ತೆಯವರೆಗೆ ಪಾದಯಾತ್ರೆ ಮುಂದುವರಿಯಲಿದೆ.

ಡಿ.ಕೆ ಶಿವಕುಮಾರ್ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ ಬಿಡದಿ ಟೌನ್‌ಶಿಪ್ ವಿರೋಧಿಸಿ ಬಿಜೆಪಿ-ಜೆಡಿಎಸ್ ಜಂಟಿ ಪಾದಯಾತ್ರೆ ಆರಂಭಿಸಿದೆ. ಬಿಡದಿಯ ಬೈರ ಮಂಗಲದಿಂದಲೇ ತೆಂಗಿನ ಸಸಿ ನೆಡುವ ಮೂಲಕ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಮತ್ತು ವಿಪಕ್ಷ ನಾಯಕ ಆರ್‌.ಅಶೋಕ್ ಪಾದಯಾತ್ರೆಗೆ ಚಾಲನೆ ನೀಡಿದರು. ಪಾದಯಾತ್ರೆಯಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಸಾವಿರಾರು ರೈತರು ಭಾಗಿಯಾಗಿದ್ದು, ಇಂದು 7 ಕಿಲೋ ಮೀಟರ್ ಪಾದಯಾತ್ರೆ ಮಾಡಲಾಗಿದೆ.

ಪಾದಯಾತ್ರೆಗೆ ಬಂದಿದ್ದ ಎಲ್ಲರಿಗೂ ಧನ್ಯವಾದ ಹೇಳಿದ ನಿಖಿಲ್ ಕುಮಾರಸ್ವಾಮಿ

ಮೊದಲ ದಿನದ ಪಾದಯಾತ್ರೆ ಬಳಿಕ ಬಿಡದಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ‘ಮೊದಲ ದಿನದ ಪಾದಯಾತ್ರೆಗೆ ಬಂದಿದ್ದ ಎಲ್ಲರಿಗೂ ಧನ್ಯವಾದಗಳು. ಮಳೆ, ಬಿಸಿಲಿನಲ್ಲಿ ಎಲ್ಲರೂ ಹೆಜ್ಜೆ ಹಾಕಿದ್ದೀರಿ. ನಮ್ಮ ಜಿಲ್ಲೆಯ ರೈತರ ಪರವಾಗಿ ನೀವೆಲ್ಲರೂ ಬಂದಿದ್ದೀರಿ. ಯಾವುದೇ ರಾಜಕೀಯಕ್ಕಾಗಿ ಪಾದಯಾತ್ರೆ ಹಮ್ಮಿಕೊಂಡಿಲ್ಲ. ನಿಮ್ಮ ಪಿತ್ರಾರ್ಜಿತ ಆಸ್ತಿಯನ್ನು ಉಳಿಸಿಕೊಳ್ಳಲು ಪಾದಯಾತ್ರೆ ಮಾಡಲಾಗುತ್ತಿದೆ’ ಎಂದರು.

ಇದನ್ನೂ ಓದಿ: ಬಿಡದಿ ಟೌನ್‌ಶಿಪ್‌ ವಿರೋಧಿಸಿ ಪ್ರತಿಭಟನೆ: ವಿಪಕ್ಷಗಳಿಗೆ ಡಿಕೆ ಶಿವಕುಮಾರ್ ಮೆಗಾ ಕೌಂಟರ್

ದೇವೇಗೌಡರಿಂದ 2ನೇ ದಿನದ ಪಾದಯಾತ್ರೆಗೆ ಚಾಲನೆ 

‘ನಾಳೆ 2ನೇ ದಿನದ ಪಾದಯಾತ್ರೆಗೆ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಚಾಲನೆ ನೀಡಲಿದ್ದಾರೆ. ಎರಡನೇ ದಿನವಾದ ನಾಳೆ ಪಾದಯಾತ್ರೆ 15 ಕಿ.ಮೀ ಸಾಗಲಿದೆ’ ಎಂದು ನಿಖಿಲ್ ಕುಮಾರಸ್ವಾಮಿ ಮಾಹಿತಿ ನೀಡಿದರು.

ವಿಧಾನಸೌಧದಲ್ಲಿ ಕುಳಿತಿರುವವರು ಹೊರಗೆ ತಿರುಗಿ ನೋಡಿದ್ದಾರೆ: ಎ.ಮಂಜುನಾಥ

ಮಾಜಿ ಶಾಸಕ ಎ.ಮಂಜುನಾಥ ಪ್ರತಿಕ್ರಿಯಿಸಿದ್ದು, ‘ಇದು ಪಾದಯಾತ್ರೆ ಅಲ್ಲ, ಸಂಘರ್ಷದ ಯಾತ್ರೆ ಶುರುವಾಗಿದೆ. ಮೊದಲ ದಿನದ ಜೆಡಿಎಸ್ ಪಾದಯಾತ್ರೆ ಯಶಸ್ವಿಯಾಗಿ ನೆರವೇರಿದೆ. ಬಿಡದಿ ಟೌನ್​ಶಿಪ್ ವಿರುದ್ಧ 514 ದಿನಗಳಿಂದ ಹೋರಾಡುತ್ತಿರುವ ನನ್ನ ಎಲ್ಲಾ ತಾಯಂದಿರಿಗೆ ನಮಸ್ಕಾರ. ವಿಧಾನಸೌಧದಲ್ಲಿ ಕುಳಿತಿರುವವರು ಹೊರಗೆ ತಿರುಗಿ ನೋಡಿದ್ದಾರೆ’ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us