ಕುಮಾರಸ್ವಾಮಿ ತೋಟದ ಮನೆ ಮೇಲೆ ಚುನಾವಣಾ ಅಧಿಕಾರಿಗಳ ದಾಳಿ, ಕಾರ್ಯಕರ್ತರಿಗೆ ಸಿಗದ ಬಾಡೂಟ

| Updated By: ವಿವೇಕ ಬಿರಾದಾರ

Updated on: Apr 10, 2024 | 2:15 PM

ರಾಜ್ಯ ಎನ್​ಡಿಎ ಮುಖಂಡರು ಮತ್ತು ಕಾರ್ಯಕರ್ತರಿಗಾಗಿ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿಯವರು ತಮ್ಮ ತೋಟದ ಮನೆಯಲ್ಲಿ ಬಾಡೂಟ ಏರ್ಪಡಿಸಿದ್ದರು. 250ಕ್ಕೂ ಹೆಚ್ಚು ಜನರಿಗೆ ಬಾಡೂಟ ಏರ್ಪಡಿಸಿದ ವಿಚಾರ ತಿಳಿದ ಚುನಾವಣಾ ಆಯೋಗದ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಕುಮಾರಸ್ವಾಮಿ ತೋಟದ ಮನೆ ಮೇಲೆ ಚುನಾವಣಾ ಅಧಿಕಾರಿಗಳ ದಾಳಿ, ಕಾರ್ಯಕರ್ತರಿಗೆ ಸಿಗದ ಬಾಡೂಟ
ಕುಮಾರಸ್ವಾಮಿ ತೋಟದ ಮನೆ ಮೇಲೆ ಅಧಿಕಾರಿಗಳ ದಾಳಿ
Follow us on

ರಾಮನಗರ, ಏಪ್ರಿಲ್​ 10: ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಅವರ ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆ ಮೇಲೆ ಚುನಾವಣಾ ಅಧಿಕಾರಿಗಳು (Election Commission Officers) ದಾಳಿ ಮಾಡಿದ್ದಾರೆ. ಹೆಚ್​ಡಿ ಕುಮಾರಸ್ವಾಮಿಯವರ ತೋಟದ ಮನೆಯಲ್ಲಿ 250ಕ್ಕೂ ಹೆಚ್ಚು ಜನರಿಗಾಗಿ ಬಾಡೂಟ ತಯಾರಿಸಲಾಗಿತ್ತು. ಈ ವಿಚಾರ ತಿಳಿದ ಚುನಾವಣಾ ಅಧಿಕಾರಿಗಳು ಧಿಡೀರನೆ ದಾಳಿ ಮಾಡಿದ್ದು, ಚಿಕನ್, ಮಟನ್ ಮತ್ತು ಬಿರಿಯಾನಿ ಸೇರಿದಂತೆ ಹಲವು ಖಾದ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಚುನಾವಣಾ ಅಧಿಕಾರಿಗಳು ಎಫ್​ಐಆರ್​ ದಾಖಲಿಸಲು ತಯಾರಿ ನಡೆಸಿದ್ದಾರೆ. ಬಾಡೂಟವೆಂದು ತೋಟಕ್ಕೆ ಬಂದ ಕಾರ್ಯಕರ್ತರಿಗೆ ನಿರಾಸೆಯಾಗಿದ್ದು, ಸಪ್ಪೆ ಮುಖ ಮಾಡಿಕೊಂಡು ವಾಪಸ್​ ಆಗುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ತಹಶೀಲ್ದಾರ್​ಗೆ ಪದೇ ಪದೇ ಕರೆ ಮಾಡಿ ಒತ್ತಡ ಹಾಕಿಸಿದ್ದಾರೆ. ನಮ್ಮ ಮನೆಯಲ್ಲಿ ಪರಿಶೀಲಿಸಿದ್ದಾರೆ ಅಲ್ಲಿ ಏನೂ ಸಿಕ್ಕಿಲ್ಲಿ. ನನ್ನ ತೋಟದ ಮನೆಯಲ್ಲಿ 120 ಜನ ಕೆಲಸ ಮಾಡುತ್ತಿದ್ದಾರೆ. ಕೆಲಸಗಾರರಿಗೆ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಿದ್ದೇನೆ. ನಾನು ಬಿಡದಿಯ ಕೇತಗಾನಹಳ್ಳಿ ತೋಟದ ಮನೆಗೆ ಹೋಗಲ್ಲ. ನಾವು ಪಕ್ಷದ ಕೆಲ ಮುಖಂಡರನ್ನು ಕರೆದು ಸಭೆ ನಡೆಸಲಿದ್ದೆವು ಎಂದು ತಿಳಿಸಿದರು.

