Ramanagara News: ಅಕಾಲಿಕ ಮಳೆಯಿಂದ ಮಾವು ಬೆಳೆ ನಾಶ; ಸಂಕಷ್ಟದಲ್ಲಿ ಬೆಳೆಗಾರರು

ಕಳೆದ ಮೂರು ದಿನಗಳಿಂದ ರಾಮನಗರ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗುತ್ತಿದೆ. ಇದರ ಪರಿಣಾಮ ಇನ್ನೇನು ಕಟಾವು ಮಾಡಬೇಕಿದ್ದ ಮಾವಿನ ಕಾಯಿಗಳು ಮರದಿಂದ ನೆಲಕ್ಕೆ ಉದುರಿವೆ.

Ramanagara News: ಅಕಾಲಿಕ ಮಳೆಯಿಂದ ಮಾವು ಬೆಳೆ ನಾಶ; ಸಂಕಷ್ಟದಲ್ಲಿ ಬೆಳೆಗಾರರು
ಸಾಂದರ್ಭಿಕ ಚಿತ್ರ
Follow us
|

Updated on:May 23, 2023 | 7:31 PM

ರಾಮನಗರ: ಮರದ ತುಂಬೆಲ್ಲ ಬಿಟ್ಟಿರುವ ಮಾವು (Mango). ಬಿರುಗಾಳಿ ಸಹಿತ ಧಾರಕಾರ ಮಳೆಗೆ (Heavy Rain) ನೆಲಕ್ಕೆ ಉದುರಿರೋ ಮಾವಿನ ಕಾಯಿಗಳು. ನೆಲಕ್ಕೆ ಬಿದ್ದಿ ಮಾವಿನ ಕಾಯನ್ನು ಆರಿಸುತ್ತಿರುವ ಕಾರ್ಮಿಕರು. ಅಂದಹಾಗೆ ಈ ದೃಶ್ಯಕಂಡು ಬಂದಿದ್ದು, ರಾಮನಗರ (Ramanagara) ಜಿಲ್ಲೆಯಲ್ಲಿ. ಹೌದು ಕಳೆದ ಮೂರು ದಿನಗಳಿಂದ ರಾಮನಗರ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗುತ್ತಿದೆ. ಇದರ ಪರಿಣಾಮ ಇನ್ನೇನು ಕಟಾವು ಮಾಡಬೇಕಿದ್ದ ಮಾವಿನ ಕಾಯಿಗಳು ಮರದಿಂದ ನೆಲಕ್ಕೆ ಉದುರಿವೆ. ಇನ್ನೇನು ಕೆಲವೇ ದಿನಗಳಾಗಿದ್ದರೆ ಸಾಕಿತ್ತು, ಆ ರೈತರು ತಮ್ಮ ಬೆಳೆಯನ್ನು ಸಂಪೂರ್ಣವಾಗಿ ಕಟಾವು ಮಾಡುತ್ತಿದ್ದರು. ಆದರೆ ಆಕಾಲಿಕವಾಗಿ ಬರುತ್ತಿರುವ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯು ರಾಮನಗರ ಜಿಲ್ಲೆಯ ಮಾವು ಬೆಳೆಗಾರರ ಬದುಕಿಗೆ ಬಾರೀ ಪೆಟ್ಟು ಕೊಟ್ಟಿದೆ. ಕಟಾವಿಗೆ ಸಿದ್ಧವಾಗಿದ್ದ ಬೆಳೆ ನೆಲಕಚ್ಚಿದೆ.

