ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧರಾಗಿರುವ ಡಿಕೆ ಶಿವಕುಮಾರ್: ಪರೋಕ್ಷವಾಗಿ ಮುಂದಿನ ಸಿಎಂ ಎಂದ ಬಾಲಕೃಷ್ಣ
ಒಂದ್ಕಡೆ ಕಾಂಗ್ರೆಸ್ನಲ್ಲಿ ಸಿಎಂ ಸಲಹೆಗಾರ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ. ಇನ್ನೊಂದ್ಕಡೆ ಎಸ್ಸಿ, ಎಸ್ಟಿ ಸಚಿವರು ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿಗೆ ಮುಂದಾಗಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಮನೆಯಲ್ಲಿ ಮುಂದಿನ ಸಿಎಂ ಕೂಗು ಮುಂದುವರೆದಿದೆ. ಈ ಬಗ್ಗೆ ಹೈಕಮಾಂಡ್ ವಾರ್ನ್ ಮಾಡಿದರೂ ನಿಲ್ಲುತ್ತಿಲ್ಲ. ಸದ್ಯ ಚನ್ನಪಟ್ಟಣದಲ್ಲಿ ನಡೆದ ಕೃತಜ್ಞತಾ ಸಮಾವೇಶದಲ್ಲಿ ಪರೋಕ್ಷವಾಗಿ ಡಿಕೆ ಶಿವಕುಮಾರ್ ಮುಂದಿನ ಸಿಎಂ ಎಂದು ಶಾಸಕ ಬಾಲಕೃಷ್ಣ ಹೇಳಿದ್ದಾರೆ.

ರಾಮನಗರ, ಫೆಬ್ರವರಿ 02: ಕಾಂಗ್ರೆಸ್ ಪಾಳಯದಲ್ಲಿ ಪದೇ ಪದೇ ಸಿಎಂ ಕೂಗು ಕೇಳಿಬರುತ್ತಿದೆ. ಇದು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಇದರ ಮಧ್ಯೆ ಇದೀಗ ಈ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧರಾಗಿರುವ ಡಿಕೆ ಶಿವಕುಮಾರ್ (DK Shivakumar) ಎಂದು ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿದ್ದಾರೆ. ಆ ಮೂಲಕ ಪರೋಕ್ಷವಾಗಿ ಡಿಕೆ ಶಿವಕುಮಾರ್ ಮುಂದಿನ ಸಿಎಂ ಎಂದಿದ್ದಾರೆ.
ಸಿಪಿ ಯೋಗೇಶ್ವರ್ ಹಾಡಿಹೊಗಳಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಜಿಲ್ಲೆಯ ಚನ್ನಪಟ್ಟಣದ ಸಾತನೂರು ರಸ್ತೆ ಬಳಿ ನಡೆದ ಕೃತಜ್ಞತಾ ಸಮಾವೇಶದಲ್ಲಿ ಸ್ವಾಗತ ಭಾಷಣ ಮಾಡುವಾಗ ಶಾಸಕ ಹೆಚ್.ಸಿ.ಬಾಲಕೃಷ್ಣ ಈ ರೀತಿಯಾಗಿ ಹೇಳಿದ್ದಾರೆ. ಸಿ.ಪಿ.ಯೋಗೇಶ್ವರ್ ಹೊಸ ಶಾಸಕರಂತೆ ಕೆಲಸ ಮಾಡುತ್ತಿದ್ದಾರೆ. ಹಳೇ ನಾಯಕರಂತೆ ಬಂದು ಗುದ್ದಲಿ ಪೂಜೆ ಮಾಡಿ ಹೋಗಲ್ಲ. ಚನ್ನಪಟ್ಟಣ ಕ್ಷೇತ್ರದ ಸಮಸ್ಯೆ ಸಿ.ಪಿ.ಯೋಗೇಶ್ವರ್ಗೆ ಗೊತ್ತಿದೆ. ಸತ್ತವರಿಗೆ ಒಂದು ಹೂವಿನ ಹಾರ ಹಾಕಿ ಹೋಗುತ್ತಿಲ್ಲ. ಎಲ್ಲವನ್ನೂ ತಿಳಿದುಕೊಂಡು ಯೋಗೇಶ್ವರ್ ಕೆಲಸ ಮಾಡಿತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಂಡಿನೋವು ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಸಿಎಂ ಸಿದ್ದರಾಮಯ್ಯ ಡಿಸ್ಚಾರ್ಜ್
ಸಮಾವೇಶಕ್ಕೆ ಬರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಕೃತಜ್ಞತೆ ಹೇಳಬೇಕು ಅಂತಾ ಅವರೇ ಆಯೋಜನೆ ಮಾಡಿದ್ದರು. ಮಂಡಿಗೆ ಸ್ವಲ್ಪ ಸಮಸ್ಯೆ ಹಿನ್ನೆಲೆ ಕಾರ್ಯಕ್ರಮಕ್ಕೆ ಬರಲಿಲ್ಲ. ಹೀಗಾಗಿ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ನಮ್ಮ ಅಭ್ಯರ್ಥಿ ಪ್ರಧಾನಿ ಮಗ ಅಲ್ಲ, ಮುಖ್ಯಮಂತ್ರಿ ಮಗ ಅಲ್ಲ. ಒಬ್ಬ ಮಾಸ್ಟರ್ ಮಗ, ಹೀಗಾಗಿ ದೇಶವೇ ಈ ಚುನಾವಣೆ ನೋಡ್ತಿತ್ತು. ನೀವೆಲ್ಲಾ ಕಾಂಗ್ರೆಸ್ ಮರ್ಯಾದೆ ಉಳಿಸಿದ್ದೀರಿ. ಡಿಕೆ ಶಿವಕುಮಾರ್ಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಅವರಿಗೆ ಗೌರವ ತಂದು ಕೊಟ್ಟಿದ್ದೀರಿ ಎಂದಿದ್ದಾರೆ.