ಇದನ್ನೂ ಓದಿ: ಕೃಷಿ ಕ್ಷೇತ್ರಕ್ಕೆ ಕಾಂಗ್ರೆಸ್ ನಾಯಕರ ಕೊಡುಗೆಯಾದರೂ ಏನು? ಹೆಚ್ ಡಿ ಕುಮಾರಸ್ವಾಮಿ

ಕಾಂಗ್ರೆಸ್​ಗೆ ಕೆಪಿಸಿಸಿ ಕಚೇರಿ, ಬಿಜೆಪಿಗೆ ಕೇಶವ ಕೃಪ ಹೆಡ್ ಆಫೀಸ್​ ಇದ್ದ ಹಾಗೆ, ನಮಗೆ ನಮ್ಮ ತೋಟದ ಮನೆ ಹೆಡ್​ ಆಫೀಸ್​​. ನನಗೂ ತಲೆ ಇದೆ ಏನು ಮಾಡಬೇಕು ಅಂತ ಗೊತ್ತಿದೆ. ಜಾತ್ಯಾತೀತ ಅಂತ ಹೇಳುವವರು, ಪ್ರತಿ ದಿನ ಜಾತಿ ಬಗ್ಗೆಯೇ ಮಾತಾಡುತ್ತಾರೆ. ನಮ್ಮ ಸಮಾಜದ ಜನ ದಡ್ಡರಲ್ಲ. ನಮ್ಮ ಸಮುದಾಯದ ಸ್ವಾಮೀಜಿಗಳನ್ನು ನಾವು  ರಜಕೀಯವಾಗಿ ದುರುಪಯೋಗ ಮಾಡಿಕೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್​. ಡಿ.ಕುಮಾರಸ್ವಾಮಿ ಹೇಳಿದರು.

ಮನೆಯಲ್ಲಿ ಊಟ ಮಾಡಲು ಯಾರ ಅನುಮತಿ ಬೇಕು: ಆರ್ ಅಶೋಕ್​

ಹೆಚ್​ಡಿ ಕುಮಾರಸ್ವಾಮಿ ಅವರ ತೋಟದ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮನೆಯಲ್ಲಿ ಊಟ ಮಾಡಲು ಯಾರ ಅನುಮತಿ ಬೇಕು ಎಂದು ವಿರೋಧ ಪಕ್ಷದ ನಾಯಕ ಆರ್​.ಅಶೋಕ್ ಪ್ರಶ್ನಿಸಿದರು.

ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ಔತಣಕೂಟಕ್ಕೆ ಕರೆದಿದ್ದರು: ಅಶ್ವತ್​ನಾರಾಯಣ

ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರು ಔತಣಕೂಟಕ್ಕೆ ಕರೆದಿದ್ದರು. ಆದರೆ ಯಾರೋ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಅದಕ್ಕೆ ಭೋಜನ ಕೂಟವೇ ಬೇಡ ಅಂತ ನಾವು ನಿರ್ಧಾರಕ್ಕೆ ಬಂದಿದ್ದೇವೆ ಎಂದು ಮಾಜಿ ಸಚಿವ ಸಿ.ಎನ್ ಅಶ್ವತ್​ ನಾರಾಯಣ ಹೇಳಿದರು. ​

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:37 pm, Wed, 10 April 24