ಡಿಕೆ ಸುರೇಶ್ ಅಂಬ್ಯುಲೆನ್ಸ್ ಹೇಳಿಕೆಗೆ ಇಂದು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಕೌಂಟರ್

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಜೆಡಿಎಸ್ ವರಿಷ್ಠ ಹೆಚ್​​ಡಿ ದೇವೇಗೌಡರು ಇಂದು ಪ್ರಚಾರ ನಡೆಸಲಿದ್ದಾರೆ. ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ‘ಆಂಬ್ಯುಲೆನ್ಸ್ ಪ್ರಚಾರ’ ವ್ಯಂಗ್ಯದ ಹೇಳಿಕೆಗೆ ತಿರುಗೇಟು ನೀಡುವ ಉದ್ದೇಶದಿಂದ ಹಾಗೂ ಪಕ್ಷಕ್ಕೆ ಹೊಸ ಚೈತನ್ಯ ತುಂಬಲು ಈ ಪ್ರಚಾರ ಆಯೋಜಿಸಲಾಗಿದೆ.

ಡಿಕೆ ಸುರೇಶ್ ಅಂಬ್ಯುಲೆನ್ಸ್ ಹೇಳಿಕೆಗೆ ಇಂದು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಕೌಂಟರ್
ನಿಖಿಲ್ ಕುಮಾರಸ್ವಾಮಿ ಪರ ಜೆಡಿಎಸ್ ವರಿಷ್ಠ ಹೆಚ್​​ಡಿ ದೇವೇಗೌಡರಿಂದ ಇಂದು ಮತಯಾಚನೆ
Edited By:

Updated on: Nov 05, 2024 | 9:23 AM

ರಾಮನಗರ, ನವೆಂಬರ್ 5: ಆಂಬ್ಯುಲೆನ್ಸ್​ನಲ್ಲಿ ಪ್ರಚಾರಕ್ಕೆ ಬರಲಿದ್ದಾರೆ ಎಂಬ ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಹೇಳಿಕೆಗೆ ಕೌಂಟರ್ ಕೊಡಲು ಮುಂದಾಗಿರುವ ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ ಇಂದು ಚನ್ನಪಟ್ಟಣದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಮತಯಾಚನೆ ಮಾಡಲಿದ್ದಾರೆ. ದೇವೇಗೌಡರನ್ನು ಪ್ರಚಾರಕ್ಕೆ ಇಳಿಸುವ ಮೂಲಕ ಕಾಂಗ್ರೆಸ್​​ಗೆ ಕೌಂಟರ್​​ ಕೊಡುವುದರ ಜತೆಗೆ, ಪಕ್ಷಕ್ಕೆ ಶಕ್ತಿ ತುಂಬುವುದು ದಳಪತಿಗಳ ಯೋಜನೆಯಾಗಿದೆ.

ವಿರೂಪಾಕ್ಷಿಪುರದಿಂದ ಇಂದು ಬೆಳಗ್ಗೆ 11 ಗಂಟೆಗೆ ಮತಯಾಚನೆ ಆರಂಭಿಸಲಿರುವ ದೇವೇಗೌಡರು, ಚನ್ನಪಟ್ಟಣದ ಗ್ರಾಮಗಳಲ್ಲಿ ಸುತ್ತಾಡಲಿದ್ದಾರೆ.

ನೀರಾವರಿ ಭಗೀರಥ ಹೇಳಿಕೆಗೂ ಕೌಂಟರ್ ಕೊಡಲು ಜೆಡಿಎಸ್​​ನಿಂದ ಸಿದ್ಧತೆ ನಡೆದಿದೆ. ಇಗ್ಗಲೂರು ಡ್ಯಾಂ ಕಟ್ಟಿಸಿದ ಕಾರಣಕ್ಕೆ ಚನ್ನಪಟ್ಟಣ ಅಭಿವೃದ್ಧಿ ಎಂಬ ವಾದ ಜನರ ಮುಂದಿಡಲು ಖುದ್ದು ದೇವೇಗೌಡರನ್ನೇ ಜೆಡಿಎಸ್​ ಪ್ರಚಾರ ಕಣಕ್ಕೆ ಇಳಿಸುತ್ತಿದೆ. ಇದರ ಜತೆಗೆ, ಜೆಡಿಎಸ್​​ನ ಹಳೇ ಮುಖಂಡರನ್ನು ಸಮಾಧಾನ‌ ಮಾಡಿ, ಕಾಂಗ್ರೆಸ್​​ನಿಂದ ಜೆಡಿಎಸ್​​ಗೆ ಸೆಳೆಯುವ ತಂತ್ರಗಾರಿಕೆಯೂ ಈ ನಡೆಯ ಹಿಂದಿದೆ ಎನ್ನಲಾಗಿದೆ.