ಇದು ಚನ್ನಪಟ್ಟಣ ಜನರ ಋಣ ತೀರಿಸುವ ಕಾರ್ಯಕ್ರಮ: ಡಿಕೆ ಶಿವಕುಮಾರ್
ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಇದು ಚನ್ನಪಟ್ಟಣ ಜನರ ಋಣ ತೀರಿಸುವ ಕಾರ್ಯಕ್ರಮ. ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಬರಬೇಕಿತ್ತು. ಆದರೆ ಮಂಡಿ ಸಮಸ್ಯೆಯಿಂದ ಬರಲು ಆಗಿಲ್ಲ. ಅಭಿವೃದ್ಧಿ ಕೆಲಸಕ್ಕಾಗಿ ನೀವು ಮತ ನೀಡಿ ಗೆಲ್ಲಿಸಿದ್ದೀರಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಂದ ಶಾಸಕರ ಕ್ಷೇತ್ರಕ್ಕೆ ಅನುದಾನ ಸಿಗ್ತಿಲ್ಲ: ರಾಜೀನಾಮೆ ಬೆನ್ನಲ್ಲೇ ಬಿಆರ್ ಪಾಟೀಲ್ ಅಸಮಾಧಾನ
JDS ಕಾರ್ಯಕರ್ತರು ಟೈಂ ವೇಸ್ಟ್ ಮಾಡಿಕೊಳ್ಳೋದು ಬೇಡ. ಬೆಂಗಳೂರು ದಕ್ಷಿಣ ಜಿಲ್ಲೆ ತಯಾರಾಗುತ್ತಿದೆ. ಒಬ್ಬ ವ್ಯಕ್ತಿಗೋಸ್ಕರ ಇಡೀ ಪಕ್ಷವನ್ನೇ ಬಲಿ ಕೊಟ್ಟಿದ್ದಾರೆ. ಅದರ ಬಗ್ಗೆ ನಾನೇನು ಚರ್ಚೆ ಮಾಡಲ್ಲ, ನಮ್ಮ ಜತೆ ಕೈಜೋಡಿಸಿ. ನಾನು, ಸಿದ್ದರಾಮಯ್ಯ ನಿಮ್ಮ ಜೊತೆಗೆ ನಿಲ್ಲುತ್ತೇವೆ ಎಂದಿದ್ದಾರೆ.
ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿದ್ದಿಷ್ಟು
ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿ, ಮೈಕ್ರೋ ಫೈನಾನ್ಸ್ ವಿಚಾರವಾಗಿ ರಾಜ್ಯ ಸರ್ಕಾರ ಗಮನಿಸಬೇಕು. ಮೈಕ್ರೋ ಫೈನಾನ್ಸ್ ವಿಚಾರವಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲೇ ಚನ್ನಪಟ್ಟಣದಲ್ಲಿ ಅತಿಹೆಚ್ಚು ಹಾಲು ಉತ್ಪಾದನೆ ಆಗುತ್ತೆ. ಸರ್ಕಾರ ಕೊಡುತ್ತಿರುವ ಬೆಲೆ ಸಾಲುತ್ತಿಲ್ಲ, ಇನ್ನಷ್ಟು ದರ ಏರಿಸಬೇಕು. ಬೆಲೆ ಹೆಚ್ಚಿಸುವ ನಿಟ್ಟಿನಲ್ಲಿ ರೈತರಿಗೆ ಸಹಾಯ ಮಾಡಬೇಕು ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.