ರಾಮನಗರ: ಮರಕ್ಕೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು
ರಾಮನಗರದ ಚನ್ನಪಟ್ಟಣ ತಾಲೂಕಿನ ಅಮ್ಮಳ್ಳಿದೊಡ್ಡಿ ಬಳಿ ಮರಕ್ಕೆ ಕಾರು ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಬೆಂಗಳೂರಿನ ಕಾಮಾಕ್ಷಿಪಾಳ್ಯದ ನಿವಾಸಿಗಳು ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಾಮನಗರ, ಮೇ 04: ಮರಕ್ಕೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚನ್ನಪಟ್ಟಣ (Channapattan) ತಾಲೂಕಿನ ಅಮ್ಮಳ್ಳಿದೊಡ್ಡಿ ಗ್ರಾಮದ ಬಳಿ ಸಂಭವಿಸಿದೆ. ಮಧು, ದೀಪು, ಅಭಿ ಮೃತದುರ್ದೈವಿಗಳು. ಚಿರು ಎಂಬುವರಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಬೆಂಗಳೂರಿನ (Bengaluru) ಕಾಮಾಕ್ಷಿಪಾಳ್ಯ ನಿವಾಸಿಗಳು ಎಂದು ತಿಳಿದುಬಂದಿದೆ.
KA 03 NA 4031 ಶಿಫ್ಟ್ ಕಾರಿನಲ್ಲಿ ಕಬ್ಬಾಳು ಗ್ರಾಮದಲ್ಲಿ ಕಾರ್ಯಕ್ರಮಕ್ಕೆ ಒಂದಕ್ಕೆ ಹೋಗಿದ್ದರು. ಕಾರ್ಯಕ್ರಮ ಮುಗಿಸಿ ವಾಪಾಸ್ ಬೆಂಗಳೂರಿಗೆ ಬರುವಾಗ ಅಪಘಾತ ಸಂಭವಿಸಿದೆ. ಮರಕ್ಕೆ ಡಿಕ್ಕಿ ಹೊಡದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವು
ತುಮಕೂರು: ಪಾವಗಡ ತಾಲೂಕಿನ ಅಪ್ಪಾಜಿಹಳ್ಳಿ ಬಳಿ ಕಾರು ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿದ್ದಾನೆ. ಆನಂದನಾಯ್ಕ್ (45) ಮೃತ ದುರ್ದೈವಿ. ಮೃತ ಆನಂದನಾಯ್ಕ್ ಉಪ್ಪಾರಹಳ್ಳಿ ತಾಂಡಾದ ನಿವಾಸಿ ಎಂದು ತಿಳಿದುಬಂದಿದೆ. ತಿರುಮಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪೊಲೀಸ್ ಜೀಪ್ ಡಿಕ್ಕಿಯಿಂದ ಸವಾರನಿಗೆ ಗಂಭೀರ ಗಾಯ
ಕೋಲಾರ: ಬೈಕ್ಗೆ ಪೊಲೀಸ್ ಜೀಪ್ ಡಿಕ್ಕಿಯಾದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುಳಬಾಗಿಲು ತಾಲೂಕಿನ ಕಾಂತರಾಜ್ ಸರ್ಕಲ್ನಲ್ಲಿ ನಡೆದಿದೆ. ಕೆಜಿಎಫ್ ತಾಲೂಕಿನ ಬಡಮಾಕನಹಳ್ಳಿ ನಿವಾಸಿ ನಾರಾಯಣಸ್ವಾಮಿ ಎಂಬುವರು ಗಾಯವಾಗಿದೆ. ಕೋಲಾರ ಮಹಿಳಾ ಠಾಣೆ ಸಿಪಿಐ ಶಂಕರಾಚಾರಿ ತೆರಳುತ್ತಿದ್ದ ಜೀಪ್ ಬೈಕ್ಗೆ ಡಿಕ್ಕಿಯಾಗಿದೆ.
ಡಿಕ್ಕಿಯಾದ ಪರಿಣಾಮ ಬೈಕ್ ಸವಾರನ ತಲೆ ಮತ್ತು ಕೈ ಕಾಲುಗಳಿಗೆ ತೀವ್ರ ಗಾಯವಾಗಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೆ ಸ್ಥಳೀಯರು ಗಾಯಾಳು ನಾರಾಯಣಸ್ವಾಮಿ ಅವರನ್ನು ಕೋಲಾರದ ಅರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಹಳ್ಳಕ್ಕೆ ಉರುಳಿಬಿದ್ದ ಬಸ್, 25ಕ್ಕೂ ಹೆಚ್ಚು ಜನರಿಗೆ ಗಾಯ, ಹಲವರ ಸ್ಥಿತಿ ಗಂಭೀರ
ಹುಬ್ಬಳ್ಳಿ-ಧಾರವಾಡ ಬಳಿ ಸರಣಿ ಅಪಘಾತ
ಧಾರವಾಡ: ಧಾರವಾಡ ತಾಲೂಕಿನ ಇಟ್ಟಿಗಟ್ಟಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸರಣಿ ಅಪಘಾತ ಸಂಭವಿಸಿದೆ. ಧಾರವಾಡದಿಂದ ಬಳ್ಳಾರಿಗೆ ಹೋಗುತ್ತಿದ್ದ ಗ್ಯಾಸ್ ಲಾರಿಗೆ ಎದುರಿನಿಂದ ಬಂದ ಕಾಂಕ್ರೀಟ್ ಸಾಗಾಟದ ಲಾರಿ ಡಿಕ್ಕಿ ಹೊಡೆದಿದೆ. ಬಳಿಕ ಕಲ್ಲು ಸಾಗಾಣಿಕೆ ಲಾರಿ ಡಿಕ್ಕಿಯಾಗಿದೆ. ಅಪಘಾತದಲ್ಲಿ ಗ್ಯಾಸ್ ಸಾಗಾಟದ ಲಾರಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಗ್ಯಾಸ್ ಸೋರಿಕೆಯಾಗಿಲ್ಲ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ: ಪ್ರಶಾಂತ್ ಹುಲಿಕೆರಿ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:02 pm, Sun, 4 May 25