ಇನ್ನು ಹತ್ತರಿಂದ ಹದಿನೈದು ದಿನಗಳ ಕಾಲ ಮಳೆರಾಯ ಬಿಡುವು ಕೊಟ್ಟಿದ್ದರೆ, ರಾಮನಗರ ಜಿಲ್ಲೆಯಲ್ಲಿ ಮಾವು ಸಂಪೂರ್ಣವಾಗಿ ಕಟಾವು ಆಗುತ್ತಿತ್ತು. ಆದರೆ ಏಕಾಏಕಿ ಬಿರುಗಾಳಿ ಸಹಿತ ಬರುತ್ತಿರುವ ಮಳೆಗೆ ಮರದಲ್ಲಿ ಇದ್ದ ಕಾಯಿಗಳು ನೆಲಕ್ಕೆ ಉದರಿವೆ. ಇದರಿಂದ ಮಾವನ್ನು ಮಾರಾಟ ಮಾಡಲು ಸಾಧ್ಯವಾಗದೇ ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಜೊತೆ ಮಾವಿನ ಬೆಲೆ ಕೂಡ ಕಡಿಮೆ ಆಗಿದೆ.

ಅಂದಹಾಗೆ ಮಾವು ಬೆಳೆಯುವಲ್ಲಿ ರಾಮನಗರ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿ ಇದೆ. ಜಿಲ್ಲೆಯಲ್ಲಿ ಸುಮಾರು 32 ಸಾವಿರ ಹೆಕ್ಟರ್ ಪ್ರದೇಶಲ್ಲಿ ಮಾವು ಬೆಳೆಯಲಾಗುತ್ತದೆ. ಪ್ರತಿವರ್ಷ ಸುಮಾರು 400ರಿಂದ 500 ಕೋಟಿಯ, ಒಂದೂವರೆ ಲಕ್ಷ ಮೆಟ್ರಿಕ್ ಟನ್ ವಹಿವಾಟು ಜಿಲ್ಲೆಯಲ್ಲಿ ನಡೆಯುತ್ತದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ತವರು ರಾಮನಗರ ಜಿಲ್ಲೆಯಲ್ಲಿ ಫುಲ್ ಅಲರ್ಟ್ ಆಗಿರಲು ಪೊಲೀಸರಿಗೆ ಸೂಚನೆ: ಕಾರಣವೇನು?

ಇನ್ನು ಜಿಲ್ಲೆಯಲ್ಲಿ ಬಾದಾಮಿ, ಸೆಂದೂರ, ಬೈಗನಪಲ್ಲಿ, ನೀಲಂ, ತೋತಾಪುರಿ ಸೇರಿದಂತೆ ವಿವಿಧ ಜಾತಿಯ ಹಣ್ಣುಗಳನ್ನ ಬೆಳೆಯಲಾಗುತ್ತದೆ. ರಾಮನಗರದಿಂದ ಹೊರ ರಾಜ್ಯಗಳಿಗೂ ಕೂಡ ರಫ್ತುಮಾಡಲಾಗುತ್ತದೆ. ಪ್ರತಿವರ್ಷ ರಾಜ್ಯದ ಮಾರುಕಟ್ಟೆಗೆ ಜಿಲ್ಲೆಯ ಮಾವು ಮೊದಲು ಲಗ್ಗೆ ಇಡುವುದು.

ಕಳೆದ ವರ್ಷ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಉಂಟಾದ ಹವಮಾನ ವೈಪರಿತ್ಯದಿಂದಾಗಿ ಮಾವು ಬೆಳೆ ಈ ಬಾರಿ ಸರಿಯಾಗಿ ಬಂದಿರಲಿಲ್ಲ. ಬಂದಂತಹ ಮಾವನ್ನು ಈಗಾಗಲೇ ರೈತರು ಶೇ 70 ರಷ್ಟು ಮಾತ್ರ ಕಟಾವು ಮಾಡಿದ್ದಾರೆ. ಇನ್ನು ಶೇ 30 ರಷ್ಟು ಮಾವು ಮರದಲ್ಲೇ ಇದೆ. ಆದರೆ ಇದೀಗ ಬಿರುಗಾಳಿ ಸಹಿತ ಸುರಿಯುತ್ತಿರೋ ಮಳೆಯಿಂದಾಗಿ ಮಾವು ಬೆಳೆಗಾರರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಶಾಂತ್ ಹುಲಿಕೆರೆ, ಟಿವಿ9 ರಾಮನಗರ

Published On - 7:30 pm, Tue, 23 May 23