ಕೆಲವು ದಿನಗಳ ಹಿಂದೆ ಚನ್ನಪಟ್ಟಣ ಕೋಡಂಬಳ್ಳಿಯಲ್ಲಿ ಮಾತನಾಡಿದ್ದ ಮಾಜಿ ಸಂಸದ ಡಿಕೆ ಸುರೇಶ್, ನಾಳೆ ಅಂಬ್ಯುಲೆನ್ಸ್​​ನಲ್ಲಿ ಪ್ರಚಾರಕ್ಕೆ ಬರಲಿದ್ದಾರೆ ಎಂದು ದೇವೇಗೌಡರ ಬಗ್ಗೆ ವ್ಯಂಗ್ಯವಾಡಿದ್ದರು. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ಜೆಡಿಎಸ್ ‘ಕೈ’ ನಾಯಕರ ವಿರುದ್ಧ ವಾಗ್ದಾಳಿ ನಡೆಸಿತ್ತು.

92ನೇ ವಯಸ್ಸಿನಲ್ಲೂ ದಣಿವರಿಯದ ಉತ್ಸಾಹ!

ಲೋಕಸಭೆ ಚುನಾವಣೆ ಸಂದರ್ಭ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದ ದೇವೇಗೌಡರು, ಇದೀಗ 92ನೇ ವಯಸ್ಸಿನಲ್ಲೂ ಚನ್ನಪಟ್ಟಣದಲ್ಲಿ ಪಕ್ಷದ ಪರ ಪ್ರಚಾರದ ಅಖಾಡಕ್ಕಿಳಿಯುತ್ತಿರುವುದು ವಿಶೇಷ. ಪಕ್ಷದ ಅಭ್ಯರ್ಥಿಯ, ಮೊಮ್ಮಗನ ಗೆಲುವಿಗೆ ಪಣ ತೊಟ್ಟಿರುವ ದೇವೇಗೌಡರು ಪ್ರಚಾರದ ಅಖಾಡದಲ್ಲಿ ಯಾವ ದಾಳ ಉರುಳಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

ದೇವೇಗೌಡರ ಪ್ರಚಾರ: ಮಿಶ್ರ ಪ್ರತಿಕ್ರಿಯೆ

ದೇವೇಗೌಡರೇ ಖುದ್ದು ಪ್ರಚಾರ ಕಣಕ್ಕೆ ಧುಮುಕಿರುವುದರಿಂದ ಜೆಡಿಎಸ್​ಗೆ ಲಾಭವಾಗಲಿದೆಯೇ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ದೇವೇಗೌಡರ ಪ್ರಚಾರದಿಂದ ಜೆಡಿಎಸ್​ಗೆ, ನಿಖಿಲ್​ಗೆ ಪ್ರಯೋಜನವಾಗಲಿದೆ ಎಂದು ಕೆಲವು ಮಂದಿ ವಿಶ್ಲೇಕರು ಅಭಿಪ್ರಾಯಪಟ್ಟರೆ, ಇನ್ನು ಕೆಲವರು ಇದನ್ನು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಆಂಬ್ಯುಲೆನ್ಸ್​ನಲ್ಲಿ ಪ್ರಚಾರಕ್ಕೆ ಬರ್ತಾರೆ: ದೇವೇಗೌಡ ವಿರುದ್ಧ ಡಿಕೆ ಸುರೇಶ್ ಹೇಳಿಕೆಯನ್ನೇ ಪ್ರತ್ಯಸ್ತ್ರ ಮಾಡಲು ಮುಂದಾದ ದಳ

ಈ ಹಿಂದೆ ಮಂಡ್ಯ ಮತ್ತು ರಾಮನಗರದಲ್ಲಿ ನಿಖಿಲ್ ಪರ ದೇವೇಗೌಡರು ಪ್ರಚಾರ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಗೌಡರ ವರ್ಚಸ್ಸು ಕಡಿಮೆಯಾಗಿದೆ ಎಂದು ಕೆಲವು ಮಂದಿ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